Advertisement

ಹಿರಿಯಡ್ಕ ದೇವಸ್ಥಾನ ಜೀರ್ಣೋದ್ಧಾರ:ಪುಣೆ ಸಮಿತಿ ಸಭೆ

04:57 PM Dec 28, 2017 | |

ಪುಣೆ: ತುಳುನಾಡಿನ ಪ್ರಸಿದ್ಧ ಆಲಡೆ ಕ್ಷೇತ್ರವೆಂದೆನಿಸಿದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಿರಿಯಡ್ಕ ಇದರ ಜೀರ್ಣೋದ್ಧಾರ ಕಾರ್ಯವು ಊರಿನ ಭಕ್ತರು,  ಹತ್ತು ಸಮಸ್ತರು ಸೇರಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಪುಣ್ಯ ಕಾರ್ಯವಾಗಿದ್ದು ನಮಗೆಲ್ಲ ಬಹಳ ಸಂತೋಷದ ವಿಷಯ. ಶ್ರೀ ವೀರಭದ್ರ ದೇವರೇ ಭಕ್ತಾದಿಗಳ ಮನದಲ್ಲಿ ನೆಲೆನಿಂತು ಅನುಗ್ರಹಿಸಿ ಆಶೀರ್ವದಿಸಿ ಉತ್ಸಾಹ ತುಂಬಿ ಈ ಪುಣ್ಯ ಕಾರ್ಯವನ್ನು ಮಾಡಿಸುತ್ತಿದ್ದಾರೆ. ಇಲ್ಲದಿದ್ದರೆ ಈ ಇಂತಹ ಶ್ರೇಷ್ಠವಾದ ಕಾರ್ಯ ನಡೆಯುವುದು ಸುಲಭ ಸಾಧ್ಯವಲ್ಲ. ಈಗಾಗಲೇ ಕ್ಷೇತ್ರದಲ್ಲಿ ಭಕ್ತಾದಿಗಳು, ಜೀರ್ಣೋದ್ಧಾರ ಸಮಿತಿಯವರು ದೇವರ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿದ್ದು  ನಮ್ಮೂರಿನ ಈ ದೇವಸ್ಥಾನದ ಮಹೋನ್ನತವಾದ ಜೀರ್ಣೋದ್ಧಾರದ ಪವಿತ್ರ ಕಾರ್ಯಕ್ಕೆ ನಾವೆಲ್ಲರೂ ನಮ್ಮಿಂದಾದ ಸೇವೆಗಳನ್ನು ನೀಡಿ ಧನ್ಯತೆಯನ್ನು ಪಡೆಯೋಣ. ನಮ್ಮ ಸಂಬಂಧಪಟ್ಟ ದೇವಸ್ಥಾನವಾಗಿದ್ದು  ನಾನೂ ದೇವರ ಅನನ್ಯ ಭಕ್ತನಾಗಿದ್ದು  ನನ್ನಿಂದಾದಷ್ಟು ಸಹಕಾರವನ್ನು ನೀಡುತ್ತೇನೆ ಎಂದು ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ  ಹೇಳಿದರು.

Advertisement

ಪುಣೆ ಕನ್ನಡ ಸಂಘದ ಡಾ| ಶ್ಯಾಮರಾವ್‌ ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ನಡೆದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಿರಿಯಡ್ಕ ಇದರ ಪುಣೆ ಘಟಕದ ಸಮಿತಿ ಸಭೆಯಲ್ಲಿ  ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀರ್ಣೋದ್ಧಾರ ಮುಂಬಯಿ ಸಮಿತಿಯ ಅಧ್ಯಕ್ಷ ಎನ್‌.  ಬಿ. ಶೆಟ್ಟಿ ಮಾತನಾಡಿ ನಮ್ಮೂರಿನ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು  ಭಕ್ತಾದಿಗಳೆಲ್ಲರ ಸಹಕಾರದಿಂದ ನಿರಂತರವಾಗಿ ನಡೆಯುತ್ತಿದ್ದು, ಮೊದಲ ಹಂತ ಪೂರ್ಣಗೊಂಡು ಮುಂದಿನ ಕಾರ್ಯಗಳು ಪೂರ್ಣಗೊಳ್ಳಲು ಇನ್ನು ಮೂರೇ ತಿಂಗಳುಗಳ ಅಲ್ಪಾವಧಿ ಉಳಿದಿದೆ. ಸಮಯಾವಕಾಶ ಬಹಳಷ್ಟು ಕಡಿಮೆಯಿದ್ದು ಮುಂಬಯಿಯಲ್ಲಿಯೂ ಸಮಿತಿ  ರಚಿಸಿ ಧನ ಸಂಚಯನಕ್ಕಾಗಿ ತೊಡಗಿಸಿಕೊಂಡಿದ್ದು ಪುಣೆಯಲ್ಲಿನ ಭಕ್ತಾದಿಗಳೂ ಸಹಕಾರ ನೀಡಬೇಕಾಗಿದೆ ಎಂದರು.

ದೇವಸ್ಥಾನ ಸಮಿತಿಯ ಪರವಾಗಿ ಕೆ. ನಟರಾಜ ಹೆಗ್ಡೆ ಅವರು, ಸಾಕ್ಷÂಚಿತ್ರದ ಮೂಲಕ ದೇವಸ್ಥಾನದ ಆರಂಭದಿಂದ ಇದುವರೆಗಿನ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯಿತ್ತು ಮಾತನಾಡಿ, ನಾವು ಪುಣೆಯಿಂದಲೇ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದ್ದು ಪುಣೆಯ ಕೊಡುಗೈ ದಾನಿ ಜಗನ್ನಾಥ ಶೆಟ್ಟಿ ಅವರು  ದೊಡ್ಡ ಮೊತ್ತದ ಕಾಣಿಕೆ ನೀಡಿ ಪ್ರೋತ್ಸಾಹಿಸುತ್ತಿರುವುದು ಜೀರ್ಣೋದ್ಧಾರದ ಕಾರ್ಯಕ್ಕೆ ಬಲ ಬಂದಂತಾಗಿದೆ. ಅಂತೆಯೇ ಈಗಾಗಲೇ ಪುಣೆಯ ಹಲವಾರು ದಾನಿಗಳು ದೇವರ ಕಾರ್ಯಕ್ಕೆ ನೆರವನ್ನು ನೀಡಿರುತ್ತಾರೆ. ಮುಂದಿನ ಎಪ್ರಿಲ್‌  20 ರಂದು ಪ್ರತಿಷ್ಠಾಪನಾ ಕಾರ್ಯಗಳು ನಡೆಯಲಿದ್ದು  ಎಪ್ರಿಲ್‌ 22 ರಿಂದ 26 ರ ವರೆಗೆ ಬ್ರಹ್ಮಕಲಶೋತ್ಸವದ ಕಾರ್ಯಗಳು ನಡೆಯಲಿವೆ. ಈ ಪುಣ್ಯ ಪರ್ವದಲ್ಲಿ ಪುಣೆಯ ಎಲ್ಲ ಭಗವದ್ಭಕ್ತರು ಭಾಗವಹಿಸಬೇಕೆಂದು ವಿನಂತಿಸಿದರು.

Advertisement

ಮುಂಬಯಿ ಸಮಿತಿಯ ಪರವಾಗಿ ಹಿರಿಯಡ್ಕ ಮೋಹನ್‌ ದಾಸ್‌ ಮಾತನಾಡಿ, ದೇವಳದ ಕಾರ್ಯ ಗಳು ಬಹಳ ಅಚ್ಚುಕಟ್ಟುತನದಿಂದ ನಡೆಯುತ್ತಿದ್ದು ಪುಣೆ ಮುಂಬಯಿಯಲ್ಲಿರುವ ನಾವೆಲ್ಲ ಭಕ್ತಾದಿಗಳೂ ನಮ್ಮಿಂದಾದ ಸಹಾಯವನ್ನು ನೀಡಿ  ವೀರಭದ್ರ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿದೆ. ಮೊದಲಿಗೆ ದೇವರ ಪರಮಭಕ್ತರಾದ ಪುಣೆಯ ಹಿರಿಯರಾದ ಜಗನ್ನಾಥ ಶೆಟ್ಟಿಯವರು ನೀಡಿದ  ಪ್ರಾರಂಭದ ದೊಡ್ಡ ಮೊತ್ತದ ದೇಣಿಗೆ ಅಕ್ಷಯ ಪಾತ್ರದಂತೆ ಕಾರ್ಯನಿರ್ವಹಿಸಿದ್ದು  ದೇವರ ಕಾರ್ಯ ಸಾಂಗವಾಗಿ ನೆರವೇರಲು ಸಾಧ್ಯವಾಗಿದೆ ಎಂದು ನುಡಿದರು.

ಪುಣೆಯ ಡಾ| ಬಾಲಾಜಿತ್‌ ಶೆಟ್ಟಿ ಅವರು ಮಾತನಾಡಿ, ದೇವಸ್ಥಾನದ ಶಿಲಾನ್ಯಾಸದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಒದಗಿದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ಸುಂದರವಾಗಿ ರೂಪುಗೊಳ್ಳುವ ದೇವಳದ ಕಾರ್ಯಕ್ಕೆ ನಮ್ಮಿಂದಾದ ಸಹಕಾರ ನೀಡುತ್ತೇವೆ ಎಂದರು.

ಈ  ಸಂದರ್ಭ ವೇದಿಕೆಯಲ್ಲಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಅಂಜಾರುಬೀಡು ತೆಂಕಬೈಲ್‌ ಅಮರನಾಥ ಶೆಟ್ಟಿ, ಅಂಜಾರುಬೀಡು ಪರೀಕ ಅರಮನೆ ಸೋಮನಾಥ ಶೆಟ್ಟಿ, ಗಣೇಶ್‌ ಹೆಗ್ಡೆ  ಪುಣೆ, ಶಶೀಂದ್ರ ಶೆಟ್ಟಿ ಪುಣೆ, ಪುಣೆ ಸಮಿತಿಯ ಅಧ್ಯಕ್ಷ ಅಂಜಾರುಬೀಡು ಹರಿಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.  ಪ್ರಮೀಳಾ ಶೆಟ್ಟಿ ಹಾಗೂ ಯಶೋಧಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು.

ಉಪಸ್ಥಿತರಿದ್ದ ಗಣ್ಯರನ್ನು ಅಂಜಾರುಬೀಡು  ಹರಿಪ್ರಸಾದ್‌ ಶೆಟ್ಟಿ ಹಾಗೂ ವಿಶ್ವನಾಥ ಶೆಟ್ಟಿ ಹಿರಿಯಡ್ಕ  ಪುಷ್ಪಗುತ್ಛ ನೀಡಿ  ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಂಬಯಿಯ ಅರುಣಾಚಲ ಶೆಟ್ಟಿ, ಸುಧೀರ್‌ ಹೆಗ್ಡೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪುಣೆಯ ಭಕ್ತಾದಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಹಾಜರಿದ್ದ ಎಲ್ಲರಿಗೂ ವೀರಭದ್ರ ದೇವಸ್ಥಾನದ ಪ್ರಸಾದ ಹಾಗೂ ದೇವರ ಭಾವಚಿತ್ರವನ್ನು ನೀಡಲಾಯಿತು. ಕುದಿ ವಸಂತಶೆಟ್ಟಿ ಸ್ವಾಗತಿಸಿದರು. ಸಂತೋಷ್‌ ಶೆಟ್ಟಿ ಎಣ್ಣೆಹೊಳೆ ಅವರು ವಂದಿಸಿದರು.

ಅಂಜಾರುಬೀಡು ಹರಿಪ್ರಸಾದ್‌ ಶೆಟ್ಟಿ, ಅಂಜಾರುಬೀಡು ಶಿವರಾಜ್‌ ಹೆಗ್ಡೆ, ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ವಿಶ್ವನಾಥ ಶೆಟ್ಟಿ ಹಿರಿಯಡ್ಕ  ಅವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

ಹಿರಿಯಡ್ಕದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ದೈವ ಸಂಕಲ್ಪದಂತೆ  ಅಷ್ಟಮಂಗಳ  ಪ್ರಶ್ನೆಯಲ್ಲಿ   ಕಂಡು ಬಂದ ಪ್ರಕಾರವಾಗಿ ಭಕ್ತರೆಲ್ಲರ ಸಹಕಾರ ದೊಂದಿಗೆ ಜೀರ್ಣೋದ್ಧಾರ ಕಾರ್ಯಗಳು ಆರಂಭಗೊಂಡು ಮೊದಲ ಹಂತದಲ್ಲಿ ಸುಮಾರು 12 ಕೋಟಿ ರೂ. ವೆಚ್ಚದ ಕಾರ್ಯಗಳು ಈಗಾಗಲೇ ಆಗಿವೆ. ತುಳುನಾಡಿನಲ್ಲಿಯೇ ವಿಶೇಷವೆನಿಸಿದ ಈ ದೇವಸ್ಥಾನದಲ್ಲಿ ಭಕ್ತಾದಿಗಳ ಅಭೀಷ್ಟೆಯನ್ನು ಈಡೇರಿಸುವ ದೇವರ  ಸಾನ್ನಿಧ್ಯದ ಅರಿವು ನಮಗೆಲ್ಲರಿಗೂ ಗೋಚರವಾಗುತ್ತಿದ್ದು ದೈವೇಚ್ಛೆಯಂತೆ ಎಲ್ಲವೂ ಸಾಂಗವಾಗಿ ಕೆಲಸಗಳು ನಡೆಯುತ್ತಿವೆ. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಅದಕ್ಕೆ ಹೊಂದಿಕೊಂಡಂತೆ ಕೋರ್‌ ಕಮಿಟಿಯಿದ್ದು, ಮುಂಬಯಿ, ಬೆಂಗಳೂರಿನಲ್ಲೂ ಸಮಿತಿ ರಚನೆಯಾಗಿದೆ. ಪುಣೆಯಲ್ಲಿಯೂ ಸಮಿತಿಯನ್ನು ರಚಿಸಿ ನಿಸ್ವಾರ್ಥ ಭಾವದೊಂದಿಗೆ ನಾವೆಲ್ಲರೂ ಹಗಲಿರುಳು ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಇದೊಂದು ಇತಿಹಾಸ ದಲ್ಲಿ ದಾಖಲಾಗುವ ಪುಣ್ಯ ಕಾರ್ಯವಾಗಿದ್ದು ಮೂರು ತಲೆಮಾರಿಗೂ ಮಹತ್ವವನ್ನು ಪಡೆದುಕೊಳ್ಳುವಂತಹ ಕಾರ್ಯವಾಗಿದೆ. ಇಲ್ಲಿ ಜೀರ್ಣೋದ್ಧಾರಗೊಂಡು ಪುನರ್‌ ನಿರ್ಮಾಣಗೊಳ್ಳುತ್ತಿರುವ ಒಂದೊಂದು ದೈವ ಸಾನ್ನಿಧ್ಯವೂ ವಿಶಿಷ್ಟ ವಾಸ್ತು ಪ್ರಕಾರವಾಗಿ ಅದ್ಭುತ ಕಲಾತ್ಮಕವಾಗಿ ರೂಪುಗೊಂಡು ಭಕ್ತಾಭಿಮಾನಿಗಳ ಮನಸೂರೆಗೊಳ್ಳುತ್ತಿದೆ. ಇನ್ನು ಮೂರು ತಿಂಗಳುಗಳ ಅವಧಿಯಲ್ಲಿ ಪೂರ್ಣ ಗೊಳಿಸಬೇಕಾದ ಅನಿವಾರ್ಯತೆಯಿದ್ದು ಬ್ರಹ್ಮಕಲಶೋತ್ಸವದ ಸರ್ವ ಸಿದ್ಧತೆಗಳು ಆಗ ಬೇಕಿದೆ. ಪುಣೆಯಲ್ಲಿರುವ ದೇವರ ಭಕ್ತಾದಿಗಳೆಲ್ಲರ ತನು ಮನ ಧನದ ಸಹಕಾರವನ್ನು ನಾವು ದೇವಳದ ಪರವಾಗಿ ಯಾಚಿಸುತ್ತಿದ್ದೇವೆ. ನೀವೆಲ್ಲರೂ ದೇವಸ್ಥಾನಕ್ಕೆ ಬಂದು ಕಾರ್ಯವನ್ನು ವೀಕ್ಷಿಸಬೇಕಾಗಿದೆ 
–  ಕುದಿ ವಸಂತ ಶೆಟ್ಟಿ 
(ದೇವಸ್ಥಾನದ ಕೋರ್‌ ಕಮಿಟಿ ಸದಸ್ಯ).

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next