Advertisement

ಆಹಾರ ಧಾನ್ಯ ಹಾಳಾಗುವ ಮುನ್ನ ವಿಲೇ ಮಾಡಿ

05:37 PM Oct 07, 2018 | |

ದಾವಣಗೆರೆ: ಜಿಲ್ಲೆಯ ಗೋದಾಮುಗಳಲ್ಲಿ ಸ್ವಲ್ಪ ಪ್ರಮಾಣದ ಆಹಾರ ಧಾನ್ಯಗಳು ಹಾಳಾಗುವ ಹಂತಕ್ಕೆ ತಲುಪಿದ್ದು, ಕೂಡಲೇ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ| ಕೃಷ್ಣಮೂರ್ತಿ ಸೂಚಿಸಿದ್ದಾರೆ.

Advertisement

ಶನಿವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಯೋಗ ಜಿಲ್ಲಾ ಕೇಂದ್ರ ಹಾಗೂ ವಿವಿಧ ತಾಲೂಕುಗಳ ಅಕ್ಷರ ದಾಸೋಹ ಯೋಜನೆ ನಡೆಯುವ ಶಾಲೆ, ಅಂಗನವಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ವಿವಿಧ ವರ್ಗಗಳ ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೋದಾಮುಗಳಲ್ಲಿ ಸ್ವಲ್ಪ ಪ್ರಮಾಣದ ಆಹಾರ ಧಾನ್ಯಗಳು ಹಾಳಾಗುವ ಹಂತಕ್ಕೆ ತಲುಪಿರುವುದು ಕಂಡು ಬಂದಿದೆ.

ಹಾಗಾಗಿ ಆಹಾರ ಧಾನ್ಯ ಕೂಡಲೇ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಆದಷ್ಟು ಗೋಡೌನ್‌ಗಳಲ್ಲಿ ಮರದ ಕ್ರೇಟ್‌ ಬಳಸಿದರೆ ಉತ್ತಮ. ಇಂಡಿಯನ್‌ ಫುಡ್‌ಗೆನ್‌ ಇನ್‌ಸ್ಟಿಟ್ಯೂಟ್‌ ಮಾರ್ಗದರ್ಶನದಂತೆ ನಿರ್ವಹಿಸಿದರೆ 2 ವರ್ಷದವರೆಗೆ ಆಹಾರ ಧಾನ್ಯಗಳು ಹಾಳಾಗದಂತೆ ನೋಡಿಕೊಳ್ಳಬಹುದು ಎಂದರು. 

ಜಿಲ್ಲೆಯ ಗೋದಾಮುಗಳಲ್ಲಿ 890 ಕ್ವಿಂಟಾಲ್‌ ರಾಗಿ ದಾಸ್ತಾನಿದೆ. ಚನ್ನಗಿರಿಯಲ್ಲಿ 10 ಕ್ವಿಂಟಾಲ್‌ ದಾಸ್ತಾನಿದೆ. ಬೇಗ ವಿಲೇವಾರಿ ಮಾಡಬೇಕು. ಈಗಾಗಲೇ 3 ತಿಂಗಳು ಕಳೆದಿದೆ. ಇನ್ನೂ ಹೆಚ್ಚು ದಿನ ಇಟ್ಟರೆ ಕೆಡುವ ಸಂಭವವೇ ಜಾಸ್ತಿ.
ಕೆಲವೆಡೆ ತಾಳೆಎಣ್ಣೆ ಹಾಳಾಗುವ ಸಾಧ್ಯತೆ ಇದೆ. ಹರಿಹರದ ವುಡನ್‌ಕ್ರೇಟ್‌ ಗೋದಾಮುನಂತೆ ಎಪಿಎಂಸಿಯವರು ನಿರ್ಮಿಸಿಕೊಂಡರೆ ಒಳ್ಳೆಯದು ಎಂದರು.

ಜಾಗದ ಕೊರತೆ ಇದ್ದರೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿ. ರಾಜ್ಯಮಟ್ಟದಲ್ಲಿ ಶಿಫಾರಸು ಕಳುಹಿಸಲಾಗುವುದು. ಆಹಾರ ಧಾನ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದು ಮುಖ್ಯ. ಉಳಿದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾದ ರೀತಿಯಲ್ಲಿ ಆಹಾರ ಪಡಿತರ ವಿತರಣೆ ಆಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು. 

Advertisement

ಜಿಲ್ಲೆಯಲ್ಲಿ 781 ನ್ಯಾಯಬೆಲೆ ಅಂಗಡಿಗಳಿದ್ದು, 7-8 ಆಹಾರ ನಿರೀಕ್ಷರಿದ್ದಾರೆ. ಎಲ್ಲರೂ 7ನೇ ತಾರೀಕಿನಂದು ತಪಾಸಣೆಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಬೇರೆ ಇಲಾಖೆ ಅಧಿಕಾರಿಗಳನ್ನು ನೋಡೆಲ್‌ ಅಧಿಕಾರಿಗಳನ್ನಾಗಿ ನೇಮಿಸಬೇಕು ಎಂದು ಸಂಬಂಧಿತರಿಗೆ ಸೂಚಿಸಿದರು.

ಆಯೋಗದ ಸದಸ್ಯ ವಿ.ಬಿ ಪಾಟೀಲ್‌ ಮಾತನಾಡಿ, ಈವರೆಗೆ ಜಾಗೃತ ಸಮಿತಿಗೆ 10 ದೂರು ಬಂದಿವೆ. ಅವುಗಳನ್ನು ಜಿಲ್ಲಾಧಿಕಾರಿಗಳ ಹಂತದಲ್ಲೇ ವಿಲೇ ಮಾಡಿರುವುದು ಸ್ವಾಗತಾರ್ಹ. ರಾಜ್ಯ ಆಯೋಗಕ್ಕೆ ಯಾವ ಜಿಲ್ಲೆಯಿಂದಲೂ
ದೂರು ಬಂದಿಲ್ಲ. ಜಾಗೃತ ಸಮಿತಿಗೆ ಮಹಿಳೆಯರನ್ನು ಸದಸ್ಯರನ್ನಾಗಿ ನೇಮಿಸಿ, ಅವರ ಮೊಬೈಲ್‌ ನಂಬರ್‌ಗಳನ್ನು ನ್ಯಾಯಬೆಲೆ ಅಂಗಡಿಗಳ ಬೋರ್ಡ್‌ನಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿತ್ತು. ಆದರೆ, ಪುಂಡರು ಆ ನಂಬರ್‌ ದುರುಪಯೋಗ ಪಡಿಸಿಕೊಂಡರು. ಕೆಲವಾರು ಕಾರಣಕ್ಕೆ ಮೂವರು ಸದಸ್ಯರ ಬದಲಾಗಿ 5 ಜನರ ಸಮಿತಿಗೆ ಗ್ರಾಮ ಪಂಚಾಯತ್‌ ಪಿಡಿಒ ಅವರನ್ನು ಕಾರ್ಯದರ್ಶಿಯನ್ನಾಗಿಸಿ ಜಾಗೃತ ಸಮಿತಿ ರಚಿಸಲು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಇದೆ ಎಂದರು.

ಸದಸ್ಯೆ ಮಂಜುಳಾಬಾಯಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನೀಡಿರುವ ಅಂಕಿ-ಅಂಶಗಳು ತಾಳೆಯಾಗುತ್ತಿಲ್ಲ. ಕಿಶೋರಿಯರು 150 ಇದ್ದಾರೆಂದು ಮಾಹಿತಿ ನೀಡಿದ್ದೀರಿ. ಆದರೆ, ಗುರುತಿಸುವುದು 133 ಎಂದಿದ್ದೀರಿ ಇದು ಹೇಗೆ ಎಂದು ಪ್ರಶ್ನಿಸಿದರು.
 
ಬಾಲವಿಕಾಸ ಸಮಿತಿ ಸಭೆಗಳು ಆಗಿವೆ ಎನ್ನಲಾಗುತ್ತದೆ. ಯಾವುದೇ ಸಭೆಗಳ ನಡಾವಳಿ ಇಲ್ಲ, ಸದಸ್ಯರ ಸಹಿ ಇಲ್ಲ. ನಂಬುವುದು ಹೇಗೆ ಎಂದರು. ಕೆಲವೆಡೆ ಹಾಜರಾತಿಯಲ್ಲಿ ಪೆನ್ಸಿಲ್‌ನಲ್ಲಿ ಬರೆಯಲಾಗಿದೆ. ಜಿಲ್ಲೆಯು ಬಯಲು ಶೌಚ ಮುಕ್ತ…. ಎನ್ನುತ್ತೀರಿ ಆದರೆ, ಕೆಲವು ಅಂಗನವಾಡಿಗಳಲ್ಲಿ ಶೌಚಾಲಯಗಳೇ ಇಲ್ಲ. ಇದ್ದರೂ ನಿರ್ವಹಣೆ ಇಲ್ಲ. ಸಿಡಿಪಿಒ
ಮತ್ತು ಸೂಪರ್‌ವೈಸರ್‌ ನಡುವೆ ಸರಿಯಾದ ಸಂವಹನ ಮಾಹಿತಿ ಇಲ್ಲದುದರಿಂದ ಹೀಗಾಗಿದೆ ಸರಿಪಡಿಸಿಕೊಳ್ಳಿ ಎಂದು ಸೂಚಿಸಿದರು. 

ಆಯೋಗದ ಸದಸ್ಯ ಡಿ.ಎಚ್‌. ಹಸಬಿ ಮಾತನಾಡಿ. ಜಿಲ್ಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿದೆ. ಎಲ್ಲಿಯೂ ದೂರುಗಳಿಲ್ಲ. ಆದರೆ, ಒಂದು ಶಾಲೆಯಲ್ಲಿ ಮಾತ್ರ ಪ್ರತಿಭಾ ಕಾರಂಜಿಗೆ ಅಕ್ಕಿ ಕೊಡಲು ಹೋಗಿ ಅಡುಗೆಯವರಿಗೆ 5 ಕೆ.ಜಿ ಅಕ್ಕಿ ನೀಡಿ ಸಮಿತಿಗೆ 9 ಕೆಜಿ ಎಂದು ಸುಳ್ಳು ಹೇಳಿದ್ದರು. ನಂತರ ಒಪ್ಪಿಕೊಂಡರು ಆ ರೀತಿ ಆಗಬಾರದು ಎಂದರು. 

ಅಧ್ಯಕ್ಷ ಡಾ| ಕೃಷ್ಣಮೂರ್ತಿ, ಯಾವುದೇ ಪ್ರಜೆ ಆಹಾರ ಕೊರತೆಯಿಂದ ಅಸುನೀಗಬಾರದೆಂಬ ಉದ್ದೇಶದಿಂದ ಭಾರತ ಸರ್ಕಾರ 2013ರಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿತು. 2017ರಲ್ಲಿ ಕರ್ನಾಟಕದಲ್ಲಿ ಕಾಯ್ದೆ ಜಾರಿಯಾಗಿದೆ.

ಪ್ರತಿ ಪ್ರಜೆಗೂ ಸರಿಯಾದ ಗುಣಮಟ್ಟ, ಪ್ರಮಾಣದ ಆಹಾರ ಕೈಗೆಟುಕುವ ಬೆಲೆಯಲ್ಲಿ ಸಿಗಬೇಕು ಎಂಬುದೇ ಆಹಾರ ಭದ್ರತಾ ಕಾಯ್ದೆ ಉದ್ದೇಶ. ಮಕ್ಕಳು, ಗರ್ಭಿಣಿ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲಬಾರದೆಂಬ ಉದ್ದೇಶದಿಂದ ವಿವಿಧ ಇಲಾಖೆಗಳು ಕೈ ಜೋಡಿಸಿ ಕೆಲಸ ಮಾಡುತ್ತಿವೆ. ಕೆಲವೊಂದು ನ್ಯೂನತೆಗಳನ್ನು ಹೊರತು ಪಡಿಸಿದರೆ ಜಿಲ್ಲೆಯ ಪ್ರಗತಿ ಉತ್ತಮವಾಗಿದೆ. ಹಾಗಾಗಿ ಕೆಲವೊಂದು ನ್ಯೂನ್ಯತೆ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ರಾಜ್ಯ ಆಹಾರ ಆಯೋಗ 2017 ರ ಜು.10 ರಂದು ಅಸ್ತಿತ್ವಕ್ಕೆ ಬಂದಿದೆ. ಈಗಾಗಲೇ 9 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದೆ. ದಾವಣಗರೆ ಜಿಲ್ಲೆ 10ನೇ ಜಿಲ್ಲೆಯಾಗಿದ್ದು, ಆಯ್ಕೆಯಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಸೌಲಭ್ಯಗಳ ಸುಧಾರಣೆ ಮುಂತಾದವುಗಳನ್ನು ಪಟ್ಟಿ ಮಾಡಲಾಗಿದೆ. ಸಮಿತಿ ಕಂಡುಕೊಂಡಿರುವ ಸಮಸ್ಯೆ-ಸಲಹೆ ಸೂಚನೆಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಕಾರಿಗಳಿಂದ ಚರ್ಚಿಸಿ ವಿವಿಧ ಇಲಾಖೆಗಳ ಕಾರ್ಯಾನುಷ್ಠಾನ ಪ್ರಗತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ, ಆಹಾರ ಮತ್ತು ನಾಗರಿಕ ಇಲಾಖೆ ಉಪ ನಿರ್ದೇಶಕ ಡಾ| ಬಿ.ಟಿ. ಮಂಜುನಾಥ್‌, ಪರಿಶಿಷ್ಠ ಪಂಗಡದ ಜಿಲ್ಲಾ ಅಧಿಕಾರಿ ದೇವೆಂದ್ರಪ್ಪ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ,  ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next