Advertisement

ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು: ಪತಿ-ಮಗಳಿಂದಲೇ ಕೊಲೆಯಾದ ಅರ್ಚನಾ!

12:34 PM Dec 31, 2021 | Team Udayavani |

ಬೆಂಗಳೂರು: ಇತ್ತೀಚೆಗೆ ನಡುರಸ್ತೆಯಲ್ಲಿ ಹತ್ಯೆಗೀಡಾದ ಬೆಳ್ಳಂದೂರು ನಿವಾಸಿ ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಆಸ್ತಿ ಹಾಗೂ ಐಷಾರಾಮಿ ಜೀವನಕ್ಕಾಗಿ ತಾಯಿಯ ಎರಡನೇ ಪತಿ ಜತೆ ಸೇರಿಕೊಂಡು ಪುತ್ರಿಯೇ ಕೃತ್ಯಕ್ಕೆ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಅರ್ಚನಾ ರೆಡ್ಡಿ ಎರಡನೇ ಪತಿ ನವೀನ್‌ ಕುಮಾರ್‌ (33), ಆಕೆಯ ಪುತ್ರಿ ಯುವಿಕಾ (21), ನವೀನ್‌ ಸ್ನೇಹಿತ ಸಂತೋಷ್‌ (35), ಅನೂಪ್‌, ದೀಪು ಹಾಗೂ ಇತರೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು, ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ಆತ್ಮಗಳ ಜತೆ ಮಾತನಾಡುತ್ತೇನೆ ಎಂದ ಬೆಂಗಳೂರಿನ ಬಾಲಕಿ ನಾಪತ್ತೆ

ಅರ್ಚನಾ ರೆಡ್ಡಿ ಈ ಮೊದಲು ಅರವಿಂದ್‌ ಎಂಬುವರನ್ನು ಮದುವೆಯಾಗಿದ್ದು, ದಂಪತಿಗೆ ಯುವಿಕಾ ರೆಡ್ಡಿ ಮತ್ತು ಒಬ್ಬ ಪುತ್ರ ಇದ್ದಾನೆ. ಈ ಮಧ್ಯೆ ದೇಹದಾರ್ಢ್ಯ ಕೇಂದ್ರದಲ್ಲಿ ತರಬೇತಿದಾರನಾಗಿರುವ ನವೀನ್‌ ಕುಮಾರ್‌ ಪರಿಚಯಿಸಿಕೊಂಡ ಅರ್ಚನಾ ರೆಡ್ಡಿ, ಮೊದಲ ಪತಿಗೆ ವಿಚ್ಛೇದನ ನೀಡಿ, ನವೀನ್‌ ಕುಮಾರ್‌ ನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳ ಜತೆ ಬೆಳ್ಳಂದೂರಿನ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದರು.

ಪುತ್ರಿಯ ಜತೆಯೇ ಅನೈತಿಕ ಸಂಬಂಧ: ಈ ಮಧ್ಯೆ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಯುವಿಕಾ ರೆಡ್ಡಿ, ನವೀನ್‌ ಕುಮಾರ್‌ಗೆ ಪ್ರೀತಿಸುವಂತೆ ಕೋರಿದ್ದಳು. ಹೀಗಾಗಿ ಕಳೆದ ಮಾರ್ಚ್‌ನಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಮನೆಯಲ್ಲೇ ಇಬ್ಬರು ಒಟ್ಟಿಗೆ ಇರುತ್ತಿದ್ದರು. ಈ ವಿಚಾರ ತಿಳಿದ ಅರ್ಚನಾ ರೆಡ್ಡಿ, ಪುತ್ರಿ ಹಾಗೂ ಎರಡನೇ ಪತಿ ನವೀನ್‌ ಕುಮಾರ್‌ನನ್ನು ಮನೆಯಿಂದ ಹೊರ ಹಾಕಿ, ಒಂದಿಷ್ಟು ದುಡ್ಡು ಕೊಟ್ಟು ಕಳುಹಿಸಿದ್ದರು. ಸುಮಾರು ನಾಲ್ಕೈದು ತಿಂಗಳು ಆರೋಪಿಗಳು ಒಟ್ಟಿಗೆ ಇದ್ದರು. ಆದರೆ, ಇಬ್ಬರು ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದು, ತಮ್ಮಲ್ಲಿದ್ದ ಹಣವನ್ನು ಖಾಲಿ ಮಾಡಿಕೊಂಡಿದ್ದರು. ಅನಂತರ ನವೀನ್‌, ತನ್ನ ಪ್ರೇಯಸಿ ಯುವಿಕಾಳನ್ನು ತಾಯಿ ಮನೆಗೆ ಕಳುಹಿಸಿ, ಆಸ್ತಿ, ಹಣ ತರುವಂತೆ ಕಳುಹಿಸಿದ್ದ. ಆದರೆ, ಅರ್ಚನಾ ರೆಡ್ಡಿ ಮನೆಗೆ ಸೇರಿಸದೆ ವಾಪಸ್‌ ಕಳುಹಿಸಿದ್ದರು. ಅದರಿಂದ ಆಕ್ರೋಶಗೊಂಡು ಪುತ್ರಿ ಯುವಿಕಾ, ಪ್ರಿಯಕರ ನವೀನ್‌ ಕುಮಾರ್‌ಗೆ ತಾಯಿ ಅರ್ಚನಾ ರೆಡ್ಡಿ ಕೊಲೆಗೈದರೆ, ಚನ್ನಪಟ್ಟಣದಲ್ಲಿರುವ ಆಸ್ತಿ ಕಬಳಿಸಬಹುದು ಎಂದು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.

Advertisement

ಎಲೆಕ್ಟ್ರಾನಿಕ್‌ ಸಿಟಿ ಉಪ ವಿಭಾಗ ಎಸಿಪಿ ಪವನ್‌, ಎಲೆಕ್ಟ್ರಾನಿಕ್‌ ಸಿಟಿ ಠಾಣಾಧಿಕಾರಿ ಅನಿಲ್‌ ಕುಮಾರ್‌ ನೇತೃತ್ವದಲ್ಲಿ ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು

ಸ್ನೇಹಿತರಿಗೆ ಸುಳ್ಳು ಹೇಳಿದ್ದ ನವೀನ್‌: ಆರೋಪಿ ನವೀನ್‌, ತನ್ನ ಸ್ನೇಹಿತರಿಗೆ ಪತ್ನಿ ಅರ್ಚನಾ ರೆಡ್ಡಿ ಬಗ್ಗೆ ಸುಳ್ಳು ಹೇಳಿದ್ದ. ಮದುವೆಯಾದ ಬಳಿಕ ಅರ್ಚನಾ ರೆಡ್ಡಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಆಸ್ತಿ ವಿವಾದಗಳನ್ನು ಬಗೆಹರಿಸಿಕೊಟ್ಟಿದ್ದೇನೆ. ಆದರೆ, ಕ್ಷುಲ್ಲಕ ವಿಚಾರಕ್ಕೆ ತನ್ನನ್ನೆ ಮನೆಯಿಂದ ಹೊರಹಾಕಿದ್ದಾಳೆ. ಅಲ್ಲದೆ, ಅದನ್ನು ಪ್ರಶ್ನಿಸಿದ ಪುತ್ರಿ ಯುವಿಕಾ ರೆಡ್ಡಿಯನ್ನು ಮನೆಯಿಂದ ಕಳುಹಿಸಿದ್ದಾಳೆ. ಆಕೆಯನ್ನು ಹತ್ಯೆಗೈಯ ಬೇಕು ಎಂದು ಕೋರಿಕೊಂಡಿದ್ದಾನೆ. ಅಲ್ಲದೆ, ಸಹಕಾರ ನೀಡಿದ ಎಲ್ಲ ಸ್ನೇಹಿತರಿಗೆ ಕಂಠಪೂರ್ತಿ ಮದ್ಯ ಕುಡಿಸಿದಲ್ಲದೆ, ಖರ್ಚಿಗೆಂದು ತಲಾ 4-5 ಸಾವಿರ ರೂ. ಕೊಟ್ಟಿದ್ದಾನೆ ಎಂಬುದು ತನಿಖೆಯಲ್ಲೇ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next