Advertisement

ಶೇಷಗಿರಿಯಲ್ಲಿ ಗರಿಗೆದರಿದ ರಂಗ ಪ್ರೀತಿ

03:15 PM May 09, 2022 | Team Udayavani |

ಹಾನಗಲ್ಲ: ಶೇಷಗಿರಿ ಎಂಬ ಪುಟ್ಟ ಗ್ರಾಮದಲ್ಲಿ ರಂಗ ಪ್ರೀತಿ ಗರಿಗೆದರಿದ್ದು ಇಡೀ ಊರು ರಂಗ ಚಟುವಟಿಕೆಯಲ್ಲಿ ತೊಡಗಿದೆ. ಕಲಾವಿದರನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಕಾರ್ಯ ಗಮನ ಸೆಳೆದಿದೆ.

Advertisement

ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಶೇಷಗಿರಿ ಕಲಾ ತಂಡ ನಿತ್ಯ ನಿರಂತರವಾಗಿ ರಂಗ ಧ್ಯಾನದಲ್ಲಿ ತೊಡಗಿ ಇಡೀ ಕರ್ನಾಟಕದ ಖ್ಯಾತ ರಂಗ ನಿರ್ದೇಶಕರು, ಕಲಾವಿದರನ್ನು ಸೆಳೆದಿದೆ. ಶೇಷಗಿರಿ ರಂಗ ಮಂದಿರದಲ್ಲಿ ರಂಗ ಪ್ರದರ್ಶನ ನೀಡುವುದೇ ಒಂದು ಹೆಮ್ಮೆ ಹಾಗೂ ಸಂಭ್ರಮ ಎಂಬ ಭಾವನೆ ನಾಡಿನ ಕಲಾವಿದರದ್ದಾಗಿದೆ.

ಗಜಾನನ ಯುವಕ ಮಂಡಳದ ಹೆಸರಿನಲ್ಲಿ ಕೂಡಿದ ಹುಡುಗರು ಕೇವಲ ತಮ್ಮ ರಂಗ ಪ್ರೀತಿಯನ್ನು ಅಭಿವ್ಯಕ್ತಿಸುವುದು ಮಾತ್ರವಲ್ಲ, ಮಕ್ಕಳನ್ನು ರಂಗಕ್ಕೆ ಆಕರ್ಷಿಸುವ ಮಹತ್ಕಾರ್ಯಕ್ಕೆ ಮುಂದಾಗಿ ಕಳೆದ 15 ವರ್ಷಗಳಿಂದ ರಂಗ ತರಬೇತಿ ಶಿಬಿರ ನಡೆಸುತ್ತ ಮಕ್ಕಳ ರಂಗಭೂಮಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಕೇವಲ ಹದಿನೈದು ದಿನಗಳಲ್ಲಿ ಮಕ್ಕಳು ನಾಟಕ ಪ್ರದರ್ಶನಕ್ಕೆ ಸಿದ್ಧರಾಗುವಂತೆ ಮಾಡುತ್ತಾರೆ.

ಖ್ಯಾತ ರಂಗ ನಿರ್ದೇಶಕರಾದ ಡಾ|ಶ್ರೀಪಾದ ಭಟ್‌, ಎಸ್‌.ಎಲ್‌.ಸಂತೋಷ, ಎಂ.ಗಣೇಶ, ರಾಘೂ ಶಿಕಾರಿಪುರ, ಕರಿಯಪ್ಪ ಕವಲೂರ ಸೇರಿದಂತೆ ಹತ್ತಾರು ನಿರ್ದೇಶಕರು ಪ್ರತಿ ವರ್ಷ ಇಲ್ಲಿ ಮಕ್ಕಳ ರಂಗ ತರಬೇತಿಯಲ್ಲಿ ಪಾಲ್ಗೊಂಡು ಮಕ್ಕಳ ರಂಗಕ್ಕೆ ಮೆರಗು ತಂದಿದ್ದಾರೆ. ಸೊರಬ, ಚಿಕ್ಕಮಗಳೂರು, ಕೊಪ್ಪ ಸೇರಿದಂತೆ ವಿವಿಧ ಊರುಗಳಿಂದ ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ಬರುತ್ತಾರೆ.

ಇದೇ ರಂಗಭೂಮಿಗೆ ಬಾಲ್ಯದಲ್ಲಿ ಪ್ರವೇಶಿಸಿದ ಪುನೀತ ಕಬ್ಬೂರ ಈಗ ಸಿನಿಮಾ ರಂಗದಲ್ಲಿ ಮಿಂಚುತ್ತಿರುವುದು ಶೇಷಗಿರಿಯ ಪೊÅಡೆಕ್ಟ್ ಎಂಬ ಹೆಮ್ಮೆ ಈ ಊರಿಗಿದೆ. ಗೌತಮ್‌ ಧಾರೇಶ್ವರ, ಸೋಮು ಗುರಪ್ಪನವರ, ಪ್ರಸನ್ನ ಕೋಮಾರ, ಸೇರಿದಂತೆ ಹತ್ತಾರು ರಂಗ ಪ್ರತಿಭೆಗಳು ಇಲ್ಲಿಂದ ಬೆಳೆದು ಉತ್ತಮ ಸ್ಥಾನಮಾನ ಗಳಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರಶಸ್ತಿ ಗಳಿಸಿದ್ದಾರೆ.

Advertisement

ಇದೇ ರಂಗಭೂಮಿಯಲ್ಲಿ ತರಬೇತಿ ಪಡೆದ ಮಕ್ಕಳ ನಾಟಕ ಹಳ್ಳಿಯ ಸಿರಿ ಬೆಂಗಳೂರಿನಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿಗೆ ಪಾತ್ರವಾಗಿದೆ. ಪಂಜರ ಶಾಲೆ, ಬೆಟ್ಟಕ್ಕೆ ಚಳಿಯಾದರೆ, ಸತ್ರು ಅಂದ್ರೆ ಸಾಯ್ತಾರಾ, ನಾನೂ ಗಾಂಧಿ ಆಗ್ತೀನೆ, ಓ ಮಗು ನೀ ನಗು, ಪುಷ್ಪರಾಣಿ, ನಕ್ಕಳಾ ರಾಜಕುಮಾರಿ, ಮಾಯಾ ಕನ್ನಡಿ, ಬೆಳಕು ಹಂಚಿದ ಬಾಲಕ, ನಾಯಿ ತಿಪ್ಪ, ಬೆಳಕಿನೆಡೆಗೆ, ಪುಣ್ಯಕೋಟಿ ಸೇರಿದಂತೆ ಹತ್ತು ಹಲವು ನಾಟಕಗಳು ಮಕ್ಕಳಿಂದ ಪ್ರದರ್ಶನಗೊಂಡಿದ್ದು ಮೆಚ್ಚುಗೆ ಪಡೆದಿವೆ. ಈಗ ಶಂಭು ಬಳಿಗಾರ ಅವರ ತೊಗರಿತಿಪ್ಪ ನಾಟಕ ನಿರ್ದೇಶಕ ಕರಿಯಪ್ಪ ಕವಲೂರ ಅವರ ನಿರ್ದೇಶನದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ.

ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಕೊಡುಗೆ ಇಲ್ಲಿಯ ರಂಗಮಂದಿರಕ್ಕೆ ಹೆಚ್ಚಿರುವುದರಿಂದ ಸಿ.ಎಂ.ಉದಾಸಿ ಕಲಾಕ್ಷೇತ್ರ ಎಂದು ಹೆಸರಿಡಲಾಗಿದೆ. ಇಷ್ಟೆಲ್ಲ ಪ್ರಖ್ಯಾತಿಯ ಹಿಂದೆ ಸಮಯ, ಹಣ, ಕ್ರಿಯಾಶೀಲತೆಯನ್ನು ಒಗ್ಗೂಡಿಸಿ ಒಂದು ಪುಟ್ಟ ಗ್ರಾಮವನ್ನು ರಂಗ ಗ್ರಾಮವನ್ನಾಗಿ ರಾಷ್ಟ್ರಮಟ್ಟದಲ್ಲಿ ಹೆಸರಾಗುವಂತೆ ಮಾಡಿರುವುದು ಒಬ್ಬ ಪೋಸ್ಟ್‌ ಮಾಸ್ಟರ್‌ ಪ್ರಭು ಗುರಪ್ಪನವರ ಎಂಬುದನ್ನು ಹೇಳಲೇಬೇಕು. ಇವರೊಂದಿಗಿರುವ ಹುಡುಗರು ಕಲಾವಿದರಾಗಿ, ಸಂಘಟಕರಾಗಿ, ಸ್ವಯಂ ಸೇವಕರಾಗಿ, ಮಕ್ಕಳ ರಂಗಭೂಮಿಯ ಮೂಲಕವೂ ಕೆಲವರು ಬಂದು ಈಗ ಶೇಷಗಿರಿಯ ರಂಗ ಕಲೆಯನ್ನು ಜೀವಂತವಾಗಿಡಲು ಜೀವ ಸವೆಸುತ್ತಿದ್ದಾರೆ.

ದಿ.ಸಿ.ಎಂ.ಉದಾಸಿ ಅವರು ಹಳ್ಳಿ ಹುಡುಗರ ನಾಟಕ ನೋಡಿ ಒಳ್ಳೆಯದು ಅಂದು ಒಂದು ಕೋಟಿ ರೂ ಖರ್ಚಿನಲ್ಲಿ ರಂಗ ಮಂದಿರ ಕೊಟ್ಟರು. ಈಗ ಮತ್ತೆ ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕರಣ ನಡೀತಿದೆ. –ಪ್ರಭು ಗುರಪ್ಪನವರ, ಶೇಷಗಿರಿ ಕಲಾ ತಂಡದ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next