Advertisement

ಮಹಾಬಲಿಪುರಂ ಶಿಲ್ಪಕಲೆಯ ತವರು

10:40 AM Oct 20, 2019 | Lakshmi GovindaRaju |

ಇತ್ತೀಚೆಗೆ ಭಾರತ ಮತ್ತು ಚೀನಾದ ಅನೌಪಚಾರಿಕ ಶೃಂಗಸಭೆಗೆ ಸಾಕ್ಷಿಯಾದ, ಮಹಾಬಲಿಪುರಂ ದೇಗುಲವು ಶಿಲ್ಪಶಾಸ್ತ್ರದ ಮಹಾಪಾಠಶಾಲೆ. ಪಲ್ಲವರ ಕಾಲದ ಕಲಾಸೃಷ್ಟಿ ಇದು. ಇಲ್ಲಿನ ವಾಸ್ತುಶಿಲ್ಪಗಳನ್ನು ಅಧ್ಯಯನಿಸಿದ್ದ ಕನ್ನಡಿಗ ಲೇಖಕ, ಇಲ್ಲಿ ಆ ಶಿಲ್ಪಗಳ ವಿಶ್ಲೇಷಣೆ ಮಾಡಿದ್ದಾರೆ…

Advertisement

ಚೆನ್ನೈನಿಂದ 58 ಕಿ.ಮೀ. ದೂರದಲ್ಲಿ, ಕಾಂಚೀಪುರಂ ಜಿಲ್ಲೆಯಲ್ಲಿರುವ ಮಹಾಬಲಿಪುರಂ, ಪಲ್ಲವ ವಾಸ್ತು- ಶಿಲ್ಪಕಲೆಗಳ ತವರೂರು. ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಇಲ್ಲಿ ನೆಲೆ ನಿಂತಿದ್ದರಿಂದ ಈ ಸ್ಥಳಕ್ಕೆ “ಮಹಾಬಲಿಪುರಂ’ ಎಂಬ ಹೆಸರು ಬಂತು ಎನ್ನುತ್ತದೆ, ಪುರಾಣ. “ಮಹಾಮಲ್ಲ’ ಎಂಬ ಬಿರುದು ಹೊತ್ತ ಪಲ್ಲವ ದೊರೆ 1ನೇ ನರಸಿಂಹವರ್ಮನಿಂದಾಗಿಯೂ, ಈ ಹೆಸರು ಬಂದಿರಬಹುದು ಎನ್ನುತ್ತದೆ, ಇತಿಹಾಸ. ಮೊದಲ ಸಹಸ್ರಾಬ್ಧಿಯಿಂದಲೇ ರೋಮ್, ಚೀನಾಗಳ ಸಂಪರ್ಕ ಹೊಂದಿದ್ದ ಈ ರೇವುಪಟ್ಟಣ, 7- 8ನೇ ಶತಮಾನದಲ್ಲಿ ಉತ್ತುಂಗವನ್ನು ತಲುಪಿತ್ತು. ಇದೇ ವೇಳೆ, ಇಲ್ಲಿ ನಿರ್ಮಾಣವಾದ ಸುಮಾರು 40 ಶಿಲಾರಚನೆಗಳು, ಪಲ್ಲವರ ಆಳ್ವಿಕೆಯ ಸಮೃದ್ಧಿ ಧಾರ್ಮಿಕತೆ, ಕಲಾಪ್ರೇಮಗಳಿಗೆ ಸಾಕ್ಷಿಯಾಗಿ, ಈ ಕಾಲಕ್ಕೂ ವಿಸ್ಮಯಗಳಾಗಿವೆ.

ಬ್ರಹ್ಮ, ವಿಷ್ಣು, ಮಹೇಶ್ವರ, ದುರ್ಗೆಯರ ದೃಷ್ಟಿಯಿಟ್ಟುಕೊಂಡು ನಿರ್ಮಾಣಗೊಂಡಿರುವ ಇಲ್ಲಿನ ಬಹುತೇಕ ದೇಗುಲಗಳ ನಿರ್ಮಾಣ ಅಪೂರ್ಣವಾಗಿರುವುದು ಗಮನಿಸಬೇಕಾದ ವಿಷಯ. ದೇವತೆಗಳ, ಮಾನವರ ವಿಗ್ರಹಗಳು ಆಳೆತ್ತರದಲ್ಲಿ ಕೆತ್ತಲ್ಪಟ್ಟಿದ್ದು, ಭಾವಪೂರ್ಣ ಕಣ್ಣುಗಳು, ಜೀವಂತವೆನಿಸುವ ಆಂಗಿಕಗಳನ್ನು ಹೊಂದಿವೆ. ಚಲನ- ವಲನಗಳನ್ನು ಅಭ್ಯಸಿಸಿ, ವಾಸ್ತವ ಎನಿಸುವಂತೆ ಕೆತ್ತಲ್ಪಟ್ಟಿರುವ ಜಿಂಕೆ, ಆನೆ, ಮರ್ಕಟ, ಗೋವು, ವರಾಹ, ಸಿಂಹ ಮೊದಲಾದ ಪ್ರಾಣಿಗಳ ಶಿಲ್ಪಗಳು ಪಲ್ಲವ ಶೈಲಿಯ ವಿಶೇಷ ಲಕ್ಷಣ ಎನ್ನಬಹುದು.

ಪಾಂಡವರ ರಥಗಳು…: ಸಮುದ್ರ ತೀರದ ಮರಳಿನ ನಡುವೆ ಪ್ರಾಕೃತಿಕವಾಗಿ ನಿಂತ ಬಂಡೆಗಳನ್ನು ಕಡೆದು ನಿಲ್ಲಿಸಿದ ಏಕಶಿಲಾ ದೇಗುಲಗಳನ್ನು “ಶಿಲಾರಥ’ಗಳೆಂದು ಗುರುತಿಸಲಾಗುತ್ತದೆ. ಇವುಗಳಲ್ಲಿ “ಪಂಚಪಾಂಡವರ ರಥ’, “ದ್ರೌಪದಿ ರಥ’ ಒಂದೇ ಸಮೂಹದಲ್ಲಿದ್ದರೆ, “ಗಣೇಶ ರಥ’ವೆಂದು ಕರೆಯಲ್ಪಡುವ ದೇಗುಲ ಸ್ವಲ್ಪ ದೂರದಲ್ಲಿದೆ. “ಪಂಚಪಾಂಡವರ ರಥ’ಗಳೆಂದು ಗುರುತಿಸಿರುವುದು ಅವುಗಳ ಗಾತ್ರವನ್ನು ಅನುಸರಿಸಿಯಷ್ಟೇ. ಅವು ನಿಜಕ್ಕೂ ಶಿವ, ದುರ್ಗೆ ಹಾಗೂ ವಿಷ್ಣು ದೇವತೆಗಳಿಗೆ ಅರ್ಪಿತವಾದವು.

ಸೋಮಸ್ಕಂದ, ವೃಷಭವಾಹನ ಅರ್ಧನಾರೀಶ್ವರ, ಹರಿಹರ, ಶೈವ ಶಿಲ್ಪಗಳನ್ನು ಹೊಂದಿರುವ ಧರ್ಮರಾಜನ ರಥ ಅತ್ಯಂತ ಎತ್ತರವಿದ್ದು, 3 ಅಂತಸ್ತುಗಳನ್ನು ಹೊಂದಿದೆ. ಮಲಗಿರುವ ವಿಷ್ಣುವಿಗಾಗಿ ನಿರ್ಮಿಸಿರುವ ಎರಡು ಅಂತಸ್ತುಗಳ “ಭೀಮರಥ’ ಎಲ್ಲಕ್ಕಿಂತ ವಿಸ್ತಾರವಾಗಿದೆ. ಇದು ಗುಡಿಸಲಿನಂಥ ಚಾವಣಿಯನ್ನು ಹೊಂದಿದ್ದು, ಬಹುತೇಕ ಅಪೂರ್ಣವಾಗಿ ಉಳಿದಿದೆ. ದ್ರೌಪದಿಯ ರಥವು ಚಿಕ್ಕದಾಗಿದ್ದರೂ ಸರಳ ಸುಂದರ. ಒಳಗೆ ಸಮಭಂಗಿಯಲ್ಲಿ ಪ್ರಯೋಗಚಕ್ರವನ್ನು ಹಿಡಿದು ನಿಂತಿರುವ ದುರ್ಗೆಯ ಉಬ್ಬು ಶಿಲ್ಪವಿದೆ. ಆಕೆಯ ಸುತ್ತಲೂ ಯಕ್ಷರು ಹಾರಾಡುತ್ತಿದ್ದರೆ, ಕೆಳಗೆ ಬಲಬಾಗದಲ್ಲಿ ಒಬ್ಬ ವೀರ ತನ್ನ ಕೊರಳನ್ನೇ ಕೊಯ್ದುಕೊಳ್ಳುತ್ತಾ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದಾನೆ.

Advertisement

ವರಾಹ- ಭೂದೇವಿಯ ಶೃಂಗಾರ: ವಿಶಾಲಬಂಡೆಯನ್ನು ಗುಹೆಯ ಹಾಗೆ ಕೊರೆದು ಮಾಡಿದ ದೇಗುಲಗಳು ಇಲ್ಲಿದ್ದು, ಅವುಗಳ ಎದುರಿಗೆ ಸಿಂಹಗಳ ತಲೆಯನ್ನು ಆಧರಿಸಿ ನಿಂತ ಕಂಬಗಳನ್ನು ಹೊಂದಿರುವ ಮುಖಮಂಟಪಗಳಿವೆ. ವರಾಹ ಮಂಟಪ, ತ್ರಿಮೂರ್ತಿ ಮಂಟಪ, ದುರ್ಗಾ ಮಂಟಪ, ಕೃಷ್ಣ ಮಂಟಪ, ಪಾಂಡವರ ಮಂಟಪಗಳು ಪ್ರಮುಖವಾದವು. ವರಾಹ ಮಂಟಪದಲ್ಲಿ, ಭೂದೇವಿಯನ್ನು ಹಿರಣ್ಯಾಕ್ಷನ ಸೆರೆಯಿಂದ ಪಾರುಮಾಡಿ, ಆಕೆಯನ್ನು ತೊಡೆಯ ಮೇಲೆ ಇರಿಸಿಕೊಂಡು ಧೀರನಂತೆ ನಿಂತಿರುವ ವರಾಹನ ವಿಗ್ರಹ ಆಕರ್ಷಕ. ವರಾಹ ತನ್ನ ಮೂತಿಯಿಂದ ಭೂದೇವಿಯ ಸ್ತನಗಳನ್ನು ಸ್ಪರ್ಶಿಸುತ್ತಿದ್ದರೆ, ಭೂದೇವಿ ಸ್ತ್ರೀ ಸಹಜ ನಾಚಿಕೆಯಿಂದ ತಲೆಯನ್ನು ಅರೆ ತಗ್ಗಿಸಿ ತನ್ನನ್ನು ರಕ್ಷಿಸಿದ ಪತಿಯನ್ನು ಪ್ರೇಮ ಕೃತಜ್ಞತೆಗಳಿಂದ ನೋಡುತ್ತಿದ್ದಾಳೆ. ಇಲ್ಲಿನ ಶಿಲ್ಪ ರಚನೆಗಳು, ಅಜಂತಾದ ಚಿತ್ರಗಳನ್ನು ನೆನಪಿಸುವಂತಿವೆ.

ಮಹಿಷನ ಸೋಲಿನ ಚಿತ್ರಣ: ಮಹಾಬಲಿಪುರಂನ ಮೇರುಕೃತಿಗಳೆಂದೇ ಕರೆಯಲ್ಪಡುವ ಮಹಿಷಾಸುರ ಮರ್ದಿನಿಯ ಹಾಗೂ ಅನಂತಶಯನನ ಭಿತ್ತಿಶಿಲ್ಪಗಳು ದುರ್ಗಾಮಂಟಪದಲ್ಲಿವೆ. ಕೋಣನ ತಲೆಯ ಮಹಾಕಾಯ ಮಹಿಷನು ಗದೆಯನ್ನು ತಿರುವುತ್ತಾ ಅಕ್ರಮಣ ಮಾಡಲು ಸಿದ್ಧನಾಗಿ ನಿಂತಿದ್ದಾನೆ. ಅವನಿಗೆದುರಾಗಿ, ಚಿಕ್ಕವಳಾದರೂ ರಾಕ್ಷಸನ ಗಾತ್ರದಿಂದ ಸ್ವಲ್ಪವೂ ಧೃತಿಗೆಡದೆ, ದೇವಿಯು ಸಿಂಹವಾಹನೆಯಾಗಿ, ವೀರಾವೇಶದಿಂದ ಧನುಸ್ಸನ್ನು ಹಿಡಿದು ರಣರಂಗದಲ್ಲಿ ಮುನ್ನುಗ್ಗುತ್ತಿದ್ದಾಳೆ. ದೇವಿಯ ಅನುಯಾಯಿಗಳು ಕುಬ್ಜರಾಗಿದ್ದರೂ ದೇವಿಯ ಹಿಂದೆ ಮುಂದೆ ಆತ್ಮವಿಶ್ವಾಸದಿಂದ ಹೋರಾಡುತ್ತಿದ್ದಾರೆ. ಯುದ್ಧವೆಂಬುದು ಆಟವೇನೋ ಎಂಬಂತೆ ಉತ್ಸಾಹದಲ್ಲಿ ನಲಿಯುತ್ತಿದ್ದಾರೆ. ಆದರೆ, ಮಹಿಷನ ಸೈನಿಕರು ದೈಹಿಕವಾಗಿ ಬಲಶಾಲಿಗಳಾಗಿದ್ದರೂ ಬಾಣದ ಮಳೆಗೆ ಹಿಂಜರಿಯುತ್ತಿರುವಂತೆ ತೋರಿಸಲಾಗಿದೆ.

ಕೃಷ್ಣನ ಸಾಹಸಗಳು…: ಕೃಷ್ಣಮಂಟಪದ ಗೋವರ್ಧನಗಿರಿಧಾರಿಯ ವಿಶಾಲಶಿಲ್ಪ ಅತ್ಯದ್ಭುತ. ಎಡ ಅಂಗೈಯಲ್ಲಿ ಪರ್ವತವನ್ನು ಎತ್ತಿ ಹಿಡಿದಿರುವ ಕಿಶೋರ ಕೃಷ್ಣನ ಸುತ್ತ ಗೋವುಗಳು, ಗೋಪ- ಗೋಪಿಯರು ನೆರೆದಿದ್ದಾರೆ. ಅವರೆಲ್ಲ ಬೆರಗಿನಿಂದ ಕೃಷ್ಣನ ಸಾಹಸವನ್ನು ನೋಡುತ್ತಿದ್ದಾರೆ. ಪರ್ವತದಡಿ ಆಶ್ರಯ ಪಡೆದವರಲ್ಲಿ, ತಲೆಯ ಮೇಲೆ ಗಡಿಗೆಯನ್ನಿಟ್ಟುಕೊಂಡಿರುವ ಗೋಪಿಕೆ, ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡಿರುವ ಗೋಪಾಲ, ಹಾಲು ಕರೆಯುತ್ತಾ ಇರುವ ಗೌಳಿ, ಗೋಪನೊಬ್ಬನ ಹೆಗಲ ಮೇಲೆ ಕೈಹಾಕಿ ನಿಂತಿರುವ ಬಲರಾಮ, ಕೊಳಲನೂದುತ್ತಾ ಇರುವ ಗೊಲ್ಲಬಾಲನಿಗೆ, ಅದನ್ನು ನಿಲ್ಲಿಸಲು ಹೇಳುತ್ತಾ ಇರುವ ಪುಟ್ಟ ಮಗುವಿನ ತಾಯಿ… ಇವುಗಳ ಚಿತ್ರಣ ಅನನ್ಯ.

ಪಾಶುಪತಾಸ್ತ್ರಕ್ಕೆ ಅರ್ಜುನನ ತಪಸ್ಸು: ಮಹಾಬಲಿಪುರಂನ ಶಿಲ್ಪಗಳಲ್ಲಿ ಅತಿ ಪ್ರಸಿದ್ಧವಾದದ್ದು 90 ಅಡಿ ಉದ್ದ, 43 ಅಡಿ ಅಗಲ ಹಾಗು 30 ಅಡಿ ಎತ್ತರದ ಬಂಡೆಯ ಮೇಲೆ ಕಡೆದಿರುವ ಗಂಗಾವತರಣದ ಶಿಲ್ಪ. ಕೆಲವರ ಪ್ರಕಾರ, ಅರ್ಜುನ ಪಾಶುಪತಾಸ್ತ್ರ ಗಳಿಸಲು ಶಿವನನ್ನು ಕುರಿತು ಮಾಡುತ್ತಾ ಇರುವ ತಪಸ್ಸು. ಕೃತಿಯ ವಿಷಯ ಏನೆಂದು ನಿರ್ಧರಿಸುವುದು ಕಷ್ಟವಾದರೂ, ಇದು ಅತ್ಯಂತ ನಯನ ಮನೋಹರ. ಶಿಲ್ಪಶಾಸ್ತ್ರವನ್ನು ಅಧ್ಯಯನಿಸುವವರಿಗೆ, ಇದೊಂದು ಅದ್ಭುತ ಪಾಠಶಾಲೆಯೇ ಸರಿ.

ಕೃಷ್ಣನ ಬೆಣ್ಣೆಮುದ್ದೆ!?: ಇಲ್ಲಿನ ತ್ರಿಮೂರ್ತಿ ಗುಹಾಲಯದ ಬಳಿ ಜಾರುಬಂಡೆಯ ಮೇಲೆ 6 ಮೀಟರ್‌ ಎತ್ತರ, 5 ಮೀಟರ್‌ ಅಗಲವಿರುವ ಬೃಹತ್‌ ಬಂಡೆಯೊಂದು ಕೇವಲ ಒಂದು ಮೀಟರ್‌ ತಳದ ಮೇಲೆ, ಇನ್ನೇನು ಉರುಳಿ ಬೀಳುವಂತೆ ಸಾವಿರಾರು ವರ್ಷಗಳಿಂದ ನಿಂತಿದೆ. ಜನ ಇದಕ್ಕೆ ಪ್ರೀತಿಯಿಂದ, “ಕೃಷ್ಣನ ಬೆಣ್ಣೆಮುದ್ದೆ’ ಎಂದು ಹೆಸರಿಟ್ಟಿದ್ದಾರೆ. ಮಹಾಬಲಿಪುರಂನ ಮಾನವ ನಿರ್ಮಿತ ಕಲಾದ್ಭುತಗಳಷ್ಟೇ, ಈ ಪ್ರಕೃತಿಯ ವಿಸ್ಮಯವೂ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ.

* ರಾಜೇಶ್‌ ಶ್ರೀವತ್ಸ, ಹೈದರಾಬಾದ್‌

Advertisement

Udayavani is now on Telegram. Click here to join our channel and stay updated with the latest news.

Next