Advertisement

ಮಜೇಥಿಯಾ ಫೌಂಡೇಶನ್‌ನಿಂದ ಸಮಾಜಸೇವಾ ಕಾರ್ಯ

11:10 AM Feb 09, 2023 | Team Udayavani |

– ಶಿಕ್ಷಣ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವಾ ಮನೋಭಾವ
– ಜ್ಞಾನ ಹರಡುವಿಕೆಗೆ ಸಹಾಯ, ಮಕ್ಕಳ ಅಪೌಷ್ಟಿಕ ನಿವಾರಣೆಗೆ ಅಳಿಲು ಸೇವೆ
– ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು-ಶೈಕ್ಷಣಿಕ ಸೌಲಭ್ಯ- ಹಲವು ಯೋಜನೆ
– ಖಾಸಗಿ ಶಾಲೆಗಳಿಗೆ ಮೂರ್‍ನಾಲ್ಕು ವರ್ಷಗಳಿಂದ ಬಿಸಿಯೂಟ ವಿತರಣೆ
– ವೃದ್ಧಾಶ್ರಮ, ಅನಾಥಾಶ್ರಮ, ಕ್ಯಾನ್ಸರ್‌ ಹಾಗೂ ಕ್ಷಯ ರೋಗಿಗಳಿಗೆ ಪ್ರತಿನಿತ್ಯ ಪೌಷ್ಠಿಕ ಆಹಾರ ವಿತರಣೆ

Advertisement

ಸಮಾಜ ಸೇವೆ ಬಗ್ಗೆ ಭಾಷಣ ಮಾಡುವವರು ಅಧಿಕ, ಆದರೆ ಆದರ ಅನುಷ್ಠಾನಕ್ಕೆ ಮುಂದಾಗುವವರು ಕಡಿಮೆ. ರಾಜಕೀಯ ಸ್ಥಾನಮಾನ, ಅಧಿಕಾರದ ನಿರೀಕ್ಷೆ, ಉದ್ದೇಶ ಇಲ್ಲದೆಯೇ ಸಮಾಜಸೇವಾ ಕಾರ್ಯಗಳಲ್ಲಿ ತೊಡಗುವರು ವಿರಳ. ವಿರಳಗಳಲ್ಲಿ ವಿರಳವಾಗಿ ತನ್ನನ್ನು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡು ಜನ ಮೆಚ್ಚುಗೆ ಕಾರ್ಯಗಳೊಂದಿಗೆ ಮುಂದೆ ಸಾಗಿದೆ ಮಜೇಥಿಯಾ ಫೌಂಡೇಶನ್‌.

ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವಾ ಮನೋಭಾವ ತೋರುತ್ತಿದೆ. ಅದೆಷ್ಟೋ ನೊಂದು-ಬೆಂದ ಮನಸ್ಸುಗಳಿಗೆ ತಾಯಿ ಹೃದಯದ ಮಮತೆ ತೋರುತ್ತಿದೆ. ನೆರವಿನ ಆಸರೆಯಾಗಿದೆ. ಹಸಿದ ಹೊಟ್ಟೆಗಳಿಗೆ ಅನ್ನ ನೀಡುತ್ತಿದೆ. ಜ್ಞಾನ ಹರಡುವಿಕೆಗೆ ಸಹಾಯ, ಮಕ್ಕಳಲ್ಲಿನ ಅಪೌಷ್ಟಿಕ ನಿವಾರಣೆಗೆ ಅಳಿಲು ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆಯ ಮೂಲಕ ಗಮನ ಸಳೆಯುತ್ತಿದೆ. ಇತರರಿಗೆ ಮಾದರಿಯಾಗಿದೆ.

ವ್ಯಾಪಾರ-ಉದ್ಯಮಕ್ಕೆಂದು ಹುಬ್ಬಳ್ಳಿಗೆ ಆಗಮಿಸಿದ್ದ ಜಿತೇಂದ್ರ ಮಜೇಥಿಯಾ ಅವರು ಬದುಕು ಕಟ್ಟಿಕೊಳ್ಳುವ ನೆಲೆಕೊಟ್ಟ ನೆಲದ ಋಣ ತೀರಿಸಬೇಕು, ಭಗವಂತ ನೀಡಿದರಲ್ಲಿಯೇ ಒಂದಿಷ್ಟು ಪಾಲು ಬಲವಿಲ್ಲದವರು, ನೊಂದವರು, ಬಡವರಿಗೆ ಸಲ್ಲಿಕೆಯಾಗಬೇಕೆಂಬ ಉದ್ದೇಶದೊಂದಿಗೆ 2008ರ ಸೆಪ್ಟಂಬರ್‌ನಲ್ಲಿ ಮೊಳಕೆಯೊಡೆದ ಮಜೇಥಿಯಾ ಫೌಂಡೇಶನ್‌ ಇದೀಗ ಸಾಮಾಜಿಕ ಸೇವಾ ದೃಷ್ಟಿಯಿಂದ ಹೆಮ್ಮರವಾಗಿ ಬೆಳೆದಿದೆ. ವಿವಿಧ ಕ್ಷೇತ್ರಗಳಿಗೆ ತನ್ನ ಸೇವಾ ಕಾರ್ಯ ಚಾಚಿಕೊಂಡಿದೆ.

Advertisement

ಶೈಕ್ಷಣಿಕ ನೆರವು; ಇಂದಿನ ವಿದ್ಯಾರ್ಥಿಗಳೇ ಮುಂದಿನ ನಾಗರಿಕರಾಗಿದ್ದು, ಅವರಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ದೊರೆಯಬೇಕು, ಆರ್ಥಿಕ ಕಾರಣದಿಂದ ಹಾಗೂ ಅಗತ್ಯ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಅವರು ಕಲಿಕೆಯಲ್ಲಿ ಹಿಂದೆ ಉಳಿಯಬಾರದೆಂಬ ಉದ್ದೇಶ ಮಜೇಥಿಯಾ ಫೌಂಡೇಶನ್‌ದ್ದಾಗಿದೆ. ಇದಕ್ಕಾಗಿ ಫೌಂಡೇಶನ್‌ ಹಲವು ಯೋಜನೆಗಳನ್ನು ಹೊಂದಿದೆ. ವಿದ್ಯಾರ್ಥಿಗಳ ಬೆಳವಣಿಗೆ ಹಾಗೂ ಉತ್ತಮ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಕೆಲವೊಂದು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದೆ.

ಸರಕಾರಿ ಶಾಲೆ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳ ಸೌಲಭ್ಯಗಳು ದೊರೆಯುವಂತಾಗಬೇಕೆಂಬ ಉದ್ದೇಶದೊಂದಿಗೆ ಕಂಪ್ಯೂಟರ್‌, ಪ್ರಿಂಟರ್‌ಗಳನ್ನು ನೀಡಲಾಗಿತ್ತು. ಕೋವಿಡ್‌ ಲಾಕ್‌ಡೌನ್‌ನಿಂದ ಆನ್‌ಲೈನ್‌ ಬೋಧನೆ ಕೈಗೊಂಡ ಸಂದರ್ಭದಲ್ಲಿ ಮೊಬೈಲ್‌ ಖರೀದಿ ಮಾಡಲು ಸಾಧ್ಯವಾಗದ ಬಡ ಕುಟುಂಬಗಳ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಟ್ಯಾಬ್‌ ಮತ್ತು ಮೊಬೈಲ್‌ಗ‌ಳನ್ನು ವಿತರಿಸುವ ಮೂಲಕ ಸರಕಾರಿ ಶಾಲೆಯಲ್ಲಿನ ಬಡ ಮಕ್ಕಳು ಆನ್‌ಲೈನ್‌ ಬೋಧನೆಯಿಂದ ವಂಚಿತರಾದ ರೀತಿಯಲ್ಲಿ ಮಹತ್ವದ ನೆರವು ನೀಡಿತ್ತು.

ಶಿಥಿಲಗೊಂಡಿದ್ದ ಸರಕಾರಿ ಶಾಲೆಗಳ ಹಲವು ಕೊಠಡಿಗಳಿಗೆ ಫೌಂಡೇಶನ್‌ ದುರಸ್ತಿ ಭಾಗ್ಯ ಕಲ್ಪಿಸಿದೆ. ಮಧ್ಯಾಹ್ನ ಬಿಸಿಯೂಟ ಸೌಲಭ್ಯ ಹೊಂದಿರದ ವಿವಿಧ ಖಾಸಗಿ ಶಾಲೆಗಳಲ್ಲಿ ಬಿಸಿಯೂಟ ನೀಡಲಾಗುತ್ತಿದೆ. ವಿಶೇಷವಾಗಿ ನಗರದಿಂದ ಸ್ವಲ್ಪ ದೂರವಿರುವ ಖಾಸಗಿ ಶಾಲೆಗಳಿಗೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಬಿಸಿಯೂಟ ನೀಡುವ ಕಾರ್ಯ ಮಾಡಲಾಗುತ್ತಿದೆ. ವಿವಿಧ ಕಡೆಗಳಲ್ಲಿ ಗ್ರಂಥಾಲಯ ಆರಂಭಿಸುವ ಮೂಲಕ ಫೌಂಡೇಶನ್‌ ಜ್ಞಾನ ಹರಡುವ ಕಾರ್ಯಕ್ಕೆ ಮುಂದಾಗಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಮುಂದಾಗುವ ಮಧ್ಯಮ ಮತ್ತು ಬಡ ವಿದ್ಯಾರ್ಥಿಗಳು ಇದಕ್ಕೆ ಬೇಕಾದ ದುಬಾರಿ ಬೆಲೆಯ ಪುಸ್ತಕಗಳನ್ನು ಖರೀದಿಸಲು ಅಸಾಧ್ಯ ಎಂಬುದನ್ನು ಮನಗಂಡು, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಹಲವು ಮಾಹಿತಿಯ ಪುಸ್ತಕಗಳನ್ನು ಒಂದೆರಡು ಕಾಲೇಜು ಹಾಗೂ ಹಲವು ಕಡೆಯ ಗ್ರಂಥಾಲಯಗಳಲ್ಲಿ ಸೌಲಭ್ಯ ಕಲ್ಪಿಸುವ ಮೂಲಕ ಮಹತ್ವದ ಸಹಾಯ ಮಾಡುತ್ತಿದೆ. ಅದೆಷ್ಟೋ ಬಡ ಪ್ರತಿಭಾವಂತರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಪ್ರೇರಣೆ ನೀಡುತ್ತಿದೆ.

ಗ್ರಂಥಾಲಯಗಳ ಮೂಲಕ ಮಕ್ಕಳು-ಯುವಕರಲ್ಲಿ ಓದಿನ ಆಸಕ್ತಿ ಹೆಚ್ಚಿಸುವಂತೆ ಮಾಡುತ್ತಿದ್ದು, ಸಾಹಿತ್ಯ ಆಸಕ್ತಿ ಬೆಳೆಸುತ್ತಿದೆ. ಇಂದಿನ ಮೊಬೈಲ್‌, ಸಾಮಾಜಿಕ ಜಾಲತಾಣ ಮಾಯೆಯಲ್ಲಿ ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾಯಕಕ್ಕೆ ಮುಂದಾಗಿದೆ.

ಶಾಲೆಗಳಲ್ಲಿ ಮಕ್ಕಳು ಆಟವಾಡುವಾಗ ಇಲ್ಲವೆ ಆಕಸ್ಮಿಕವಾಗಿ ಬಿದ್ದು ಗಾಯ ಮಾಡಿಕೊಂಡರೆ ತುರ್ತು ಪ್ರಥಮ ಚಿಕಿತ್ಸೆ ಸಹಾಯವಾಗುವ ನಿಟ್ಟಿನಲ್ಲಿ ಸುಮಾರು 221ಕ್ಕೂ ಅಧಿಕ ಸರಕಾರಿ ಶಾಲೆಗಳಿಗೆ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ನೀಡುವ ಮೂಲಕ ಫೌಂಡೇಶನ್‌ ಮಕ್ಕಳ ಕುರಿತ ತನ್ನ ಕಾಳಜಿ ತೋರಿದೆ. ಶಾಲಾ-ಕಾಲೇಜು, ಸರಕಾರಿ ಕಚೇರಿಗಳಲ್ಲಿನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಸ್ಯಾನಿಟರಿ ವೆಂಡಿಂಗ್‌ ಯಂತ್ರಗಳನ್ನು ಅಳವಡಿಸಲಾಗಿದೆ.

ಶೈಕ್ಷಣಿಕವಾಗಿ ವಿವಿಧ ಸೌಲಭ್ಯ ಕಲ್ಪಿಸುವುದು ಅಲ್ಲದೆ, ಬಡ ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಕಾರ್ಯವನ್ನು ಮಜೇಥಿಯಾ ಫೌಂಡೇಶನ್‌ ಮಾಡುತ್ತಿದೆ. ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಹಾಗೂ ವೃತ್ತಿಪರ ಶಿಕ್ಷಣದವರೆಗೂ ವಿದ್ಯಾರ್ಥಿ ವೇತನ ನೆರವು ನೀಡುವ ಮೂಲಕ ಬಡ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುವ ಕಾರ್ಯ ಮಾಡುತ್ತಿದೆ. ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಒಟ್ಟಾರೆ ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ತನ್ನ ಕೈಲಾದ ಎಲ್ಲ ಸಹಾಯ-ನೆರವನ್ನು ನೀಡುವ ಕಾರ್ಯ ಮಾಡುತ್ತಿದೆ.

ನೆಮ್ಮದಿ ಕೇಂದ್ರ: ತಂತ್ರಜ್ಞಾನ, ಸೌಲಭ್ಯಗಳ ದೃಷ್ಟಿಯಿಂದ ಸಾಕಷ್ಟು ಸೌಲಭ್ಯಗಳಿವೆ, ಜನರ ಬದುಕು ಸುಧಾಣೆಯಾಗುತ್ತಿದೆ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ, ಅವಿಷ್ಕಾರ, ಯಂತ್ರೋಕರಣ ಇನ್ನಿತರೆ ಸೇವೆಗಳೊಂದಿಗೆ ದೇಶ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ. ಆದರೆ ಒತ್ತಡದ ಬದುಕು, ಹಲವು ರೀತಿಯ ಪೈಪೋಟಿ, ಅನೇಕ ಹವ್ಯಾಸ, ಮನೋಸ್ಥಿತಿಯಿಂದ ಜನರಲ್ಲಿ ಒತ್ತಡ ಹೆಚ್ಚುತ್ತಿದೆ. ಒತ್ತಡಕ್ಕೆ ವಯೋಮಿತಿಯೇ ಇಲ್ಲವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಒಂದಿಲ್ಲೊಂದು ರೀತಿಯ ಒತ್ತಡ ಪ್ರಮುಖವಾಗಿ ಕಾಡ ತೊಡಗಿದೆ.
ಮಕ್ಕಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಚಟುವಟಿಕೆ, ಕಲಿಕಾ ನ್ಯೂನತೆ, ಏಕಾಗ್ರತೆ ಕೊರತೆ, ಶೈಕ್ಷಣಿಕ ಹಿನ್ನಡೆ ಇನ್ನಿತರೆ ಸಮಸ್ಯೆಗಳಿದ್ದರೆ, ಯುವಕರಲ್ಲಿ ಮುಖ್ಯವಾಗಿ ದುಶ್ಚಟಗಳು, ಮೊಬೈಲ್‌ ಮೋಹ, ಪ್ರೇಮ ವಿಚಾರ, ವೈವಾಹಿಕ ಜೀವನ ಸಮಸ್ಯೆ, ನಿರುದ್ಯೋಗ, ಮಹಿಳೆಯರ ಮಾನಸಿಕ ಸಮಸ್ಯೆ, ಖನ್ನತೆ, ವೃದ್ಧಾಪ್ಯ ಸಮಸ್ಯೆಗಳು ಇನ್ನಿತರೆವುಗಳಿಂದ ಒತ್ತಡ ಪ್ರಮಾಣ ಹೆಚ್ಚುತ್ತಿದೆ. ಒತ್ತಡದ ಸ್ಥಿತಿ ಕೌಟಂಬಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಸಂಬಂಧಗಳನ್ನು ಹಾಳು ಮಾಡುತ್ತಿದ್ದು, ಕೆಲವೊಮ್ಮೆ ಅಪಾಯಕಾರಿ ಹಂತಕ್ಕೆ ಕರೆದೊಯ್ಯುತ್ತದೆ. ಜೀವ ತೆಗೆಯುತ್ತದೆ ಇಲ್ಲವೆ ಕಳೆದುಕೊಳ್ಳುವಂತೆ ಮಾಡುತ್ತದೆ.

ಒತ್ತಡ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ವಿಶೇಷವಾಗಿ ಮಜೇಥಿಯಾ ಫೌಂಡೇಶನ್‌ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನದ ನೆಮ್ಮದಿ ಕೇಂದ್ರ ಆರಂಭಿಸಿದೆ. ಕೇಂದ್ರದಲ್ಲಿ ಆಪ್ತ ಸಮಾಲೋಚಕರನ್ನು ನೇಮಿಸಿದ್ದು, ಉಚಿತವಾಗಿ ಆಪ್ತಸಮಾಲೋಚನೆ, ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯ ಇದ್ದವರನ್ನು ಮಾನಸಿಕ ರೋಗ ತಜ್ಞರ ಬಳಿಗೆ ಶಿಫಾರಸ್ಸು ಮಾಡುತ್ತದೆ. ನೆಮ್ಮದಿ ಕೇಂದ್ರದಲ್ಲಿ ಆಪ್ತ ಸಮಾಲೋಚನೆ ಜತೆಗೆ ಮಾರ್ಗದರ್ಶನ, ಆರೋಗ್ಯಕರ ಜೀವನಶೈಲಿ, ಒತ್ತಡ ನಿರ್ವಹಣೆ ಹಾಗೂ ಮಾನಸಿಕ ಆರೋಗ್ಯ ಅರಿವು ಇನ್ನಿತರೆ ಉಪಯುಕ್ತ ಸಲಹೆ ನೀಡಲಾಗುತ್ತದೆ.

ಕೇಂದ್ರದಲ್ಲಿ ಮುಖ್ಯವಾಗಿ ಮಾನಸಿಕ, ಸಾಮಾಜಿಕ ಸಮಸ್ಯೆ-ಸವಾಲು ನಿಭಾಯಿಸುವ ಮಾರ್ಗದರ್ಶನ, ವ್ಯಕ್ತಿಗಳಲ್ಲಿ ಆವರಿಸಿದ ಭಯ, ದುಃಖ, ಕೋಪ, ಖನ್ನತೆ ತಗ್ಗಿಸಲು ಬೇಕಾಗುವ ಸಲಹೆ, ನಕಾರಾತ್ಮಕ ಚಿಂತನೆಗಳಿಂದ ಹೊರ ಬಂದು, ಸಕಾರಾತ್ಮಕ ಚಿಂತನೆಗಳತ್ತ ಚಿಂತನೆ, ನಿರಾಶಾವಾದ ಬದಲು ಆಶಾವಾದ ಮನೋಭಾವದ ಪರಿವರ್ತನೆ ಕಾರ್ಯವನ್ನು ತಜ್ಞ ಆಪ್ತ ಸಮಾಲೋಚಕರು ಕೈಗೊಳ್ಳುತ್ತಾರೆ. ತಜ್ಞ ವೈದ್ಯರಿಂದ ಚಿಕಿತ್ಸೆ ಅವಶ್ಯ ಇದ್ದವರಿಗೆ ಡಿಮ್ಹಾನ್ಸ್‌ ಇಲ್ಲವೆ ಕಿಮ್ಸ್‌ಗೆ ಶಿಫಾರಸ್ಸು ಮಾಡಲಾಗುತ್ತದೆ.

ಹುಬ್ಬಳ್ಳಿಯಲ್ಲಿನ ಕಿಮ್ಸ್‌ ಎಂದರೆ ಅದೊಂದು ಆರೋಗ್ಯ ಪ್ರಪಂಚ ನಿತ್ಯ ಸಾವಿರಾರು ಜನರು ಹೊರ ರೋಗಿಗಳಾಗಿ ಚಿಕಿತ್ಸೆಗೆ ಬಂದರೆ, ನೂರಾರು ಜನರು ಆರೋಗ್ಯ, ಹೆರಿಗೆ ಇನ್ನಿತರೆ ಕಾರಣಕ್ಕೆ ಬರುತ್ತಾರೆ. ಉತ್ತರ ಕರ್ನಾಟಕದ ಸಾಮಾನ್ಯ ಜನರ ಬಾಯಲ್ಲಿ ದೊಡ್ಡ ಆಸ್ಪತ್ರೆ ಎಂದೇ ಬಿಂಬಿತವಾಗಿರುವ ಕಿಮ್ಸ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೇವಲ ಹುಬ್ಬಳ್ಳಿ-ಧಾರವಾಡ, ಧಾರವಾಡ ಜಿಲ್ಲೆಗೆ ಮಾತ್ರವಲ್ಲ ಸುತ್ತಲಿನ ಐದಾರು ಜಿಲ್ಲೆಗಳ ಜನರಿಗೆ ಆರೋಗ್ಯಧಾಮವಾಗಿದೆ. ಹೆಸರಿಗೆ ತಕ್ಕಂತೆ ದೊಡ್ಡ ಆಸ್ಪತ್ರೆ ಆಗಿರುವ ಕಿಮ್ಸ್‌ನಲ್ಲಿ ಗ್ರಾಮೀಣ ರೋಗಿಗಳು, ಅನಕ್ಷರಸ್ಥರು ಬಂದರೆ ಯಾವ ವಿಭಾಗಕ್ಕೆ ಹೇಗೆ ಹೋಗಬೇಕು, ತಜ್ಞ ವೈದ್ಯರು ಎಲ್ಲಿ ದೊರೆಯುತ್ತಾರೆ ಎಂಬುದೇ ತಿಳಿಯದಾಗಿ ಪರದಾಡಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮಜೇಥಿಯಾ ಫೌಂಡೇಶನ್‌ ಸ್ವಯಂ ಸೇವಕ ಸಹಾಯವಾಣಿ ತಂಡ ಆರಂಭಿಸಿದೆ.

ಸ್ವಯಂಸೇವಕರು ಕಿಮ್ಸ್‌ಗೆ ಬರುವವರಿಗೆ ಚಿಕಿತ್ಸೆಗೆ ಪೂರಕವಾಗಿ ಅಗತ್ಯ ಮಾಹಿತಿ ನೀಡುತ್ತಾರೆ. ಯಾವ ವಿಭಾಗಕ್ಕೆ ಹೋಗಬೇಕೆಂದು ತಿಳಿಸುತ್ತಾರೆ. ಅಗತ್ಯ ಬಿದ್ದರೆ ಅವರನ್ನು ವಿಭಾಗಕ್ಕೆ ಕರೆದೊಯ್ಯುತ್ತಾರೆ. ಕಳೆದ ಎರಡು ವರ್ಷಗಳಿಂದ ಈ ಸೇವೆ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ತಪಾಸಣೆ ಹಾಗೂ ಒಳ ರೋಗಿಗಳ ಜತೆ ಬಂದವರಿಗೆ ಊಟ-ಉಪಾಹಾರ ಸೇವನೆಗೆ ಅಗತ್ಯ ಸೌಲಭ್ಯ ಕಲ್ಪಿಸುವ ಅಡುಗೆ ಮನೆಯನ್ನು ಫೌಂಡೇಶನ್‌ ನಿರ್ಮಿಸಿದೆ.

ಮಜೇಥಿಯಾ ಫೌಂಡೇಶನ್‌ ಆರೋಗ್ಯ ಸೇವೆ ಇಲ್ಲಿಗೆ ನಿಂತಿಲ್ಲ. ಮಧ್ಯಮ ಹಾಗೂ ಬಡ ವರ್ಗದವರು ಅಪಘಾತ ಇನ್ನಿತರೆ ಸಮಸ್ಯೆಗೆ ಸಿಲುಕಿ ಹಲವು ದಿನಗಳವರೆಗೆ ವೈದ್ಯಕೀಯ ಸಲಕರಣೆಗಳನ್ನು ಬಳಸುವ ಅವಶ್ಯಕತೆ ಇರುವವರು ಹೊಸ ಸಲಕರಣೆ ಖರೀದಿಸಲು ಸಾಧ್ಯವಾಗದೆ, ನೋವು ಅನುಭವಿಸಲಾಗದೇ ಪರಿತಪಿಸಬೇಕಾಗುತ್ತದೆ. ಇದಕ್ಕೆ ಪರಿಹಾರ ರೂಪವಾಗಿ ಹೋಮ್‌ ಮೆಡಿಕಲ್‌ ಇಕ್ವಿಪ್‌ಮೆಂಟ್‌ ಕೇಂದ್ರ ಆರಂಭಿಸಿದ್ದು, ಉಚಿತವಾಗಿ ವೈದ್ಯಕೀಯ ಸಲಕರಣೆಗಳನ್ನು ಪಡೆದು ಅಲ್ಪಕಾಲದವರೆಗೆ ಅದನ್ನು ಬಳಕೆ ಮಾಡಿ, ಹಾಳುಗೆಡವದೆ ಹಿಂದಿರುಗಿಸಬಹುದಾಗಿದೆ. ಗಾಲಿಕುರ್ಚಿ, ಸಿ.ಪಿ.ಬೆಡ್‌, ವಾಕರ್‌, ವಾಕಿಂಗ್‌ ಸ್ಟಿಕ್‌, ಆಕ್ಸಿಜನ್‌ ಕಿಟ್‌ ಇನ್ನಿತರೆ ವೈದ್ಯಕೀಯ ಸಲಕರಣೆಗಳನ್ನು ಒದಗಿಸುವ ಕಾರ್ಯವನ್ನು ಫೌಂಡೇಶನ್‌ ಮಾಡುತ್ತಿದ್ದು, ಅದೇ ರೋಗಿಗಳ ಮನಕ್ಕೆ ನೆಮ್ಮದಿ ತಂದಿದೆ.

ಮಕ್ಕಳು ಸೇರಿದಂತೆ ವಿವಿಧ ವಯೋಮಾನದ ಅಂಗವಿಕಲರಿಗೆ ಕೃತಕ ಕಾಲುಗಳು, ಗಾಲಿ ಕುರ್ಚಿ ನೀಡುವ ಕಾರ್ಯ ಮಾಡುತ್ತಿದೆ. ಕಿವಿ ಕೇಳದ ಬಡ ಕುಟುಂಬಗಳ ವೃದ್ಧರಿಗೆ ಶ್ರವಣ ಯಂತ್ರ ನೀಡಿಕೆ, ಜತೆಗೆ ಶ್ರವಣ ಶಕ್ತಿ ಪರೀಕ್ಷೆ ಯಂತ್ರವನ್ನು ಕಿಮ್ಸ್‌ಗೆ ದೇಣಿಗೆಯಾಗಿ ನೀಡಿದೆ.

ಮಜೇಥಿಯಾ ಫೌಂಡೇಶನ್‌ನ ಮತ್ತೂಂದು ಮಹತ್ವದ ಸೇವೆ ಎಂದರೆ ಗರ್ಭಿಣಿಯರು ಹಾಗೂ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ನೆರವು ನೀಡುತ್ತಿದ್ದು, ಸಾವಿರಾರು ಪೌಷ್ಟಿಕ ಆಹಾರ ಕಿಟ್‌ಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೀಡುವ ಮೂಲಕ ಅಪೌಷ್ಟಿಕತೆ ನಿವಾರಣೆಯೊಂದಿಗೆ ಸದೃಢ ಮಕ್ಕಳ ಜನನ, ಅಪೌಷ್ಟಿಕತೆಯೊಂದಿಗೆ ಬಳಲುತ್ತಿರುವ ಮಕ್ಕಳು ದಷ್ಟಪುಷ್ಟವಾಗಿಸುವ ಮಹತ್ವದ ಕಾರ್ಯ ಮಾಡುತ್ತಿದೆ.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿ ಇಲ್ಲದ ಹಳ್ಳಿಗಳಲ್ಲಿ ಮಹಿಳೆಯರು ದೂರದಿಂದ ಕುಡಿಯುವ ನೀರು ತರಬೇಕಿದ್ದು, ತಲೆ ಇಲ್ಲವೆ ನಡುವಿನಲ್ಲಿ ತುಂಬಿದ ಕೊಡಗಳನ್ನು ತರಬೇಕಿದೆ. ಮಹಿಳೆಯರ ಈ ಸಂಕಷ್ಟಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಮಜೇಥಿಯಾ ಫೌಂಡೇಶನ್‌ ಸುಮಾರು 17ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೂರಾರು ಚಲಿಸುವ ಚಕ್ರದ ನೀರಿನ ಟ್ಯಾಂಕ್‌ಗಳನ್ನು ನೀಡಿದೆ. ಇದರಿಂದ ಮಹಿಳೆಯರು ಟ್ಯಾಂಕ್‌ನಲ್ಲಿ ನೀರು ತುಂಬಿಕೊಂಡು ಸುಲಭವಾಗಿ ಅವುಗಳನ್ನು ಕೈಯಿಂದ ಉರುಳಿಸಿಕೊಂಡು ತರಬಹುದಾಗಿದೆ.

ಕೋವಿಡ್‌ನ‌ಲ್ಲಿ ಆಪದ್ಬಾಂಧವ…
ಕೋವಿಡ್‌ ಅಲೆ ಸಂದರ್ಭದಲ್ಲಿಯೂ ಮಜೇಥಿಯಾ ಫೌಂಡೇಶನ್‌ ತನ್ನ ಸಾಮಾಜಿಕ ಕಳಕಳಿಯೊಂದಿಗೆ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಕಡೆ ವೈದ್ಯಕೀಯ ಸೌಲಭ್ಯ, ಆಸ್ಪತ್ರೆಗೆ ಅಗತ್ಯ ಸಲಕರಣೆ, ಯಂತ್ರಗಳ ನೀಡಿಕೆ, ಜನರಿಗೆ ಆಹಾರ ಕಿಟ್‌, ಆರ್ಥಿಕ ನೆರವು, ಮಾಸ್ಕ್, ಸ್ಯಾನಿಟೈಜರ್‌ ಹಂಚಿಕೆ ಹೀಗೆ ಬಹುಮುಖೀ ನೆರವು ಕಾರ್ಯ ಮಾಡಿದೆ.

ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಿಸಿ ಸೌಲಭ್ಯಗಳಿಗೆ ಎದುರು ನೋಡುವ ಸ್ಥಿತಿಯಲ್ಲಿರುವಾಗ ಫೌಂಡೇಶನ್‌ ಸುಮಾರು 1.25ಲಕ್ಷಕ್ಕೂ ಅಧಿಕ ಮಾಸ್ಕ್, 525 ಸ್ಯಾನಿಟೈಜರ್‌ ಪೆಡಲ್‌ ಸ್ಯಾಂಡ್‌ಗಳನ್ನು ಉಚಿತವಾಗಿ ವಿತರಿಸಿತ್ತು. ಸುಮಾರು 50 ಹಾಸಿಗೆ ಕೋವಿಡ್‌ ಚಿಕಿತ್ಸೆ ತಾತ್ಕಾಲಿಕ ಆಸ್ಪತ್ರೆ ಆರಂಭಿಸಿ ಅದೆಷ್ಟೋ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೆರವು ನೀಡಿತ್ತು. ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಹಿತ 40 ಬೆಡ್‌ಗಳನ್ನು ಇರಿಸಲಾಗಿತ್ತು. ಆಕ್ಸಿಜನ್‌ ಕಾಂನ್ಸ್‌ಟ್ರೇಟರ್‌ಗಳು, ವಿವಿಧ ಸಲಕರಣೆಗಳನ್ನು ನೀಡುವ ಮೂಲಕ ಕೋವಿಡ್‌ ತಡೆ ನಿಟ್ಟಿನಲ್ಲಿ ಜಾಗೃತಿ ಹಾಗೂ ಅಗತ್ಯ ನೆರವು ಕಾರ್ಯ ಮಾಡಿತ್ತು.

ರಸ್ತೆ ಬದಿ ಇರುವವರು, ಕೂಲಿ ಕಾರ್ಮಿಕರು ಅನಾಥ ಮಕ್ಕಳ ಕೇಂದ್ರ, ವೃದ್ಧಾಶ್ರಮ, ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್‌ಗಳನ್ನು ನೀಡಿತ್ತು. ಅವಶ್ಯ ಇದ್ದವರಿಗೆ ಔಷಧಿ, ಕೋವಿಡ್‌ನಿಂದ ಸದಸ್ಯನನ್ನು ಕಳೆದುಕೊಂಡು ಅತ್ಯಂತ ಬಡ ಕುಟುಂಬಗಳವರಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಕೊನೆ ಕಾಲದ ನೆಮ್ಮದಿಗೆ ರಮೀಲಾ ಪ್ರಶಾಂತಿ ನಿಲಯ..
ಕ್ಯಾನ್ಸರ್‌ ವ್ಯಾದಿಗೆ ಸಿಲುಕಿ ವ್ಯಾದಿ ವಾಸಿಯಾಗದೆ ಅಂತಿನ ಹಂತದಲ್ಲಿರುವ ರೋಗಿಗಳು ಇರುವಷ್ಟು ದಿನಗಳ ಕಾಲ ನೆಮ್ಮದಿಯಿಂದ ಇರುವಂತಾಗಲು ಉಚಿತ ಮನೆ, ಊಟ, ಚಿಕಿತ್ಸೆಗೆ ಆಶ್ರಯ ತಾಣವಾಗಿರುವುದು ಮಜೇಥಿಯಾ ಫೌಂಡೇಶನ್‌ನ ರಮೀಲಾ ಪ್ರಶಾಂತಿ ಮಂದಿರ. ಹಾಸೈ³ಸ್‌ ಕೇಂದ್ರ ನವನಗರದಲ್ಲಿನ ಕರ್ನಾಟಕ ಕ್ಯಾನ್ಸರ್‌ ಥೆರಪಿ ಮತ್ತು ಸಂಶೋಧನ ಸಂಸ್ಥೆ ಹತ್ತಿರದಲ್ಲಿ ತಲೆ ಎತ್ತಿರುವ ರಮೀಲಾ ಪ್ರಶಾಂತಿ ನಿಲಯದಲ್ಲಿ ಅಂತಿಮ ಹಂತದಲ್ಲಿರುವ ರೋಗಿಗಳಿಗೆ ನೆಮ್ಮದಿ ವಾತಾವರಣ ಸೃಷ್ಟಿಸುವ ಕಾರ್ಯ ಮಾಡುತ್ತಿದೆ. ಅಲ್ಲಿದ್ದವರಿಗೆ ಪೌಷ್ಟಿಕ ಆಹಾರ, ಅಗತ್ಯ ಔಷಧಿ, ನುರಿತ ನರ್ಸ್‌, ಕಾಲಕಾಲಕ್ಕೆ ತಜ್ಞ ವೈದ್ಯರ ಭೇಟಿ, ಆಹ್ಲಾದಕರ ವಾತಾವರಣ ಅಲ್ಲಿದೆ. ಓದುವುದಕ್ಕೆ ಉತ್ತಮ ಪುಸ್ತಕಗಳಿವೆ. ಧ್ಯಾನ, ಯೋಗ, ಆಧ್ಯಾತ್ಮ ಚಿಂತನೆ, ಜೀವನೋತ್ಸಾಹ ತುಂಬುವ ಕಾರ್ಯಗಳು ಅಲ್ಲಿ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next