Advertisement

ಆಪ್ತರಂಗದಲ್ಲಿ ಮ್ಯಾಕ್‌ಬೆತ್‌ ಜರ್ನಿ

03:50 AM Mar 24, 2017 | |

ಜಗದ್ವಂದ್ಯ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ ರಚಿಸಿದ ನಾಟಕಗಳಲ್ಲೆಲ್ಲ ಅತಿಹೆಚ್ಚು ಪ್ರಯೋಗಗಳಿಗೆ ಗುರಿಯಾದ ನಾಟಕವೆಂದರೆ ಮ್ಯಾಕ್‌ಬೆತ್‌. ಅದನ್ನು ಭಾಷಾಂತರಗೊಳಿಸಿ, ರೂಪಾಂತರಗೊಳಿಸಿ, ಅಳವಡಿಸಿ- ಹೀಗೆ ವಿವಿಧ ರೂಪಗಳಲ್ಲಿ, ಭಾಷೆಗಳಲ್ಲಿ ಜಗತ್ತಿನಾದ್ಯಂತ ಸುಪ್ರಸಿದ್ಧ ನಿರ್ದೇಶಕರನೇಕರು ಪ್ರದರ್ಶನಕ್ಕಿಟ್ಟಿರುವುದು ಆ ನಾಟಕಕ್ಕೆ ಸಂದ ಬಹುಮತಿಯೆ.

Advertisement

ಜರ್ನಿ ಥಿಯೇಟರ್‌ ಗ್ರೂಪ್‌ ಎಂಬ ಹೊಸ ತಂಡವು ಯುವ ಸಮುದಾಯ ವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೂಲಕ ಹೊಸ ಜರ್ನಿ ಪ್ರಾರಂಭಿಸಿದ್ದು ಮಂಗಳೂರಿಗೆ ಸಂಬಂಧಿಸಿದ ಹಾಗೆ ಬಹುಮುಖ್ಯ ಬೆಳವಣಿಗೆ. ಒಂದು ಕಾಲದಲ್ಲಿ ನಾಟಕ ಕ್ಷೇತ್ರಕ್ಕೆ ಆಶ್ರಯತಾಣವಾಗಿದ್ದ ಸಂತ ಅಲೋಶಿಯಸ್‌ ಕಾಲೇಜಿನ ಸಭಾಂಗಣ ದಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು, ಅಧ್ಯಾಪಕರನ್ನು ಹಾಗೂ ಇತರ ರಂಗಾಸಕ್ತರನ್ನು ಒಗ್ಗೂಡಿಸಿ ಉದಯೋನ್ಮುಖ ರಂಗನಿರ್ದೇಶಕ ವಿದ್ದು ಉಚ್ಚಿಲ್‌ ಮ್ಯಾಕ್‌ಬೆತ್ತನ್ನು ಹೊಸ ದೃಷ್ಟಿಕೋನದೊಂದಿಗೆ ಕಟ್ಟಿಕೊಟ್ಟಿದ್ದಾರೆ. 

ಆಪ್ತರಂಗಭೂಮಿಯ ತಂತ್ರಗಾರಿಕೆ ಇಲ್ಲಿ ಸೊಗಸಾಗಿ ಮೇಳೈಸಿದೆ. ಪ್ರೇಕ್ಷಕರ ನಡುವೆ ಇಬ್ಬದಿಯಲ್ಲಿ ಪುಟ್ಟ ವೇದಿಕೆಗಳು. ಅಲ್ಲಿಂದ ಇಬ್ಬದಿಯ ಹೊರಬಾಗಿಲುಗಳಿಗೆ ಸಂಪರ್ಕ. ಮುಖ್ಯವೇದಿಕೆಯೆಂದರೆ ಪ್ರೇಕ್ಷಕರ ಮುಂದಿನ ಒಂದಷ್ಟು ಜಾಗ. ಅಲ್ಲಿ ಮೂರು ಪ್ಲಾಟ್‌ ಫಾರ್ಮ್ಗಳು. ಹಿನ್ನೆಲೆಯಲ್ಲಿ ಕಪ್ಪು ಪರದೆ, ಬಾಗಿಲು. ಅಲ್ಲಿ ತೂಗುವ ಏಳು -ಬೀಳುಗಳ ಸಂಕೇತ.  ಕೇವಲ ಏಳು ನಟರು! ಇಪ್ಪತ್ತಕ್ಕೂ ಹೆಚ್ಚು ಪಾತ್ರಗಳು! ಅದರಲ್ಲೂ ಮೂವರು ಮ್ಯಾಕ್‌ಬೆತ್ತರು! ಯಾವಾತ ರಕ್ತದ ಸಂಕೇತವಾದ ಕೆಂಪು ಬಟ್ಟೆಯನ್ನು ಕೈಗೆ ಸುತ್ತಿಕೊಂಡು ಮ್ಯಾಕ್‌ಬೆತನ ಸಂಭಾಷಣೆ ಹೇಳುತ್ತಾನೋ ಆಗ ಅವ ಸಾಚಾ. ಉಳಿದವರು ಅದೇ ಹೊತ್ತಿಗೆ ಬೇರೆ ಪಾತ್ರಗಳಾಗಿಬಿಡುತ್ತಾರೆ. ಒಂದೆರಡು ಬಾರಿ ಕೈಗೆ ವಸ್ತ್ರ ಕಟ್ಟುವುದು ಮರೆತು ಪಾತ್ರಗಳನ್ನು ಅರ್ಥೈಸಿಕೊಳ್ಳಲು ತುಸು ಕಷ್ಟವಾಯಿತು!

ನಾಟಕ ಎದ್ದು ನಿಲ್ಲುವುದು ಲೇಡಿ ಮ್ಯಾಕ್‌ಬೆತ್ತಿನ ಪ್ರವೇಶದ ಬಳಿಕ! ಡಂಕನ್‌ನ ಕೊಲೆ ಮಾಡುವಂತೆ ಮ್ಯಾಕ್‌ಬೆತನ್ನು ಪ್ರೇರೇಪಿಸುವಲ್ಲಿಂದ ಮೊದಲ್ಗೊಂಡು ಮೂವರು ಮ್ಯಾಕ್‌ಬೆತರೂ ತಮ್ಮ ತಮ್ಮ ಸರದಿಗಳನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಅದರಲ್ಲೂ ಡಂಕನ್‌ನ ಕೊಲೆ ಮಾಡಿದ ಮರುಕ್ಷಣದ ಮ್ಯಾಕ್‌ಬೆತ್‌, ಬ್ಯಾಂಕೋನ ಪ್ರೇತವನ್ನು ಕಂಡು ತತ್ತರಿಸುವ ಮ್ಯಾಕ್‌ಬೆತ್‌- ಅಸಾಧಾರಣ ಪ್ರತಿಭೆ ತೋರಿದ್ದಾರೆ. ಲೇಡಿ ಮ್ಯಾಕ್‌ಬೆತ್‌ (ಭವ್ಯಾ ಶೆಟ್ಟಿ) ತನ್ನ ಕೈಗಳನ್ನು ತಿಕ್ಕುತ್ತಾ ರಕ್ತದ ಕಲೆಯನ್ನು ನೀಗಿಸಲು ಪಾಡು ಪಡುತ್ತಾ “ಅರೇಬಿಯಾದ ಸುಗಂಧ ದ್ರವ್ಯಗಳು ಈ ನನ್ನ ಪುಟ್ಟ ಕೈಗಳನ್ನು ತೊಳೆಯಲಾರವೆ?’ ಎನ್ನುತ್ತಾ ಇಡಿಯ ವೇದಿಕೆ ಯನ್ನು ಆವರಿಸುವ ಸಂದರ್ಭ ಅವಿಸ್ಮರಣೀಯ. ಪಾಪ ಪ್ರಜ್ಞೆ ಎಷ್ಟೊಂದು ಕಾಡಬಲ್ಲುದು ಎಂಬುದನ್ನು ಅದು ನಿರೂಪಿಸುತ್ತದೆ. ಕೈಯಲ್ಲಿ ಕ್ಯಾಂಡಲ್‌ ಹಿಡಿದುಕೊಂಡು ನಿದ್ದೆಯಲ್ಲಿ ನಡೆದು ಬರುವ ದೃಶ್ಯ ನಿರೀಕ್ಷಿತವಾಗಿದ್ದರೂ ಕೈಬಿಡಲಾಗಿದೆ! 

ವೇದಿಕೆಯಲ್ಲಿ ಡಂಕನ್‌ ನಿದ್ರಿಸುವ ದೃಶ್ಯವನ್ನು ತೋರಿಸಲೆಂದು ಇಬ್ಬರು ಮ್ಯಾಕ್‌ಬೆತರು ಆತನ ಮಂಚವನ್ನು ವೇದಿಕೆಗೆ ತರುತ್ತಾರೆ. ಒಬ್ಟಾತ ಕೊಲ್ಲುವ ಮುಖ್ಯ ಮ್ಯಾಕ್‌ಬೆತ್‌! ಅಂತೆಯೇ ಬ್ಯಾಂಕೋನ ಪ್ರೇತವನ್ನು ಅಟ್ಟಣಿಗೆಯಲ್ಲಿ ಹೊತ್ತುಕೊಂಡು ಇಬ್ಬರು ಮ್ಯಾಕ್‌ಬೆತ್‌ ಪಾತ್ರಧಾರಿಗಳು ಸಂಚರಿಸುತ್ತಾರೆ!

Advertisement

ಇದು ಹೇಗೆ ಸರಿ ಎಂದು ಯಾರಾದರೂ ಪ್ರಶ್ನಿಸ ಬಹುದು. ಡಂಕನ್‌ನನ್ನು ಇರಿದು ಕೊಲ್ಲುವ ಮುಖ್ಯ ಮ್ಯಾಕ್‌ಬೆತ್‌ಗೆ ಉಳಿದಿಬ್ಬರು ಪೂರಕ ಪಾತ್ರಗಳು. ಅವರಲ್ಲೂ ಕ್ಷೀಣರೂಪದಲ್ಲಿ ಮ್ಯಾಕ್‌ಬೆತ್‌ ಹರಿದಾಡುತ್ತಿರು ತ್ತಾನೆ. ಮಾಟಗಾತಿಯರಾದ ಇಬ್ಬರು ಮ್ಯಾಕ್‌ಬೆತರು ಮುಖ್ಯ ಮ್ಯಾಕ್‌ಬೆತನನ್ನು ಆಮಿಷಕ್ಕೆ ಸೆಳೆಯುವಾಗ ಆ ಮಾಟಗಾತಿಯರಲ್ಲೂ ಕ್ಷೀಣರೂಪದ ಮ್ಯಾಕ್‌ಬೆತ್‌ ಅಂತರ್ಗತರಾಗಿರುತ್ತಾರೆ. ಮುಖ್ಯ ಮ್ಯಾಕ್‌ಬೆತನ ತಪ್ಪನ್ನು ಪುಣ್ಯ ಪಾಪ, ಪಾಪ ಪುಣ್ಯ ಎಂದು ಸಾರುವಾಗ, ಮ್ಯಾಕ್‌ಬೆತ್‌ ನಿದ್ದೆಯನ್ನು ಕೊಂದಿದ್ದಾನೆ, ಅವನಿನ್ನು ನಿದ್ರಿಸಲಾರ ಎಂದು ಘೋಷಿಸುವಾಗ ಆ ಎರಡು ಮ್ಯಾಕ್‌ಬೆತ್‌ರು ಕೂಡ ಮುಖ್ಯ ಮ್ಯಾಕ್‌ಬೆತ್‌ನ ಅಂತರ್‌ಧ್ವನಿಯೇ ಆಗಿಬಿಡುತ್ತಾರೆ. ಬ್ಯಾಂಕೋನ ವಿರುದ್ಧದ ಪಿತೂರಿಯಲ್ಲಾಗಲೀ ಲೇಡಿ ಮ್ಯಾಕ್‌ಬೆತನ್ನು ಸಂತೈಸ‌ುವ ಸಂದರ್ಭದಲ್ಲಾಗಲೀ ಉಳಿದ ಮ್ಯಾಕ್‌ಬೆತರು ಆಯಾ ಸಂದರ್ಭದ ಸಮರ್ಥಕರಾಗಿ ಕಾಣಿಸುತ್ತಾರೆ. ಪ್ರೇಕ್ಷಕರಿಗೆ ಹಾಗೆ ಕಾಣಿಸಿದರೆ ನಿರ್ದೇಶಕ ತನ್ನ ಪ್ರಯೋಗದಲ್ಲಿ ಗೆದ್ದಂತೆಯೇ. ಮಾತ್ರವಲ್ಲದೆ ಏಳು ಮಂದಿಯಲ್ಲಿಯೇ ಇಷ್ಟೊಂದು ಪಾತ್ರಗಳ ನಿರ್ವಹಣೆ ಮಾಡಬೇಕಾಗಿದ್ದರೆ ಒಬ್ಟಾತ ಮ್ಯಾಕ್‌ಬೆತ್‌ ತನ್ನ ಮಾತುಗಳನ್ನು ಹೇಳುತ್ತಿರುವಾಗ ಇನ್ನೊಬ್ಟಾತ ಮ್ಯಾಕ್‌ಬೆತ್‌ ಪಾತ್ರ ಬದಲಿಸಿ ಮತ್ತೂಂದು ಜಾಗದಲ್ಲಿ ಕಾಣಿಸಿಕೊಳ್ಳುವುದು ಸುಲಭದ ಮ್ಯಾಜಿಕ್ಕಲ್ಲ! 

ಡಂಕನ್‌ನ ಮೆರವಣಿಗೆ, ಮಾಟಗಾತಿಯರ ಪ್ರವೇಶ, ಬ್ಯಾಂಕೋನ ಪ್ರೇತದ ಸಂಚಾರ, ರಕ್ತವನ್ನು ತಿಕ್ಕಿ ಒರಸುವ ಲೇಡಿ ಮ್ಯಾಕ್‌ಬೆತಳ ಉದ್ದನೆಯ ಕೆಂಪು ಸೆರಗು-  ಹೊಸತನದಿಂದ ಕೂಡಿದ್ದುವು. ಯುದ್ಧದ ಸಂದರ್ಭವನ್ನು ಇನ್ನಷ್ಟು ಸಹಜ ಎಂಬಂತೆ ಪ್ರದರ್ಶಿಸಬಹುದಿತ್ತು. 

ಪುಟ್ಟ ಸಭಾಂಗಣವನ್ನು ಆವರಿಸುವಷ್ಟು ಧ್ವನಿಯನ್ನು ಎಲ್ಲ ಪಾತ್ರಗಳು ಸಮಾನ ವಾಗಿ ಎತ್ತಿಕೊಳ್ಳದ್ದು ಒಂದು ಕೊರತೆಯಾಗಿ ಕಾಣಿಸಿತು. ಇಲ್ಲಿ ಬೇಕಾಗಿದ್ದುದು ಬೀದಿ ನಾಟಕದ ತಂತ್ರ. ರಂಗದ ಬಳಕೆಯೂ ಅದೇ ತರಹ ಇತ್ತು. ಅಗತ್ಯಕ್ಕೆ ತಕ್ಕಷ್ಟು ಪಾಶ್ಚಿಮಾತ್ಯ ಸಂಗೀತವೂ ಬಳಕೆಯಾಗಿ ಪ್ರೇಕ್ಷಕರನ್ನು ಅನ್ಯಲೋಕದತ್ತ ಒಯ್ಯುವಲ್ಲಿ ಸಫ‌ಲವಾಯಿತು. ರಂಗದ ಇಕ್ಕೆಲಗಳಿಗೆ ಪಾತ್ರಗಳು ಕ್ಷಿಪ್ರಗತಿ ಯಿಂದ ಬರುತ್ತಿದ್ದುದರಿಂದಲೇ ಇರಬೇಕು; ಬೆಳಕು ಅಲ್ಲಿಗೆ ತಡವಾಗಿ ಹರಿಯುತ್ತಿತ್ತು.  

ಅಳಿವಿನಂಚಿಗೆ ಸಾಗುತ್ತಿದೆಯೇ ಎಂದು ಭೀತಿ ಹುಟ್ಟಿಸಿದ ಮಂಗಳೂರಿನ ರಂಗಚೈತನ್ಯ ಮತ್ತೂಮ್ಮೆ ಆಶಾದಾಯಕ ರೂಪದಲ್ಲಿ ಗರಿಗೆದರಿ ನರ್ತಿಸತೊಡಗಿದೆ.   

ನಾ. ದಾಮೋದರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next