Advertisement

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

01:03 PM Apr 03, 2022 | Shwetha M |

ಮುದ್ದೇಬಿಹಾಳ: ಪಟ್ಟಣದಲ್ಲಿ ಬಸವೇಶ್ವರ ವೃತ್ತದಿಂದ ಮುಖ್ಯ ಬಜಾರ್‌ ಮಾರ್ಗವಾಗಿ ಇಂದಿರಾ ವೃತ್ತದವರೆಗೆ ಲೋಕೋಪಯೋಗಿ ಇಲಾಖೆಯ ಪ್ರಾಮ್ಸಿ (ಪಿಆರ್‌ಎಎಂಸಿ-ಪ್ಲಾನಿಂಗ್‌ ಆ್ಯಂಡ್‌ ರೋಡ್‌ ಅಸೆಟ್‌ ಮ್ಯಾನೆಜ್‌ಮೆಂಟ್‌ ಸೆಂಟರ್‌) ಯೋಜನೆ ಅಡಿ 5 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಿಮೆಂಟ್‌ ಕಾಂಕ್ರಿಟ್‌ ರಸ್ತೆಯನ್ನು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿಯವರು ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು.

Advertisement

ಏ. 1ರ ಉದಯವಾಣಿಯಲ್ಲಿ ಸಿಸಿ ರಸ್ತೆ ಕ್ಯೂರಿಂಗ್‌ಗೆ ಬೀದಿ ಬದಿ ವ್ಯಾಪಾರಸ್ಥರ ಅಸಹಕಾರ ಶಿರೋನಾಮೆಯಡಿ ಪ್ರಕಟಗೊಂಡಿದ್ದ ವಿಶೇಷ ವರದಿಗೆ ಸ್ಪಂದಿಸಿ ಪುರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಕಾಮಗಾರಿ ಪರಿಶೀಲನೆ ನಡೆಸಿದ ಅವರು ಸಿಸಿ ರಸ್ತೆಯ ಗುಣಮಟ್ಟಕ್ಕೆ ಕ್ಯೂರಿಂಗ್‌ ಅತ್ಯಗತ್ಯವಾಗಿದ್ದು ವ್ಯಾಪಾರಸ್ಥರ ಮನವೊಲಿಸಿ ನಿಗದಿತ ಪ್ರಮಾಣದಲ್ಲಿ ರಸ್ತೆಗೆ ನೀರುಣಿಸುವಂತೆ ಸಲಹೆ ನೀಡಿದರು.

ಇಂದಿರಾ ವೃತ್ತದಿಂದ ಅಂದಾಜು ಒಂದೂವರೆ ಕಿ.ಮೀ. ಉದ್ದದ ಬಸವೇಶ್ವರ ವೃತ್ತದವರೆಗೂ ರಸ್ತೆಗುಂಟ ಕಾಲ್ನಡಿಗೆಯಲ್ಲೇ ಸಂಚರಿಸಿ, ಮಾರ್ಗಮಧ್ಯೆ ಅಲ್ಲಲ್ಲಿ ನಿಂತು ಅಂಗಡಿಕಾರರ ಅಹವಾಲು, ಸಾರ್ವಜನಿಕರ ಸಲಹೆ ಮುಂತಾದವುಗಳನ್ನು ಆಲಿಸಿದ ಶಾಸಕರು ಅಗತ್ಯ ಬಿದ್ದೆಡೆಯಲ್ಲೆಲ್ಲಾ ಕೆಲವು ಮಾರ್ಪಾಡುಗಳನ್ನು ಮಾಡಲು ತಮ್ಮ ಜೊತೆಗಿದ್ದ ಗುತ್ತಿಗೆದಾರರಿಗೆ ಸೂಚಿಸಿದರು.

ರಸ್ತೆಯ ಯಾವ ಭಾಗದಲ್ಲಿ ವಿದ್ಯುತ್‌ ಕಂಬ ಅಳವಡಿಸಬೇಕು. ಯಾವ ಭಾಗದಲ್ಲಿ ಹೇಗೆ ಫುಟ್‌ಪಾತ್‌ ನಿರ್ಮಿಸಬೇಕು. ಎಲ್ಲಿ ಪೈಪ್‌ ಗಳನ್ನು ಅಳವಡಿಸಲು ಸ್ಥಳಾವಕಾಶ ಕಲ್ಪಿಸಬೇಕು. ಅಂಗಡಿಗಳ ಮುಂದೆ ಪಾರ್ಕಿಂಗ್‌ ಸ್ಥಳಾವಕಾಶ ಯಾವ ರೀತಿ ಇರಬೇಕು ಎಂಬೆಲ್ಲ ಅಂಶಗಳನ್ನು ಓರ್ವ ನುರಿತ ಎಂಜಿನಿಯರ್‌ ರಂತೆ ಗುತ್ತಿಗೆದಾರರಿಗೆ ತಿಳಿಸಿ ಹೇಳಿದ ಶಾಸಕರು, ಕೆಲವೆಡೆ ರಸ್ತೆ ಅಗಲವಾಗಿದೆ, ಮತ್ತೆ ಕೆಲವೆಡೆ ಕಿರಿದಾಗಿದೆ. ಒಂದೇ ರೀತಿಯ ರಸ್ತೆ ನಿರ್ಮಿಸಿದರೆ ಒಳ್ಳೆಯದಿತ್ತಲ್ಲ ಎನ್ನುವ ಸಾರ್ವಜನಿಕರ ಸಲಹೆ ಪರಿಗಣಿಸಿ ಪಿಡಬ್ಲ್ಯೂಡಿ ನಕಾಶೆಯಲ್ಲಿ ಹೇಗಿದೆಯೋ ಹಾಗೆ ರಸ್ತೆ ಮಾಡಲು ಮತ್ತು ಇದ್ದುದರಲ್ಲೇ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದುತ್ತರಿಸಿದರು.

ಹೊಸದಾಗಿ ಕಾಂಕ್ರೀಟ್‌ ಹಾಕಿದ ಮೇಲೆ ರಸ್ತೆಗೆ ಗೋಣಿ ಚೀಲ ಹಾಕಿ ಕ್ಯೂರಿಂಗ್‌ ಮಾಡಲು ಕೈಗೊಂಡ ಕ್ರಮಕ್ಕೆ ಮೆಚ್ಚುಗೆ ಸೂಚಿಸಿದ ಶಾಸಕರು ಕೆಲ ದಿನಗಳವರೆಗೆ ಆ ಗೋಣಿಚೀಲಗಳು ನೀರಿಲ್ಲದೆ ಒಣಗದಂತೆ ಮೇಲಿಂದ ಮೇಲೆ ನೀರುಣಿಸುತ್ತಿರುವಂತೆ ಗುತ್ತಿಗೆದಾರರಿಗೆ ಕಿವಿಮಾತು ಹೇಳಿದರು.

Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಮುಖಂಡ ಸಿದ್ದರಾಜ ಹೊಳಿ, ಪುರಸಭೆ ಮುಖ್ಯಾಧಿಕಾರಿ ಸುನೀಲ ಪಾಟೀಲ, ಪುರಸಭೆ ಕಂದಾಯ ಅಧಿಕಾರಿ ಭಾರತಿ ಮಾಡಗಿ, ಪುರಸಭೆ ಎಂಜಿನಿಯರ್‌ ಬಗಲಿ, ಪುರಸಭೆ ಆರೋಗ್ಯ ವಿಭಾಗದ ಮಹಾಂತೇಶ ಕಟ್ಟಿಮನಿ, ಜಾಕೀರ, ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ರೇಣುಕಾ ಜಕನೂರ ಮತ್ತಿತರರು ಇದ್ದರು.

ಹಳೆ ಕೋರ್ಟ್‌ ಪುರಸಭೆಗೆ ಹಸ್ತಾಂತರ

ಮುಖ್ಯ ಬಜಾರ್‌ನಲ್ಲಿರುವ, ಸದ್ಯ ನಿರುಪಯುಕ್ತವಾಗಿರುವ ಬ್ರಿಟಿಷ್‌ ಕಾಲದ ಹಳೆಯ ಕೋರ್ಟ್‌ ಕಟ್ಟಡವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ಶಾಸಕರು ಆ ಕಟ್ಟಡದ ಆವರಣವನ್ನೆಲ್ಲ ಸ್ವಚ‍್ಛಗೊಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಈ ಕಟ್ಟಡದ ಮುಂಭಾಗ ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿದ್ದು ಬಳಸಿಕೊಳ್ಳಲು ಯೋಜನೆ ರೂಪಿಸುವಂತೆ ತಿಳಿಸಿದರು.

ಪಿಡಬ್ಲ್ಯೂಡಿಯವರಿಗೆ ತಿಳಿಸಿ ಆ ಕಟ್ಟಡದ ಜೀರ್ಣೋದ್ಧಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮತ್ತು ಇದನ್ನು ಪುರಸಭೆ ಕಚೇರಿಯನ್ನಾಗಿ ಮಾಡುವ ಕುರಿತು ನ್ಯಾಯಾಂಗ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬೆಂಗಳೂರು ಮಟ್ಟದಲ್ಲಿ ಮಾತನಾಡಿ ಪುರಸಭೆಗೆ ಹಸ್ತಾಂತರಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next