Advertisement

ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ನಾಳೆ ಮಹಾಲಿಂಗಪುರ ಬಂದ್‌

02:49 PM Aug 16, 2022 | Team Udayavani |

ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದ ಸರ್ಕಾರದ ಕಾರ್ಯವೈಖರಿ ಖಂಡಿಸಿ ಆ.17ರಂದು ಮಹಾಲಿಂಗಪುರ ಬಂದ್‌ಗೆ ಕರೆ ನೀಡಲಾಗಿದ್ದು, ಸಾಮೂಹಿಕ ನಾಯಕತ್ವದಡಿ ತಾಲೂಕು ಕೇಂದ್ರಕ್ಕೆ ಹೋರಾಟ ನಡೆಸಲಾಗುವುದು ಎಂದು ತಾಲೂಕು ಹೋರಾಟ ಸಮಿತಿ ಸದಸ್ಯರು ಹೇಳಿದ್ದಾರೆ.

Advertisement

ಹೋರಾಟದ ವೇದಿಕೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.15ರೊಳಗೆ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿದ್ದರೆ 17ರಂದು ಮಹಾಲಿಂಗಪುರ ಬಂದ್‌ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಲಾಗಿತ್ತು. ಸರ್ಕಾರ ಮಹಾಲಿಂಗಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿಲ್ಲ. ಹೀಗಾಗಿ ಆ.17ರಂದು ಮಹಾಲಿಂಗಪುರ ಬಂದ್‌ ನಡೆಸಲಾಗುವುದು ಎಂದರು.

17ರಂದು ಬೆಳಗ್ಗೆ 9ಗಂಟೆಗೆ ಬಸವೇಶ್ವರ ವೃತ್ತದಿಂದ ನಡುಚೌಕಿ, ಜವಳಿ ಬಜಾರ್‌, ಗಾಂಧಿ ವೃತ್ತದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಚನ್ನಮ್ಮ ವೃತ್ತದಲ್ಲಿ ಸಮಾಪ್ತಿಗೊಳಿಸಿ ಹೋರಾಟ ವೇದಿಕೆಯಲ್ಲಿ ಸಭೆ ನಡೆಸಲಾಗುವುದು. ಸಭೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿಗಳು ಹೋರಾಟ ವೇದಿಕೆಗೆ ಆಗಮಿಸಿ, 125 ದಿನಗಳ ಕಾಲ ನಡೆದ ತಾಲೂಕು ಹೋರಾಟದ ಕುರಿತು ಸರ್ಕಾರಕ್ಕೆ ಸಲ್ಲಿಸಿದ ವರದಿ ಬಹಿರಂಗಪಡಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಮಹಾಲಿಂಗಪುರ ಬಂದ್‌ ಹಿನ್ನೆಲೆ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಪಟ್ಟಣದ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್‌ ಮಾಡಿ, ಪಕ್ಷಾತೀತವಾಗಿ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಜಾವೇದ ಬಾಗವಾನ, ನಿಂಗಪ್ಪ ಬಾಳಿಕಾಯಿ, ಸಂಗಪ್ಪ ಹಲ್ಲಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಬಿ.ಎಂ.ಯಾದವಾಡ, ಸುನೀಲಗೌಡ ಪಾಟೀಲ, ಅರ್ಜುನ ಹಲಗಿಗೌಡರ, ಗಂಗಾಧರ ಮೇಟಿ, ಮಹಾದೇವ ಮಾರಾಪುರ, ಪರಮಾನಂದ ಸಂಕ್ರಟ್ಟಿ, ಈರಪ್ಪ ದಿನ್ನಿಮನಿ, ವೀರೇಶ ಆಸಂಗಿ, ಹಣಮಂತ ಜಮಾದಾರ, ಸಿದ್ದಪ್ಪ ಶಿರೋಳ, ಶಿವಲಿಂಗ ಟಿರಕಿ, ಪರಪ್ಪ ಸತ್ತಿಗೇರಿ, ವಿಠ್ಠಲ ಕುಳಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next