Advertisement

ಮಡಿಕೇರಿ: ಕಳೆದ ಹೋಗಿದ್ದ 23 ಮೊಬೈಲ್‌ ಪತ್ತೆ… ವಾರಸುದಾರರಿಗೆ ಹಸ್ತಾಂತರ

11:38 PM May 31, 2023 | Team Udayavani |

ಮಡಿಕೇರಿ: ಪೊಲೀಸ್‌ ಠಾಣೆಗಳಿಗೆ ತೆರಳಿ ದೂರು ನೀಡುವ ದೂರುದಾರರ ನೆರವಿಗೆ ಪೊಲೀಸ್‌ ಕಂಟ್ರೋಲ್‌ ರೂಂ ಸಿದ್ಧವಿದೆ ಎಂದು ಎಸ್‌ಪಿ ಕೆ. ರಾಜರಾಮನ್‌ ತಿಳಿಸಿದ್ದಾರೆ.

Advertisement

ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಮೊಬೈಲ್‌ ಕಳೆದುಕೊಂಡ 23 ಮಂದಿಗೆ ಮೊಬೈಲ್‌ಗ‌ಳನ್ನು ಹಿಂದಿರುಗಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಲು ತೆರಳುವವರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆ ಮಾಹಿತಿಯನ್ನು ಕಂಟ್ರೋಲ್‌ ರೂಂ ಪಡೆದುಕೊಂಡು ದೂರುದಾರರನ್ನು ಸಂಪರ್ಕಿಸುತ್ತದೆ. ಬಳಿಕ ಠಾಣೆಗೆ ತೆರಳಿದ ಉದ್ದೇಶ, ದೂರಿನ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಅಲ್ಲದೇ ಠಾಣೆಗಳಲ್ಲಿ ಸೂಕ್ತ ಸ್ಪಂದನೆ ದೊರೆತಿದೆಯೇ ? ಅಧಿಕಾರಿ, ಸಿಬಂದಿ ಗೌರವಯುತವಾಗಿ ನಡೆದುಕೊಂಡಿದ್ದಾರೆಯೇ, ನೀಡಿರುವ ದೂರಿಗೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಮಾಹಿತಿಯನ್ನು ದೂರುದಾರರಿಂದ ಪಡೆದುಕೊಳ್ಳಲಾಗುತ್ತದೆ.

ಈ ಸಂದರ್ಭ ಯಾವುದಾದರೂ ಠಾಣೆಗಳಲ್ಲಿ ಸೂಕ್ತ ಸ್ಪಂದನೆ ದೊರೆತ್ತಿಲ್ಲ ಎಂಬ ಬಗ್ಗೆ ದೂರುದಾರರು ತಿಳಿಸಿದರೆ, ಸಂಬಂಧಿಸಿದ ಅಧಿಕಾರಿ ಹಾಗೂ ಸಿಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ಈ ಸಂಬಂಧ ಕೆಲವೊಂದು ದೂರುಗಳು ಬಂದಿದ್ದು, ಇಲಾಖಾ ವಿಚಾರಣೆ ಕೈಗೊಳ್ಳಲಾಗಿದೆ ಎಂದು ರಾಮರಾಜನ್‌ ವಿವರಿಸಿದರು.

ಮೊಬೈಲ್‌ ಕಳುವಾದರೆ ceir.gov.in ವೆಬ್‌ಸೈಟ್‌ ಮೂಲಕ ದೂರು ನೀಡಬಹುದಾಗಿದೆ. ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ಸಮರ್ಪಕವಾಗಿ ದಾಖಲು ಮಾಡಿದರೆ, ಆ ಬಗ್ಗೆ ಸ್ಥಳೀಯ ಠಾಣೆಗಳಿಗೆ ಮಾಹಿತಿ ಬರುತ್ತದೆ. ಬಳಿಕ ತನಿಖೆ ಕೈಗೊಂಡು ಮೊಬೈಲ್‌ಗ‌ಳನ್ನು ಪತ್ತೆ ಮಾಡಲಾಗುತ್ತದೆ. ನಾಗರಿಕರು ಈ ವೆಬ್‌ಸೈಟ್‌ ಅನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಈ ಸಂದರ್ಭ ಸೆನ್‌ ಪೊಲೀಸ್‌ ಠಾಣೆಯ ನಿರೀಕ್ಷಕ ಜಿ.ಕೆ.ರಾಘವೇಂದ್ರ ಹಾಗೂ ಸಿಬಂದಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next