Advertisement

ಮಹಾ ಜಟಾಪಟಿ : ಬಿಎಸ್ ವೈ ಮನವೊಲಿಕೆ ಯತ್ನವೂ ವಿಫಲ

06:10 AM Dec 27, 2017 | Team Udayavani |

ಬೆಂಗಳೂರು/ಹುಬ್ಬಳ್ಳಿ/ಧಾರವಾಡ: ಮಹಾದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಹೋರಾಟನಿರತ ರೈತರು ಬಿಜೆಪಿ ಕಚೇರಿ ಮುಂದೆ ಕಳೆದ ಶನಿವಾರದಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಮುಕ್ತಾಯದ ಹಂತ ತಲುಪುವ ಸಂಭವ ಕಾಣಿಸಿಕೊಂಡಿದೆ. 

Advertisement

ಧರಣಿ ವಾಪಸ್‌ ಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮನವಿಗೆ ಹೋರಾಟಗಾರರು ಸ್ಪಂದಿಸದೆ ಇದ್ದರೂ ಬುಧವಾರ ಬೆಳಗ್ಗೆ ಪಾದಯಾತ್ರೆ ಮೂಲಕ ರಾಜಭವನ, ಮುಖ್ಯಮಂತ್ರಿಗಳ ಕಚೇರಿ, ಚುನಾವಣ ಆಯೋಗ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಇದಾದ ಬಳಿಕ ಮತ್ತೆ ಧರಣಿ ಸ್ಥಳಕ್ಕೆ ಆಗ ಮಿಸಲಿರುವ ಹೋರಾಟಗಾರರು, ಚಿತ್ರರಂಗದ ವರು ಅದೇ ಸ್ಥಳದಲ್ಲಿ ಹೋರಾಟಕ್ಕೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರೆ ಹೋರಾಟ ಮುಂದುವರಿಯಲಿದೆ. ಇಲ್ಲವಾದರೆ ಬಿಜೆಪಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಕೈಬಿಟ್ಟು ಬೇರೆ ಕಡೆ ಧರಣಿ ನಡೆಸುವ ಬಗ್ಗೆ ಅಥವಾ ತಮ್ಮ ಕ್ಷೇತ್ರದಲ್ಲೇ ಹೋರಾಟ ಮುಂದುವರಿಸುವ ಬಗ್ಗೆ ನಿರ್ಧರಿಸಲಿದ್ದಾರೆ.

ಮಂಗಳವಾರ ಬಿಎಸ್‌ವೈ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಕುಳಿತು ಚರ್ಚಿಸಿದ ಹೋರಾಟಗಾರರು, ಬುಧವಾರ ಬೆಳಗ್ಗೆ ಉಪಾಹಾರ ಮುಗಿಸಿದ ಬಳಿಕ 11 ಗಂಟೆಗೆ ಧರಣಿ ಸ್ಥಳದಿಂದ ಹೊರಟು ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಲಿದ್ದಾರೆ. ಅಲ್ಲಿಂದ ಮುಖ್ಯ ಮಂತ್ರಿಗಳ ಗೃಹ ಕಚೇರಿ, ಚುನಾವಣ ಆಯೋಗಕ್ಕೆ ತೆರಳಿ ಮನವಿ ಸಲ್ಲಿಸಲಿದ್ದಾರೆ. ಬಳಿಕ ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತಾದರೂ ದೇವೇಗೌಡರು ದಿಲ್ಲಿಗೆ ಹೋಗುತ್ತಿರುವುದರಿಂದ ಎಚ್‌.ಡಿ.ಕುಮಾರಸ್ವಾಮಿ ನಿವಾಸಕ್ಕೆ ತೆರಳಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದರು.
ಬುಧವಾರದ ಪಾದಯಾತ್ರೆ ಕುರಿತು ರೈತ ಮುಖಂಡ ವೀರೇಶ್‌ ಸೊರಬದಮಠ ಮಾಹಿತಿ ನೀಡಿದರು.

ಹೈಡ್ರಾಮಾ ಸೃಷ್ಟಿ: ಮಂಗಳವಾರ ಬಿಜೆಪಿ ಕಚೇರಿ ಎದುರು ರೈತರ ಹೋರಾಟ “ಹೈ ಡ್ರಾಮಾ’ ಸೃಷ್ಟಿ ಮಾಡಿತ್ತು. ಒಂದೆಡೆ ಯಡಿಯೂರಪ್ಪ ಅವರು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಶಾಸಕ ಬಸವರಾಜ ಬೊಮ್ಮಾಯಿ ಮತ್ತಿತರರೊಂದಿಗೆ ಹೋರಾಟಗಾರರ ಮನವೊಲಿಸುವ ಕೆಲಸಕ್ಕೆ ಮುಂದಾದರೆ ಇನ್ನೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರು, ಈ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಇದು ಹೋರಾಟಗಾರನ್ನು ಪ್ರೇರೇಪಿಸುವಂತೆ ಮಾಡಿತು.

Advertisement

ಮತ್ತೂಂದೆಡೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರನಟರಾದ ಚೇತನ್‌, ನೆನಪಿರಲಿ ಪ್ರೇಮ್‌, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್‌ ಸೇರಿದಂತೆ ಚಿತ್ರರಂಗದ ಹಲವರು, ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜ್ಯಕ್ಕೆ ಕೂಡಲೇ ಮಹಾದಾಯಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಶ್ರೀರಾಮಸೇನೆ ಸಹಿತ ಹಲವು ಸಂಘಟನೆಗಳ ಪ್ರಮುಖರು ಆಗ್ರಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಕೈ ನಾಯಕರ ವಿರುದ್ಧ ಬಿಎಸ್‌ವೈ ಆಕ್ರೋಶ: ಮಹಾದಾಯಿ ವಿವಾದ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ನಡವಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ಮಹಾದಾಯಿ ಹೋರಾಟಗಾರರನ್ನು ಭೇಟಿ ಮಾಡಿದ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ವಿವಾದ ಶಮನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಕಾಂಗ್ರೆಸ್‌ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲಿನ ಮುಖ್ಯಮಂತ್ರಿಗಳು ಮಾತುಕತೆಗೆ ಒಪ್ಪಿದರೂ ಗೋವಾ ಕಾಂಗ್ರೆಸ್‌ ನಾಯಕರಿಗೆ ಹೇಳಿ ಪ್ರತಿಭಟನೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಹೀಗಾಗಿ ಮಾತುಕತೆಗೆ ಹಿನ್ನಡೆಯಾಗಿದೆ ಎಂದು ಆಪಾದಿಸಿದ್ದಾರೆ.

ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲೂ ಚರ್ಚೆ: ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್‌ ನಡೆದುಕೊಳ್ಳುತ್ತಿರುವ ರೀತಿಯಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲು ಬಿಜೆಪಿ ಕೋರ್‌ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ರಾಜಕೀಯವಾಗಿಯೇ ಕಾಂಗ್ರೆಸ್‌ಗೆ ತಿರುಗೇಟು ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ ಕಾಂಗ್ರೆಸ್‌ನ ದ್ವಿಮುಖ ನೀತಿ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ, ರಾಜ್ಯದ ಜನತೆಯ ಹಿತಾಸಕ್ತಿ ಕಾಪಾಡಲು ಬದ್ಧ ಎಂಬ ಬಗ್ಗೆ ಚರ್ಚೆ ನಡೆಸಿದೆ.
ಪರೀಕ್ಷೆಗಳು ಮುಂದೂಡಿಕೆ: ಬಂದ್‌ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಕರ್ನಾಟಕ ರಾಜ್ಯ ಕಾನೂನು ವಿವಿ ಪರೀಕ್ಷೆಗಳನ್ನು ಡಿ.31ಕ್ಕೆ ಮುಂದೂಡಲಾಗಿದೆ. ಇನ್ನು ಕವಿವಿ 3ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಜ. 7ಕ್ಕೆ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪರೀಕ್ಷೆಗಳನ್ನು ಡಿ. 29 ಮತ್ತು ಜ. 8ರಂದು ನಡೆಸಲಾಗುತ್ತದೆ. 

ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಬುಧವಾರದ ಬದಲಿಗೆ ಸ್ನಾತಕ ಪದವಿ (ಯುಜಿ) ಪರೀಕ್ಷೆಗಳನ್ನು ಡಿ. 28ರಂದು ಹಾಗೂ ಸ್ನಾತಕೋತ್ತರ ಪದವಿ (ಪಿಜಿ) ಪರೀಕ್ಷೆಗಳನ್ನು  ಡಿ. 2ರಂದು ನಡೆಸಲಾಗುತ್ತದೆ.

ಇಂದು “ಉತ್ತರ’ ಬಂದ್‌
ಮಹಾದಾಯಿ ವಿವಾದ ಸಂಬಂಧ ಬುಧವಾರ ಉ. ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ಗೆ ನೂರಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಬೆಂಬಲ ನೀಡಿವೆ. ಮುಂಜಾಗ್ರತೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಅಕ್ಕಮಹಾದೇವಿ ವಿವಿ, ಕವಿವಿ, ಕಾನೂನು ವಿವಿ ಹಾಗೂ ವಿಟಿಯು ಪರೀಕ್ಷೆ ಮುಂದೂಡಲಾಗಿದೆ. ಮಹಾದಾಯಿ ವ್ಯಾಪ್ತಿಯ ಧಾರವಾಡ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಂದ್‌ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next