Advertisement

ಪ್ರೇಮಿಗಳ ಆತ್ಮಹತ್ಯೆ ಯತ್ನ ; ಈಜಿ ಮೇಲಕ್ಕೆ ಬಂದು ಪ್ರಿಯಕರನ ವಿರುದ್ಧ ದೂರು ನೀಡಿದ ಮಹಿಳೆ

03:22 PM Jun 18, 2022 | Team Udayavani |

ಪ್ರಯಾಗ್ ರಾಜ್ : ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿ ನದಿಗೆ ಧುಮುಕಿದ ಬಳಿಕ ಪ್ರಕರಣದ ದಿಕ್ಕೇ ಬದಲಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಮಹಿಳೆ ಈಜಿ ಮೇಲಕ್ಕೆ ಬಂದು ಯುವಕನ ವಿರುದ್ಧ ಪೊಲೀಸ್ ಕೇಸು ದಾಖಲಿಸಿದ್ದಾಳೆ.

Advertisement

ಸುಮಾರು ಆರು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ನದಿಗೆ ಹಾರಲು ಮನ ಮಾಡಿದ್ದರು, ಆದರೆ ಮಹಿಳೆ ನದಿಗೆ ಹಾರಿದ ಬಳಿಕ ಯುವಕ ಸ್ಥಳದಿಂದ ಕಾಲು ಕಿತ್ತಿದ್ದಾನೆ. ಪ್ರಕರಣದಲ್ಲಿ ದೊಡ್ಡ ತಿರುವು ಎಂಬಂತೆ ಈಜು ಬಲ್ಲ ಪುಣೆ ಮೂಲದ ಮಹಿಳೆ ಮೇಲಕ್ಕೆ ಬಂದು ಯುವಕನ ನಿಜ ಬಣ್ಣ ತಿಳಿದು ಕೊಲೆ ಯತ್ನ ದೂರು ದಾಖಲಿಸಿದ್ದಾಳೆ.

ಪೋಲೀಸರ ಪ್ರಕಾರ, ಬಧೋಯಿ ಜಿಲ್ಲೆಯ ಜ್ಞಾನಪುರ ಮೂಲದ ಮಹಿಳೆ ವಿವಾಹವಾಗಿ ಪುಣೆಯಲ್ಲಿ ನೆಲೆಸಿದ್ದಳು. ಮದುವೆಯಾಗಿ, ಮಗಳನ್ನು ಹೊಂದಿದ ಎಂಟು ವರ್ಷದ ಬಳಿಕ ಪ್ರಯಾಗ್ ರಾಜ್ ಮೂಲದ ಚಂದು ಯಾದವ್ ಎಂಬಾತನೊಂದಿಗೆ ಪ್ರೇಮ ಸಂಬಂಧ ಆರಂಭಿಸಿದ್ದಳು. ದೂರದಿಂದಲೇ ಸಂಬಂಧ ಹೊಂದಿದ್ದ ಚಂದು ಯಾದವ್ ಮದುವೆಯಾಗಿದ್ದ ವಿಚಾರ ಮಹಿಳೆಗೆ ತಿಳಿದೇ ಇರಲಿಲ್ಲ.

ಚಂದು ಯಾದವ್ ಪತ್ನಿಗೆ ವಿಚ್ಛೇಧನ ನೀಡಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಮದುವೆಯಾಗುವ ವಿಚಾರದಲ್ಲಿ ಇಬ್ಬರ ನಡುವೆ ಕಲಹ ನಡೆದು ಮೇ 24 ರಂದು ಇಬ್ಬರು ಭೇಟಿಯಾಗಿ ರಾದ್ಧಾಂತ ಮಾಡಿಕೊಂಡಿದ್ದರು. ಚಂದು ಮಹಿಳೆಯ ಮೊಬೈಲ್ ಒಡೆದು ಹಾಕಿದ್ದ. ಹೀಗೆ ಇರುವ ವೇಳೆ ಇಬ್ಬರೂ ಮೇ 29 ರಂದು ಆತ್ಮಹತ್ಯೆ ಮಾಡುವ ಒಪ್ಪಂದಕ್ಕೆ ಬಂದು ಯಮುನಾ ಸೇತುವೆ ಬಳಿಗೆ ತೆರಳಿದ್ದಾರೆ. ಮಹಿಳೆ ನೀರಿಗೆ ಹಾರಿದ್ದು, ಚಂದು ಸ್ಥಳದಿಂದ ಪರಾರಿಯಾಗಿದ್ದ. ಈಜು ಬಲ್ಲ ಮಹಿಳೆ ಚಂದು ಮುಳುಗಿದ್ದಾನೆಯೇ ಎನ್ನುವುದನ್ನು ಸ್ಥಳದಲ್ಲಿದ್ದ ದೋಣಿ ನಡೆಸುವವರ ಬಳಿ ಖಾತರಿ ಪಡಿಸಿಕೊಂಡಿದ್ದಾಳೆ. ಆತ ಪರಾರಿಯಾಗಿರುವುದು ತಿಳಿದು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ಚಂದುವನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next