Advertisement

Madikeri: ಆನೆಕಾಡು ಬಳಿ ಭೀಕರ ಅಪಘಾತ; ತಂದೆ, ಮಗಳು ಸಾವು

11:17 PM Jan 17, 2024 | Team Udayavani |

ಮಡಿಕೇರಿ: ಮಾರುತಿ ಆಮ್ನಿ ಮತ್ತು ಬೊಲೆರೋ ಜೀಪು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ಬುಧವಾರ ಸಂಭವಿಸಿದೆ.

Advertisement

ಆಮ್ನಿ ಚಲಾಯಿಸುತ್ತಿದ್ದ ಮಾಜಿ ಯೋಧ, ಬಸವನಹಳ್ಳಿ ನಿವಾಸಿ ರಾಜೇಶ್‌ ದೇವಯ್ಯ (38) ಹಾಗೂ ಅವರ ಪುತ್ರಿ ನ್ಯಾನ್ಸಿ ಬೊಳ್ಳಮ್ಮ (3) ಮೃತಪಟ್ಟವರು.

ರಾಜೇಶ್‌ ದೇವಯ್ಯ ಮೂಲತಃ ಕಾಲೂರು ಗ್ರಾಮದವರಾಗಿದ್ದು, ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ನೆಲೆಸಿದ್ದರು. ಮಡಿಕೇರಿಯಲ್ಲಿ ತಮ್ಮ ನಾದಿನಿಯ ಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವನಹಳ್ಳಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಆಮ್ನಿ ವಾಹನಕ್ಕೆ ಬೋಯಿಕೇರಿಗೆ ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿರಿಯಾಪಟ್ಟಣ ತಾಲೂಕಿನ ಚನಕಲ್‌ ಕಾವಲ್‌ನ ಬೊಲೆರೋ ಜೀಪು ಢಿಕ್ಕಿಯಾಗಿದೆ. ರಾಜೇಶ್‌ ಪತ್ನಿ ಸ್ಮಿತಾ ತಮ್ಮ ದ್ವಿಚಕ್ರ ವಾಹನದಲ್ಲಿ ಆಮ್ನಿಯನ್ನು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ.

ರಾಜೇಶ್‌ ಸ್ಥಳದಲ್ಲೇ ಮೃತಪಟ್ಟರೆ, ನ್ಯಾನ್ಸಿ ಮಡಿಕೇರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಆಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement

ಬೊಲೆರೋ ಚಾಲಕ ಅರುಣ್‌, ಕಾರ್ಮಿಕ ಮಹಿಳೆಯರಾದ ಜಯಲಕ್ಷ್ಮೀ ಹಾಗೂ ನೀಲಮ್ಮ ಅವರಿಗೂ ಗಂಭೀರ ಗಾಯಗಳಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next