Advertisement

ಶಾಶ್ವತ ಪರಿಹಾರಕ್ಕೆ ಕ್ರಮ: ಗಡ್ಕರಿ

01:37 AM Jul 25, 2019 | Team Udayavani |

ಮಡಿಕೇರಿ: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಶಾಶ್ವತವಾಗಿ ದುರಸ್ತಿಗೊಳಿಸಿ ಮಳೆಗಾಲದಲ್ಲಿ ಉಂಟಾಗುವ ಉಭಯ ಜಿಲ್ಲೆಗಳ ಸಂಪರ್ಕ ಕಡಿತ ಸಮಸ್ಯೆಯನ್ನು ಪರಿಹರಿಸಬೇಕು ಎಂಬ ಮನವಿಗೆ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರು ತತ್‌ಕ್ಷಣ ಸ್ಪಂದಿಸಿದ್ದು, ಅಗತ್ಯ ನಿಧಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

Advertisement

ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಹಾನಿಗೀಡಾದ ಮಡಿಕೇರಿ-ಸಂಪಾಜೆ ಭಾಗದ ರಾಷ್ಟ್ರೀಯ ಹೆದ್ದಾರಿ ಶಾಶ್ವತ ಪರಿಹಾರ ಕಾಣದೆ ಈ ಬಾರಿಯ ಸಾಧಾರಣ ಮಳೆಗೂ ಹದಗೆಟ್ಟಿದೆ. ಅಲ್ಲದೆ ಬರೆಗಳು ಕುಸಿಯುತ್ತಲೇ ಇವೆ, ಕೆಲವೆಡೆ ರಸ್ತೆ ಬಿರುಕು ಬಿಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಬುಧವಾರ ಹೊಸದಿಲ್ಲಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಜು. 4ರಂದು ಹೆದ್ದಾರಿಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿದ್ದನ್ನು ಸಿಮೆಂಟ್ ಸ್ಲರಿ ಹಾಕಿ ಮುಚ್ಚಲಾಗಿತ್ತು. ಆ ಸಂದರ್ಭ ರಾಷ್ಟ್ರೀಯ ಹೆದ್ದಾರಿ ನಿರ್ವಹಣ ಅಧೀಕ್ಷಕ ಎಂಜಿನಿಯರ್‌ ರಾಘವನ್‌ ಮತ್ತು ಕಾರ್ಯಪಾಲಕ ಎಂಜಿನಿಯರ್‌ ಎಸ್‌. ಹೊಳ್ಳ ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಶಾಶ್ವತ ಕಾಮಗಾರಿ ಕೈಗೊಳ್ಳಲು ಕೇಂದ್ರ ಭೂ ಸಾರಿಗೆ ಇಲಾಖೆಗೆ 47 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದೂ ರಾಘವನ್‌ ತಿಳಿಸಿದ್ದರು.

ಮಂಗಳೂರು-ಬೆಂಗಳೂರು ರೈಲು ಮಾರ್ಗ: ಬಂಡೆ ತೆರವು
ಸುಬ್ರಹ್ಮಣ್ಯ
: ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ಸಿರಿಬಾಗಿಲಿನ ಮಣಿಬಂಡದಲ್ಲಿ ಹಳಿ ಮೇಲೆ ಬೀಳಲು ಸಿದ್ಧವಾಗಿದ್ದ ಬಂಡೆ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಗುರುವಾರ ಬೆಳಗ್ಗೆ ಪ್ರಾಯೋಗಿಕವಾಗಿ ಗೂಡ್ಸ್‌ ರೈಲು ಸಂಚರಿಸಲಿದೆ. ಅನಂತರ ಪ್ಯಾಸೆಂಜರ್‌ ರೈಲು ಓಡಾಟ ನಿರ್ಧರಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಐದು ದಿನಗಳಿಂದ ಬಂಡೆ ತೆರವು ಕಾರ್ಯ ಸತತವಾಗಿ ನಡೆಯುತ್ತಿತ್ತು. ತೆರವು ವೇಳೆ ಮತ್ತಷ್ಟು ಬಂಡೆ ಜತೆ ಮಣ್ಣು ಜರಿದು ಹಳಿ ಮೇಲೆ ಬಿದ್ದಿತ್ತು. ಅವುಗಳ ತೆರವು ಕಾರ್ಯ ಹಗಲು ರಾತ್ರಿ ನಿರಂತರ ನಡೆದಿತ್ತು. ಘಾಟಿ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದರಿಂದ ತೆರವು ಕಾಮಗಾರಿ ವೇಗವಾಗಿ ನಡೆಯಿತು. ಹೀಗಾಗಿ ಬುಧವಾರ ಸಂಜೆ ವೇಳೆಗೆ ತೆರವು ಕಾರ್ಯ ಮುಕ್ತಾಯಗೊಂಡಿದೆ. ಬೃಹತ್‌ ಗಾತ್ರದ ಬಂಡೆ ಉರುಳಲು ಸಿದ್ಧವಾಗಿದ್ದ ಕಾರಣ ಈ ಮಾರ್ಗದಲ್ಲಿ ಬೆಂಗಳೂರು-ಮಂಗಳೂರು ನಡುವೆ ಓಡಾಡುವ ಎಲ್ಲ ಪ್ಯಾಸೆಂಜರ್‌ ರೈಲುಗಳನ್ನು ಕಳೆದ ಶನಿವಾರದಿಂದ ಸ್ಥಗಿತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next