Advertisement

ಪ್ರಹಾರ್‌ ಜನಶಕ್ತಿ ಪಕ್ಷದ ಮುಖಂಡನ ಗುಂಡಿಕ್ಕಿ ಹತ್ಯೆ

10:18 AM Feb 23, 2020 | Sriram |

ಅಕೋಲಾ: ಜಿಲ್ಲೆಯ ಅಕೋಟ್‌ ಪಟ್ಟಣದಲ್ಲಿ ಪ್ರಹಾರ್‌ ಜನಶಕ್ತಿ ಪಕ್ಷದ(ಪಿಜೆಪಿ) ಸ್ಥಳೀಯ ಮುಖಂಡರೊಬ್ಬರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಗೈದಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

Advertisement

ಪಿಜೆಪಿಯ ಅಕೋಲಾ ಜಿಲ್ಲಾ ಘಟಕದ ಮಾಜಿ ಮುಖ್ಯಸ್ಥರಾಗಿದ್ದ ತುಷಾರ್‌ ಪುಂಡ್ಕರ್‌ ಅವರಿಗೆ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಗುಂಡು ಹಾರಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಅಕೋಲಾದ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಅಕೋಟ್‌ನ ಪೊಲೀಸ್‌ ಕಾಲೋನಿ ಪ್ರದೇಶದಲ್ಲಿ ಪುಂಡ್ಕರ್‌ ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಿಂದಿನಿಂದ ಎರಡು ಗುಂಡುಗಳನ್ನು ಹಾರಿಸಿದರು. ದೇಹಕ್ಕೆ ಗುಂಡು ತಗಲಿ ಪುಂಡ್ಕರ್‌ ನೆಲದ ಮೇಲೆ ಕುಸಿದುಬಿದ್ದರು. ಕೆಲವು ಸ್ಥಳೀಯ ನಿವಾಸಿಗರು ಎಚ್ಚರಿಸಿದ ಅನಂತರ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪುಂಡ್ಕರ್‌ ಅವರನ್ನು ಪಟ್ಟಣದ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ದರು.

ಅನಂತರ ಅವರನ್ನು ಅಕೋಲಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳದಿಂದ ಬಂದೂಕು ಮತ್ತು ಎರಡು ಖಾಲಿ ಕಾಟ್ರಿìಡ್ಜ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪುಂಡ್ಕರ್‌ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಅಕೋಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಹತ್ಯೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದರು.

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಪಿಜೆಪಿ ಸಂಸ್ಥಾಪಕ ಅಧ್ಯಕ್ಷ ಮತ್ತು ಅಚಲಪುರ ಶಾಸಕ ಬಚ್ಚಾ ಕಡೂ ಅವರು, ಅಪರಾಧದ ಹಿಂದಿನ ದುಷ್ಕರ್ಮಿಗಳ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅಪರಾಧದ ದುಷ್ಕರ್ಮಿಗಳು ಮತ್ತು ಕೊಲೆಗೆ ಸುಪಾರಿ ನೀಡಿದ ಜನರನ್ನು ಪತ್ತೆಹಚ್ಚುವುದು ಬಹಳ ಮುಖ್ಯವಾಗಿದೆ ಎಂದವರು ನುಡಿದಿದ್ದಾರೆ.

Advertisement

ಈ ಪ್ರಕರಣದ ಬಗ್ಗೆ ಪೊಲೀಸ್‌ ಇಲಾಖೆ ತನಿಖೆ ನಡೆಸುತ್ತಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅಕೋಲಾ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕಡೂ ಹೇಳಿದ್ದಾರೆ. 2019ರ ಅಕ್ಟೋಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪುಂಡ್ಕರ್‌ ಪಿಜೆಪಿಯ ಟಿಕೆಟ್‌ನಲ್ಲಿ ಅಕೋಟ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next