ಮುಂಬೈ: ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ ಕೋವಿಡ್ 19 ವೈರಸ್ ಗೆ 48 ಜನರು ಬಲಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯವೊಂದರಲ್ಲಿ ಇಷ್ಟೊಂದು ಪ್ರಮಾಣದ ಮರಣಗಳಾಗಿದ್ದು ದಾಖಲೆಯಾಗಿದೆ.
ಮಾತ್ರವಲ್ಲದೆ ಈ ರಾಜ್ಯದಲ್ಲಿ 1,165 ಹೊಸ ಪ್ರಕರಣಗಳು ಕಂಡುಬಂದಿದ್ದು ಆ ಮೂಲಕ ವೈರಸ್ ಸೋಂಕಿತರ ಪ್ರಮಾಣ 20 ಸಾವಿರದ ಗಡಿ ತಲುಪಿದೆ. ಇದರಲ್ಲಿ ಮೃತಪಟ್ಟವರ ಸಂಖ್ಯೆ 779 ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಶನಿವಾರ ಮೃತರಾದ 48 ಜನರಲ್ಲಿ 27 ಮಂದಿ ಮುಂಬೈ ನಲ್ಲಿ ಸಾವನ್ನಪ್ಪಿದ್ದಾರೆ. 9 ಮಂದಿ ಪುಣೆ, 8 ಜನರು ಮಲೆಗಾನ್ ನಲ್ಲಿ ಮೃತಪಟ್ಟಿದ್ದಾರೆ. ಕೋವಿಡ್ -19ಗೆ ಮುಂಬೈ ಅಕ್ಷರಶಃ ನಲುಗಿ ಹೋಗಿದ್ದು, ಇಲ್ಲಿ ಸೋಂಕಿತರ ಪ್ರಮಾಣ 12,864ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ ಈ ನಗರವೊಂದರಲ್ಲೇ 489 ಜನರು ಕೊನೆಯುಸಿರೆಳೆದಿದ್ದಾರೆ.
ಧಾರವಿಯಲ್ಲಿ ಈ ಮಹಾಮಾರಿ ತನ್ನ ಪ್ರಭಾವ ಬೀರುತ್ತಿದ್ದು 25 ಹೊಸ ಪ್ರಕರಣಗಳು ದಾಖಲಾಗಿವೆ. ಇಲ್ಲಿ ಒಟ್ಟಾರೆ ಸೋಂಕಿತರ ಪ್ರಮಾಣ 833ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಒಟ್ಟಾರೆಯಾಗಿ 2,27,804 ಜನರಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, 3,800 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸುಮಾರು 2. 4 ಲಕ್ಷ ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, 13 ಸಾವಿರಕ್ಕಿಂತ ಹೆಚ್ಚು ಜನರನ್ನು ಶಿಕ್ಷಣ ಸಂಸ್ಥೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಪಸರಿಸುತ್ತಿರುವ ಕೋವಿಡ್ 19 ಮಹಾಮಾರಿಯ ಬಗ್ಗೆ ಪ್ರತಿಕ್ರಿಯಿಸಿ “ಮುಂದಿನ ಲಾಕ್ ಡೌನ್ ಜನರ ವರ್ತನೆಯ ಮೇಲೆ ಅವಲಂಬಿಸಿರುತ್ತದೆ. ಜನರು ಲಾಕ್ ಡೌನ್ ನಿಯಮಾವಳಿಗಳನ್ನು ಸಮರ್ಪಕವಾಗಿ ಅನುಸರಿಸಿದರೆ ಅತೀ ಶೀಘ್ರದಲ್ಲಿ ತೆರವುಗೊಳಿಸಲಾಗುವುದು” ಎಂದಿದ್ದಾರೆ.
ಲಾಕ್ ಡೌನ್ ನಲ್ಲೇ ಸಂಪೂರ್ಣ ಜೀವನ ಕಳೆಯಲಾಗುವುದಿಲ್ಲ. ಒಂದಲ್ಲಾ ಒಂದು ದಿನ ಸಡಿಲಗೊಳಿಸಲೇಬೇಕಾಗುತ್ತದೆ. ಅಲ್ಲಿಯವರೆಗೂ ನಿಯಮಗಳನ್ನು ಕಾಯ್ದುಕೋಂಡು ಸಾಮಾಜಿಕ ಅಂತರದತ್ತ ಗಮನಹರಿಸಿ ಎಂದು ಮನವಿ ಮಾಡಿದ್ದಾರೆ.