Advertisement

ಕಡಿಮೆ ದೇಹತೂಕ; ಕಾರಣಗಳು ಮತ್ತು ಪರಿಹಾರೋಪಾಯ

07:24 PM Mar 28, 2020 | Sriram |

ಕಡಿಮೆ ದೇಹತೂಕ ಹೊಂದಿರುವುದು ಅಪಾರವಾಗಿ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಕಡಿಮೆ ದೇಹತೂಕ ಹೊಂದಿರುವ ಜನರು ಪದೇ ಪದೇ ಅನಾರೋಗ್ಯಗಳಿಗೆ ತುತ್ತಾಗಬಹುದು. ಈ ಸಮಸ್ಯೆಯನ್ನು ಹೊಂದಿರುವ ಮಹಿಳೆಯರು ಅನಿಯತ ಋತುಚಕ್ರ ಹೊಂದಿರಬಹುದು ಅಥವಾ ಬಂಜೆತನವನ್ನು ಅನುಭವಿಸಬಹುದು. ಮಕ್ಕಳು ಆಯಾ ವಯಸ್ಸಿಗೆ ತಕ್ಕ ಬೆಳವಣಿಗೆಯ ಗುರಿಗಳನ್ನು ಮುಟ್ಟಲು ವಿಫ‌ಲರಾಗಬಹುದು ಹಾಗೂ ತಮ್ಮ ಎತ್ತರ, ಗಾತ್ರ ಇತ್ಯಾದಿಗಳಿಂದಾಗಿ ಗೆಳೆಯ, ಗೆಳತಿಯರಿಂದ ಅಪಹಾಸ್ಯಕ್ಕೆ ತುತ್ತಾಗಬಹುದು. ಕಡಿಮೆ ದೇಹತೂಕದ ಪ್ರೌಢರು ಆಗಾಗ ಬೀಳುವ ಸಮಸ್ಯೆಯನ್ನು ಹೊಂದಿರಬಹುದು ಮತ್ತು ದೈನಿಕ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಅವರಿಗೆ ಸಮಸ್ಯೆಗಳು ಉಂಟಾಗಬಹುದು. ಕಡಿಮೆ ದೇಹತೂಕದ ಪುರುಷರು ಆತ್ಮವಿಶ್ವಾಸದ ಕೊರತೆಯಿಂದ ಬಳಲಬಹುದು. ಕೆಲವು ಪ್ರಕರಣಗಳಲ್ಲಿ ದೇಹತೂಕವನ್ನು ಗಳಿಸಿಕೊಳ್ಳಲು ಅಗತ್ಯವಾದ ಆಹಾರ ಯೋಜನೆಯನ್ನು ರೂಪಿಸಿಕೊಳ್ಳಲು ವೃತ್ತಿ ಪರಿಣತರ ಸಲಹೆ ಅಗತ್ಯವಾಗಿರುತ್ತದೆ. ಆದರೆ ಸಾಮಾನ್ಯವಾಗಿ ಹೆಚ್ಚು ಆಹಾರ ಸೇವಿಸುವುದು ಮತ್ತು ಹೆಚ್ಚು ಕ್ಯಾಲೊರಿ ಇರುವ ಆಹಾರ ಸೇವನೆಯು ತೂಕ ವೃದ್ಧಿಸಿಕೊಳ್ಳಲು ನೆರವಾಗುತ್ತದೆ.

Advertisement

ಕಡಿಮೆ ದೇಹತೂಕ ಹೊಂದಿರಲು ಅನೇಕ ಕಾರಣಗಳಿರುತ್ತವೆ. ಅವುಗಳಲ್ಲಿ ಕೆಲವು:
– ಗುಣಮಟ್ಟ ಮತ್ತು ಪ್ರಮಾಣ ಎರಡೂ ಬಗೆಯಲ್ಲಿ ಅಸಮರ್ಪಕ ಆಹಾರ ಸೇವನೆ.
– ಸೇವಿಸುವ ಆಹಾರದ ಪ್ರಮಾಣ ಕಡಿಮೆಯಿದ್ದು, ದೈಹಿಕ ಚಟುವಟಿಕೆ ಹೆಚ್ಚುವುದು, ಇದರಿಂದ ಶಕ್ತಿಯ ಕೊರತೆ ಉಂಟಾಗುತ್ತದೆ.
– ಜ್ವರ, ಕ್ಯಾನ್ಸರ್‌, ಕ್ಷಯ ಇತ್ಯಾದಿ ಹಸಿವು ಕಡಿಮೆಯಾಗುವ, ಆದರೆ ಶಕ್ತಿಯ ಅಗತ್ಯ ವೃದ್ಧಿಸುವ ಅನಾರೋಗ್ಯ ಸ್ಥಿತಿಗಳು.
– ಹೈಪರ್‌ ಥೈರಾಯಿxಸಂನಂತಹ ಹಾರ್ಮೋನ್‌ ಅಸಮತೋಲನ, ಇದರಿಂದಾಗಿ ಚಯಾಪಚಯ ಗತಿ ವೃದ್ಧಿಸಿ ದೇಹಕ್ಕೆ ಅಗತ್ಯವಾದ ಶಕ್ತಿಯ ಪ್ರಮಾಣವೂ ಹೆಚ್ಚುತ್ತದೆ.
– ಅನೊರೆಕ್ಸಿಯಾ ನರ್ವೋಸಾ ಮತ್ತು ಬುಲಿಮಿಯಾ ನರ್ವೋಸಾದಂತಹ ಆಹಾರ ಸೇವನೆಯ ಸಮಸ್ಯೆಗಳು, ಇವು ತೆಳ್ಳಗಾಗಬೇಕು ಎಂಬ ಭ್ರಮೆಯಿಂದ ಹುಟ್ಟಿಕೊಳ್ಳುವ ಮಾನಸಿಕ ಸ್ಥಿತಿಗಳು, ಇದನ್ನು ಹೊಂದಿರುವವರು ಆಹಾರ ಸೇವನೆಗೆ ಅತಿಯಾದ ಸ್ವಯಂ ಮಿತಿ ಹೇರಿಕೊಳ್ಳುತ್ತಾರೆ.

ಕಡಿಮೆ ದೇಹತೂಕಕ್ಕೆ ಸಂಬಂಧಿಸಿದ
ಆರೋಗ್ಯ ಸಮಸ್ಯೆಗಳು
– ಬೆಳೆಯುತ್ತಿರುವ ಮಕ್ಕಳಲ್ಲಿ ಕಡಿಮೆ ದೇಹತೂಕವು ಬೆಳವಣಿಗೆಗೆ ಅಡ್ಡಗಾಲಾಗುತ್ತದೆ.
– ಸೋಂಕುಗಳಿಗೆ ಕಡಿಮೆ ಪ್ರತಿರೋಧ ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿ ಕಳಪೆಯಾಗುತ್ತದೆ.
– ಕೆಲಸ ಕಾರ್ಯಗಳನ್ನು ನಡೆಸುವ ಸಾಮರ್ಥ್ಯ ಕುಸಿಯುತ್ತದೆ.
– ಗರ್ಭ ಧರಿಸಿದ ಸಂದರ್ಭದಲ್ಲಿ ಸಂಕೀರ್ಣ ಸ್ಥಿತಿಗಳು, ತೊಂದರೆಗಳು ಎದುರಾಗುವ ಸಾಧ್ಯತೆ ವೃದ್ಧಿಸುತ್ತದೆ.
– ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಅಪಾಯಗಳು ಹೆಚ್ಚು.
– ಕ್ಷಯದಂತಹ ಕೆಲವು ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚುತ್ತವೆ.

ಕಡಿಮೆ ದೇಹತೂಕ: ಪಥ್ಯಾಹಾರ
ನಿರ್ವಹಣೆಯ ಉದ್ದೇಶಗಳು
– ದೇಹತೂಕವನ್ನು ಸಹಜ ಸ್ಥಿತಿಗೆ ತರುವುದು.
– ದೇಹದ ಅಂಗಾಂಶಗಳು, ನ್ಯೂಟ್ರಿಯೆನ್ಸ್‌ಗಳನ್ನು ಪುನರ್‌ ಬೆಳೆಯಿಸಿ ಒಟ್ಟಾರೆ ಆರೋಗ್ಯವನ್ನು ಮರುಸ್ಥಾಪಿಸುವುದು.
– ಅಗತ್ಯವಾದ, ಸಮರ್ಪಕ ದೇಹತೂಕವನ್ನು ಕಾಯ್ದುಕೊಳ್ಳುವುದು.
– ಪೌಷ್ಟಿಕಾಂಶ ಸ್ಥಿತಿಗತಿಯನ್ನು ಕಾಯ್ದುಕೊಳ್ಳುವುದು.

ಪಥ್ಯಾಹಾರ ಪರಿವರ್ತನೆ
ಶಕ್ತಿ
ಪ್ರತಿ ದಿನ 500 ಕೆಸಿಎಎಲ್‌ ಕ್ಯಾಲೊರಿ ಸೇವಿಸುವುದರಿಂದ ವಾರಕ್ಕೆ 0.5 ಕೆಜಿಯಷ್ಟು ತೂಕ ಗಳಿಸಿಕೊಳ್ಳಬಹುದು. ಇನ್ನೂ ಹೆಚ್ಚು ತೂಕ ಗಳಿಸಿಕೊಳ್ಳಬೇಕಿದ್ದರೆ ದೈನಿಕ ಶಕ್ತಿ ಸೇವನೆಯ ಪ್ರಮಾಣವನ್ನು 1,000 ಕೆಸಿಎಎಲ್‌ಗ‌ಳಿಗೆ ಏರಿಸಬಹುದು.

Advertisement

ಕಾಬೊìಹೈಡ್ರೇಟ್‌
ಹೆಚ್ಚು ಕಾಬೊìಹೈಡ್ರೇಟ್‌ ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ ಶಕ್ತಿಯ ಅಧಿಕ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತದೆ. ಸಕ್ಕರೆ, ಜೇನು, ಧಾನ್ಯಗಳು, ಪಿಷ್ಟಯುಕ್ತ ತರಕಾರಿಗಳು ಮತ್ತು ಹಣ್ಣುಗಳನ್ನು ಅಗತ್ಯವಾಗಿ ಸೇವಿಸಬೇಕು. ಆದರೆ ಆಹಾರದ ಗಾತ್ರ ಹೆಚ್ಚಬಾರದು, ಇದರಿಂದ ಸೇವಿಸುವ ಪ್ರಮಾಣ ಕಡಿಮೆಯಾಗುತ್ತದೆ.

ಖನಿಜಗಳು ಮತ್ತು ವಿಟಮಿನ್‌ಗಳು
ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಖನಿಜಾಂಶಗಳು ಮತ್ತು ವಿಟಮಿನ್‌ಗಳಿರಬೇಕು. ತರಕಾರಿಗಳು, ಹಣ್ಣುಗಳು, ಇಡೀ ಕಾಳುಗಳು, ಧಾನ್ಯಗಳಲ್ಲಿ ಖನಿಜಾಂಶ ಮತ್ತು ವಿಟಮಿನ್‌ಗಳಿರುತ್ತವೆ. ಕೆಲವು ಧಾನ್ಯಗಳನ್ನು ಮೊಳಕೆ ಬರಿಸಿ ಸೇವಿಸುವುದರಿಂದಲೂ ಖನಿಜಾಂಶ ಮತ್ತು ವಿಟಮಿನ್‌ಗಳನ್ನು ಪಡೆಯಲು ಸಾಧ್ಯ.

ಪ್ರೊಟೀನ್‌
ಸ್ನಾಯು ಪರಿಮಾಣ ವೃದ್ಧಿಗಾಗಿ ಹೆಚ್ಚುವರಿ ಶಕ್ತಿದಾಯಕ ಆಹಾರಗಳ ಜತೆಗೆ ಹೆಚ್ಚು ಪ್ರೊಟೀನ್‌ ಸೇವಿಸುವುದೂ ಆವಶ್ಯಕ. ಹಾಲು, ಮೊಟ್ಟೆಗಳು ಹಾಗೂ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು
ಸಂಯೋಜಿತವಾಗಿ ಆಹಾರದಲ್ಲಿ ಉಪಯೋಗಿಸಬೇಕು.

ಕೊಬ್ಬುಗಳು
ಶಕ್ತಿಯ ಅಗತ್ಯವನ್ನು ಪೂರೈಸುವುದಕ್ಕಾಗಿ ಕೊಬ್ಬುಗಳನ್ನು ಮಿತವಾಗಿ ಸೇವಿಸಬೇಕು.

ಒಬ್ಬ ವ್ಯಕ್ತಿಯ ವಯಸ್ಸು, ಎತ್ತರ ಮತ್ತು ಲಿಂಗವನ್ನು ಆಧರಿಸಿ ಆ ವ್ಯಕ್ತಿ ಹೊಂದಿರಬೇಕಾದ ಸಹಜ ತೂಕಕ್ಕಿಂತ ಶೇ.10ರಿಂದ 20ರಷ್ಟು ಕಡಿಮೆ ದೇಹತೂಕ ಹೊಂದಿದ್ದರೆ ಅದನ್ನು ಕಡಿಮೆ ದೇಹತೂಕ ಎಂದು ಗುರುತಿಸಲಾಗುತ್ತದೆ.

ಮಾದರಿ ಆಹಾರ ಯೋಜನೆ
ಬೆಳಗ್ಗಿನ ಉಪಾಹಾರ
ಪೂರ್ಣ ಹಾಲು – 1 ಕಪ್‌+ ಯಾವುದೇ ಧಾನ್ಯದಿಂದ ತಯಾರಿಸಿದ ಆಹಾರ

ಪೂರ್ವಾಹ್ನದ ಉಪಾಹಾರ
ಫ್ರುಟ್‌ ಸಲಾಡ್‌/ ಹೋಳು ಮಾಡಿದ ಹಣ್ಣುಗಳು/ ಬ್ರೆಡ್‌ ಆಮ್ಲೆಟ್‌

ಮಧ್ಯಾಹ್ನದ ಉಪಾಹಾರ
ಅನ್ನ – 1 ಕಪ್‌+ ಚಪಾತಿ – 2+ ಯಾವುದೇ ತರಕಾರಿ ಪದಾರ್ಥ+ ಮೊಸರು + 1 ಬೇಯಿಸಿದ ಮೊಟ್ಟೆ+ ತರಕಾರಿ ಸಲಾಡ್‌

ಅಪರಾಹ್ನದ ಉಪಾಹಾರ
(3 ಗಂಟೆಗೆ): ಮೊಳಕೆ ಬರಿಸಿದ ಹೆಸರು ಕಾಳು/ ಬೇಯಿಸಿದ ಕಡಲೆ/ ಬಾಳೆಹಣ್ಣು ಮಿಲ್ಕ್ಶೇಕ್‌/ ಬೀಜ, ಕಾಳುಗಳು

ಸಂಜೆಯ ಉಪಾಹಾರ
(5 ಗಂಟೆಗೆ) : ಪೂರ್ಣ ಹಾಲು – 1 ಕಪ್‌+ ಚೀಸ್‌ ಸ್ಯಾಂಡ್‌ವಿಚ್‌/ ಬೆಣ್ಣೆ ಸ್ಯಾಂಡ್‌ವಿಚ್‌/ ಯಾವುದೇ ಧಾನ್ಯದಿಂದ ತಯಾರಿಸಿದ ಆಹಾರ

ರಾತ್ರಿಯೂಟ
ಮಧ್ಯಾಹ್ನದ ಊಟದಂತೆಯೇ

ಮಲಗುವ ಸಮಯ
ಪೂರ್ಣ ಹಾಲು+ ಬಾಳೆಹಣ್ಣು

ನೆನಪಿಡಿ
– ಆಹಾರ ಸೇವನೆಯ ಪ್ರಮಾಣವನ್ನು ನಿಧಾನವಾಗಿ ಹೆಚ್ಚಿಸಬೇಕು.
– ಒತ್ತಾಯಪೂರ್ವಕ ಸೇವನೆ ಒಳ್ಳೆಯದಲ್ಲ.

ಮನೀಶಾ ಮೋಹನ್‌ ಕುಮಾರ್‌,
ಪಥ್ಯಾಹಾರ ತಜ್ಞೆ ,
ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next