Advertisement

ಪ್ರಾಮಾಣಿಕತೆಯಿಂದ ಸಿನಿಮಾ ಮಾಡಿ …

10:48 AM Oct 06, 2019 | Lakshmi GovindaRaju |

ಸಿನಿಮಾ ಕ್ಷೇತ್ರದಲ್ಲಿ ನಟ-ನಟಿಯರು ಆಗಾಗ ತಮ್ಮ ಬೇಸರ- ಖುಷಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಅದು ಸಿನಿಮಾಕ್ಕೆ ಸಂಬಂಧಪಟ್ಟಿದಾದರೂ ಇರಬಹುದು ಅಥವಾ ವೈಯಕ್ತಿಕವಾದರೂ ಆಗಿರಬಹುದು. ಈಗ ನಟಿ ಶಾನ್ವಿ ಶ್ರೀವಾತ್ಸವ್‌ ಕೂಡಾ ಬೇಸರ ವ್ಯಕ್ತಪಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪತ್ರವೊಂದನ್ನು ಬರೆದಿರುವ ಶಾನ್ವಿ, ಅಲ್ಲಿ ಬೇಸರ ತೋಡಿಕೊಂಡಿದ್ದಾರೆ.

Advertisement

ಎಲ್ಲಾ ಓಕೆ, ಯಾರ ವಿರುದ್ಧ, ಯಾವ ಸಿನಿಮಾದ ಕುರಿತಾಗಿ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಶಾನ್ವಿ ಇಲ್ಲಿ ಸಿನಿಮಾದ್ದಾಗಲೀ, ವ್ಯಕ್ತಿಯ ಹೆಸರನ್ನಾಗಲೀ ಹೇಳದೇ ತಮ್ಮ ಅನಿಸಿಕೆ ಎಂಬಂತೆ ಪತ್ರವೊಂದನ್ನು ಬರೆದಿದ್ದಾರೆ. ಆದರೆ, ಈ ಪತ್ರ ನೋಡುತ್ತಿದ್ದಂತೆ ವೈಯಕ್ತಿಕವಾಗಿ ಶಾನ್ವಿಗೆ ಆದ ಅನುಭವದಂತೆ ಕಾಣುತ್ತದೆ. ಆ ಬೇಸರವನ್ನು ಈ ರೀತಿ ಹೊರ ಹಾಕಿದ್ದಾರೆನ್ನಲಾಗಿದೆ.

ಶಾನ್ವಿ ಬರೆದಿರುವ ಪತ್ರದ ಸಾರಾಂಶ ಹೀಗಿದೆ; “ಯಾರು ತಾನೇ ಒಳ್ಳೆಯ ಸಿನಿಮಾಗಳನ್ನು ನೋಡಲು ಬಯಸುವುದಿಲ್ಲ ಹೇಳಿ? ಅದರಂತೆ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾಗಳನ್ನು ನೀಡಲು ಯಾರು ಬಯಸಲ್ಲ ಹೇಳಿ? ಸಿನಿಮಾ ಅಂತಿಮವಾಗಿ ಹೇಗೆ ಮೂಡಿಬರುತ್ತೋ ಅನ್ನೋದರ ಬಗ್ಗೆ ಯೋಚನೆ ಮಾಡುವುದಕ್ಕಿಂತ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮುಖ್ಯ. ಸೋಲು-ಗೆಲುವಿನ ಲೆಕ್ಕಾಚಾರ ಹಾಕದ ಉತ್ತಮವಾದುದನ್ನು ನೀಡಲು ಪ್ರಯತ್ನಿಸಬೇಕು.

ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆಯೊಂದಿಗೆ ಒಳ್ಳೆಯ ಸಿನಿಮಾಗಳನ್ನು ಮಾಡಲು ಪ್ರಯತ್ನಿಸಿ ಎಂದು ನಾನು ವಿನಮ್ರವಾಗಿ ಮನವಿ ಮಾಡುತ್ತೇನೆ. ಪ್ರತಿಯೊಬ್ಬ ನಟ ಕೂಡಾ ಆ ಸಿನಿಮಾದ ಭಾಗವಾಗಿರುತ್ತಾನೆ ಮತ್ತು ಅವರನ್ನು ಪ್ರಾಮಾಣಿಕತೆಯಿಂದ ನಡೆಸಿಕೊಳ್ಳಬೇಕು. ತೆರೆಮೇಲೆ ಏನು ತೋರಿಸಲು ಬಯಸುತ್ತಿರೋ ಅದೇ ರೀತಿ ಸ್ಕ್ರಿಪ್ಟ್ನ ನಿರೂಪಣೆಯಲ್ಲೂ ಇರಬೇಕು. ಒಂದು ವೇಳೆ ಏನಾದರೂ ಬದಲಾವಣೆ ಇದ್ದರೆ ಅದನ್ನು ನಟರ ಗಮನಕ್ಕೆ ತರಬೇಕು. ಬದಲಾವಣೆ ನಿಜಕ್ಕೂ ಸಿನಿಮಾಕ್ಕೆ ಅಗತ್ಯವಾಗಿದ್ದರೆ ಅದನ್ನು ಮಾಡಿಕೊಳ್ಳುತ್ತಾರೆ.

ಅದು ಬಿಟ್ಟು ನಟರ ದಾರಿ ತಪ್ಪಿಸೋದು ಸರಿಯಲ್ಲ ಮತ್ತು ಅದು ನೀತಿಬಾಹಿರ. ಅಲ್ಲದೇ ಸುಳ್ಳು, ಆಶ್ವಾಸನೆಗಳು, ಬೇಡದ ಸಮಜಾಯಿಷಿಗಳು, ವೃತ್ತಿಪರತೆ ಇಲ್ಲದಿರುವುದನ್ನು ಒಪ್ಪುವುದಿಲ್ಲ. ಒಳ್ಳೆಯದನ್ನು ಕೊಟ್ಟು ಒಳ್ಳೆಯದನ್ನೇ ನಿರೀಕ್ಷಿಸುವ …’ ಎಂದು ಪತ್ರದಲ್ಲಿ ಶಾನ್ವಿ ಹೇಳಿದ್ದಾರೆ. ಅಂದಹಾಗೆ, ಸದ್ಯ ಶಾನ್ವಿ ನಟಿಸಿರುವ “ಗೀತಾ’ ಚಿತ್ರ ಪ್ರದರ್ಶನ ಕಾಣುತ್ತಿದೆ. ಜೊತೆಗೆ ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲೂ ಶಾನ್ವಿ ನಾಯಕಿಯಾಗಿದ್ದು, ಆ ಚಿತ್ರ ನವೆಂಬರ್‌ ಕೊನೆ ವಾರದಲ್ಲಿ ತೆರೆಗೆ ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next