Advertisement

“ಮಾ ತುಬಾ ಸಲಾಮ್‌’, ಕಣ್ಣಿಲ್ಲದ ಹುಡುಗಿಗೆ ಸಮಾಜದ ಕಣ್ಣಾಗುವಾಸೆ!

11:10 AM Feb 08, 2017 | Harsha Rao |

ಈಕೆ ತುಬಾ ತಬುಸ್ಸುಂ. ಬಿಹಾರದವಳು. ಈ ಲೋಕದ ಎಲ್ಲಾ ಹೆಣ್ಣುಮಕ್ಕಳಿಗೂ ರೋಲ್‌ ಮಾಡೆಲ್‌ ಆಗುವಂಥಾ ವ್ಯಕ್ತಿತ್ವ ಈಕೆಯದು. ಆ ವರವನ್ನು ತುಬಾಳ ತಂದೆ ಮೊಹಮ್ಮದ್‌ ಅರೀಫ್ ಅವರ ಮಾತುಗಳಲ್ಲೇ ವಿವರಿಸುವುದಾದರೆ-

Advertisement

ಬಿಹಾರ ರಾಜ್ಯದ ರಾಜಧಾನಿ ಪಾಟ್ನಾ. ಅಲ್ಲಿಂದ 150 ಕಿ.ಮೀ. ದೂರದಲ್ಲಿ ಸಿವಾನ್‌  ಜಿಲ್ಲೆಯಿದೆ. ಈ ಜಿಲ್ಲೆಯ ಒಂದು ಭಾಗವಾಗಿ ಹರಿಹನ್ಸ್‌ ಎಂಬ ಹಳ್ಳಿಯೊಂದಿದೆ. ದೇಶದ ಉಳಿದೆಲ್ಲ ಹಳ್ಳಿಗಳಲ್ಲಿ ಇರುವಂತೆಯೇ ಈ ಊರಿನಲ್ಲಿ ಕೂಡ ಐದಾರು ಜಾತಿಯ ಜನರಿದ್ದಾರೆ. ನಾವು ವಾಸರುವುದೂ ಈ ಊರಿನಲ್ಲಿಯೇ. ನಾನು, ತಾಲೂಕು ಕೋರ್ಟಿನಲ್ಲಿ ಅರ್ಜಿ ಬರೆದುಕೊಡುವ ಕೆಲಸ ಮಾಡುತ್ತೇನೆ. ನನ್ನ ಪತ್ನಿ ಪರ್ವೀನ್‌ ಅಂಗನವಾಡಿಯೊಂದರಲ್ಲಿ ಕೆಲಸ ಮಾಡುತ್ತಾಳೆ. ನಮಗೆ ಮೂವರು ಮಕ್ಕಳು. ತುಬಾಳೇ ದೊಡ್ಡವಳು. 

ಇದು, 2012ರ ಮಾತು. ತುಬಾ ಆಗ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಎಸ್ಸೆಸ್ಸೆಲ್ಸಿಗೆ ಪಬ್ಲಿಕ್‌ ಪರೀಕ್ಷೆಯಯಿದೆ ಎಂಬ ಆ ಕಾರಣಕ್ಕೆ ತುಬಾ ಕೂಡ ಗಾಬರಿಯಾಗಿದ್ದಳು. “ಗಣಿತ ಮತ್ತು ವಿಜಾnನದ ವಿಷಯಗಳು ಕಷ್ಟ ಅನಿಸುತ್ತಿವೆ ಬಾಬಾ. ಟ್ಯೂಶನ್‌ಗೆ ಹೋಗ್ತೀನೆ’ ಅಂದಿದ್ದಳು. ಬೆಳಗಿನ ಜಾವ 4 ಗಂಟೆಗೇ ಎದ್ದು ಟ್ಯೂಶನ್‌ಗೆ ಹೋಗುವುದು. ಅಲ್ಲಿಂದ ಬಂದು ಗಡಿಬಿಡಿಯಲ್ಲೇ ತಯಾರಾಗಿ ಶಾಲೆಗೆ ಹೋಗುವುದು ಅವಳ ದಿನಚರಿಯಾಗಿತ್ತು. ತರಗತಿಗೆ ಫ‌ಸ್ಟ್‌ ಬರಬೇಕು. ಟೀಚರ್‌ಗಳಿಂದ ವೆರಿಗುಡ್‌ ಅನ್ನಿಸಿಕೊಳ್ಳಬೇಕು ಎಂದೆಲ್ಲಾ ತುಬಾಗೆ ಆಸೆಯಿತ್ತು. 

ಅವತ್ತು 2012ರ ಸೆಪ್ಟೆಂಬರ್‌ 26, ಬುಧವಾರ. ಮುಂಜಾನೆಗೇ ಎದ್ದ ತುಬಾ, ಎಂದಿನಂತೆ ಟ್ಯೂಶನ್‌ಗೆ ಹೊರಟಳು. ಮನೆುಂದ ಇಪ್ಪತ್ತು ಹೆಜ್ಜೆ ದೂರವೂಹೋಗಿಲ್ಲವೇನೋ; ಅಷ್ಟರಲ್ಲಿಯೇ ಆಕೆ ಗಾಬರಿಯಿಂದ, ನೋವಿನಿಂದ- “ಅಮ್ಮಾ, ಅಪ್ಪಾ$…’ ಎಂದು ಜೋರಾಗಿ ಚೀರಿಕೊಂಡಿದ್ದು ಕೇಳಿಸಿತು. ಆಗಿನ್ನೂ ಪೂರ್ತಿಯಾಗಿ ಬೆಳಗಾಗಿರಲಿಲ್ಲ. ಬಹುಶಃ ಯಾವುದೋ ಕಲ್ಲನ್ನು ಎಡ ಬಿದ್ದಿರಬೇಕು ಅನ್ನಿಸಿತು. ಅವಳ ದನಿ ಬಂದ ಕಡೆಗೇ ಓಡಿಹೋದೆ. ಒಂದು ಜಾಗದಲ್ಲಿ ತುಬಾ ಬಿದ್ದು ಒದ್ದಾಡುತ್ತಿದ್ದಳು. ನೋವಿನಿಂದ ಚೀರುತ್ತಿದ್ದಳು. ಓಡೋಡುತ್ತಾ ಹೋಗಿ, 

“ಏನಾಯ್ತಮ್ಮಾ?’ಎಂದು ಕೇಳಿದೆ. ಆ ಹುಡುಗರು ಕುದಿಯುವ ಇರುವ ನೀರನ್ನು ಎರಚಿ ಓಡಿಹೋದ್ರು ಅಪ್ಪಾ$. ತುಂಬಾ ಉರೀತಿದೆ ಎಂದು ಮತ್ತೆ ಚೀರಿಕೊಂಡಳು. ಹಣೆಗೋ, ಕಪೋಲಕ್ಕೋ ಏಟು ಬಿದ್ದಿರಬಹುದಾ ಎಂದು ಪರೀಕ್ಷಿಸಲು ಹಣೆಯನ್ನೊಮ್ಮೆ ಮುಟ್ಟಿದೆ. ಆ ಭಾಗದ ಚರ್ಮ ಪೂರ್ತಿಯಾಗಿ ಕಿತ್ತುಹೋಗಿರುವುದು ಗೊತ್ತಾಯಿತು. ಆಗಲೇ
ಸೂಕ್ಷ್ಮವಾಗಿ ಗಮನಿಸಿದೆ. ನನ್ನ ಮಗಳ ದೇಹದಿಂದ ಹೊಗೆ ಬರತೊಡಗಿತ್ತು. ಓಹ್‌, ಮಗಳು ಆಸಿಡ್‌ ದಾಳಿಗೆ ತುತ್ತಾಗಿದ್ದಾಳೆ ಎಂದು ಗೊತ್ತಾಗಿದ್ದೇ ಆಗ. ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದರೆ ತುಂಬಾ ತೊಂದರೆ ಆಗಬಹುದೇನೋ ಅನ್ನಿಸಿತು. ತಕ್ಷಣವೇ ಅನಾಮತ್ತಾಗಿ ಮಗಳನ್ನು ಎತ್ತಿಕೊಂಡು ಬಸ್‌ ನಿಲ್ದಾಣದ ಕಡೆಗೆ ಓಡತೊಡಗಿದೆ. 

Advertisement

ಆಗಷ್ಟೇ ಬೆಳಗಾಗುತ್ತಿತ್ತು ಅಂದೆನಲ್ಲವೆ? ಆ ಹೊತ್ತಿನಲ್ಲಿ ಬಸ್‌ ಸಿಗುವುದಾದರೂ ಹೇಗೆ? ತಕ್ಷಣವೇ ಆಟೋ ಮಾಡಿಕೊಂಡು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಬಂದೆವು. 

ಆಸಿಡ್‌ ದಾಳಿಯಿಂದಾಗಿ ತುಬಾಳ ದೇಹದ ಶೇ. 70ರಷ್ಟು ಭಾಗ ಸುಟ್ಟುಹೋಗಿತ್ತು. ಆ ಗಾಯಕ್ಕೆ ಚಿಕಿತ್ಸೆ ನೀಡುವಂಥ ತಜ್ಞ ವೈದ್ಯರೂ ಅಲ್ಲಿರಲಿಲ್ಲ. ಹಾಗಾಗಿ ತಕ್ಷಣವೇ ಪಾಟ್ನಾದ ಆಸ್ಪತ್ರೆಗೆ ತುಬಾಳನ್ನು ಕರೆದೊಯ್ದೆವು. ಎರಡು ವಾರಗಳ ನಂತರ, ಅಲ್ಲಿಯ ವೈದ್ಯರು ಕೂಡ ಇಲ್ಲೇ ಉಳಿದರೆ ನಿನ್ನ ಮಗಳ ಪ್ರಾಣ ಉಳಿಸುವುದು ಕಷ್ಟ. ತಕ್ಷಣವೇ ದಿಲ್ಲಿಯ ಸಫಾªರ್‌ ಜಂಗ್‌ ಆಸ್ಪತ್ರೆಗೆ ಹೋಗಿ ಎಂದರು. ಹಾಗೇ ಮಾಡಿದೆವು. 

ಈ ನಡುವೆಯೇ ತಿಳಿದುಬಂದ ಸಂಗತಿಯೆಂದರೆ, ತುಬಾಳ ಮೇಲೆ ಆ್ಯಸಿಡ್‌ ಎರಚಿದಾತ ಅವಳದ್ದೇ ಶಾಲೆಯ ಹುಡುಗ. ಎರಡು ತಿಂಗಳ ಹಿಂದಷ್ಟೇ ಅವನು ತುಬಾಳಿಗೆ ಪೊ›ಪೋಸ್‌ ಮಾಡಲು ಹೋಗಿದ್ದನಂತೆ.

 “ನಾನ್‌ಸೆನ್ಸ್‌, ಇದೆಲ್ಲಾ ನನಗೆ ಇಷ್ಟ ಆಗೋದಿಲ್ಲ. ನಡಿಯಾಚೆ’ ಎಂದು ತುಬಾ ಛೀಮಾರಿ ಹಾಕಿದ್ದಳಂತೆ. ಅದನ್ನೇ ಅವಮಾನ ಎಂದು ಭಾವಿಸಿದ ಆ ಪುಂಡ, ತನ್ನ ನಾಲ್ವರು ಗೆಳೆಯರೊಂದಿಗೆ ಸೇರಿಕೊಂಡು ತುಬಾಳ ಚಲನವಲನವನ್ನು ಗಮನಿಸಿದ್ದಾನೆ. ಅದು ಹೇಗೋ ಎರಡು ಲೀಟರಿನಷ್ಟು ಆ್ಯಸಿಡ್‌ ಸಂಗ್ರಸಿದ್ದಾನೆ. ಅದನ್ನು ಒಂದು ಬಾಟಲಿಯಲ್ಲಿ ತುಂಬಿಕೊಂಡು ಬಂದು ತುಬಾಳ ಮುಖಕ್ಕೆ ಎರಚಿಬಿಟ್ಟಿದ್ದಾನೆ. ಆ ದುರಾತ್ಮನ ಕ್ರೌರ್ಯ ಹೇಗಿತ್ತೆಂದರೆ- ಈ ಹುಡುಗಿ, ಅಮ್ಮಾ, ಅಪ್ಪಾ- ಉರಿ, ಉರಿ, ಕಾಪಾಡಿ ಎಂದು ಚೀರುತ್ತಾ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದರೆ, ಉಳಿದಿದ್ದ ಆಸಿಡ್ಡನ್ನು ಕುತ್ತಿಗೆ ಮತ್ತು ಬೆನ್ನಿನ ಮೇಲೆಲ್ಲಾ ಸುರಿದು ಓಡಿಹೋಗಿದ್ದಾನೆ!

ಆಸಿಡ್‌ ದಾಳಿಯ ತೀವ್ರತೆಗೆ, ತುಬಾಳ ಮುಖದ ಚರ್ಮವೆಲ್ಲಾ ಚಪಾತಿ ಹಿಟ್ಟಿನಂತೆ ಮುದ್ದೆಯಾಗಿಹೋಯಿತು. ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೂ ಹೆಚ್ಚು ಆಸಿಡ್‌ ಬಿದ್ದಿದ್ದರಿಂದ ಚರ್ಮ ಮಾತ್ರವಲ್ಲ, ಮೂಳೆಗಳೂ ಸುಟ್ಟುಹೋದವು. ಒಂದು ಕಣ್ಣು ಶಾಶ್ವತವಾಗಿ ಮುಚ್ಚಿಹೋಯಿತು. ಕೈ ಮತ್ತು ಕಾಲಿನ ಬೆರಳುಗಳು ಒಂದಕ್ಕೊಂದು ಅಂಟಿಕೊಂಡವು. ಕೆಲವೇ ದಿನಗಳಲ್ಲಿ ಆ ಗಾಯದಲ್ಲಿ ಕೀವು ತುಂಬಿಕೊಂಡು ಇನ್‌ಫೆಕ್ಷನ್‌ ಆಯಿತು. ಆದರೆ, ಮುಖವೇ ಇಲ್ಲ ಎನ್ನುವಂಥ ಸ್ಥಿತಿಗೆ ಬಂದರೂ, ತುಬಾ ಉಸಿರಾಡುವುದನ್ನು ನಿಲ್ಲಿಸಿರಲಿಲ್ಲ. ಇದನ್ನು ಗಮನಿಸಿದ ವೈದ್ಯರು, ಈ ಹುಡುಗಿಯ ಜೀವ ಉಳಿಸಲು ರಿಸ್ಕ್ ತಗೊಳ್ಳೋಣ ಎಂದು ನಿರ್ಧರಿಸಿದರು.

ಮೊದಲು ಆಕೆಯ ಮುಖಕ್ಕೆ ಒಂದು shape ಕೊಡಬೇಕಿತ್ತು. ತುಟಿಗಳು, ಮೂಗಿನ ಹೊಳ್ಳೆ ಹಾಗೂ ದವಡೆ ಅಂಟಿಕೊಳ್ಳದಂತೆ ಮಾಡಬೇಕಿತ್ತು. ಬಾಯಿಯ ಎರಡೂ ಬದಿಗೆ ಕ್ಲಿಪ್‌ ಥರದ ಸಾಧನವನ್ನು ಫಿಕ್ಸ್‌ ಮಾಡಿದ ವೈದ್ಯರು ಮುಖಕ್ಕೆ ಒಂದು shape ಕೊಡುವಲ್ಲಿ ಯಶಸ್ವಿಯಾದರು. ನಂತರ ತುಬಾಳ ತೊಡೆ, ಭುಜ ಹಾಗೂ ಹೊಟ್ಟೆಯ ಭಾಗದಿಂದ ಮೃದುವಾದ ಚರ್ಮವನ್ನು ತೆಗೆದು, ಅದನ್ನು ದೇಹದ ವಿವಿಧ ಜಾಗಕ್ಕೆ ಅಂಟಿಸಿದರು. ಆ ಮೂಲಕ, ಸುಟ್ಟ ಗಾಯದಿಂದ ಇನ್‌ಫೆಕ್ಷನ್‌ ಉಂಟಾಗುವುದನ್ನು ತಕ್ಕಮಟ್ಟಿಗೆ ತಡೆದರು.  ನಂತರದ ದಿನಗಳಲ್ಲಿ 15 ವ‌ರ್ಷದ ಈ ಬಾಲೆಯ ದೇಹ ಒಂದೊಂದೇ ಆಪರೇಷನ್‌ಗೆ ಒಳಗಾಗುತ್ತಾ ಹೋಯಿತು. 6 ತಿಂಗಳ ಅವಧಿಯಲ್ಲಿ ಎಂಟು ಆಪರೇಷನ್‌ ಮಾಡಿದ ವೈದ್ಯರು ಕಡೆಗೊಂದು ದಿನ ಅರಿಫ್ನನ್ನು ಕರೆದು- ‘ನಿನ್ನ ಮಗಳನ್ನು ಊರಿಗೆ ಕರ್ಕೊಂಡು ಹೋಗು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಚೆಕಪ್‌ಗೆ ಬರಲೇಬೇಕು. ಇನ್ನೂ ಆರೇಳು ಆಪರೇಷನ್‌ಗಳು ಆಗಬೇಕಿದೆ’ ಅಂದರು.

ಭಯ ಹುಟ್ಟಿಸುವಂಥ, ವಿಕಾರ ಅನ್ನಿಸುವಂಥ ರೂಪಿನೊಂದಿಗೆ ಊರಿಗೆ ಬಂದ ತಕ್ಷಣ ತುಬಾ ಮಾಡಿದ ಕೆಲಸವೆಂದರೆ ಗೆಳತಿಯರನ್ನು ಕರೆಸಿಕೊಂಡಿದ್ದು. ಸಾವಿನೊಂದಿಗೆ ಕ್ಷಣಕ್ಷಣವೂ ಸೆಣಸುತ್ತಿದ್ದಾಗ ಕೂಡ ಈ ಹುಡುಗಿ ಶಾಲೆಯ ಬಗ್ಗೆಯೇ ಯೋಚಿಸುತ್ತಿದ್ದಳು. ಅವಳ ಜೊತೆಗಿದ್ದವರೆಲ್ಲ ಈ ವೇಳೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಅವರಿಂದ ನೋಟ್ಸ್‌ಗಳನ್ನು ಪಡೆದುಕೊಂಡ ತುಬಾ, ಓದಲು ಆರಂಭಿಸಿದಳು. ತಂದೆಯನ್ನು ಜೊತೆ ಮಾಡಿಕೊಂಡು ಶಾಲೆಗೂ ಹೋದಳು. ಈ ಹುಡುಗಿಯ ಆಸಕ್ತಿ ಕಂಡು ಶಿಕ್ಷಕರು ಬೆರಗಾದರು. ಮುತುವರ್ಜಿ ವಹಿಸಿ ಪಾಠ ಹೇಳಿಕೊಟ್ಟರು. ಇಷ್ಟಾದರೂ, ಅಭ್ಯಾಸ ಮಾಡುವುದು ತುಬಾಗೆ ಸುಲಭವಿರಲಿಲ್ಲ. ಏಕೆಂದರೆ, ಆಸಿಡ್‌ ಬಿದ್ದ ಕಾರಣದಿಂದ ಒಂದು ಕಣ್ಣು ಸಂಪೂರ್ಣವಾಗಿ “ಮಾಯ’ವಾಗಿತ್ತು. ಉಳಿದಿದ್ದ ಒಂದೇ ಕಣ್ಣಿಂದ ಆಕೆ ಓದಬೇಕಿತ್ತು. ಇಪ್ಪತ್ತು ನಿಮಿಷ ಸತತವಾಗಿ ಓದಿದರೆ ಸಾಕು; ಆಕೆಯ ಕಣ್ಣಿಂದ ನೀರು ಸುರಿಯುತ್ತಿತ್ತು. 

ಹೆಚ್ಚಿನ ಬಿಸಿಲೇನಾದರೂ ಬಿದ್ದರೆ ಅಷ್ಟಕ್ಕೇ ಕಣ್ಣಿನ ಸುತ್ತಮುತ್ತಲಿನ ಚರ್ಮ ಸುಕ್ಕುಗಟ್ಟಿ ಅಂಟಿಕೊಂಡುಬಿಡುತ್ತಿತ್ತು. ಅಷ್ಟೇ ಅಲ್ಲ, ಆಕಸ್ಮಿಕವಾಗಿ ಬಿಕ್ಕಳಿಕೆ ಶುರುವಾದರೆ, ಆಗ ಕೆನ್ನೆಯ ಮಾಂಸಖಂಡಗಳು ಅದುರಿ, ಆ ನೋವೂ ಕಣ್ಣಿಗೆ ತೊಂದರೆ ಕೊಡುತ್ತಿತ್ತು. ಇಷ್ಟೆಲ್ಲ ತೊಂದರೆಗಳಿದ್ದರೂ ತುಬಾ ಓದುವುದನ್ನು ನಿಲ್ಲಿಸಲಿಲ್ಲ.

ತನ್ನಿಂದ ಓದಲು ಆಗುತ್ತಿಲ್ಲ ಅನ್ನಿಸಿದಾಗ ತಂದೆಗೆ, ತಂಗಿಯರಿಗೆ, ಗೆಳತಿಯರಿಗೆ ಪುಸ್ತಕ ಕೊಟ್ಟು, ಅವರಿಂದ ಓದಿಸಿ ವಿಷಯ ತಿಳಿದುಕೊಂಡಳು. ಕೈಬೆರಳುಗಳಿಗೆ ತೆಳುವಾದ ಹತ್ತಿಬಟ್ಟೆ ಸುತ್ತಿಸಿಕೊಂಡು ಬರೆಯಲು ಅಭ್ಯಾಸ ಮಾಡಿಕೊಂಡಳು. 

ಆನಂತರ ಗಟ್ಟಿ ನಿರ್ಧಾರದೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಮೊದಲ ದರ್ಜೆಯಲ್ಲಿ ಪಾಸಾದಳು!

ದೇಹದ ಶೇ. 70ರಷ್ಟು ಭಾಗ ಸುಟ್ಟುಹೋಗಿದ್ದರೂ, ಒಂಟಿಕಣ್ಣಿನ ಸಹಾಯದಿಂದಲೇ ಓದಿ, ಡಿಸ್ಟಿಂಕ್ಷನ್‌ ಪಡೆದ ತುಬಾಳ ಸಾಧನೆ ಬಿಹಾರದಲ್ಲಿ ದೊಡ್ಡ ಸುದ್ದಿಯಾಯಿತು. ಈಕೆ ಪಿಯುಸಿಗೆ ಸೇರಲು ಹೋದಾಗ, ನೋಟ್ಸ್‌ ಬರೆದುಕೊಡಲು, ಉಚಿತವಾಗಿ ಪಾಠ ಹೇಳಲು ಹಲವರು ಮುಂದೆ ಬಂದರು.

ಪರಿಣಾಮ, ಈಗಾಗಲೇ ಶೇ. 70 ಅಂಕಗಳೊಂದಿಗೆ ಪಿಯೂಸಿ ಮುಗಿಸಿರುವ ತುಬಾ, ಈ ಬಾರಿ ಎಂಬಿಬಿಎಸ್‌ಗೆ ಸಿಇಟಿ ಬರೆಯಲು ದೆಹಲಿಯ ಒಂದು ಹಾಸ್ಟೆಲ್‌ನಲ್ಲಿದ್ದುಕೊಂಡೇ ಅಭ್ಯಾಸ ಮಾಡುತ್ತಿದ್ದಾಳೆ.

ಈಗಲೂ ಸಾವಿರ ಸಂಕಟಗಳ ನಡುವೆಯೇ ತುಬಾ ಬದುಕುತ್ತಿದ್ದಾಳೆ. ಮುಖ್ಯವಾಗಿ, ಆರ್ಥಿಕ ಸಮಸ್ಯೆ ಅವಳ ಕುಟುಂಬವನ್ನು ಹೈರಾಣು ಮಾಡಿದೆ. ಸುಟ್ಟುಹೋಗಿರುವ ಚರ್ಮ ಸುಕ್ಕುಗಟ್ಟದಂತೆ ತಡೆಯುವ ಕ್ರೀಮ್‌, ಆಯಿಂಟ್‌ಮೆಂಟ್‌, ಮಾತ್ರೆಗಳಿಗೆ, ಆಸ್ಪತ್ರೆಯ ಚಿಕಿತ್ಸೆಗೆಂದು ಲಕ್ಷಾಂತರ ರೂಪಾಯಿ ಖರ್ಚು ಬೀಳುತ್ತಿದೆ.

ಕಷ್ಟಕಾಲಕ್ಕೆಂದು ಕೂಡಿಟ್ಟಿದ್ದ ಹಣವನ್ನೇ ಮೊಹಮ್ಮದ್‌ ಅರಿಫ್ ಮಗಳ ಚಿಕಿತ್ಸೆಗೆಂದೇ ಖರ್ಚು ಮಾಡಿದ್ದಾರೆ. ಕೈಲಿ ನಯಾಪೈಸೆಯೂ ಇಲ್ಲಅನ್ನಿಸಿದಾಗ ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ಚಿಕಿತ್ಸೆಗೆಂದು ಪ್ರತಿಬಾರಿ
ದೆಹಲಿಗೆ ಹೊರಟಾಗಲೂ ಎದೆ ನಡುಗುತ್ತದೆ. ಕಾರಣ, ತುಬಾಳಿಗೆ ಜನರಲ್‌ ಕಂಪಾರ್ಟ್‌ಮೆಂಟ್‌ನ ಹವಾ ಒಗ್ಗುವುದಿಲ್ಲ. ಪ್ರತಿಬಾರಿಯೂ ಎಸಿ ಕೋಚ್‌ನಲ್ಲಿಯೇ ಕರೆದೊಯ್ಯಬೇಕು. ಅದು ಬಹಳ ದುಬಾರಿ. ಇಷ್ಟಲ್ಲದೆ ಆಸ್ಪತ್ರೆಯಲ್ಲಿ ಆಪರೇಷನ್‌ ನಡೆವ ಸಂದರ್ಭದಲ್ಲೆಲ್ಲ- ‘ನನ್ನ ಮಗಳ ಜೀವಕ್ಕೆ ಏನೇ ತೊಂದರೆಯಾದರೂ ಅದೆಲ್ಲಕ್ಕೂ ನಾನೇ ಜವಾಬ್ದಾರ’ ಎಂಬ ಪತ್ರಕ್ಕೆ ಸಹಿ ಮಾಡಬೇಕು. ಹೀಗೆ ಬರೆದುಕೊಡುವಾಗೆಲ್ಲಾ ಕೈ ನಡುಗುತ್ತದೆ. ಮಗಳನ್ನು ಜೀವಂತವಾಗಿ ನೋಡುವುದು ಇದೇ ಕಡೆಯ ಸಲವೇನೋ ಅನ್ನಿಸಿಬಿಡುತ್ತದೆ.
ದೇವರ ಮೇಲೆ ಭಾರ ಹಾಕಿ ಸಹಿ ಮಾಡುತ್ತೇನೆ…’ ಅನ್ನುತ್ತಾರೆ ಅರೀಫ್.
***
“ವಿಪರ್ಯಾಸವೇನು ಗೊತ್ತೇ? ನನ್ನ ಮೇಲೆ ಆ್ಯಸಿಡ್‌ ದಾಳಿ ನಡೆಸಿದವನಿಗೆ ಉಗ್ರ ಶಿಕ್ಷೆಯೇನೂ ಆಗಿಲ್ಲ. ಅವನೊಂದಿಗೆ ಕೈ ಜೋಡಿಸಿದ್ದ ಇಬ್ಬರಂತೂ “ಅಪ್ರಾಪ್ತರು’ ಎಂದು ಸರ್ಟಿಫಿಕೇಟ್‌ ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡರು. ನನ್ನ ಜೀವದೊಂದಿಗೆ ಚೆಲ್ಲಾಟವಾಡಿದ ಕೇಡಿಗರಿಗೆ ಶಿಕ್ಷೆಯಾಗಲಿಲ್ಲ ಎಂಬ ಸಂಕಟವೊಂದು ನನ್ನೊಳಗೆ ಹಾಗೇ ಉಳಿದಿದೆ. 
ನನ್ನ ಮೇಲೆ ಆಸಿಡ್‌ ದಾಳಿ ನಡೆದು ಐದು ವರ್ಷ ಆಗೋಯ್ತು. ಐದು ವರ್ಷದ ಹಿಂದೆ ನಾನು ಮುದ್ದಾಗಿ ಕಾಣಿಸ್ತಿದ್ದೆ. ಅದಕ್ಕೆ ಸಾಕ್ಷಿಯಾಗಿ, ನನ್ನ ಫೋಟೋ ಇದೆ.

ಎಸ್ಸೆಸ್ಸೆಲ್ಸಿಯ ಪಬ್ಲಿಕ್‌ ಪರೀಕ್ಷೆಗೆಂದು ತೆಗೆಸಿಕೊಂಡಿದ್ದ ಫೋಟೋ ಅದು. ಆದರೆ ಇವತ್ತು ನಾನು ವಿಕಾರ ಅನ್ನಿಸುವಂಥ, ಭಯ ಹುಟ್ಟಿಸುವಂಥ ರೂಪು ಹೊಂದಿದೀನಿ. ಅಷ್ಟೇ ಅಲ್ಲ, ನನ್ನ ಕೆನ್ನೆ, ಮೂಗು, ಹಲ್ಲು, ದವಡೆ ಯಾವುದೂ “ಪರ್‌ಫೆಕ್ಟ್’ ಅನ್ನುವಂತೆ ಇಲ್ಲ. ಅದೇ ಕಾರಣದಿಂದ ಕಳೆದ ಐದು ವರ್ಷಗಳಲ್ಲಿ ಗಂಜಿಯಂಥ ಆಹಾರವನ್ನು ಬಿಟ್ಟು ಬೇರೇನನ್ನೂ ನಾನು ಸೇವಿಸಿಲ್ಲ. ಕೊಲ್ಲುವವರು ಇರುವ ಜಾಗದಲ್ಲಿ ಕಾಯುವವರೂ ಇರುತ್ತಾರೆ ಎಂಬುದು ಮತ್ತೆ ಮತ್ತೆ ನನ್ನ ಅನುಭವಕ್ಕೆ ಬಂದಿದೆ. ತುಬಾಳನ್ನು ಅಮೆರಿಕಕ್ಕೆ ಕರೆದೊಯ್ದು ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿದರೆ ಹೇಗೆ ಎಂದೆಲ್ಲಾ ಕೆಲವು ಸಹೃದಯಿಗಳು ಮಾತಾಡಿರುವುದೂ ನನಗೆ ಗೊತ್ತಾಗಿದೆ. ಆದರೆ, ಅದೆಲ್ಲಾ ಆಗದ-ಹೋಗದ ಕೆಲಸ. ಏಕೆಂದರೆ ನನ್ನ ಪೋಷಕರು ಬಡವರು. ಈವರೆಗೂ ಆಗಿರುವ ಖರ್ಚು ಭರಿಸುವ ಶಕ್ತಿಯೇ ಅವರಿಗಿಲ್ಲ. ಅದು ಗೊತ್ತಿದ್ದೂ ನಾನು ಅಮೆರಿಕ ಯಾತ್ರೆಯ ಕನಸು ಕಾಣಲಾರೆ. ಈ ವರ್ಷ ಸಿಇಟಿ ಬರೆದು ಎಂಬಿಬಿಎಸ್‌ ಸೇರಲೇಬೇಕು. ಒಂಟಿಕಣ್ಣಿನ ಸಹಾಯದಿಂದಲೇ ಚೆನ್ನಾಗಿ ಓದಿ ಕಣ್ಣಿನ ಸ್ಪೆಷಲಿಸ್ಟ್‌ ಆಗಬೇಕು. ಅದೊಂದು ಸಾಧನೆ  ಮಾಡೇ ಮಾಡ್ತೇನೆ…’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ ತುಬಾ.

” ಬಾಳಹೋರಾಟದಲ್ಲಿ ನಾನೆಂದೂ ಸೋಲುವುದಿಲ್ಲ’ ಎನ್ನುವ  ತುಬಾಗೆ, ಇನ್ನೂ ಏಳೆಂಟು ಆಪರೇಷನ್‌ಗಳು ನಡೆಯಬೇಕಿದೆ. ಅದಕ್ಕಾಗಿ ಲಕ್ಷಾಂತರ ರುಪಾಯಿನ ಖರ್ಚೂ ಇದೆ. ಅಕಸ್ಮಾತ್‌, ತುಬಾಳಂಥ ನತದೃಷ್ಟ ಸಾಧಕಿ  ನೆರೆಹೊರೆಯಲ್ಲೋ, ಪಕ್ಕದ ಊರಿನಲ್ಲೋ ಇದ್ದಿದ್ದರೆ, ವಿಷಯ ತಿಳಿದ ತಕ್ಷಣವೇ ಆಕೆಯ ನೆರವಿಗೆ ಧಾವಿಸುತ್ತಿದ್ದಿರಿ ತಾನೆ? ಈಗಲೂ ಹಾಗೆಯೇ ಅಂದುಕೊಳ್ಳಿ. ಇಲ್ಲಿ ಬ್ಯಾಂಕ್‌ ಅಕೌಂಟಿನ ವಿವರವಿದೆ.
ಸಾಧ್ಯವಾದರೆ ಸಹಾಯ ಮಾಡಿ. ಇಲ್ಲವಾದರೆ- ತುಬಾಳಿಗೆ ಒಳಿತಾಗಲಿ ಎಂದು ಪ್ರಾರ್ಥನೆಯನ್ನಾದರೂ ಮಾಡಿ.

ಏಕೆಂದರೆ, ಪ್ರಾರ್ಥನೆಗೆ ಜೀವ ಉಳಿಸುವ ಶಕ್ತಿ ಇದೆ!

Tuba Tabassum
account number : 32814363327
State Bank of India
Rajendra path, siwan, Bihar
CIF NO.: 86607643365
Branch code : 187
IFSC Code : SBIN0000187

Advertisement

Udayavani is now on Telegram. Click here to join our channel and stay updated with the latest news.

Next