Advertisement

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮಹಾಲಿಂಗಪುರ ಮೊಹರಂ ಹಬ್ಬ

10:28 PM Jul 29, 2023 | Team Udayavani |

ಮಹಾಲಿಂಗಪುರ : ಮೋಹರಂ ಹಬ್ಬವನ್ನು ಪಟ್ಟಣದ ಹಿಂದೂ-ಮುಸ್ಲಿಂ ಬಾಂಧವರು ಶನಿವಾರ ಕೊನೆಯ ದಿನ ಮುಂಜಾನೆಯಿಂದ ರಾತ್ರಿವರೆಗೆ ಬಹು ವಿಜೃಂಭಣೆಯಿಂದ ಆಚರಿಸಿದರು. ಮಹಾಲಿಂಗಪುರದಲ್ಲಿ ಪ್ರತಿವರ್ಷ ನಡೆಯುವ ಮೊಹರಂ ಹಬ್ಬವು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

Advertisement

ಒಟ್ಟು ಹತ್ತು ದಿನಗಳ ಆಚರಣೆ ಇದಾಗಿದ್ದು, ಇಸ್ಲಾಂ ಧರ್ಮದ ಹೊಸ ವರ್ಷವೂ ಆರಂಭಗೊಳ್ಳುತ್ತದೆ. ಮೊದಲ ದಿವಸ ಗುದ್ದಲಿ ಹಾಕಿ, ಐದು ದಿವಸಗಳ ನಂತರ ಪಟ್ಟಣದ ಏಳು ಕಡೆಗಳಲ್ಲಿ ಲಾಲಸಾಬಲಿ, ಮೌಲಾಲಿ, ಹಸನ್-ಹುಸೇನ್ ಎಂಬ ಪಂಜೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಪಂಜೆಗಳಿಗೆ ಭಕ್ತರು ನೀಡಿದ ಬಣ್ಣ ಬಣ್ಣದ ಬಟ್ಟೆಗಳನ್ನು ತೊಡಿಸಿ, ನಾಣ್ಯಗಳ ಪುತ್ತಳಿ ಸರಗಳನ್ನು ತೊಡಿಸಿ ಜನತೆಯಲ್ಲಿ ದೈವತ್ವದ ಭಾವ ಪ್ರಕಟಗೊಳ್ಳುವಂತೆ ಶೃಂಗಾರಗೊಳಿಸಲಾಗಿತ್ತು.

ಸಂಪ್ರದಾಯ 
ಐದು ದಿವಸಗಳಲ್ಲಿ ಎಲ್ಲ ಸಮೂದಾಯಗಳ ಭಕ್ತರು ಈ ಪಂಜೆಗಳಿಗೆ ಸಿಹಿ ಖಾದ್ಯ ಚೋಂಗೆ ಸಹಿತ ಬಗೆ ಬಗೆಯ ನೈವೇದ್ಯಗಳನ್ನು ಪಂಜೆ ಇರುವೆಡೆಗೆ ತಂದು ಸಮರ್ಪಿಸಿ, ಮನೆಗಳಲ್ಲಿರುವ ಸದಸ್ಯರೆಲ್ಲರೂ ಕೈಗೆ ಕೆಂಪು ದಾರ (ಲಾಡಿ) ಕಟ್ಟಿಕೊಂಡು ದೇವರು ಹೊಳೆಗೆ ಹೋಗುವ ಕೊನೆ ದಿವಸಗಳವರೆಗೆ ಪಕೀರ್ ಆಗಿ ತಮ್ಮ ಪೂರ್ವಜರ ಸಂಪ್ರದಾಯ ನೆರೆವೇರಿಸಿದರು.

ಭಕ್ತರ ಮನೆಗಳಿಗೆ ಭೇಟಿ
ಪಂಜೆಗಳು ಈ ಐದು ದಿವಸಗಳಲ್ಲಿ ಮೂರು ಬಾರಿ ಪಟ್ಟಣದ ಪ್ರತಿ ಭಕ್ತರ ಮನೆಗೆ ಭೇಟಿ ನೀಡಿ ಭೂತ, ಭವಿಷ್ಯತ್ ಹಾಗೂ ವರ್ತಮಾನ ಕಾಲದ ಬಗ್ಗೆ ಉಭಯ ಕುಶಲೋಪರಿ ನಡೆಸಿ ಭಕ್ತರಲ್ಲಿ ಧನ್ಯತಾಭಾವ ಮೂಡಿಸಿದವು. ಬೇಡಿಕೊಂಡಂತೆ ಬರುವ ವರ್ಷ ಪರಿವಾರದಲ್ಲಿ ಇಷ್ಟಾರ್ಥವೇನಾದರು ಸಿದ್ಧಿಸಿದರೆ ಹರಕೆಯ ವಸ್ತುಗಳನ್ನು ಪಂಜೆಗಳಿಗೆ ತೊಡಿಸುತ್ತಾರೆ.

ಮೆರವಣಿಗೆ
ಕೊನೆಯ ದಿವಸ ಶನಿವಾರ ಮುಂಜಾನೆಯಿಂದ ಎಲ್ಲ ಪಂಜೆಗಳು ಭಕ್ತರ ಮನೆಗಳಿಗೆ ಭೇಟಿ ನೀಡಿ ನಡುಚೌಕಿ ಪ್ರದೇಶದಲ್ಲಿ ಬಣ್ಣ ಬಣ್ಣದ ಆಕರ್ಷಕ ತಾಬೂತ್ (ಡೋಲಿ)ಗಳ ಜೊತೆಯಲ್ಲಿ ಸೇರಿ, ಮಹಾಲಿಂಗಪುರದ ಆರಾಧ್ಯ ಶ್ರೀಗುರು ಮಹಾಲಿಂಗೇಶ್ವರ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದಾಗ, ಸಕಲ ವಾದ್ಯ ವೃಂದಗಳು ತಮ್ಮ ಸಂಗೀತ ನೀನಾದದಿಂದ ಮೋಹರಂ ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.

Advertisement

ಶ್ರೀಮಠದಿಂದ ಪೂಜೆ
ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಪಂಜೆಗಳಿಗೆ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪೂಜೆ ನೆರವೇರಿಸಿ ಊದ ಹಾಕಿದರು. ಪ್ರತಿವರ್ಷ ಮೊಹರಂ ಕೊನೆಯ ದಿನ ಪಂಜೆಗಳು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವದು ಪಟ್ಟಣದ ವಾಡಿಕೆಯಾಗಿದ್ದು. ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಬಸವ ತೀರ್ಥಕ್ಕೆ ಪಂಜೆಗಳು
ಸಂಜೆ ಮತ್ತೆ ವಾಡಿಕೆಯಂತೆ ದೇವಸ್ಥಾನಕ್ಕೂ ಮತ್ತು ಗೌಡರ ಮನೆಗೆ ಭೇಟಿ ನೀಡಿ ನೇರವಾಗಿ ಅಪ್ಪನವರ ಬಸವತೀರ್ಥಕ್ಕೆ ಆಗಮಿಸಿ ಕೊನೆಯದಾಗಿ ಪಂಜೆಗಳು ಬಸವ ತೀರ್ಥದಲ್ಲಿ ಮಿಂದೆದ್ದು ಮೋಹರಂ ಹಬ್ಬಕ್ಕೆ ಇತಿಶ್ರೀ ಹಾಡಿದವು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಡೋಲಿಗಳಿಗೆ ಜನರು ಖರ್ಜೂರ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ರಾತ್ರಿ ಗಂಟೆಯ ನಂತರ ಡೋಲಿಗಳನ್ನು ಹೊಳೆಗೆ ಒಯ್ದು ವಿಸರ್ಜನೆ ಮಾಡುವ ಮೂಲಕ ಮೊಹರಂ ಹಬ್ಬವು ಸಮಾಪ್ತಿಗೊಂಡಿತು.

ವರದಿ: ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next