Advertisement

ಸ್ವಾಮೀಜಿಗಳು ಸಮಾಜಮುಖೀಯಾಗಲಿ

06:59 PM Mar 08, 2021 | Team Udayavani |

ಚಿತ್ರದರ್ಗ: ಮಠಾ ಧೀಶರು ಒಂದು ಜಾತಿ, ಧರ್ಮದ ಮುಖವಾಣಿಯಾಗದೆ ಸಮಾಜಮುಖೀಯಾಗಿ ಕೆಲಸ ಮಾಡಬೇಕಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು. ಕಬೀರಾನಂದ ಮಠದಲ್ಲಿ ಪ್ರಾರಂಭವಾದ 91ನೇ ಶಿವರಾತ್ರಿ ಮಹೋತ್ಸದವದ ಮಹಾ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮಠಗಳು ಧರ್ಮ ಪ್ರಸಾರಕ್ಕಿಂತ ತಮ್ಮ ಜನಾಂಗಕ್ಕೆ ಮೀಸಲಾತಿ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದು ದುರಂತದ ವಿಷಯವಾಗಿದೆ. ಮಠಾ ಧೀಶರು ತಮ್ಮ ಜನಾಂಗಕ್ಕೆ ಜಾಗೃತಿ ಮೂಡಿಸಬೇಕೇ ಹೊರತು ಮೀಸಲಾತಿಗಾಗಿ ಹೋರಾಟ ಮಾಡಬಾರದು. ಧರ್ಮದಲ್ಲಿ ರಾಜಕಾರಣವನ್ನು ಬೆರೆಸುವ ಕಾರ್ಯ ಮಾಡಬಾರದು ಎಂದು ನುಡಿದರು.

ನಗರದ ಕಬೀರಾನಂದಾಶ್ರಮ ಕಳೆದ 90 ವರ್ಷಗಳಿಂದ ನಿರಂತರವಾಗಿ ಶಿವನಾಮ ಸ್ಮರಣೆಯನ್ನು ಮಾಡುತ್ತಾ ಬಂದಿದೆ ಇನ್ನೂ 9 ವಷ ಕಳೆದರೆ 100 ವರ್ಷವಾಗುತ್ತದೆ. ವರ್ಷದಲ್ಲಿ 5 ದಿನ ಶಿವ ನಾಮಸ್ಮರಣೆಯನ್ನು ಮಾಡುವುದರ ಮೂಲಕ ಜನತೆಗೆ ಶಿವನನ್ನು ತಿಳಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಶ್ರೀ ಮಠ ವರ್ಗ, ಜಾತಿ ರಹಿತವಾಗಿ ಕೆಲಸವನ್ನು ಮಾಡುತ್ತಾ ಬಂದಿದೆ. ಇದರೊಂದಿಗೆ ಗೋವುಗಳ ಸಂರಕ್ಷಣೆ ಕಾರ್ಯವನ್ನು ಮಾಡುತ್ತಾ ಬಂದಿರುವುದು ಉತ್ತಮ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಓಬಿಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ ಯಾದವ್‌, ಗ್ರಾಮಾಂತರ ಘಟಕದ ಅಧ್ಯಕ್ಷ ನಂದಿನಾಗರಾಜ್‌, ಯುವ ಮುಖಂಡ ಸಂದೀಪ್‌ ಗುಂಡಾರ್ಪಿ, ಜಿ.ಪಂ. ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಶಿವರಾತ್ರಿ ಮಹೋತ್ಸವದಅಧ್ಯಕ್ಷ ವೆಂಕಟೇಶ್‌ ಭಾಗವಹಿಸಿದ್ದರು. ಹುರುಳಿ ಬಸವರಾಜ್‌ ಉಪನ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪೋಲಿಸ್‌ ಪದಕ ವಿಜೇತರಾದ ಬಾಲಚಂದ್ರ ನಾಯಕ್‌ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶಿವಮೂರ್ತಿ ಮುರುಘಾ ಶರಣರು ಹಾಗೂ ಹುಬ್ಬಳಿಯ ಜಡಿ ಸಿದ್ದೇಶ್ವರ ಮಠದ ಶ್ರೀ ರಮಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಸುಬ್ರಾಯಭಟ್‌ ವೇದ ಘೋಷವನ್ನು ವಾಚಿಸಿದರು. ಸುಮನಾ ಪ್ರಾರ್ಥಿಸಿ, ಮಾತೃಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಎಲ್‌.ಪ್ರಶಾಂತ್‌ ಸ್ವಾಗತಿಸಿದರು. ಮುರುಗೇಶ್‌ ನಿರೂಪಿಸಿದರು. ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠದ ಶಾಲಾ-ಕಾಳೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next