ಕೋಲ್ಕತಾ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಬೆಂಗಾವಲು ಪಡೆ ವಾಹನದ ಮಲೆ ಇಟ್ಟಿಗೆ ಮತ್ತು ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರು ಜಖಂಗೊಂಡಿರುವ ಘಟನೆ ಕೋಲ್ಕತಾದ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ಗುರುವಾರ(ಡಿಸೆಂಬರ್ 10, 2020) ನಡೆದಿದೆ.
ಕಲ್ಲು, ಇಟ್ಟಿಗೆ ತೂರಾಟದಿಂದ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು, ಇದು ಮಮತಾ ಬ್ಯಾನರ್ಜಿ ಸರ್ಕಾರದ ಭದ್ರತಾ ವೈಫಲ್ಯ ಎಂದು ಬಿಜೆಪಿ ಆರೋಪಿಸಿದೆ. ಇದೊಂದು ಪ್ರಾಯೋಜಿತ ಹಿಂಸಾಚಾರವಾಗಿದ್ದು, ಈ ಬಗ್ಗೆ ವರದಿ ನೀಡುವಂತೆ ಕೇಂದ್ರ ಗೃಹ ಸಚಿವ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಘಟನೆ ಬಗ್ಗೆ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರ ಜನತೆಗೆ ಉತ್ತರ ನೀಡಬೇಕು ಎಂದು ಶಾ ಹೇಳಿದರು.
ಇದನ್ನೂ ಓದಿ:ಆಯುಷ್ ವೈದ್ಯರಿಗೆ ಸರ್ಜರಿ ಅವಕಾಶ ಬೇಡ: ಡಿ.11ರಂದು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್?
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಬೆಂಗಾವಲು ಪಡೆ ಕಾರಿನ ಮೇಲೆ ಇಟ್ಟಿಗೆಗಳಿಂದ ದಾಳಿ ಮಾಡಿ, ಕಾರಿನ ಗಾಜು ಪುಡಿಯಾಗಿರುವ ದೃಶ್ಯ ಸೆರೆಯಾಗಿದೆ. ಮಾತೆ ದುರ್ಗೆಯ ಆಶೀರ್ವಾದದಿಂದ ನಾನು ಘಟನೆ ನಡೆಯುವ ಮೊದಲೇ ಸಭೆಗೆ ಬಂದು ಸೇರಿಕೊಂಡಿದ್ದರಿಂದ ಅಪಾಯದಿಂದ ಪಾರಾಗಿರುವುದಾಗಿ ಜೆಪಿ ನಡ್ಡಾ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷ ಉದ್ದೇಶಪೂರ್ವಕವಾಗಿಯೇ ಪ್ರಚೋದಿಸಿ, ಸಮಸ್ಯೆಯನ್ನು ಹುಟ್ಟುಹಾಕುವ ಮೂಲಕ ಪಶ್ಚಿಮಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಾಭ ತಂದುಕೊಳ್ಳಲು ಹವಣಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿ ಮುಖಂಡರು ಗುರುವಾರ ಮಧ್ಯಾಹ್ನ ಡೈಮಂಡ್ ಹಾರ್ಬರ್ ದಕ್ಷಿಣ 24 ಪರಾಗಣ ಪ್ರದೇಶಕ್ಕೆ ತೆರಳಿದ್ದರು. ಡೈಮಂಡ್ ಹಾರ್ಬರ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಸಂಸದ ಅಭಿಷೇಕ್ ಬ್ಯಾನರ್ಜಿ ಲೋಕಸಭಾ ಕ್ಷೇತ್ರವಾಗಿದೆ.