Advertisement

ಆಯುಷ್ಮಾನ್‌ ಕಾರ್ಡ್‌ ನೋಂದಣಿ ಕಡ್ಡಾಯ ಮಾಡಿಸಿ

05:57 PM Oct 18, 2022 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ 137 ಗ್ರಾಮ ಪಂಚಾಯಿತಿಗಳು ಇದ್ದು, 108 ಗ್ರಾಮ ಒನ್‌ ಪ್ರಾಂಚೈಸಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಪ್ರಾಂಚೈಸಿಯು ದಿನಕ್ಕೆ 1000 ಅಭಾ ಕಾರ್ಡ್‌ ನೋಂದಣಿಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ವಿಜಯನಗರ ಅಪರ ಜಿಲ್ಲಾಧಿ ಕಾರಿ ಟಿ.ವಿ. ಪ್ರಕಾಶ್‌ ತಿಳಿಸಿದರು.

Advertisement

ನಗರದ ತಹಶೀಲ್ದಾರ್‌ ಕಚೇರಿಯ ಕೇಸ್ವಾನ್‌ ಕೇಂದ್ರದಲ್ಲಿ ಆಯೋಜಿಸಲಾದ ಸೋಮವಾರ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ “ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ” ಆರೋಗ್ಯ ಸೇವೆ ಕಾರ್ಡ್‌ಗಳನ್ನು ಒದಗಿಸುವ ಕುರಿತು ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ 13ರಿಂದ 14 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, 108 ಗ್ರಾಮಒನ್‌ ಪ್ರಾಂಚೈಸಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಪ್ರಾಂಚೈಸಿಯು ದಿನಕ್ಕೆ ಒಂದು ಸಾವಿರ ಅಭಾ ಕಾರ್ಡ್‌ ನೋಂದಣಿಯನ್ನು ಮಾಡಬೇಕು. ಇದರಿಂದ ಸುಮಾರು 15-16ದಿನಗಳಲ್ಲಿ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯು ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಬಡತನದಲ್ಲಿರುವ ಸಾರ್ವಜನಿಕರಿಗೆ ಒದಗಿಸುವುದರಿಂದ 5ಲಕ್ಷದವರೆಗೆ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಸಹಕಾರಿಯಾಗುತ್ತದೆ. ವಿಜಯನಗರ ಜಿಲ್ಲಾದ್ಯಂತ ಪ್ರತಿಯೊಬ್ಬ ನಾಗರೀಕರಿಗೂ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಆರೋಗ್ಯ ಕಾರ್ಡ್‌ ವಿತರಿಸುವ ಭಾಗವಾಗಿ ಗ್ರಾಮ ಒನ್‌ನ ಪ್ರಾಂಚೈಸಿದಾರರು ನ್ಯಾಯಬೆಲೆ ಅಂಗಡಿಯವರ ಸಹಕಾರದೊಂದಿಗೆ
ಕಾರ್ಯನಿರ್ವಹಿಸಬೇಕು ಎಂದರು.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಆರೋಗ್ಯ ಕಾರ್ಡ್‌ಗೆ ನೋಂದಣಿಯಾಗಿ ಕಾರ್ಡ್‌ಗಳನ್ನು ಪಡೆದುಕೊಂಡಲ್ಲಿ ಬಿಪಿಎಲ್‌ ಕುಟುಂಬಕ್ಕೆ 1 ವರ್ಷಕ್ಕೆ ಗರಿಷ್ಠ ರೂ. 5 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗಲಿದ್ದು, ಎಪಿಎಲ್‌ ಕುಟುಂಬಕ್ಕೆ ಪಾವತಿ ಆಧಾರದ ಮೇಲೆ ಚಿಕಿತ್ಸಾ ವೆಚ್ಚದ ಶೇ.30 ರಷ್ಟು ರಿಯಾಯಿತಿ ಸರ್ಕಾರದಿಂದ ಪಾವತಿ ಮತ್ತು ಎಪಿಎಲ್‌ ನವರಿಗೆ ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ಗರಿಷ್ಠ ರೂ.1.50 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗಲಿದೆ ಎಂದರು.

Advertisement

ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ ಶಾಲೆಗಳು, ಕಿತ್ತೂರುರಾಣಿ ಚೆನ್ನಮ್ಮ, ಏಕಲವ್ಯ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಕೂಡ ಕಡ್ಡಾಯವಾಗಿ ನೋಂದಣಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಬೇಕು ಎಂದು ಅವರು ತಿಳಿಸಿದರು. ಗ್ರಾಮಒನ್‌ ಕೇಂದ್ರಗಳು ಮತ್ತು ನ್ಯಾಯಬೆಲೆ ಅಂಗಡಿಗಳು ಚುರುಕುತನದಿಂದ ಕೆಲಸ ಮಾಡಿದರೆ ಮಾತ್ರ ಜಿಲ್ಲೆಯು ಅಭಾ ಕಾರ್ಡ್‌ ನೋಂದಣಿಯಲ್ಲಿ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ. ಆಯುಷ್ಮಾನ್‌ ಭಾರತ್‌ ಕಾರ್ಡ್‌ಗಳನ್ನು ನೋಂದಣಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದು ಅಪರ ಜಿಲ್ಲಾ ಧಿಕಾರಿಗಳು ಹೇಳಿದರು.

ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರು ಮಾತನಾಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಿಗೆ ಗ್ರಾಮಒನ್‌ನ ಪ್ರಾಂಚೈಸಿದಾರರು ಹಾಗೂ ನ್ಯಾಯಬೆಲೆ ಅಂಗಡಿಯವರು ತೆರಳಿ ಆರೋಗ್ಯ ಕಾರ್ಡ್‌ನ್ನು ವಿತರಿಸುವ ಕೆಲಸ ಮಾಡಬೇಕು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕಾರ್ಡ್‌ ವಿತರಿಸಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ಪ್ರತಿಯೊಂದು ಗ್ರಾಮಪಂಚಾಯಿತಿಗಳಡಿ ಬರುವ ಗ್ರಾಮಒನ್‌ ಕೇಂದ್ರಗಳ ಪ್ರಾಂಚೈಸಿದಾರರು ಆ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಯವರ ಪರಸ್ಪರ ಸಂಪರ್ಕವನ್ನು ಇಟ್ಟುಕೊಂಡು ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಬರುವ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಎಲ್ಲಾ ಶಾಲಾ ಮಕ್ಕಳು ಮತ್ತು ಅವರ ಕುಟುಂಬದ ಸದಸ್ಯರು ಸೇರಿದಂತೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಅನ್ನು ಪಡೆಯಲು ನೋಂದಣಿ ಮಾಡಿಕೊಳ್ಳಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮವಹಿಸಬೇಕು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ಆಯುಷ್ಮಾನ್‌ ಆರೋಗ್ಯ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಆ ಶಾಲೆಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಒನ್‌ ಕೇಂದ್ರಗಳಲ್ಲಿಯೇ ನೋಂದಣಿ ಮಾಡಿಕೊಳ್ಳಬೇಕು. ಅದರಂತೆಯೇ ಜಿಲ್ಲೆಯಲ್ಲಿನ ಸರ್ಕಾರಿ, ಖಾಸಗಿ, ಅನುದಾನಿತ, ಪದವಿ ಪೂರ್ವ ಕಾಲೇಜುಗಳಲ್ಲಿಯೂ ಸಹ ಎಲ್ಲಾ ವಿದ್ಯಾರ್ಥಿಗಳು ನೋಂದಣಿ ಮಾಡಿಸಬೇಕು ಎಂದು ಅ ಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರದಿಂದ ಆಯುಷ್ಮಾನ ಭಾರತ್‌ ಆರೋಗ್ಯ ಕಾರ್ಡ್‌ ನೋಂದಣಿ ಸ್ಪ್ರೆಡ್‌ಶೀಟ್‌ ತೆರೆಯಲಾಗುತ್ತಿದ್ದು, ಪ್ರತಿ ದಿನ ಅಭಾ ಕಾರ್ಡ್‌ ನೋಂದಣಿಯಾದ ಕುರಿತು ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸಲೀಂ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ| ಭಾಸ್ಕರ್‌ ಅವರು ಮಾತನಾಡಿದರು. ಹೊಸಪೇಟೆ ತಾಲೂಕು ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ರಮೇಶ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್‌, ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್‌ ಗುರುಬಸವರಾಜ, ಹೊಸಪೇಟೆ ತಹಶೀಲ್ದಾರ್‌ ವಿಶ್ವಜಿತ್‌ ಮೆಹತಾ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್‌ ವಿರುಪಾಕ್ಷಪ್ಪಶೆಟ್ಟಿ, ಆಹಾರ ಶಿರಸ್ತೇದಾರ್‌ ಎಚ್‌. ನಾಗರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next