Advertisement

Maha Shivratri:  ಶಿವನಾಮ ಸ್ಮರಣೆಯಿಂದ ಪಂಚ ಮಹಾ ಪಾಪ ನಿವಾರಣೆ

11:56 PM Mar 07, 2024 | Team Udayavani |

ಒಬ್ಬೊಬ್ಬ ದೇವತೆಯನ್ನು ಪೂಜಿಸುವುದಕ್ಕೆ ಒಂದೊಂದು ತಿಥಿಯು ಶ್ರೇಷ್ಠ ಎಂಬುದಾಗಿ ಪ್ರಾಜ್ಞರು ನಿರ್ಣಯಿಸಿದ್ದಾರೆ. ಅದರಂತೆ ಗೋಪೂಜೆಗೆ ಪಾಡ್ಯ, ಬ್ರಹ್ಮನ ಆರಾಧನೆಗೆ ಬಿದಿಗೆ, ಗೌರೀ ಪೂಜೆಗೆ ತದಿಗೆ, ಗಣೇಶನಿಗೆ ಚತುರ್ಥಿ, ನಾಗನಿಗೆ ಪಂಚಮಿ, ಸುಬ್ರಹ್ಮಣ್ಯನಿಗೆ ಷಷ್ಠಿà, ಸೂರ್ಯನಿಗೆ ಸಪ್ತಮಿ, ಕೃಷ್ಣನಿಗೆ ಅಷ್ಟಮಿ, ರಾಮನಿಗೆ ನವಮಿ, ಶಮೀ ವೃಕ್ಷಕ್ಕೆ ದಶಮಿ, ವಿಷ್ಣುವಿಗೆ ಏಕಾದಶಿ, ತುಳಸಿಗೆ ದ್ವಾದಶಿ, ಮನ್ಮಥನಿಗೆ ತ್ರಯೋದಶಿ, ಈಶ್ವರನಿಗೆ ಚತುರ್ದಶಿ, ಲಕ್ಷ್ಮೀಗೆ ಅಮಾವಾಸ್ಯೆ, ದತ್ತಾತ್ರೇಯ ಮತ್ತು ಹನುಮದೇವರಿಗೆ ಹುಣ್ಣಿಮೆಯ ತಿಥಿಗಳಂದು ಪೂಜೆ ಸಲ್ಲಿಸಿದರೆ ಆ ದೇವರುಗಳು ಸಂತುಷ್ಟರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬುದು ನಮ್ಮೆಲ್ಲರ ನಂಬಿಕೆಯಾಗಿದೆ.

Advertisement

ಈಶ್ವರನನ್ನು ಪೂಜಿಸುವುದಕ್ಕೆ ಚತುರ್ದಶಿ ತಿಥಿಯು ಶ್ರೇಷ್ಠವಾದದು. ಅದರಲ್ಲೂ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ರಾತ್ರಿಯು ಪರಮೇಶ್ವರನ ಪೂಜೆಗೆ ಪ್ರಶಸ್ತ ವಾದುದು. ಸಾಮಾನ್ಯವಾಗಿ ರಾತ್ರಿಯು ಅಮಂಗಲಕರ ವಾದುದು ಎಂಬುದು ನಮ್ಮೆಲ್ಲರ ಭಾವನೆಯಾಗಿದೆ. ಆದರೆ ಈ ಮಾಘಮಾಸದ ಕೃಷ್ಣ ಪಕ್ಷದ ಚತುರ್ದಶಿಯ ರಾತ್ರಿಯು ಶಿವರಾತ್ರಿಯಾಗಿದೆ. ಶಿವ  ಅಂದರೆ ಮಂಗಲ ಎಂದರ್ಥ. ಆದ್ದರಿಂದ ಶಿವರಾತ್ರಿ ಅಂದರೆ ಮಂಗಳಕರವಾದ ರಾತ್ರಿ ಎಂದರ್ಥವಾಗುತ್ತದೆ. ಶಿವ ಪುರಾಣದಲ್ಲಿ ತಿಳಿಸಿದಂತೆ ಈ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ರಾತ್ರಿಯಲ್ಲಿಯೇ ಶಿವ-ಗಿರಿಜೆಯರ ಕಲ್ಯಾಣವು ನಡೆದಿರುವುದರಿಂದ ಅದನ್ನು ಹೀಗೆ “ಶಿವರಾತ್ರಿ’ ಎಂಬುದಾಗಿ ಪರಿಗಣಿಸಿದ್ದಾರೆ.

ದಕ್ಷಯಜ್ಞದಲ್ಲಿ ತನ್ನ ಹೆಂಡತಿ ದಾಕ್ಷಾಯಿಣಿಯನ್ನು ಕಳೆದುಕೊಂಡ ಈಶ್ವರನು ಸಂಸಾರದಲ್ಲಿ ವಿರಕ್ತನಾಗಿ ಕೈಲಾಸದಲ್ಲಿ ಒಂಟಿಯಾಗಿಯೇ ಧ್ಯಾನಾಸಕ್ತನಾಗಿ ಉಗ್ರವಾದ ತಪಸ್ಸಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ. ಅದೇ ಸಂದರ್ಭದಲ್ಲಿ ತಾರಕಾಸುರನೆಂಬ ದೈತ್ಯನು ಉಗ್ರವಾದ ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿ ಆತನಿಂದ ವರ ಪಡೆದು, ವರಬಲದಿಂದ ಕೊಬ್ಬಿ ದೇವತೆಗಳನ್ನೆಲ್ಲ ಸೋಲಿಸಿ ಲೋಕಕಂಟಕನಾಗಿ ಮೆರೆಯುತ್ತಿರು ತ್ತಾನೆ. ಈಶ್ವರನಿಂದ ಜನಿಸಿದ ಪುತ್ರನಿಂದಲ್ಲದೇ ಅನ್ಯರಿಂದ ಮರಣ ಇಲ್ಲ ಎಂಬಂತಹ ವರ ಅವನಿಗೆ ಇರುವುದರಿಂದ ದೇವತೆಗಳಿಗೆಲ್ಲ ಚಿಂತೆಯಾಗುತ್ತದೆ.

ಈಶ್ವರನಿಗೆ ಹೆಂಡತಿ ಇಲ್ಲದಿರುವುದರಿಂದ ಆತನಿಗೆ ಮಗನು ಜನಿಸುವುದು ಸಾಧ್ಯವಿಲ್ಲ. ಹೀಗಾಗಿ ದೇವತೆಗಳೆಲ್ಲರೂ ಈಶ್ವರ ನಿಗೆ ಮದುವೆ ಮಾಡುವ ಉಪಾಯ ಮಾಡುತ್ತಾರೆ. ದಕ್ಷ ಯಜ್ಞದ ಸಂದರ್ಭದಲ್ಲಿ ಉರಿದು ಹೋದ ದಾûಾಯಿಣಿಯು ಅನಂತರ ಪರ್ವತ ರಾಜನಿಗೆ ಮಗಳಾಗಿ ಪಾರ್ವತಿ (ಗಿರಿಜೆ) ಎಂಬ ಹೆಸರಿನಿಂದ ಜನಿಸಿ, ಈಶ್ವರನನ್ನೇ ಪತಿಯಾಗಿ ಪಡೆಯು ವುದಕ್ಕಾಗಿ ಅರಣ್ಯದಲ್ಲಿ ಶಿವ ಧ್ಯಾನದಲ್ಲಿ ನಿರತಳಾಗಿರುತ್ತಾಳೆ. ಅವಳನ್ನೇ ಕೊಟ್ಟು ಈಶ್ವರನಿಗೆ ಮದುವೆ ಮಾಡಿಸುವುದು ಎಂಬುದಾಗಿ ದೇವತೆಗಳು ತೀರ್ಮಾನಿಸುತ್ತಾರೆ.

ಆದರೆ ಮೊದಲು ಈಶ್ವರನನ್ನು ತಪಸ್ಸಿನಿಂದ ಎಬ್ಬಿಸಬೇಕಲ್ಲ , ಅದಕ್ಕಾಗಿ ಮನ್ಮಥನ ಮೊರೆ ಹೋಗುತ್ತಾರೆ. ಮನ್ಮಥನು ಈಶ್ವರನಿಗೆ ಪಂಚಬಾಣಗಳನ್ನು ಬಿಟ್ಟು ಅದರಿಂದ ಆತನ ತಪಸ್ಸನ್ನು ಕೆಡಿಸುತ್ತಾನೆ. ತಪೋಭಂಗವಾದುದರಿಂದ ಸಿಟ್ಟಾದ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟುಬಿಡುತ್ತಾನೆ. ಆದರೆ ಬಳಿಕ ದೇವತೆಗಳೆಲ್ಲರೂ ಶಿವನನ್ನು ಧ್ಯಾನಿಸಿ ಆತನನ್ನು ಪ್ರಸನ್ನಗೊಳಿಸುತ್ತಾರೆ. ಅನಂತರ ಶಿವ- ಪಾರ್ವತಿಯರ ಕಲ್ಯಾಣವನ್ನು ವಿಜೃಂಭಣೆಯಿಂದ ನೆರವೇರಿಸುತ್ತಾರೆ. ಮುಂದೆ ಅವರಿಬ್ಬರಿಗೆ ಜನಿಸಿದ ಷಣ್ಮುಖನೇ ತಾರಕಾಸುರನನ್ನು ಕೊಲ್ಲುತ್ತಾನೆ.

Advertisement

ಹೀಗೆ ಗಿರಿಜಾಕಲ್ಯಾಣ ನಡೆದ ರಾತ್ರಿಯೇ ಈ ಮಹಾಶಿವರಾತ್ರಿಯಾಗಿದೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯೇ ಶಿವರಾತ್ರಿ. ಶಿವ- ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಅಂದು ರಾತ್ರಿ ದೇವಾನುದೇವತೆಗಳೆಲ್ಲರೂ ಜಾಗ ರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆಯ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ. ತನ್ನ ಮರುಮದುವೆಯ ದಿನವಾಗಿ ರುವುದರಿಂದ ಶಿವನಿಗೆ ಈ ಶಿವರಾತ್ರಿಯು ಅತ್ಯಂತ ಪ್ರಿಯವಾದ ದಿನವಾಗಿದೆ. ಹೀಗಾಗಿ ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತಹ ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎಂಬುದಾಗಿ ಶಿವಪುರಾಣದಲ್ಲಿ ತಿಳಿಸಲಾಗಿದೆ.

ಅಭಿಷೇಕ, ಶಿವನ ಆರಾಧನೆಯಲ್ಲಿ ಅತ್ಯಂತ ಪ್ರಮುಖವಾದ ಸ್ಥಾನ ಪಡೆದಿದೆ. ಶಿವಲಿಂಗಕ್ಕೆ ಶುದ್ಧವಾದ ಜಲ, ಹಾಲಿನಿಂದ ಅಭಿಷೇಕ ಮಾಡಿ, ಬಿಲ್ವಪತ್ರೆ, ತುಂಬೆ ಹೂ, ಎಕ್ಕದ ಹೂ, ಕಣಗಿಲೆ ಹೂವುಗಳನ್ನು ಅರ್ಪಿಸಿ ಪೂಜೆ ನೆರವೇರಿಸಬೇಕು. ಇನ್ನು ಮಹಾ ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆಗೆ ವಿಶೇಷ ಮಹತ್ವವಿದೆ. ಪ್ರತೀದಿನ ಸೇವಿಸುವ ಆಹಾರವನ್ನು ತ್ಯಜಿಸಿ ಸಂಪೂರ್ಣವಾಗಿ ನಿರಾಹಾರರಾಗಿ ಉಪವಾಸವನ್ನಾಚರಿಸಬೇಕು. ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಅಲ್ಪ ಫ‌ಲಾಹಾರವನ್ನು ಸೇವಿಸಿ ಉಪವಾಸ ವ್ರತವನ್ನು ಕೈಗೊಳ್ಳಬಹುದಾಗಿದೆ. ಇನ್ನು ಶಿವರಾತ್ರಿಯ ದಿನ ರಾತ್ರಿ ನಿದ್ದೆಯನ್ನು ತೊರೆದು, ರಾತ್ರಿಯಿಡೀ ಎಚ್ಚರವಿದ್ದು, ಶಿವಧ್ಯಾನ, ಶಿವಚಿಂತನೆ ಮತ್ತು ಶಿವನಾಮ ಸ್ಮರಣೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗರಣೆ ಆಚರಿಸಬೇಕು. ಇವೆರಡನ್ನೂ ಶ್ರದ್ಧೆಯಿಂದ ಆಚರಿಸಿದ್ದೇ ಆದಲ್ಲಿ ಶಿವರಾತ್ರಿಯ ನಮ್ಮ ವ್ರತ ಪರಿಪೂರ್ಣಗೊಳ್ಳುತ್ತದೆ ಮತ್ತು ಇದರಿಂದ ಪರಶಿವನು ತೃಪ್ತನಾಗುತ್ತಾನೆ ಎಂಬುದು ಪ್ರತೀತಿ.

ಒಂದು ವೇಳೆ ತ್ರಯೋದಶಿಯ ದಿನವೇ ಸೂರ್ಯಾಸ್ತವಾದ ಬಳಿಕ ನಾಲ್ಕು ಗಳಿಗೆಗಳಲ್ಲಿಯೇ ಚತುರ್ದಶಿ ತಿಥಿ ಬಂದರೆ ಅಂದೇ ಶಿವರಾತ್ರಿಯನ್ನು ಆಚರಿಸಬೇಕು ಎಂಬುದಾಗಿ ನಮ್ಮ ತಿಥಿ ನಿರ್ಣಯದ ಗ್ರಂಥಗಳಲ್ಲಿ ತಿಳಿಸಲಾಗಿದೆ. ಹೀಗಾಗಿ ಈ ವರ್ಷ ಚತುರ್ದಶಿ ತಿಥಿಯು ಮಾರ್ಚ್‌ 9ರ ಶನಿವಾರದಂದು ಇದ್ದರೂ ಕೂಡ ಆ ಚತುರ್ದಶಿ ತಿಥಿಯು ತ್ರಯೋದಶಿಯ ದಿನದಂದೇ ಅಂದರೆ ಮಾರ್ಚ್‌ 8ರ ಶುಕ್ರವಾರ ರಾತ್ರಿ 07.44 ಗಂಟೆಯಿಂದಲೇ ಆರಂಭವಾಗುವುದರಿಂದ ಅಂದೇ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ.

ಶಿವರಾತ್ರಿಯಂದು ನಿದ್ದೆ ಮಾಡದೇ ಎಚ್ಚರದಿಂದ (ಜಾಗರಣೆ) ಇದ್ದು ಶಿವನ “ಪಂಚಾಕ್ಷರೀ’ ಮಂತ್ರವನ್ನು ಪಠಿಸುತ್ತಾ ಇರಬೇಕು ಎಂಬುದಾಗಿ ಶಾಸ್ತ್ರ ಹೇಳುತ್ತದೆ. “ಪಂಚಾ ಕ್ಷರೀ ಮಂತ್ರ’ ಎಂದರೆ ಬೇರೆ ಏನೂ ಅಲ್ಲ , “ನಮಃ ಶಿವಾಯ’ ಎಂಬ ಐದು ಅಕ್ಷರಗಳಿರುವ ಶಬ್ದವೇ ಪಂಚಾಕ್ಷರೀ ಮಂತ್ರ ವಾಗಿದೆ. ಇದನ್ನೇ ಕೆಲವರು “ಓಂ ನಮಃ ಶಿವಾಯ’ ಎನ್ನುತ್ತಾರೆ. ಆದರೆ ಆಗ ಅದು ಆರು ಅಕ್ಷರಗಳ ಷಡಕ್ಷರಿಯಾಗುತ್ತದೆ ಅಷ್ಟೇ. ಆದರೂ ಪರವಾಗಿಲ್ಲ , ಅದೂ ಕೂಡ ತಪ್ಪಲ್ಲ.

ಈ ಪಂಚಾಕ್ಷರೀ ಮಂತ್ರವನ್ನು ಜಪಿಸುವುದರಿಂದ ಪಂಚ ಮಹಾ ಪಾಪಗಳಾದ ಬ್ರಹ್ಮಹತ್ಯೆ (ಬ್ರಾಹ್ಮಣರನ್ನು ಕೊಂದ ಪಾಪ), ಸುರಾಪಾನ, ಸ್ವರ್ಣಸ್ತೇಯ (ಚಿನ್ನ ಕದ್ದ ಪಾಪ), ಗುರುಪತ್ನಿà ಸಂಗ ಹಾಗೂ ಈ ನಾಲ್ಕು ಪಾಪಗಳನ್ನು ಮಾಡಿದ ಪಾಪಿಗಳ ಸಂಗದಿಂದ ದೊರೆತ ಪಾಪ ಇವೆಲ್ಲವೂ ನಿವಾರಣೆಯಾಗುತ್ತವೆ. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಗೆ ಹಾಗೂ ಚರ್ಮಗಳು ಶುದ್ಧವಾಗಿ ಪಾವನವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

-ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next