Advertisement

ಮಧೂರು: ಮಹಾ ರುದ್ರಯಾಗ ಲಕ್ಷಾರ್ಚನೆಗೆ ಭರದ ಸಿದ್ಧತೆ

12:25 PM Feb 24, 2017 | |

ಕಾಸರಗೋಡು: ಪ್ರಕೃತಿ ರಮಣೀಯ ಮಧುವಾಹಿನಿ ನದಿ ತೀರದಲ್ಲಿ ರಾರಾಜಿಸುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಫೆ. 26ರಿಂದ 28ರ ವರೆಗೆ ನಡೆಯುವ ಮಹಾರುದ್ರಯಾಗ ಲಕ್ಷಾರ್ಚನೆ, ಚತುರ್ವಿಂಶತ್ಯುತ್ತರ ಸಹಸ್ರ ನಾರಿಕೇಲ ಮಹಾ ಗಣಯಾಗ, ಸಾರ್ವಜನಿಕ ಶ್ರೀ ಸತ್ಯವಿನಾಯಕ ವ್ರತ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

Advertisement

ಫೆ.26 ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ವಿವಿಧ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ, ಬೆಳಗ್ಗೆ 7.30 ಕ್ಕೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪರಿಸರದಿಂದ ಸುಮಾರು 100 ಭಜನಾ ತಂಡಗಳ ನೇತೃತ್ವದಲ್ಲಿ ಸಹಸ್ರಾರು ಭಕ್ತಜನರೊಡಗೂಡಿ ಭಜನೆಯೊಂದಿಗೆ ನಾರಾಯಣಮಂಗಲ, ನಾಯ್ಕಪು, ಸೂರಂಬೈಲು, ಸೀತಾಂಗೋಳಿ, ಮಾಯಿಪ್ಪಾಡಿ, ಉಳಿಯತ್ತಡ್ಕ ದಾರಿಯಾಗಿ ಮಧ್ಯಾಹ್ನ 12 ಕ್ಕೆ ಮಧೂರು ದೇವಸ್ಥಾನಕ್ಕೆ ಭಜನಾ ತಂಡಗಳು ತಲುಪಲಿದೆ. ಸಂಜೆ 4 ರಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಅಕ್ಷಯ ಮತ್ತು ಗಜಾನನ ಉಗ್ರಾಣಗಳಲ್ಲಿ ಉಗ್ರಾಣ ಮುಹೂರ್ತ ನಡೆಯಲಿವೆ. ಸಂಜೆ 6 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಲವರು ಉಪಸ್ಥಿತರಿರುವರು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ಮದರು ರಂಗ ವೇದಿಕೆ’ಯಲ್ಲಿ ನಾಟ್ಯ ಮಂಟಪ ಮಧೂರು ಅವರಿಂದ ಭರತನಾಟ್ಯ ನಡೆಯಲಿದೆ.

ಫೆ. 27ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. ಬೆಳಗ್ಗೆ 9 ರಿಂದ ಅರಣಿ ಮಥನ, ಅಗ್ನಿ ಜನನ, ಅಗ್ನಿ ಸಂಸ್ಕಾರ ನಡೆಯಲಿದೆ. 8ರಿಂದ ಈಶಾವಾಸ್ಯಂ ಯಾಗ ಶಾಲೆಯಲ್ಲಿ ಮಹಾರುದ್ರಯಾಗ ಪ್ರಾರಂಭವಾಗಲಿದೆ. 
ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರಿಗೆ ಲಕ್ಷಾರ್ಚನೆ ನಡೆಯಲಿದೆ. ಸಂಜೆ 5 ರಿಂದ ಮಂಡಲ ಪೂಜೆ, ದ್ರವ್ಯ ಪೂಜೆ, ಅಷ್ಟಾವಧಾನ ಸೇವೆ, ಸಹಸ್ರ ನಾರಿಕೇಳ ಅಷ್ಟದ್ರವ್ಯ ಮುಹೂರ್ತ ನಡೆಯವುದು. ಸಂಜೆ 6 ರಿಂದ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಮಾಯಿಪ್ಪಾಡಿ ಅರಮನೆಯ ದಾನ ಮಾರ್ತಾಂಡ ವರ್ಮ ರಾಜ ಯಾನೆ ರಾಮಂತರಸುಗಳು – 8 ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿರು ವರು. ಆ ಬಳಿಕ ಮಧೂರು ಸಹೋದರಿಯರಿಂದ ಶಾಸ್ತ್ರೀಯ ಸಂಗೀತ, ನಾಟ್ಯ ನಿಲಯ ಬಾಲಕೃಷ್ಣ ಮಾಸ್ತರ್‌ ಮಂಜೇಶ್ವರ ಅವರ ಶಿಷ್ಯೆಯರಿಂದ ನೃತ್ಯ ವೈಭವ ನಡೆಯಲಿದೆ.

ಫೆ.28 ರಂದು ವಿವಿಧ ಭಜನಾ ತಂಡಗಳಿಂದ ಭಜನೆ, ಬೆಳಗ್ಗೆ 6 ರಿಂದ ಚತುರ್ವಿಂಶತ್ಯುತ್ತರ ಸಹಸ್ರ ನಾರಿಕೇಲ ಅಷ್ಟದ್ರವ್ಯ ಮಹಾಗಣಯಾಗ, 11ಕ್ಕೆ ಪೂರ್ಣಾಹುತಿಗೊಳ್ಳಲಿದೆ. ಸಂಜೆ 5 ರಿಂದ ಸಾರ್ವಜನಿಕ ಶ್ರೀ ಸತ್ಯವಿನಾಯಕ ಪೂಜೆ, ರಾತ್ರಿ 8 ರಿಂದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲದ ಸ್ವಾಮೀಜಿಗಳವರು ಆಶೀರ್ವಚನ ನೀಡುವರು.
 
ಮಧ್ಯಾಹ್ನ 1 ರಿಂದ ಶ್ರೀ ಬೊಡ್ಡಜ್ಜ ಯಕ್ಷಭಾರತಿ ಮಧೂರು ಅವರಿಂದ “ದಕ್ಷಾಧ್ವರ’ ಯಕ್ಷಗಾನ ಕೂಟ, ರಾತ್ರಿ 10ರಿಂದ ಅಗ್ರಗಣ್ಯ ಕಲಾವಿದರ ಕೂಡುವಿಕೆಯಿಂದ “ಭಸ್ಮಾಸುರ ಮೋಹಿನಿ’ ಯಕ್ಷಗಾನ ಬಯಲಾಟ ಜರಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅವರು ಹೇಳಿದರು. 

Advertisement

ಕಾರ್ಯದರ್ಶಿ ಪ್ರಭಾಶಂಕರ, ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಮಧೂರು, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ ನಾೖಕ್‌, ಅಪ್ಪಯ್ಯ ನಾೖಕ್‌, ಯೋಗೀಶ ಎಂ.ಆರ್‌, ಸಂತೋಷ್‌ ಕೆ.ಗಟ್ಟಿ, ಪವಿತ್ರಪಾಣಿ ರತನ್‌ ಕುಮಾರ್‌ ಕಾಮಡ, ಮಹಿಳಾ ಘಟಕದ ಸಂಚಾಲಕಿ ಶೋಭಾ ಗಟ್ಟಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫೆ. 26ರಿಂದ 28ರ ವರೆಗೆ ಕಾರ್ಯಕ್ರಮ
ಪೌರಾಣಿಕ ಹಿನ್ನೆಲೆ, ಐತಿಹ್ಯ, ವಾಸ್ತು ರಚನೆ, ಕಾರಣಿಕ ಹೀಗೆ ಹತ್ತು ಹಲವು ವೈಶಿಷ್ಟÂಗಳಿಂದೊಡಗೂಡಿರುವ ಶ್ರೀ ಕ್ಷೇತ್ರಕ್ಕೆ ಹಲವು ಶತಮಾನಗಳ ಹಿನ್ನೆಲೆಯಿದೆ. ಶಿಥಿಲಾವಸ್ಥೆಯಲ್ಲಿರುವ ಶ್ರೀ ಕ್ಷೇತ್ರದ ಪುನರ್‌ ನಿರ್ಮಾಣ ಕಾರ್ಯವು ಯು.ಟಿ.ಆಳ್ವ ಅವರ ನೇತೃತ್ವದಲ್ಲಿ ನಡೆದು ಬರುತ್ತಿದ್ದು, ಇದರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಶ್ರೀ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಹಕರಿಸಲು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ನೇತೃತ್ವದಲ್ಲಿ ಭಕ್ತಜನ ಸಮಿತಿ ರೂಪೀಕರಿಸಿ ಊರ ಪರವೂರ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ದೇವರ ಸನ್ನಿಧಿಯಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಶ್ರೀಪಾದಂಗಳವರ ಪೂರ್ಣಾನುಗ್ರಹದೊಂದಿಗೆ ಕ್ಷೇತ್ರ ಆನುವಂಶಿಕ ಮೊಕ್ತೇಸರರಾದ ಮಾಯಿಪ್ಪಾಡಿ ಅರಮನೆಯ ಶ್ರೀ ದಾನ ಮಾರ್ತಾಂಡ ವರ್ಮರಾಜ ಯಾನೆ ರಾಮಂತರಸುಗಳು-8 ಅವರ ಮಾರ್ಗ ದರ್ಶನದಲ್ಲಿ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ರಿಗಳವರ ನೇತೃತ್ವದಲ್ಲಿ ಫೆ.26 ರಿಂದ 28 ರ ತನಕ ಮಹಾ ರುದ್ರಯಾಗ ಲಕ್ಷಾರ್ಚನೆ, ಸಹಸ್ರ ನಾರಿಕೇಳ ಮಹಾಗಣಯಾಗ, ಸಾರ್ವಜನಿಕ ಶ್ರೀ ಸತ್ಯವಿನಾಯಕ ಪೂಜೆಯು ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next