Advertisement

ಪಕ್ಷಾಂತರ ಮಾಡಿದ ಎಂ.ಶ್ರೀನಿವಾಸ್‌ ನನ್ನ ಗುರುವಲ್ಲ

03:46 PM Apr 24, 2018 | |

ಬೆಂಗಳೂರು: ಒಂಬತ್ತು ಬಾರಿ ಪಕ್ಷಾಂತರ ಮಾಡಿರುವ ಎಂ.ಶ್ರೀನಿವಾಸ್‌ ನನ್ನ ಗುರುವಲ್ಲ. ಬಿಜೆಪಿ ನನಗೆ ಗುರು ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳಿದರು.

Advertisement

ನಗರದಲ್ಲಿ ಸೋಮವಾರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಪದ್ಮನಾಭನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಂ.ಶ್ರೀನಿವಾಸ್‌ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 10ನೇ ವರ್ಷ ವಯಸ್ಸಿನಿಂದ ನಾನು ಬಿಜೆಪಿಯಲ್ಲಿದ್ದು, ಶ್ರೀನಿವಾಸ್‌ ಅವರು ನಮ್ಮ ಪಕ್ಷಕ್ಕೆ ಬಂದು ಹೋಗಿದ್ದಾರೆ.

ಶ್ರೀನಿವಾಸ್‌ ಅವರು ನಾಲ್ಕು ಬಾರಿ ಬಿಜೆಪಿಗೆ ಬಂದು ಹೋಗಿದ್ದಾರೆ. ಮೂರು ಬಾರಿ ಜೆಡಿಎಸ್‌ಗೆ ಹೋಗಿ ಬಂದಿದ್ದಾರೆ. ಎರಡನೇ ಬಾರಿ ಕಾಂಗ್ರೆಸ್‌ ಸೇರಿದ್ದಾರೆ. ಒಂಬತ್ತು ಬಾರಿ ಪಕ್ಷಾಂತರ ಮಾಡಿರುವ ಶ್ರೀನಿವಾಸ್‌ ನನ್ನ ಗುರು ಎಂಬ ಪ್ರಶ್ನೆಯೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

2004ರಲ್ಲೇ ಉತ್ತರಹಳ್ಳಿ ಕ್ಷೇತ್ರದಲ್ಲಿ ಶ್ರೀನಿವಾಸ್‌ ನನ್ನ ವಿರುದ್ಧ ಸ್ಫರ್ಧಿಸಿದ್ದರು. ನಾನು ಆಗ ಭಾರಿ ಮತಗಳ ಅಂತರದಿಂದ ಗೆದ್ದಿದೆ. ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಬಂದು ಹೋಗಿದ್ದಾರೆ.

ಹಲವರು ಠೇವಣಿ ಕಳೆದುಕೊಂಡಿದ್ದಾರೆ. ಪದ್ಮನಾಭನಗರ ಬಿಜೆಪಿ ಭದ್ರಕೋಟೆ. ಕ್ಷೇತ್ರ ಬಿಜೆಪಿ ಪರವಾಗಿದ್ದು, ಮುಂದೆಯೂ ಪಕ್ಷದ ಪರವಾಗಿರಲಿದೆ ಎಂದು ಹೇಳಿದರು. ಕೇಂದ್ರ ಸಚಿವ ಅನಂತಕುಮಾರ್‌, ಎಂ.ಶ್ರೀನಿವಾಸ್‌ ಅವರಿಗೆ ಗುರುವೂ ಇಲ್ಲ. ಗುರಿಯೂ ಇಲ್ಲ ಎಂದು ಹೇಳಿದರು. 

Advertisement

ಪಕ್ಷ ಸೇರ್ಪಡೆ: ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿಗೌಡ, ಮಾಜಿ ಸಚಿವ ದಿವಂಗತ ಎಸ್‌.ರಮೇಶ್‌ ಪುತ್ರ ಪವನ್‌, ಅಗ್ರಹಾರ ದಾಸರಹಳ್ಳಿಯ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಮೇಶ್‌, ಗೋವಿಂದರಾಜನಗರ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಮಣ್ಣ ಸೋಮವಾರ ಬಿಜೆಪಿ ಸೇರ್ಪಡೆಯಾದರು.

ಕೇಂದ್ರ ಸಚಿವ ಅನಂತಕುಮಾರ್‌, ಮಾಜಿ ಸಚಿವ ವಿ.ಸೋಮಣ್ಣ ಅವರು ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಬಳಿಕ ಮಾತನಾಡಿದ ಆರ್‌.ಅಶೋಕ, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಮೂರ್‍ನಾಲ್ಕು ದಿನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಹೇಡಿತನದ ಪ್ರದರ್ಶನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಜತೆಗೆ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರುವುದು ಹೇಡಿತನದ ಪ್ರದರ್ಶನ. ತವರು ಜಿಲ್ಲೆಯಲ್ಲೇ ತಮಗೆ ಬೆಂಬಲವಿಲ್ಲ ಎಂಬುದನ್ನು ತೋರಿಸಿಕೊಳ್ಳುವ ಮೂಲಕ ನಗೆಪಾಟಿಲಿನ ಸ್ಥಿತಿಗೆ ತಲುಪಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕಾಂಗ್ರೆಸ್‌ ಮುಕ್ತವಾಗಲು ಮುಖ್ಯಮಂತ್ರಿ ನಾಂದಿ ಹಾಡಿದ್ದಾರೆ ಎಂದು ಆರ್‌.ಅಶೋಕ ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next