Advertisement

ಪ್ರೀತಿ ಮಧುರ; ಸ್ನೇಹ ಅಮರ

11:22 AM Jul 07, 2018 | |

“ನೀನು ಭ್ರಮೆಯಲ್ಲಿ ಬದುಕೋದು ಬೇಡ. ಭ್ರಮೆಯೇ ಬೇರೆ, ಬದುಕೇ ಬೇರೆ… ನಂದಿಬೆಟ್ಟದ ತುದಿಯಲ್ಲಿ ನಿಂತು ಅವಳು ಅವನಿಗೆ ಹೇಳುವ ಮಾತುಗಳಿವು. ಈ ಮಾತುಗಳು ಬರುವ ಹೊತ್ತಿಗೆ ಚಿತ್ರ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿರುತ್ತೆ. ಅದಕ್ಕೂ ಮುನ್ನ ಅವರಿಬ್ಬರ ನಡುವೆ ನೋಟ ಶುರುವಾಗಿ, ಓಡಾಟ ವೇಗವಾಗಿ, ಅದು ಪ್ರೀತಿಯಾಗಿ, ಮನೆಯವರ ಕೆಂಗಣ್ಣಿಗೆ ಗುರಿಯಾಗಿ, ಕಮರಿ ಹೋಗುವ ಹೊತ್ತಾಗಿರುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರದ ಸಸ್ಪೆನ್ಸ್‌.

Advertisement

ಸಾಮಾನ್ಯವಾಗಿ ಲವ್‌ಸ್ಟೋರಿ ಚಿತ್ರಗಳಲ್ಲಿ ಇದೆಲ್ಲಾ ಮಾಮೂಲು ಎಂದು ಭಾವಿಸಬೇಡಿ. ಈ ಚಿತ್ರದಲ್ಲೊಂದು ಟ್ವಿಸ್ಟ್‌ ಇದೆ. ಹಿರಿಯ ನಿರ್ದೇಶಕ ಡಿ.ರಾಜೇಂದ್ರಬಾಬು ಅವರು ಎಲ್ಲಾ ತರಹದ ಚಿತ್ರಗಳನ್ನೂ ಕಟ್ಟಿಕೊಟ್ಟವರು. “ಕುಚ್ಚಿಕೂ ಕುಚ್ಚಿಕು’ ಈಗಿನ ಟ್ರೆಂಡ್‌ಗೆ ಅಂತಾನೇ ಮಾಡಿದ್ದಾರೆ. ಎಲ್ಲಾ ಲವ್‌ಸ್ಟೋರಿಗಳಲ್ಲಿ ಇರುವಂತೆ ಇಲ್ಲೂ ಪ್ರೀತಿ, ಪ್ರೇಮ, ಪ್ರಣಯ, ಪ್ರೇಮಿಗಳ ಆಟ-ತಿರುಗಾಟ, ಮನೆಯವರ ವಿರೋಧ, ಹೃದಯಗಳ ತಳಮಳ ಎಲ್ಲವೂ ಇದೆ.

ಇವೆಲ್ಲದರ ಜೊತೆಗೊಂದು ಸಂದೇಶವಿದೆ. ಅದನ್ನು ಕಟ್ಟಿಕೊಟ್ಟಿರುವ ರೀತಿ, ನಿರ್ದೇಶನದ ಪ್ರೀತಿಯನ್ನು ತೋರಿಸುತ್ತದೆ. ಒಂದು ಪ್ರೇಮಕಥೆ ಅಂದಮೇಲೆ, ಅಡ್ಡಿ-ಆತಂಕ ಸಹಜ. ಅವುಗಳ ನೆರಳು ಇಲ್ಲೂ ಇದೆಯಾದರೂ, ಚಿತ್ರಕ್ಕೊಂದು ಚೌಕಟ್ಟು ಇದೆ. ಅದನ್ನು ಮೀರದೆ ಕಟ್ಟಿಕೊಟ್ಟಿರುವ ಚಿತ್ರದಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಪ್ರೀತಿ ಎಲ್ಲಾ ಕಾಲಕ್ಕೂ ಒಂದೇ. ಎಲ್ಲಾ ಸಮಯದಲ್ಲೂ ಎದುರಾಗುವ ಸಮಸ್ಯೆಗಳೂ ಒಂದೇ.

ಅದನ್ನಿಲ್ಲಿ ಅಚ್ಚುಕಟ್ಟಾಗಿ ತೋರಿಸುವುದರ ಜೊತೆಗೆ ಮನಸ್ಸಿಗೆ ನಾಟುವ ಅಂಶವನ್ನು ಬಲು ಸೂಕ್ಷ್ಮವಾಗಿ ಹೇಳುವ ಮೂಲಕ ಯುವಕರಲ್ಲಿ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಮಾಡಿರುವುದೇ ಸಮಾಧಾನದ ವಿಷಯ. ಚಿತ್ರದ  ಬೈಕ್‌ ರೇಸ್‌ ದೃಶ್ಯಗಳು ಮಾತ್ರ ಸ್ವಲ್ಪ ನೋಡುಗರ ತಾಳ್ಮೆ ಕೆಡಿಸುತ್ತವೆ. ಕೆಲವೆಡೆ ಸ್ಟಾಕ್‌ ಬೈಕ್‌ರೇಸ್‌ ಶಾಟ್ಸ್‌ಗಳ ಅಗತ್ಯವಿರಲಿಲ್ಲ. ನಾಯಕನನ್ನು ಬಗೆಬಗೆಯಲ್ಲಿ ತೋರಿಸುವ ಉತ್ಸಾಹ ಅದಕ್ಕೆ ಕಾರಣ ಎನ್ನಬಹುದು.

ಪ್ರೀತಿ ಕುರುಡು ನಿಜ. ಹಾಗಂತ, ಪ್ರೀತಿಸುವ ಹುಡುಗ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೈಕ್‌ನಲ್ಲಿ ಪ್ರೇಯಸಿಯನ್ನು ಕೂರಿಸಿಕೊಂಡು ಹೋಗುವ ದೃಶ್ಯ ಹೀಗೂ ಸಾಧ್ಯನಾ? ಎಂಬ ಪ್ರಶ್ನೆಗೆ ಕಾರಣವಾಗುತ್ತದೆ. ಅದು ಬಿಟ್ಟರೆ ನಿರ್ದೇಶಕರು ಸೆಂಟಿಮೆಂಟ್‌ ವಿಷಯದಲ್ಲಿ ಪಕ್ಕಾ. ಕೊನೆಯ ಹತ್ತು ನಿಮಿಷದಲ್ಲಿ ನೋಡುಗರ ಮನಸ್ಸನ್ನು ಭಾರವಾಗಿಸುತ್ತಾರೆ. ಅದೊಂದು ದೃಶ್ಯ ಇಡೀ ಚಿತ್ರವನ್ನು ತೂಗಿಸಿಕೊಂಡು ಹೋಗುವಂತಿದೆ.

Advertisement

ಇದು ಗ್ಯಾರೇಜ್‌ ಗೆಳೆಯನನ್ನು ಬೈಕ್‌ರೇಸ್‌ ಚಾಂಪಿಯನ್‌ ಆಗಿಸುವ ಶ್ರೀಮಂತ ಗೆಳೆಯೊಬ್ಬನ ಕಥೆ. ಗ್ಯಾರೇಜ್‌ ಮೆಕಾನಿಕ್‌ ಗೆಳೆಯ ಪ್ರೀತಿಗೆ ಬಿದ್ದು, ಆ ಪ್ರೀತಿ ಗಟ್ಟಿಯಾಗಿ, ಆ ಹುಡುಗಿಯ ಹೆತ್ತವರ ವಿರೋಧದಿಂದ ಮುರಿದು ಬಿದ್ದ ಮೇಲೆ, ಬದುಕನ್ನೇ ಹಾಳು ಮಾಡಿಕೊಂಡು ಅಲೆದಾಡುವ ಆ ಗೆಳೆಯನನ್ನು ಪುನಃ ಹುಡುಕಿ ಅವನಿಗೊಂದು ನೆಲೆ ಕಟ್ಟಿಕೊಡುವ ಆಪ್ತ ಗೆಳೆಯ. ಅವನ ಪ್ರೀತಿಯನ್ನೂ ಹುಡುಕಿ ಕೊಡ್ತಾನಾ ಅನ್ನೋದೇ ಕಥೆ.

ಇಲ್ಲಿ, ಪ್ರೀತಿ ಕಳೆದುಕೊಂಡು, ಹುಚ್ಚನಂತಾದ ಬೈಕ್‌ ರೇಸರ್‌, ಕೊನೆಗೆ ಸರಿದಾರಿಗೆ ಬರುತ್ತಾನಾ? ಅವನ ಪ್ರೀತಿ ಅವನಿಗೆ ದಕ್ಕುತ್ತಾ ಎಂಬ ಕುತೂಹಲವಿದ್ದರೆ, “ಗೆಳೆಯರ’ ಆತ್ಮೀಯತೆ ಮತ್ತು ಪ್ರೀತಿಯನ್ನು ನೋಡಬಹುದು. ಪ್ರವೀಣ್‌ ಬೈಕ್‌ ರೇಸರ್‌ ಆಗಿ ಗಮನಸೆಳೆಯುತ್ತಾರೆ. ಡ್ಯಾನ್ಸ್‌ ಹಾಗೂ ಫೈಟ್‌ನಲ್ಲೂ ಹಿಂದೆ ಬಿದ್ದಿಲ್ಲ. ಜೆಕೆ ಸಿಕ್ಕ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ.

ನಕ್ಷತ್ರ (ದೀಪ್ತಿ) ಪ್ರತಿಭೆ ಅನಾವರಣಗೊಂಡಿದೆ. ರಮೇಶ್‌ ಭಟ್‌, ಸುಮಿತ್ರ ಅವರು ಅಪ್ಪ ಅಮ್ಮನಾಗಿ ಇಷ್ಟವಾಗುತ್ತಾರೆ. ಭುವನ್‌, ಮನೋಜ್‌, ಸುಂದರ್‌ರಾಜ್‌ ಸೇರಿದಂತೆ ಇತರರು ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಂಸಲೇಖ ಅವರ ಸಂಗೀತದ ಒಂದು ಹಾಡು ಇಷ್ಟವಾಗುತ್ತದೆ. ನಂದಕುಮಾರ್‌ ಅವರ ಛಾಯಾಗ್ರಹಣ ಕುಚ್ಚಿಕೂ ಗೆಳೆಯರ ಕಲರವ ಹೆಚ್ಚಿಸಿದೆ.

ಚಿತ್ರ: ಕುಚ್ಚಿಕೂ ಕುಚ್ಚಿಕು
ನಿರ್ದೇಶನ: ಡಿ.ರಾಜೇಂದ್ರ ಬಾಬು
ನಿರ್ಮಾಣ: ಎನ್‌. ಕೃಷ್ಣಮೂರ್ತಿ
ತಾರಾಗಣ: ಪ್ರವೀಣ್‌, ನಕ್ಷತ್ರ (ದೀಪ್ತಿ), ಜೆಕೆ, ಪವನ್‌, ಸುಮಿತ್ರ, ರಮೇಶ್‌ಭಟ್‌, ಸುಂದರ್‌ರಾಜ್‌, ಭುವನ್‌, ಮನೋಜ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next