Advertisement

ಹುಚ್ಚು ಮಂಗಗಳ ಕಾಟ

10:28 AM Jul 09, 2018 | |

ವಾಡಿ: ಪಟ್ಟಣ ಸಮೀಪದ ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕಪಿ ಚೇಷ್ಟೆ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನಗಳೆಯುತ್ತಿದ್ದಾರೆ. ಭೀಮಾನದಿ ದಂಡೆಯಲ್ಲಿರುವ ಚಾಮನೂರಿಗೆ ಅರಣ್ಯ ಪ್ರದೇಶದ ನಂಟಿದ್ದು, ಮಂಗಗಳು ಗ್ರಾಮ ಪ್ರವೇಶಿಸಿ ವಾಸಿಸುತ್ತಿವೆ. ಮರಗಳಿಂದ ಮರಕ್ಕೆ ಮತ್ತು ಮಾಳಿಗೆಯಿಂದ ಮಾಳಿಗೆಗಳಿಗೆ ಜಿಗಿದು ಜನರ ನೆಮ್ಮದಿ ಕಸಿದಿವೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಎನ್ನೆದೆ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸುತ್ತಿರುವ ಮಂಗಗಳು ಭಯದ ವಾತಾವರಣ ಸೃಷ್ಟಿಸಿವೆ.

Advertisement

ಗ್ರಾಮದ ಶ್ರೀ ಆಂಜನೇಯ ದೇವಸ್ಥಾನ ಆವರಣದ ಮರಗಳ ಮೇಲೆ ಕುಳಿತಿಕೊಳ್ಳುವ ಮಂಗಗಳು ದೇವಸ್ಥಾನಕ್ಕೆ ಬರುವವರನ್ನು ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ದಾಳಿ ನಡೆಸುತ್ತಿವೆ. ಕೈ ಕಾಲುಗಳಿಗೆ ಬಾಯಿ ಹಾಕಿ ಮಾಂಸ ಕಂಡವನ್ನು ಹೀರುತ್ತಿವೆ.
 
ಹುಚ್ಚಾಟದ ಮಂಗಗಳ ದಾಳಿಗೆ ತುತ್ತಾದವರು ರಕ್ತಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೆಲವರು ಗಂಭೀರ ಗಾಯಗೊಂಡು ವಾರಗಟ್ಟಲೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
 
ಗ್ರಾಮದ ನೀಲಪ್ಪ ಪೂಜಾರಿ ಎಂಬುವವರ ಮೇಲೆ ಶನಿವಾರ ಸಂಜೆ ಆಕ್ರಮಣ ಮಾಡಿರುವ ಮಂಗವೊಂದು ಹಿಗ್ಗಾಮುಗ್ಗಾ ಕಚ್ಚಿ ಗಾಯಗೊಳಿಸಿದೆ. ಕಾಲಿಗೆ ಬಾಯಿ ಹಾಕಿ ನರಗಳನ್ನು ತುಂಡು ಮಾಡಿದೆ. ತೀವ್ರ ರಕ್ತ ಸ್ರಾವದಿಂದ ನರಳುತ್ತಿದ್ದ ನೀಲಪ್ಪ ಪೂಜಾರಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೀಗೆ ಪದೇಪದೇ ಮಂಗಗಳು ಗ್ರಾಮಸ್ಥರ ಮೇಲೆರಗಿ ಗಾಯಗೊಳಿಸುತ್ತಿವೆ. ಸಣ್ಣಪುಟ್ಟ ಗಾಯಗಳಾದವರು ವಾಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಬೀಡುಬಿಟ್ಟಿರುವ ಹತ್ತಾರು ಮಂಗಗಳಲ್ಲಿ, ಒಂದು ಮಂಗ ಹುಚ್ಚಾಟ ನಡೆಸುತ್ತಿದೆ.

ಇದರಿಂದ ಆತಂಕ ಹೆಚ್ಚಿದೆ. ಮಕ್ಕಳು ಮನೆ ಹೊರಗೆ ಬರಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಪಂ ಸದಸ್ಯೆ ಚಂದಮ್ಮ ಮಲ್ಲಿಕಾರ್ಜುನ ಮಾಲಗತ್ತಿ ಕಳವರಣ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಂಡು, ಮಂಗಗಳಿಂದ ಉಂಟಾಗಿರುವ ಆತಂಕ ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next