Advertisement

ಸತತ ಬರಗಾಲಕ್ಕೆ ಮಧುಗಿರಿ ತತ್ತರ

12:56 PM May 30, 2019 | Naveen |

ಮಧುಗಿರಿ ಸತೀಶ್‌
ಮಧುಗಿರಿ:
ಕಳೆದ ಹಲವು ದಶಕಗಳಿಂದ ಮಧುಗಿರಿ ಸತತ ಬರಗಾಲವನ್ನು ಎದುರಿಸುತ್ತಿದೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರ ಬದುಕು ಸಂಕಷ್ಟದಲ್ಲಿದೆ. ಕೆಲಸವಿಲ್ಲದೇ ನಿರುದ್ಯೋಗ ಸಮಸ್ಯೆ ಯುವಕರನ್ನು ಕಾಡುತ್ತಿದೆ. ತಾಲೂಕಿಗೆ ಶಾಶ್ವತ ನೀರಾವರಿ ಹಾಗೂ ಉದ್ಯೋಗ ಕಲ್ಪಿಸುವ ಯೋಜನೆ ಗಳನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸ ಬೇಕಾ ಗಿದೆ. ಮಧುಗಿರಿ ತಾಲೂಕು 23 ಸಾವಿರ ರೈತರನ್ನು ಒಳ ಗೊಂಡ ಹಾಗೂ ಮಳೆಯಾಶ್ರಿತ ತಾಲೂಕು. ಇಲ್ಲಿನ ಪ್ರಮುಖ ಬೆಳೆ ಶೇಂಗಾ. ಇತರೆ ನೀರಿನ ಆಸರೆಯಿಂದ ಜೋಳ, ಭತ್ತ, ರಾಗಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದು, ಕೆಲವು ಕಡೆ ತೋಟ ಗಾರಿಕೆ ಬೆಳೆ ಗಳಾದ ರೇಷ್ಮೆ, ಮಾವು,ಹುಣಸೆ, ಬಾಳೆ, ತೆಂಗು ಹಾಗೂ ಅಡಕೆಯ ಜೊತೆ ವೀಳ್ಯದೆಲೆ ಯನ್ನು ಬೆಳೆಯುತ್ತಿ ದ್ದಾರೆ. ಆದರೆ, ಕಳೆದ ದಶಕ ಗಳಿಂದಲೂ ಮಳೆಯಿಲ್ಲ ಹಾಗೂ ಯಾವುದೇ ನೀರಿನ ಆಸರೆ ಯಿಲ್ಲದೇ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

Advertisement

3 ನದಿಗಳಿದ್ದರೂ ನೀರು ಹರಿ ಯುತ್ತಿಲ್ಲ: ತಾಲೂಕಿನಲ್ಲಿ ಮೂರು ಪ್ರಮುಖ ನದಿಗಳಿದ್ದರೂ ಮಾನವನ ದುರಾಸೆಗೆ ಯಾವುದೇ ನದಿಗಳು ಹರಿಯದೇ ದಶಕ ಗಳು ಕಳೆದಿದೆ. ಇದರಿಂದ ಅಂತರ್ಜಲ ಕುಸಿದಿದೆ. ಇಂತಹ ಸಂದರ್ಭದಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಪ್ರತಿ ಗ್ರಾಮಗಳಲ್ಲಿಯೂ ಕುಡಿ ಯಲು ನೀರನ್ನು ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ. ಜನತೆಗೆ ಸಾಧ್ಯವಾದಷ್ಟು ಬಳಕೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ 6 ಹೋಬಳಿಯಿದ್ದು, 39 ಗ್ರಾಪಂಗಳಿವೆ. ಇದರಲ್ಲಿ 15 ಸೂಕ್ಷ್ಮ ಗ್ರಾಪಂಗಳಲ್ಲಿ 58 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ನೀಡಲಾಗುತ್ತಿದೆ. ಉಳಿದಂತೆ ಅಷ್ಟಾಗಿ ಸಮಸ್ಯೆ ಇಲ್ಲ ಎನ್ನುತ್ತಾರೆ ತಾಪಂ ಇಒ ನಂದಿನಿ.

ಮಳೆಯಾದರೆ ಮಾತ್ರ ನೀರು ಸಂಗ್ರಹ: ತುಮಕೂರು ಜಿಲ್ಲೆಯಲ್ಲೇ ಮಧುಗಿರಿಯಲ್ಲಿ ಅತಿಹೆಚ್ಚು ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪೂರೈಸಲಾಗುತ್ತಿದೆ. ಜಿಪಂ ವ್ಯಾಪ್ತಿಯ 145 ಕೆರೆಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿ ತಾಲೂಕಿನಲ್ಲಿ 56 ಕೆರೆಗಳಿದೆ. ಕಳೆದ ಬಾರಿ ಕೆರೆ ಸಂಜೀವಿನಿ ಯೋಜನೆಯಡಿ ತಲಾ 4 ಲಕ್ಷದಂತೆ 10 ಕೆರೆಗಳ ಅಭಿವೃದ್ಧಿ ಮಾಡಲಾಗಿತ್ತು. ಈಗ ಮಳೆ ಯಾದರೆ ಮಾತ್ರ ನೀರನ್ನು ಉತ್ತಮ ರೀತಿಯಲ್ಲಿ ಸಂಗ್ರಹ ಮಾಡಬಹುದಾಗಿದೆ.

ಜಲ ಮೂಲಗಳ ರಕ್ಷಣೆಗೆ ಮುಂದಾಗಿ: ಕಳೆದ ವರ್ಷಕ್ಕಿಂತ ಈ ಬಾರಿ ಮಧುಗಿರಿಯಲ್ಲಿ ಒಟ್ಟು 231 ಕೊಳವೆ ಬಾವಿ ಕೊರೆಸಲಾಗಿದೆ. ಅದರಲ್ಲಿ 139ರಲ್ಲಿ ನೀರು ಬಂದಿದೆ. ಉಳಿದ 92 ವಿಫ‌ಲವಾಗಿದೆ.

ನೀರು ಸಿಕ್ಕಿದ 124 ಕೊಳವೆ ಬಾವಿಗೆ ಮೋಟಾರ್‌ ಪಂಪ್‌ ಅಳವಡಿಸಿದ್ದು, ಉಳಿದವು ಪ್ರಗತಿಯಲ್ಲಿವೆ. ನೀರಿನ ಲಭ್ಯತೆಯಿಲ್ಲದ ಕಡೆಗಳಲ್ಲಿ 41 ಖಾಸಗಿ ಕೊಳವೆ ಬಾವಿಯನ್ನು ಬಳಸಿಕೊಂಡು ಸಮರ್ಪಕವಾಗಿ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡ ಲಾಗುತ್ತಿದೆ. ತಾಲೂಕಿನಲ್ಲಿ ಉತ್ತಮ ಮಳೆಯಾದರೆ ಮಾತ್ರ ಕೊಳವೆ ಬಾವಿಗಳಲ್ಲಿ ನೀರು ಬರಲಿದೆ. ಅದಕ್ಕಾಗಿ ಜಲ ಮೂಲಗಳ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹೊನ್ನೇಶಪ್ಪ ಮಾಹಿತಿ ನೀಡಿದರು.

Advertisement

ನೀರನ್ನು ಮಿತವಾಗಿ ಬಳಸಿ: ಕೆರೆ- ತಲಪರಿಗೆಗಳನ್ನು ಉಳಿಸಿದರೆ ಹಾಗೂ ಜಲ ಮರುಪೂರಣ ಕಾರ್ಯ ಕ್ರಮ ಯಶಸ್ವಿಯಾದರೆ ಮಾತ್ರ ಮುಂದಿನ ದಿನಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಸಿಗಲಿದೆ. ಅದಕ್ಕಾಗಿ ಪಟ್ಟಣದಲ್ಲಿ ಹಲವು ಕೊಳವೆ ಬಾವಿಗಳಿಗೆ ಜಲಮರು ಪೂರಣ ಮಾಡಲಾಗಿದೆ. ಪಟ್ಟಣದ ಪುರಸಭೆ ಕಟ್ಟಡವನ್ನು ಮಳೆಕೋಯ್ಲು ಪದ್ಧತಿಗೆ ತರಲಾಗಿದೆ. ಮಾದರಿ ಪುರಸಭೆ ಮಾಡುವತ್ತ ಆಡಳಿತ ನೀಡಲು ಮುಂದಾಗಿದ್ದೇವೆ. ನೀರನ್ನು ಮಿತವಾಗಿ ಬಳಸಬೇಕು. ನೀರಿನ ಬೆಲೆಯನ್ನು ತಿಳಿದು ವ್ಯರ್ಥ ಮಾಡದೇ ಬಳಸ ಬೇಕಿದೆ. ಇದನ್ನು ಜನತೆ ಜಾಗ್ರತೆಯಿಂದ ಪಾಲಿಸಬೇಕು ಎನ್ನುತ್ತಾರೆ ಮುಖ್ಯಾಧಿಕಾರಿ ಲೋಹಿತ್‌.

ರೈತ ಸ್ನೇಹಿ ಮೇವು ಬ್ಯಾಂಕ್‌: ತಾಲೂಕಿನಲ್ಲಿ ಮೇವು ಬ್ಯಾಂಕ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ. ರೈತ ಸ್ನೇಹಿ ಯಾಗಿದೆ. ಈಗಾಗಲೇ 6 ಮೇವು ಬ್ಯಾಂಕ್‌ ತೆರೆದಿದ್ದು, 45 ಸಾವಿರ ಜಾನುವಾರುಗಳಿಗೆ 4700 ಟನ್‌ ಮೇವು ವಿತರಿಸಲಾಗಿದೆ. ತಾಲೂಕಿನಲ್ಲಿ 1ನೇ ಸುತ್ತಿನ ಮೇವು ವಿತರಣೆ ಮುಗಿದಿದ್ದು, 2ನೇ ಸುತ್ತಿನಲ್ಲಿ ವಿತರಿಸ ಲಾಗುತ್ತಿದೆ. ರೈತರ ಮನೆ ಬಾಗಿಲಿಗೆ ಮೇವು ನೀಡ ಲಾಗುತ್ತಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳೇ ಶ್ಲಾಘಿಸಿದ್ದು, ಮೇವು ವಿತರಣೆಯಲ್ಲಿ ಮಧುಗಿರಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್‌ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಮುಖವಾಗಿ ಕುಡಿಯುವ ನೀರು ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೇವಲ ಉದ್ಯೋಗವನ್ನು ತರಬಹುದಾಗಿದೆ. ಆದರೆ, ನೀರನ್ನು ತರಲಾರರು. ಅದನ್ನು ನಿಸರ್ಗವೇ ನೀಡಬೇಕಿದೆ.

ಎಲ್ಲರೂ ಈ ಪ್ರಕೃತಿ ಹಾಗೂ ಪರಿಸರದ ಉಳಿವಿಗೆ ಮುಂದಾದರೆ ಮಾತ್ರ ನಮಗೆ ನೀರಿನ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ಅದನ್ನು ಪಾಲಸಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭೀಕರ ಬರ ತಾಲೂಕಿನ ಎಲ್ಲವನ್ನು ಬರಿದು ಮಾಡುವುದರಲ್ಲಿ ಸಂದೇಹವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next