Advertisement

ಮದಕರಿ ನಾಯಕನಿಗೆ ಅಡ್ಡಿಯಾಗುತ್ತಾ ಗಡ್ಡ?

05:43 AM Jan 29, 2019 | |

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ದರ್ಶನ್‌ ಅಭಿನಯಿಸಲಿರುವ “ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಸಂಕ್ರಾಂತಿ ದಿನದಂದು ಪೂಜೆ ನಡೆಯಬೇಕಿತ್ತು. ಆದರೆ ಆಗಲಿಲ್ಲ. ಮತ್ತೆ ಯಾವಾಗ ಎಂಬ ಪ್ರಶ್ನೆಗೆ ಫೆಬ್ರವರಿ 16 ಎಂಬ ಉತ್ತರ ಬರುತ್ತಿದೆ. ಅಂದು ದರ್ಶನ್‌ ಅವರ ಹುಟ್ಟು ಹಬ್ಬ. ಹಾಗಾಗಿ, ಅಂದು “ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಬೇಕು ಎಂಬ ತಯಾರಿ ಜೋರಾಗಿದೆ.

Advertisement

ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಸೇರಿದಂತೆ ಇನ್ನಿತರೆ ಕೆಲಸಗಳು ಭರದಿಂದಲೇ ಸಾಗುತ್ತಿವೆ. ಒಂದು ಮೂಲದ ಪ್ರಕಾರ ಚಿತ್ರದ ಅವಧಿ ಮೂರು ಗಂಟೆಗೂ ಹೆಚ್ಚು ಕಾಲ ಬರುತ್ತಿದೆ ಎನ್ನಲಾಗಿದ್ದು, ಅದನ್ನು ಇನ್ನಷ್ಟು ಕಡಿಮೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಚಿತ್ರದ ಅವಧಿಯನ್ನು ಸುಮಾರು 2.30 ಗಂಟೆಗೆ ಇಳಿಸಬೇಕೆಂಬ ನಿಟ್ಟಿನಲ್ಲಿ ಯಾವ ದೃಶ್ಯಗಳಿರಬೇಕು, ಯಾವೆಲ್ಲಾ ಸಂಭಾಷಣೆ ಬೇಕು, ಬೇಡ ಎಂಬ ಬಗ್ಗೆಯೂ ಬಿರುಸಿನ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಇಂತಹ ಐತಿಹಾಸಿಕ ಚಿತ್ರಗಳಿಗೆ ಅವಧಿ ಮುಖ್ಯವಾಗಲ್ಲ ಎಂಬ ಮಾತು ಸಹ ಚಿತ್ರತಂಡದಲ್ಲಿ ಕೇಳಿಬಂದಿದ್ದರೂ, ಪ್ರೇಕ್ಷಕರ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಅವಧಿಯನ್ನು ಕಡಿಮೆಗೊಳಿಸುವ ಸಲುವಾಗಿ, ಸ್ಕ್ರಿಪ್ಟ್ನಲ್ಲಿ ಮತ್ತೂಂದು ಸಲ ಕಣ್ಣಾಡಿಸುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ಈಗಾಗಲೇ “ಗಂಡುಗಲಿ ಮದಕರಿ ನಾಯಕ’ ಚಿತ್ರದ ಸ್ಕ್ರಿಪ್ಟ್ಗೆ ಏಳೆಂಟು ವರ್ಷನ್‌ ಕೆಲಸ ನಡೆದಿದ್ದು, ಇದೀಗ ಫೈನಲ್‌ ವರ್ಷನ್‌ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ.

ಮೂರು ಗಂಟೆಗೂ ಹೆಚ್ಚು ಕಾಲ ಬರುವ ಸ್ಕ್ರಿಪ್ಟ್ ಅನ್ನು, ಕಡಿಮೆಗೊಳಿಸುವ ಸವಾಲು ಇದೀಗ ಬರಹಗಾರರ ಮೇಲಿದೆ. ಐತಿಹಾಸಿಕ ಚಿತ್ರದಲ್ಲಿ ಪ್ರತಿಯೊಂದು ದೃಶ್ಯವೂ ಮುಖ್ಯ. ಅದರಲ್ಲಿ ಯಾವುದು ಬೇಕು, ಯಾವುದು ಬೇಡ ಎಂಬುದನ್ನು ನಿರ್ಧರಿಸುವುದು ಸಹ ಅಷ್ಟೇ ಕಷ್ಟ. ಆದರೂ, ಬರಹಗಾರರು ಆ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿ, ಕೊನೆಯ ಹಂತದ ಸ್ಕ್ರಿಪ್ಟ್ನಲ್ಲಿ ಬಿಜಿಯಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನು, ಚಿತ್ರ ಶುರುವಿಗೆ ಬೇರೆ ಯಾವ ಕಾರಣಗಳೂ ಇಲ್ಲ. ಆದರೂ ಕೊಂಚ ತಡವಾಗಲು ಎರಡು ಕಾರಣಗಳಿವೆ ಎನ್ನಲಾಗಿದೆ. ಒಂದು ಹೆಚ್ಚಾಗುತ್ತಿರುವ ಅವಧಿಯನ್ನು ಸ್ಕ್ರಿಪ್ಟ್ನಲ್ಲಿ ಕಡಿಮೆಗೊಳಿಸುವುದು ಇನ್ನೊಂದು ಇದು ಐತಿಹಾಸಿಕ ಚಿತ್ರ ಆಗಿರುವುದರಿಂದ ಮದಕರಿ ನಾಯಕನಿಗೆ ಇಲ್ಲಿ ಮೀಸೆಯೇ ಹೈಲೈಟ್‌. ದರ್ಶನ್‌ ಈಗ “ರಾಬರ್ಟ್‌’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದಾರೆ. ಆ ಚಿತ್ರದ ಒಂದು ಗೆಟಪ್‌ನಲ್ಲಿ ದರ್ಶನ್‌ ಗಡ್ಡ ಬಿಟ್ಟಿರುವ ಹಿನ್ನೆಲೆಯಲ್ಲಿ “ಗಂಡುಗಲಿ ಮದಕರಿ ನಾಯಕ’ ಚಿತ್ರ ಅಂದುಕೊಂಡಂತೆ ಶುರುವಾಗುತ್ತಿಲ್ಲ ಎಂಬ ಕಾರಣವೂ ಇದೆ.

Advertisement

ಹಾಗೆ ನೋಡಿದರೆ, ದರ್ಶನ್‌ “ರಾಬರ್ಟ್‌’ಗಾಗಿ ಗಡ್ಡ ಬಿಟ್ಟಿದ್ದು, ಅದನ್ನು ತೆಗೆಯುವವರೆಗೂ ಚಿತ್ರ ಶುರುವಾದಂತೆ ಕಾಣಲ್ಲ. ಚಿತ್ರದುರ್ಗ ಕೋಟೆಯನ್ನು ಆಳಿದ 13 ಜನ ಪಾಳೇಗಾರರ ಪೈಕಿ ಒಬ್ಬ ಮದಕರಿ ನಾಯಕ ಮಾತ್ರ ಗಡ್ಡ ಬಿಟ್ಟಿದ್ದರು ಎಂಬ ಮಾಹಿತಿ ಇದೆ. ಅವರನ್ನು ಗಡ್ಡದ ಮದಕರಿನಾಯಕ ಎಂದೇ ಕರೆಯಲಾಗುತ್ತಿತ್ತು. ಆದರೆ, “ಗಂಡುಗಲಿ ಮದಕರಿ ನಾಯಕ’ನಿಗೆ ಮೀಸೆಯೇ ಮುಖ್ಯ.

ದರ್ಶನ್‌ ಗಡ್ಡ ತೆಗೆದ ನಂತರವಷ್ಟೇ ಚಿತ್ರೀಕರಣ. ಆದರೂ, ಚಿತ್ರತಂಡ ಹೈದರಾಲಿ ದೃಶ್ಯಗಳನ್ನು ಚಿತ್ರೀಕರಿಸುವ ಯೋಜನೆಯನ್ನೂ ಹಾಕಿಕೊಂಡಿದೆಯಾದರೂ, ಆ ದೃಶ್ಯದಲ್ಲೂ “ಗಂಡುಗಲಿ ಮದಕರಿ ನಾಯಕ’ ಇರುತ್ತಾರೆ ಎನ್ನಲಾಗಿದೆ. ಆದರೆ, ಆ ದೃಶ್ಯಕ್ಕೆ ದರ್ಶನ್‌ ಅವರ “ಗಡ್ಡ’ ಅಡ್ಡಿಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಅವರು ಹೈದರಾಲಿ ದೃಶ್ಯಗಳನ್ನು ಚಿತ್ರೀಕರಿಸುವ ಸಲುವಾಗಿ, ಹೈದರಾಬಾದ್‌ನ ರಾಮೋಜಿ ಫಿಲ್ಮ್ಸಿಟಿಗೆ ಭೇಟಿ ಕೊಟ್ಟು ಅರಮನೆ ಸೆಟ್‌ ನೋಡಿ ಬಂದಿದ್ದಾರೆ.

ಅದರೊಂದಿಗೆ ಮುಂಬೈಗೂ ಹೋಗಿ ಈ ಹಿಂದೆ ಹಿಂದಿಯ “ಬಾಜಿರಾವ್‌ ಮಸ್ತಾನಿ’ ಚಿತ್ರೀಕರಣಗೊಂಡಿದ್ದ ಸೆಟ್‌ಗೂ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ, “ಗಂಡುಗಲಿ ಮದಕರಿ ನಾಯಕ’ ಮಹತ್ವಾಕಾಂಕ್ಷೆಯ ಚಿತ್ರ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ಬಹು ನಿರೀಕ್ಷೆಯ ಚಿತ್ರವೂ ಹೌದು. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಈ ಚಿತ್ರ ದೊಡ್ಡ ಚಾಲೆಂಜ್‌. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ಈಗಾಗಲೇ ಚಿತ್ರಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಚಿತ್ರೀಕರಣಕ್ಕೆ ಹೋಗಲು ಅಣಿಯಾಗಿದ್ದಾರೆ. ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ. 

ಕಳೆದ ವರ್ಷ ದರ್ಶನ್‌ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಈ ವರ್ಷ ಸಾಲು ಸಾಲು ಚಿತ್ರಗಳಿವೆ. “ಯಜಮಾನ’ ರಿಲೀಸ್‌ಗೆ ರೆಡಿಯಾಗಿದೆ. “ಕುರುಕ್ಷೇತ್ರ’ ಕೂಡ ಬರಲಿದೆ. ಅದರ ಬೆನ್ನ ಹಿಂದೆ “ಒಡೆಯ’ ಬಂದರೂ ಅಚ್ಚರಿ ಇಲ್ಲ. “ರಾಬರ್ಟ್‌’ ಕೂಡ ಅಷ್ಟೊತ್ತಿಗೆ ರೆಡಿಯಾಗುವುದು ಪಕ್ಕಾ. ಎಲ್ಲವೂ ಸರಿಯಾಗಿ ನಡೆದರೆ, “ಗಂಡುಗಲಿ ಮದಕರಿ ನಾಯಕ’ ಕೂಡ ಈ ವರ್ಷದ ಅಂತ್ಯದಲ್ಲಿ ಬಂದರೂ ಅಚ್ಚರಿ ಇಲ್ಲ. ಒಟ್ಟಾರೆ, ದರ್ಶನ್‌ ಅಭಿಮಾನಿಗಳು ಈ ವರ್ಷ “ಡಿಬಾಸ್‌ ಫಿಲ್ಮ್ ಫೆಸ್ಟಿವಲ್‌’ ಆಚರಿಸಿದರೆ ಅಚ್ಚರಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next