Advertisement

ಮಹಾಮಾಯಿಗೆ ಶತಶೃಂಗದ ಕೋಡು

12:09 PM Sep 15, 2017 | |

ಕನ್ನಡ ನಾಟಕಗಳ ಪರಂಪರೆಯಲ್ಲಿ ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ನಾಟಕ ರೆಪರ್ಟರಿಗಳ ಆಧುನಿಕ ರಂಗಭೂಮಿ- ಇವುಗಳ ಆಧಾರವಾಗಿರುವ ಮುಖ್ಯವಾದ ಧಾರೆ ವಿದ್ಯಾರ್ಥಿ ರಂಗಭೂಮಿ. ಶಾಲೆ-ಕಾಲೇಜುಗಳ ಚಲನಶೀಲ ವಿದ್ಯಾರ್ಥಿ ಸಮುದಾಯವನ್ನು ಸಾಂಸ್ಕೃತಿಕ ಅಭಿರುಚಿಯುಳ್ಳ ಸಾಮಾಜಿಕರನ್ನಾಗಿ ರೂಪಿಸುವ ಕಾರ್ಯವನ್ನು ಕಾಲೇಜು ರಂಗಭೂಮಿ ಅಥವಾ ವಿದ್ಯಾರ್ಥಿ ರಂಗಭೂಮಿ ಸದ್ದಿಲ್ಲದೆ ಮಾಡಿಕೊಂಡು ಬಂದಿದೆ. ಕನ್ನಡ ರಂಗಭೂಮಿಯನ್ನು ಅವಲೋಕಿಸು ವಾಗ “ತುಘಲಕ್‌’, “ಒಡಲಾಳ’ ಮೊದಲಾದ ನಾಟಕಗಳು ನುರಿತ ಕಲಾವಿದರ ಹವ್ಯಾಸಿ ತಂಡಗಳಿಂದ ಹತ್ತಾರು ವರ್ಷ ಬಹುಪ್ರದರ್ಶನ ಯೋಗವನ್ನು ಪಡೆದುದಿದೆ. ನೀನಾಸಂ ಹೆಗ್ಗೊàಡಿನ ತಿರುಗಾಟ ಯೋಜನೆಯ ನಾಟಕಗಳು ಹಾಗೂ ಕಂಪೆನಿ ನಾಟಕಗಳು ವೃತ್ತಿಪರವಾಗಿರುತ್ತಾ, ನಿಶ್ಚಿತ ವೇಳಾಪಟ್ಟಿಯ ಅನುಸಾರ ಬಹುಸಂಖ್ಯೆಯಲ್ಲಿ ಪ್ರಯೋಗ ವಾಗಿರುವುದು ವಿಸ್ಮಯವಲ್ಲ. ಆದರೆ ಕಾಲೇಜಿನ ರಂಗ ರೆಪರ್ಟರಿಯಲ್ಲಿ ವಿದ್ಯಾರ್ಥಿಗಳು ತರಬೇತಾಗಿ ಡಾ| ಚಂದ್ರಶೇಖರ ಕಂಬಾರರ ಮಹಾಮಾಯಿ ಯಂಥ ಶಕ್ತಿಶಾಲಿ ರಂಗಕೃತಿಯು ಒಬ್ಬನೇ ನಿರ್ದೇಶಕನ ಸೂತ್ರಧಾರತ್ವದಲ್ಲಿ ನೂರು ಬಾರಿ ರಂಗಾವತರಣಗೊಳ್ಳುವುದು ಅದ್ವಿತೀಯ ಸಾಧನೆಯಾಗಿದೆ. 

Advertisement

ಆಳ್ವಾಸ್‌ ರಂಗ ಅಧ್ಯಯನ ಕೇಂದ್ರ
ಕಾಲೇಜು ರಂಗಭೂಮಿಯಲ್ಲಿ ಕಲಾ ಪ್ರತಿಭೆಯುಳ್ಳ ವಿದ್ಯಾರ್ಥಿಗಳ ಅನ್ವೇಷಣೆ, ತರಬೇತಿ, ರಂಗಬದ್ಧತೆಯನ್ನು ಕಲಿಸುವುದು ಅತ್ಯಂತ ಸವಾಲಿನ ಕೆಲಸ.  ಶೈಕ್ಷಣಿಕ ಒತ್ತಡದ ವೇಳಾಪಟ್ಟಿ, ಪರೀಕ್ಷೆಗಳು, ಫ‌ಲಿತಾಂಶಗಳ ಮುಳ್ಳು ಹಾದಿಯಲ್ಲಿ ಆಳ್ವಾಸ್‌ ರಂಗ ಅಧ್ಯಯನ ಕೇಂದ್ರ ಅತ್ಯಂತ ಯಶಸ್ವಿ ಯಾಗಿ ತನ್ನ ರಂಗಯಾನವನ್ನು ನಡೆಸಿ ಕೊಂಡು ಬಂದಿರುವುದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಮೋಹನ ಆಳ್ವರ ರಂಗಾಭಿಮಾನದಿಂದ. ಆಳ್ವಾಸ್‌ ರಂಗ ಅಧ್ಯಯನ ಕೇಂದ್ರವು ಮಾಹಾಮಾಯಿಯನ್ನು 66 ಬಾರಿ ರಂಗಪ್ರಯೋಗಕ್ಕೆ ಅಳವಡಿಸಿರುವ ಸಂದರ್ಭದಲ್ಲಿ ಡಾ| ಆಳ್ವರೊಬ್ಬರೇ 34 ಪ್ರಯೋಗಗಳನ್ನು ಸ್ವತಃ ವೀಕ್ಷಿಸಿದ್ದಾರೆ. ಅವರ ಮುತುವರ್ಜಿಯಿಂದ ಆಳ್ವಾಸ್‌ ರಂಗ ಅಧ್ಯಯನ ಕೇಂದ್ರವು ಪ್ರತೀ ವರ್ಷವೂ ಮೂರು ಅಥವಾ ನಾಲ್ಕು ವಿಭಿನ್ನ ನಾಟಕಗಳನ್ನು ವೃತ್ತಿಪರ ಗುಣಮಟ್ಟದೊಂದಿಗೆ ರಂಗಪ್ರಯೋಗಕ್ಕೆ ಅಣಿ ಗೊಳಿಸುತ್ತದೆ. ಇದಕ್ಕಾಗಿಯೇ ವಿದ್ಯಾರ್ಥಿ ಕಲಾವಿದರಿಗೆ ರಂಗ ರೆಪರ್ಟರಿಯೊಂದನ್ನು ಆಳ್ವಾಸ್‌ ರಂಗ ಅಧ್ಯಯನ ಕೇಂದ್ರದ ಸ್ಥಾಪನೆಯ ಮೂಲಕ ಸಾಕ್ಷಾತ್ಕರಿಸಿದ ಹೆಮ್ಮೆ ಡಾ| ಆಳ್ವರದ್ದು. ಈವರೆಗೆ ಆಳ್ವಾಸ್‌ ವಿದ್ಯಾರ್ಥಿಗಳು ಮಹಾಮಾಯಿ, ಮಕ್ಕಳ ಮಾಯಾಲೋಕ, ಏಕಾದಶಾನನ, ದೂತವಾಕ್ಯ, ಬರ್ಬರೀಕ, ಅಗ್ನಿ ಮತ್ತು ಮಳೆ, ಬಿಡುಗಡೆಯ ಕನಸಿನಲ್ಲಿ, ಮಧ್ಯಮ ವ್ಯಾಯೋಗ, ಮಂಡೂಕರಾಣಿ, ಊರುಭಂಗ, ದೇವವೃದ್ಧರು, ನಾಯಿಮರಿ ನಾಟಕ, ಪಂಜರ ಶಾಲೆ, ಧಾಂಧೂಂ ಸುಂಟರಗಾಳಿ ಮುಂತಾದ ನಾಟಕಗಳ ರಂಗಪ್ರಯೋಗಗಳನ್ನು ನಾಡಿನಾದ್ಯಂತ ಪ್ರದರ್ಶಿಸಿದ್ದಾರೆ. ಆಳ್ವಾಸ್‌ನ ರಂಗಶಾಲೆಯಲ್ಲಿ ತರಬೇತಾದ ವಿದ್ಯಾರ್ಥಿಗಳು ನೀನಾಸಂ ಸೇರಿದಂತೆ ಅನೇಕ ರಂಗತಂಡಗಳಲ್ಲಿ ಪೂರ್ಣಾವಧಿ ಕಲಾವಿದರಾಗಿದ್ದಾರೆ. ಸಿನೆಮಾ ಕ್ಷೇತ್ರಕ್ಕೂ ನಟರಾಗಿ ಕಾಲಿರಿಸಿದ್ದಾರೆ. ಆಳ್ವಾಸ್‌ ವಿದ್ಯಾರ್ಥಿಗಳ ನಾಟಕಗಳಿಗೆ ಸತತ ಒಂಬತ್ತು ಬಾರಿ ದಾಖಲೆಯ ರಾಷ್ಟ್ರೀಯ ರಂಗ ಪ್ರಶಸ್ತಿಯ ಸಾಧನೆಯ ಗರಿಯಿದೆ. 

ನಿರ್ದೇಶಕ ಜೀವನ್‌ ರಾಂ ಸುಳ್ಯ
ನೀನಾಸಂ ಪದವೀಧರರಾಗಿ ನೀನಾಸಂ ತಿರುಗಾಟಗಳಲ್ಲಿ ಐದು ವರ್ಷ ತಂತ್ರಜ್ಞರಾಗಿ, ಸಂಚಾಲಕರಾಗಿ ದುಡಿದಿರುವ ಜೀವನ್‌ ರಾಂ ಸುಳ್ಯರು ಮಕ್ಕಳ ಹಾಗೂ ಕಾಲೇಜು ರಂಗಭೂಮಿಯಲ್ಲಿ ಬದ್ಧತೆಯಿಂದ ತೊಡಗಿಸಿ ಕೊಂಡ ರಂಗಯೋಗಿ. ಇವರು ರಚಿಸಿ, ನಿರ್ದೇಶಿಸಿ, ಅಭಿನಯಿಸಿದ ಒಟ್ಟು ಬೀದಿ ನಾಟಕಗಳ ಸಂಖ್ಯೆ ಸುಮಾರು 3,000. ಜೀವನ್‌ ರಾಂ ನಿರ್ದೇಶನದಲ್ಲಿ, ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜಿನ ಕುಸುಮ ಸಾರಂಗದ ಮೂಲಕ 2001ರಲ್ಲಿ ಮೊದಲ್ಗೊಂಡ ಮಹಾಮಾಯಿ ನಾಟಕದ ರಂಗಯಾತ್ರೆ 12 ಪ್ರದರ್ಶನಗಳನ್ನು ಕಂಡು ಆ ಬಳಿಕ 2003 ರಲ್ಲಿ ಅರಸೀಕೆರೆಯ ವಿಜ್ಞಾನ ಕೇಂದ್ರಕ್ಕಾಗಿ ನಿರ್ದೇಶಿತವಾಗಿ ಕ್ರಮವಾಗಿ 20ಕ್ಕೂ ಅಧಿಕ ಬಾರಿ ಪ್ರಯೋಗವಾಯಿತು. 2006ರಲ್ಲಿ ಡಾ| ಮೋಹನ ಆಳ್ವ ಅವರ ಆಹ್ವಾನದ ಮೇರೆಗೆ ಆಳ್ವಾಸ್‌ ರಂಗ ಅಧ್ಯಯನ ಕೇಂದ್ರದ ಪೂರ್ಣಾವಧಿ ನಿರ್ದೇಶಕರಾಗಿ ನಿಯುಕ್ತರಾದ ಜೀವನ್‌ ರಾಂ ಕಳೆದ 11 ವರ್ಷಗಳಿಂದಲೂ ಮಹಾಮಾಯಿಯನ್ನು ನಿರ್ದೇಶಿಸುತ್ತ ಬರುತ್ತಿ ದ್ದಾರೆ. ಒಟ್ಟಾರೆಯಾಗಿ ಜೀವನ್‌ ರಾಂ ಸುಳ್ಯ ಅವರ ಮಹಾಮಾಯಿಯ ನಂಟು 16 ವರ್ಷ ಗಳ ಸುದೀರ್ಘ‌ ಕಾಲಾವಧಿಗೆ ಚಾಚಿಕೊಂಡಿದೆ. 

ಮಹಾಮಾಯಿ ನಾಟಕ
ಡಾ| ಚಂದ್ರಶೇಖರ ಕಂಬಾರ ವಿರಚಿತ ನಾಟಕ ಮಹಾಮಾಯಿ ಸಾವು ಮತ್ತು ಬದುಕಿನ ಮಧ್ಯೆ ಇರುವ ಸಂಘರ್ಷವನ್ನು ದಟ್ಟವಾಗಿ ವಿವರಿಸುವ ಕಥಾನಕವನ್ನೊಳಗೊಂಡಿದೆ. ನಾಟಕಕ್ಕೆ ವಿಶಿಷ್ಟವಾದ ಜಾನಪದೀಯ ಪರಿಪ್ರೇಕ್ಷ್ಯ ಇದೆ. ಯಾವುದೇ ಅಧಿಕಾರದ ಕೋಟೆಯಿಂದ ವ್ಯಕ್ತಿಯು ಮುಕ್ತನಾಗಿ ಸ್ವತಂತ್ರ ಇಚ್ಛಾಶಕ್ತಿಯಿಂದ ಬದುಕಬೇಕೆಂಬ ಅದಮ್ಯ ಹಂಬಲವನ್ನು ಪ್ರತಿನಿಧಿಸುವ ನಾಟಕ ಇದು. ನಾಟಕದಲ್ಲಿ ಸಾವಿನ ದೇವತೆ ಒಮ್ಮೆ ಶೆಟವಿತಾಯಿಯಾಗಿ, ಇನ್ನೊಮ್ಮೆ ಮುದುಕಿಯಾಗಿ, ಮತ್ತೂಮ್ಮೆ ಗರುಡ ಪಕ್ಷಿ ಯಾಗಿ ಕಾಣಿಸಿಕೊಂಡು ಭಯಗ್ರಸ್ತಗೊಳಿಸಿ ವಿಜೃಂಭಿಸಿದರೂ ಅದೇ ಮಹಾಮಾಯಿಯ ಸಾಕು ಮಗನಾದ ಸಂಜೀವಶಿವನ ಬುದ್ಧಿವಂತಿಕೆ ಯಿಂದ ಸಾವಿನೆಡೆಗೆ ಸಾಗುತ್ತಿದ್ದ ರೋಗಪೀಡಿತೆ ರಾಜಕುಮಾರಿ ಬದುಕಿ ಉಳಿಯುತ್ತಾಳೆ. ಮಹಾಮಾಯಿಯಿಂದ ಉಪದೇಶಿತವಾದ ಪಾರಂಪರಿಕ ಮೂಲಿಕಾ ವೈದ್ಯಜ್ಞಾನಕ್ಕೆ ಆಕೆ ವಿಧಿಸಿದ ವಿಧಿನಿಯಮಗಳ ನಿಯಂತ್ರಣ ಅಡ್ಡಿಯಾದಾಗ ಬುದ್ಧಿವಂತನಾದ ಸಂಜೀವಶಿವ ಬಿಡುಗಡೆಯ ರಹದಾರಿ ಕಂಡುಕೊಂಡು ತನ್ನತನವನ್ನು ಮೆರೆದು ಜಾಣತನದಿಂದ ಮೃತ್ಯುದೇವತೆಯನ್ನೇ ಸೋಲಿಸುತ್ತಾನೆ. ರಾಜಕುಮಾರಿ-ಸಂಜೀವಶಿವ ಇವರು ಸತಿಪತಿ ಗಳಾಗುವ ಸುಖಾಂತ್ಯ ನಾಟಕದ ತುರೀಯ ಘಟ್ಟ. ಇದು ಜಾನಪದ ಬದುಕಿನ ಸಮಾತಾ ವಾದಿ ಆಶಯವನ್ನು ಎತ್ತಿಹಿಡಿಯುತ್ತದೆ. 

ಶತರಂಗ ಪ್ರಯೋಗ
ಮಣಿಪಾಲ ಸಾಹಿತ್ಯೋತ್ಸವ “ಮಿಲಾಪ್‌-2017’ರ ಅಂಗವಾಗಿ ಸೆಪ್ಟೆಂಬರ್‌ 15, 2017ರಂದು ಸಂಜೆ 6.30ಕ್ಕೆ ಮಣಿಪಾಲದ ಗೋಲ್ಡನ್‌ ಜ್ಯುಬಿಲಿ ಹಾಲ್‌ನಲ್ಲಿ ಆಳ್ವಾಸ್‌ ರಂಗ ಕಲಾವಿದರ ಮಹಾಮಾಯಿ ನಾಟಕವು ಶತರಂಗ ಪ್ರಯೋಗವನ್ನು ಕಾಣುತ್ತಿದೆ. ಕಾಲೇಜು ರಂಗಭೂಮಿಯ ದೃಷ್ಟಿಯಿಂದ ಅತ್ಯಂತ ಚಾರಿತ್ರಿಕವಾದ ಈ ರಂಗಪ್ರಯೋಗಕ್ಕೆ ಮಣಿಪಾಲ- ಉಡುಪಿಯ ರಂಗಾಸಕ್ತರು ಸಾಕ್ಷಿ ಗಳಾಗಲಿದ್ದಾರೆ. ವಿದ್ಯಾರ್ಥಿ ಕಲಾವಿದರ ಪರಿಪಕ್ವ ಅಭಿನಯ ಸಾಮರ್ಥ್ಯ, ಸ್ಪಷ್ಟವಾದ ಸಂಭಾಷಣ ಪ್ರಾವೀಣ್ಯ, ಅತ್ಯುತ್ತಮ ರಂಗವಿನ್ಯಾಸ, ಬೆಳಕು, ಆಕರ್ಷಕ ವಸ್ತ್ರ ವಿನ್ಯಾಸ ಹೀಗೆ ಅತ್ಯುತ್ತಮ ರಂಗ ಪ್ರಯೋಗ ಎನಿಸಿರುವ ಮಹಾಮಾಯಿ ಶತರಂಗ ಪ್ರಯೋಗದ ಶೃಂಗವನ್ನು ಏರುತ್ತಿರು ವುದು ಆಳ್ವಾಸ್‌ ರಂಗ ಅಧ್ಯಯನ ಕೇಂದ್ರಕ್ಕೆ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನಕ್ಕೆ ಹಾಗೂ ನಿರ್ದೇಶಕ ಜೀವನ್‌ ರಾಂ ಸುಳ್ಯ ಅವರಿಗೆ ವಿಶಿಷ್ಟ ರಂಗಸಿದ್ಧಿ ಆಗಲಿದೆ.  

Advertisement

ಜಾಹ್ನವೀರಾಮ

Advertisement

Udayavani is now on Telegram. Click here to join our channel and stay updated with the latest news.

Next