Advertisement

Crime: ಯೂಟ್ಯೂಬ್‌ ನೋಡಿ ಪ್ರೇಯಸಿಯ 59 ತುಂಡು ಮಾಡಿದ್ದ ಹಂತಕ!

11:35 AM Oct 06, 2024 | Team Udayavani |

ಬೆಂಗಳೂರು: ಇತ್ತೀಚೆಗೆ ವೈಯಾಲಿಕಾವಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನೇಪಾಳ ಮೂಲದ ಮಹಾಲಕ್ಷ್ಮೀ ಎಂಬಾಕೆಯ ಭೀಕರ ಹತ್ಯೆ ರಹಸ್ಯ ಬಯಲಾಗಿದೆ.

Advertisement

ಒಡಿಶಾದ ಆರೋಪಿ ಮುಕ್ತಿರಂಜನ್‌ ರಾಯ್‌, ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆಗೈದ ಬಳಿಕ, ಯುಟ್ಯೂಬ್‌ ನೋಡಿ ಆಕೆಯ ದೇಹದವನ್ನು 59 ತುಂಡು ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಮೃತದೇಹವನ್ನು ಹೊರಗೆ ಸಾಗಿಸುವುದು ಕಷ್ಟವೆಂದು ಅರಿತಿದ್ದ ಆರೋಪಿ, ಅದನ್ನು ಹೇಗೆ ವಿಲೇವಾರಿ ಮಾಡಬೇಕೆಂಬ ಕುರಿತು ಯುಟ್ಯೂಬ್‌ನಲ್ಲಿ ಹಲವು ವಿಡಿಯೋಗಳನ್ನು ವೀಕ್ಷಿಸಿದ್ದಾನೆ. ಬಳಿಕ ಹೊರಗೆ ಹೋಗಿ ಆಕ್ಸೈಲ್ ಬ್ಲೇಡ್‌ ಮತ್ತು ಮಾಂಸ ಕತ್ತರಿಸುವ ಚಾಕು ತಂದು ಆಕೆಯ ದೇಹವನ್ನು 59 ತುಂಡುಗಳನ್ನಾಗಿ ಮಾಡಿ, ಬಳಿಕ ಫ್ರಿಡ್ಜ್ನಲ್ಲಿ  ತರಕಾರಿ ಜೋಡಿಸುವಂತೆ ಜೋಡಿಸಿದ್ದಾನೆ. ಬಳಿಕ ಮನೆಯ ಮಧ್ಯದ ಕೋಣೆ ಹಾಗೂ ವಾಶ್‌ರೂಂನಲ್ಲಿದ್ದ ರಕ್ತದ ಕಲೆಗಳನ್ನು ಆ್ಯಸಿಡ್‌ ಹಾಕಿ ಸ್ವತ್ಛ ಮಾಡಿದ್ದಾನೆ. ಆದರೆ, ಅಷ್ಟರಲ್ಲಿ ಮಧ್ಯರಾತ್ರಿಯಾಗಿದೆ. ನಸುಕಿನಲ್ಲೇ ಆಕೆಯ ಮನೆಗೆ ಬೀಗ ಹಾಕಿ ಹೆಬ್ಬಗೋಡಿಯಲ್ಲಿದ್ದ ತನ್ನ

ರೂಮ್‌ಗೆ ಹೋಗಿ, ಜತೆಯಲ್ಲಿದ್ದ ತನ್ನ ಸಹೋದರನಿಗೆ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರುವ ವಿಷಯ ತಿಳಿಸಿ, ನೀನು ರೂಮ್ ಖಾಲಿಮಾಡಿಕೊಂಡು ಬೇರೆ ಕಡೆ ಹೋಗು ಎಂದು ಹೇಳಿ, ಆತನಿಂದಲೇ ಹಣ ಪಡೆದು ಬೈಕ್‌ನಲ್ಲಿ 1,660 ಕಿ.ಮೀ. ತನ್ನ ಊರಾದ ಒಡಿಶಾದ ಭದ್ರಕ್‌ ಎಂಬ ಜಿಲ್ಲೆಗೆ ಪ್ರಯಾಣಿಸಿದ್ದ. ಊರು ತಲುಪಿದ ಬಳಿಕ ನಡೆದ ವಿಷಯವನ್ನು ತನ್ನ ತಾಯಿಗೆ ಹೇಳಿದ್ದಾನೆ. ಆಗ ಗಂಜಂನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಹೋದರನ ಜತೆ ಹೋಗಿ ಇರುವಂತೆ ತಾಯಿ ಸಲಹೆ ನೀಡಿದ್ದಾರೆ. ತಾಯಿಯ ಸಲಹೆಯಂತೆ ಸಹೋದರನ ರೂಮ್‌ಗೆ ಹೋಗಿ ಸೇರಿಕೊಂಡಿದ್ದ.

ಆದರೆ, ಕರ್ನಾಟಕ ಪೊಲೀಸರು ತನ್ನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿ, ಮತ್ತೆ ತನ್ನ ಭದ್ರಕ್‌ಗೆ ಬಂದು, ಡೈರಿಯಲ್ಲಿ ಡೆತ್‌ನೋಟ್‌ ಬರೆದಿಟ್ಟು ಮನೆಯ ಸಮೀಪದಲ್ಲಿರುವ ಸ್ಮಶಾನಕ್ಕೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿ ಮುಕ್ತಿರಂಜನ್‌ ರಾಯ್‌ ಮತ್ತು ಮಹಾಲಕ್ಷ್ಮೀ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಆಕೆ ಬೇರೊಬ್ಬನ ಜತೆ ಓಡಾಡುತ್ತಿದ್ದಳು. ಜತೆಗೆ ತನಗೆ ಮದುವೆಯಾಗಿ ಮಗು ಇರುವ ವಿಚಾರವನ್ನು ಆಕೆ ಮರೆ ಮಾಚಿದ್ದಳು. ಅದರಿಂದ ಕೋಪಗೊಂಡು ಸೆ.2ರಂದು ಆರೋಪಿ ಆಕೆಯನ್ನು ಹತ್ಯೆಗೈದು, ತಂಡು ಮಾಡಿದ್ದ. ಈ ಸಂಬಂಧ ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next