Advertisement

ಪ್ರತಿ ಗ್ರಾಪಂನಲ್ಲಿ ಚೆಕ್‌ ಡ್ಯಾಂ ನಿರ್ಮಿಸಿ

04:49 PM Aug 24, 2019 | Naveen |

ಮಾಗಡಿ: ತಾಲೂಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ 10 ದೊಡ್ಡ ಚೆಕ್‌ ಡ್ಯಾಂ ನಿರ್ಮಿಸಬೇಕು ಎಂದು ಶಾಸಕ ಎ.ಮಂಜುನಾಥ್‌ ಪಿಡಿಒಗಳಿಗೆ ತಾಕೀತು ಮಾಡಿದರು.

Advertisement

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಕೇಂದ್ರ ಪುರಸ್ಕೃತ ಇತರೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಚೆಕ್‌ ಡ್ಯಾಂ ನಿರ್ಮಿಸಲು ಪಿಡಿಒಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಿ, ತೋರಿಸಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಫ‌ಲಾನುಭವಿಗಳಿಗೆ ಕೆಲಸ ನೀಡಬೇಕು. ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ನರೇಗಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ: ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು. ಶೌಚಾಲಯ, ಚರಂಡಿ, ರಸ್ತೆ, ಬೀದಿದೀಪ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ಪಿಡಿಒಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಕನಕಪುರದಲ್ಲಿ ಕೋಟಿ ರೂ.ಗೂ ಹೆಚ್ಚು ನರೇಗಾ ಕಾಮಗಾರಿ ನಡೆಸುತ್ತಿರುವಾಗ ನೀವ್ಯಾಕೆ ಇನ್ನೂ 20ರಿಂದ 30 ಲಕ್ಷ ರೂ.ವರೆಗೆ ಮಾತ್ರ ಕಾಮಗಾರಿ ನಡೆಸುತ್ತಿದ್ದೀರಿ,ನಿಮಗೆ ಇದರಿಂದ ಏನಾದರೂ ಸಮಸ್ಯೆ ಇದೆಯೇ, ಇದ್ದರೆ ಸಭೆಯಲ್ಲಿ ತಿಳಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸುಮ್ಮನೆ ಕಾಲಹರಣ ಮಾಡುವುದು, ಎಂಜಿನಿಯರ್‌ಗಳು ಪಿಡಿಒಗಳನ್ನು ಬ್ಲಾಕ್‌ ಮೇಲ್ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಂಗನವಾಡಿ ಕೇಂದ್ರ ದುರಸ್ತಿಗೆ ಯೋಜನೆ: ತಾಲೂಕಿನಲ್ಲಿ 88 ಅಂಗನವಾಡಿ ಕೇಂದ್ರಗಳು ದುರಸ್ತಿಯಾಗಬೇಕಿದೆ. 15 ಹೊಸ ಶೌಚಾಲಯಗಳನ್ನು ನಿರ್ಮಿಸಬೇಕಿದ್ದು, ಅವುಗಳಿಗೆ ಯೋಜನೆ ತಯಾರಿಸಿದ್ದು, ಟೆಂಡರ್‌ ಕರೆದು ಕಾಮಗಾರಿ ಕೈಗೊಳ್ಳಲಾಗುವುದು ಎಂದು ಜಿಪಂ ಇಇ ಪ್ರಸನ್ನಕುಮಾರ್‌ ಸಭೆಯ ಗಮನಕ್ಕೆ ತಂದರು.

ಕಾಮಗಾರಿ ಇನ್ನೂ ಪೂರ್ಣಗೊಳಿಸಿಲ್ಲ: ಕಳೆದ 2016-2017ನೇ ಸಾಲಿನಲ್ಲಿ ಪ್ರಾರಂಭಗೊಂಡ ಕಲ್ಯಾ ವ್ಯಾಪ್ತಿಯ ಅಂಗನವಾಡಿ ಮತ್ತು 2017-18ನೇ ಸಾಲಿನಲ್ಲಿ ಕುತ್ತನಗೆರೆ, ವೀರಸಾಗರ, ಕಣ್ಣೂರು ಗ್ರಾಮದಲ್ಲಿ ಕೈಗೊಂಡಿರುವ ಅಂಗನವಾಡಿ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಳಿಸಿಲ್ಲ ಎಂದು ಸಿಡಿಪಿಇಒ ಇಲಾಖೆಯ ಅಧಿಕಾರಿ ಭಾರತಿದೇವಿ ಸಭೆಯಲ್ಲಿ ತಿಳಿಸಿದರು.

Advertisement

ಈ ಸಂಬಂಧ ಎಂಜಿನಿಯರ್‌ ಅವರಿಂದ ಮಾಹಿತಿ ಪಡೆದ ಶಾಸಕರು, ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಬೇಕು. ಪೂರ್ಣಗೊಂಡಿರುವ ಅಂಗನವಾಡಿ ಕಟ್ಟಡದ ತಮ್ಮ ವಶಕ್ಕೆ ಪಡೆಯುವಂತೆ ಶಾಸಕರು ಸಿಡಿಪಿಒಗೆ ಸೂಚನೆ ನೀಡಿದರು.

ಕೃಷಿ ಹೊಂಡಗಳ ತನಿಖೆ ನಡೆಸಿ: ಕೃಷಿ ಇಲಾಖೆಯಿಂದ ನಡೆದಿರುವ ಕೃಷಿ ಹೊಂಡಗಳ ಕರ್ಮಕಾಂಡವನ್ನು ತನಿಖೆ ನಡೆಸುವಂತೆ ಮಾದಿಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಮಾರುತಿಗೌಡ ಶಾಸಕರ ಗಮನಕ್ಕೆ ತಂದರು. ಈ ಸಂಬಂಧ ಶಾಸಕರು, ಕೃಷಿ ಅಧಿಕಾರಿಗಳಿಂದ ಹಾಗೂ ಎಂಜಿನಿಯರ್‌ಗಳಿಂದ ಎಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೃಷಿ ಹೊಂಡ ಕಾಮಗಾರಿಗಳ ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ತೋಟಗಾರಿಕೆ, ವಲಯ ಮತ್ತು ಸಾಮಾಜಿಕ ಅರಣ್ಯ, ರೇಷ್ಮೆ ಇಲಾಖೆಯ ಮಾಹಿತಿವನ್ನು ಶಾಸಕರು ಪಡೆದರು.

ಕ್ರಿಯಾ ಯೋಜನೆ ತಯಾರಿಸಿ: ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಎಚ್.ಶಿವರಾಜು ಮಾತನಾಡಿ, ಜಲಾಮೃತ ಯೋಜನೆಯನ್ನು ಅನುಷ್ಠಾನಗೊಳಿಸಲು ಪಿಡಿಒಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಸಮಸ್ಯೆ ಏನು ಎಂದು ಪ್ರಶ್ನಿಸಿದರು. ಜಾನಿಗೆರೆಯಿಂದ ತಿಗಳರಪಾಳ್ಯದ ವರೆಗೆ ಚೆಕ್‌ ಡ್ಯಾಂ ನಿರ್ಮಿಸಬಹುದು. ಕ್ರಿಯಾ ಯೋಜನೆ ತಯಾರಿಸುವಂತೆ ಚಿಕ್ಕಮುದಿಗೆರೆ ಪಿಡಿಒಗೆ ಸೂಚನೆ ನೀಡಿದರು.

ಈ ವೇಳೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕಾಧಿಕಾರಿ ಟಿ.ಪ್ರದೀಪ್‌, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್‌, ಉಪಾಧ್ಯಕ್ಷೆ ಅಂಬಿಕಾ, ಸದಸ್ಯರಾದ ಎಂ.ಎಚ್.ಸುರೇಶ್‌, ನಾರಾಯಣಪ್ಪ, ನರಸಿಂಹಮೂರ್ತಿ, ಗಂಗಮ್ಮ, ಗೀತಾ ಗಂಗರಂಗಯ್ಯ, ದಿವ್ಯಾ ರಾಣಿ, ಸುಧಾ, ಸುಗುಣ ಕಾಮರಾಜು ಸೇರಿದಂತೆ ಬಹುತೇಕ ಎಲ್ಲಾ ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ನರೇಗಾ ಎಂಜಿನೀಯರ್‌, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next