Advertisement
ಕೆಲವು ದಿನಗಳ ಹಿಂದೆ ಕೆಂಗಣ್ಣು ಪ್ರಕರಣ ಮಂಗಳೂರು ಗ್ರಾಮಾಂತರ ಮತ್ತು ಬಂಟ್ವಾಳ ತಾಲೂಕಿನಲ್ಲಿ ಹೆಚ್ಚು ಇತ್ತು. ಆದರೆ ಸದ್ಯ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಏರಿಕೆಯಾಗಿದೆ. ಪ್ರತೀ ದಿನ 20ರಿಂದ 25 ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.
ಕೆಂಗಣ್ಣಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಈಗಾಗಲೇ ಶಾಲೆ, ಕಾಲೇಜು ಅಂಗನವಾಡಿಗಳಿಗೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಉದ್ದೇಶಕ್ಕೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಸಂಬಂಧ ಕಣ್ಣಿಗೆ ಹಾಕುವ ಆ್ಯಂಟಿ ಬಯೋಟಿಕ್ ಡ್ರಾಪ್ಸ್ಗಳನ್ನು ಸಾಕಷ್ಟು ಸಂಗ್ರಹಿಸಿ ಇಟ್ಟುಕೊಳ್ಳವಂತೆ ಇಲಾಖೆ ಸೂಚಿಸಿದೆ.
Related Articles
ಕೆಂಗಣ್ಣು ರೋಗ ವೈರಸ್ ಮೂಲಕ ಹರಡುತ್ತದೆ. ಸೋಂಕು ತಗಲಿದವರ ಕಣ್ಣು ಕೆಂಬಣ್ಣದಿಂದ ಕೂಡಿರುತ್ತದೆ. ಈ ವೇಳೆ ಮುನ್ನೆಚ್ಚರಿಕೆ ಅತೀ ಅಗತ್ಯ ಕಣ್ಣೀರನ್ನು ಒರಸುವಾಗ ಶುದ್ಧ ಕರವಸ್ತ್ರವನ್ನೇ ಬಳಸಬೇಕು. ಕೆಂಗಣ್ಣಿಗೆ ತುತ್ತಾದ ವ್ಯಕ್ತಿ ಬಳಸಿದ ವಸ್ತುವನ್ನು ಮತ್ತೂಬ್ಬ ವ್ಯಕ್ತಿ ಬಳಸಿದಾಗ ರೋಗ ಹರಡುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸಬೇಕು. ಕೈ, ಟವೆಲ್, ಪುಸ್ತಕ, ಮೊಬೈಲ್ ಮುಂತಾದವುಗಳನ್ನು ಪ್ರತ್ಯೇಕವಾಗಿ ಬಳಸಬೇಕು. ಕಣ್ಣಿನ ಶುಚಿತ್ವ ಕಾಪಾಡಿಕೊಳ್ಳಬೇಕು. ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು. ಹೆಚ್ಚಿನ ಚಿಕಿತ್ಸೆಗೆ ವೈದ್ಯರನ್ನು ಭೇಟಿಯಾಗಬೇಕು.
Advertisement