Advertisement

ಮಹಾಶಿವರಾತ್ರಿಗೆ ಶಿವಾಲಯಗಳು ಸಜ್ಜು

11:37 AM Feb 18, 2023 | Team Udayavani |

ಬೆಂಗಳೂರು: ನಗರದಲ್ಲಿ ಶಿವರಾತ್ರಿ ಪ್ರಯುಕ್ತ ಶಿವನ ಆರಾಧನೆಗೆ ದೇವಾಲಯಗಳು ಸಜ್ಜಾಗಿದ್ದು, ನಗರದ ಪ್ರಮುಖ ಶಿವನ ದೇವಸ್ಥಾನಗಳು ವಿದ್ಯುತ್‌ ದೀಪಗಳಿಂದ, ಫ‌ಲ-ಪುಷ್ಪಗಳಿಂದ ಅಲಂಕೃತಗೊಂಡಿವೆ.

Advertisement

ಶಿವರಾತ್ರಿ ಹಿನ್ನೆಲೆಯಲ್ಲಿ ಹರಿಹರಪುರ ಮಠದ ಶ್ರೀಗಳು ಅನುಗ್ರಹಿಸಿರುವ “ಮೃತ್ತಿಕಾ ಶಿವಲಿಂಗ’ವನ್ನು ಮಲ್ಲೇಶ್ವರದ ಶ್ರೀಕಂಠೇಶ್ವರ ಭವನದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಇದರ ಅಂಗವಾಗಿ ಭಜನೆ, ಶಿವ ಸಂಕೀರ್ತನೆ, ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿವೆ. ಸಂಜೆಯಿಂದ ದೇವರಿಗೆ ರುದ್ರಾಭಿಷೇಕ ನಡೆಯಲಿದ್ದು, ರಾತ್ರಿ 9ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಲಿದೆ.

ಐತಿಹಾಸಿಕ ಗವಿಗಂಗಾಧರೇಶ್ವರ ದೇವಾಲಯ, ಹಲಸೂರಿನ ಸೋಮೇಶ್ವರ ದೇವಾಲಯ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯ, ಕಲಾಸಿಪಾಳ್ಯದ ಜಲಂಕಂಠೇಶ್ವರ ದೇವಾಲಯ, ಬಳಪೇಟೆಯಲ್ಲಿರುವ ಪುರಾತನ ಕಾಶಿ ವಿಶ್ವನಾಥ ದೇವಾಲಯ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ ಸಮೀಪದಲ್ಲಿರುವ ಧರ್ಮಗಿರಿಯ ಮಂಜುನಾಥ ಸ್ವಾಮಿ ದೇವಾಲಯ, ಎಚ್‌ಎಎಲ್‌ನ ಶಿವದೇವಾ ಲಯ, ಪುಟ್ಟೇನಹಳ್ಳಿ ಈಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಶಿವರಾಧನೆಗೆ ಸಜ್ಜಾಗಿವೆ.

ಕಾಡುಮಲ್ಲೇಶ್ವರ ದೇವಸ್ಥಾನ: ಐತಿಹಾಸಿಕ ಹಾಗೂ ನಗರದ ಪುರಾತನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಫೆ.18(ಶನಿವಾರ)ರಿಂದ 3 ದಿನಗಳ ಕಾಲ ಮಹಾಶಿವರಾತ್ರಿ ಹಾಗೂ ಬ್ರಹ್ಮ ರಥೋತ್ಸವ ನಡೆಯಲಿದ್ದು, ಶನಿವಾರ ಮುಂಜಾನೆ 3.30ಕ್ಕೆ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಲಿದ್ದು, ಸಂಜೆ ಕಾಡು ಮಲ್ಲೇಶ್ವರ ಗೆಳೆಯರ ಬಳಗದಿಂದ ಜಾಗರಣೆ ಪ್ರಯುಕ್ತ ಬಂಟ್ವಾಳದ ಯಕ್ಷ ರಂಗ ತಂಡದಿಂದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನವನ್ನು ಸಂಜೆಯಿಂದ ಬೆಳಿಗ್ಗೆವರೆಗೆ ಪ್ರದರ್ಶನ ಇರಲಿದೆ.

ಮರುದಿನ ಭಾನುವಾರದಂದು ಬ್ರಹ್ಮ ರಥೋತ್ಸವ ದಲ್ಲಿ 3 ರಥಗಳು ಮಲ್ಲೇಶ್ವರದ ವಿವಿಧ ಭಾಗಗಳಲ್ಲಿ ಸಂಚರಿಸಲಿವೆ. ಗಂಗಾನದಿಯ ಮಾದರಿಯಲ್ಲಿ 108 ಮಂದಿಯಿಂದ ಗಂಗಾರಥಿಯನ್ನು ಬೆಳಗಲು ವ್ಯವಸ್ಥೆ ಮಾಡಲಾಗಿದೆ.

Advertisement

ಈ ಧಾರ್ಮಿಕ ವೈಶಿಷ್ಟ್ಯತೆಯಲ್ಲಿ ಲಕ್ಷಾಂತರ ಪುಷ್ಪಗಳಲ್ಲಿ 22 ಅಡಿ ಉದ್ದ, 22 ಅಡಿ ಅಗಲದ ವಿಶೇಷ ಪುಷ್ಪಲಿಂಗವನ್ನು ಪ್ರತಿಷ್ಠಾಪಿಸುತ್ತಿದ್ದು, ಇದಕ್ಕಾಗಿ ಒಂದು ಲಕ್ಷ ಭಿನ್ನ, ವಿಭಿನ್ನ ಪುಷ್ಪಗಳನ್ನು ಬಳಸಲಾಗಿದೆ. ಇದು ಮೂರು ದಿನಗಳ ಕಾಲ ಸಾರ್ವಜನಿಕರ ಪ್ರದರ್ಶನಕ್ಕೆ ಇರಲಿದೆ. ಭಕ್ತಾದಿಗಳಿಗೆ ನಿರಂತರ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. 250 ಮಂದಿಯ 12 ಜಾನಪದ ಮತ್ತು ಕಲಾ ತಂಡಗಳು ರಥೋತ್ಸವದ ಮೆರಗು ಹೆಚ್ಚಿಸಲಿದ್ದಾರೆ ಎಂದು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ತಿಳಿಸಿದ್ದಾರೆ.

ಮಹತೋಭಾರ ಮಹಾಲಿಂಗೇಶ್ವರ: ಎಚ್‌ಎಎಲ್‌ 3ನೇ ಹಂತದ ಹೊಸ ತಿಪ್ಪಸಂದ್ರದಲ್ಲಿನ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನದ ಶಿಶು ಗೃಹದಲ್ಲಿ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ಮಹತೋಭಾರ ಮಹಾಲಿಂಗೇಶ್ವರ ಮಹಾಶಿವರಾತ್ರಿಯ 3ನೇ ಮಹೋತ್ಸವವನ್ನು ಹಮ್ಮಿಕೊಂಡಿದ್ದು, ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆವರೆಗೆ ವಿವಿಧ ಕಾರ್ಯಗಳು ನಡೆಯಲಿದ್ದು, ಶನಿವಾರ ಬೆಳಗ್ಗೆಯಿಂದ ರುದ್ರಯಾಗ, ಪಂಚಗವ್ಯ, ಪುಣ್ಯಹವಾಚನ, ಶಿವಲಿಂಗ ಸ್ಥಾಪನೆ, ಶತ ರುದ್ರಾಭಿಷೇಕ, ಕಳಶ ಪ್ರತಿಷ್ಠಾಪನೆ, ವಿವಿಧ ಅಭಿಷೇಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7.30ರಿಂದ ಖ್ಯಾತ ಹಿನ್ನೆಲೆ ಗಾಯಕರಿಂದ ಭಕ್ತಿ ಗೀತೆಗಳು, ರಾತ್ರಿ 9.30ರಿಂದ ನೃತ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಧ್ಯರಾತ್ರಿ 12.30ರಿಂದ ಬೆಳಗ್ಗೆ 5.30ರವರೆಗೆ ಭಜನೆ ಮತ್ತು ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ಜರುಗಲಿದೆ.

ಕುರುಕ್ಷೇತ್ರ ನಾಟಕ: ಶಿವರಾತ್ರಿ ಪ್ರಯುಕ್ತ ಡಾ.ರಾಜ್‌ ಕುಮಾರ್‌ ಕಲಾಭಿಮಾನಿಗಳ ಸಾಂಸ್ಕೃತಿಕ ವೇದಿಕೆಯಿಂದ ಸರ್ಜಾಪುರ ರಸ್ತೆಯ ಅಗರದ ಕಾಶೀಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ರಾತ್ರಿ 9ರಿಂದ ಕಲ್ಲೂರು ಶ್ರೀನಿವಾಸ್‌ ನಿರ್ದೇಶನದ “ಕುರುಕ್ಷೇತ್ರ’ ನಾಟಕ ಪ್ರದರ್ಶಿಸಲಾಗುವುದು.

ನಗೆ ಜಾಗರಣೆ : ಮಹಾ ಶಿವರಾತ್ರಿ ಪ್ರಯುಕ್ತ ನಗರದ ಶೇಷಾದ್ರಿಪುರದ ಸಿರೂರು ಪಾರ್ಕ್‌ನಲ್ಲಿ ಜಾಣ ಜಾಣೆಯರು ಸಂಸ್ಥೆಯಿಂದ “ನಗೆ ಜಾಗರಣೆ’ ಹಮ್ಮಿಕೊಳ್ಳಲಾಗಿದೆ. 7.30ರಿಂದ ಅಹೋರಾತ್ರಿ ವರೆಗೆ ಹಾಸ್ಯ ಕಲಾವಿದರಾದ ಪ್ರೊ.ಎಂ.ಕೃಷ್ಣಗೌಡ, ಬಿ.ಪ್ರಾಣೇಶ್‌ (ಗಂಗಾವತಿ), ನರಸಿಂಹ ಜೋಷಿ (ಗಂಗಾವತಿ), ಬಸವರಾಜ ಮಹಾಮನಿ (ಕಲಬುರ್ಗಿ), ಕೋಗಳಿ ಕೊಟ್ರೇಶ್‌ (ಕೂಡ್ಲಿಗಿ), ಡಾಣ ಬೆಣ್ಣೆ ಬಸವರಾಜು (ಹೊಸಪೇಟೆ), ಉಮೇಶ್‌ ಗೌಡ, ಮಿಮಿಕ್ರಿ ಲೋಕದ ತಾರೆಯರು ಇರುವ “ದಯಾನಂದ್‌ ಲೋಕ’, ಮಿಮಿಕ್ರಿ ಮಂಜು, ನರಸಿಂಹ ಜೋಶಿ, ಕಲಾವಿದ ಮುಖ್ಯಮಂತ್ರಿ ಚಂದ್ರು, ನಟಿ ಉಮಾಶ್ರೀ ಸೇರಿದಂತೆ ಅನೇಕರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹಾಸ್ಯವನ್ನು ಪ್ರದರ್ಶಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next