Advertisement

ಪ್ರೀತಿ ಅನವರತ

06:32 PM Feb 13, 2020 | Sriram |

ಹೂವು ಅರಳುವ ಕ್ಷಣವನ್ನು ಪತ್ತೆ ಹಚ್ಚಿಯೇ ತೀರುತ್ತೇನೆ ಎಂದುಕೊಂಡು, ಕುತೂಹಲಿಯೊಬ್ಬ ರಾತ್ರಿಯಿಡೀ ಎಚ್ಚರವಿದ್ದನಂತೆ. ಆದರೆ, ಹೂವಾದರೂ ಸ್ವಿಚ್‌ ಅದುಮಿದಾಗ ಬಲ್ಬ್ ಬೆಳಗಿದಂತೆ ಅರಳುವುದೆ? ಅದು ಯಾವ ಮಾಯಕದಲ್ಲಿ ಅರಳುತ್ತ ಕಂಪು ಸೂಸುತ್ತ ಸೌಂದರ್ಯದ ಖುಷಿಯ ಚೆಲ್ಲುತ್ತ, ಈ ಜಗತ್ತು ಸಾಗುವಂತೆ ಮಾಡುವುದು? ಪ್ರೇಮವೂ ಹಾಗೆಯೇ. ನಾನು ಪ್ರೇಮಿಸುವುದೇ ಇಲ್ಲ ಎಂದು ಪಟ್ಟಾಗಿ ಕುಳಿತವರೂ ತಮಗೇ ಅರಿವಿಲ್ಲದಂತೆಯೇ ಪ್ರೇಮವೆಂಬ ಕಂಪಿನ ಬಲೆಯೊಳಗೆ ಅಡಿಯಿಟ್ಟಿರುತ್ತಾರೆ.

Advertisement

ಬದುಕಿನ ಎಲ್ಲ ಕ್ಷಣಗಳನ್ನು ಆವರಿಸಿಕೊಂಡಂತೆ ಪ್ರೇಮವು ಅಧಿಪತ್ಯ ಸ್ಥಾಪಿಸುವುದು ಹದಿಹರೆಯದಲ್ಲಿ. ಅದಕ್ಕೇ ವಿದ್ಯಾಭ್ಯಾಸ ಪಡೆಯುವ ಈ ಅವಧಿಯಲ್ಲಿ ಪ್ರೇಮವು ಹತ್ತಿರ ಸುಳಿಯದಂತೆ ಎಚ್ಚರದಿಂದ ಇರಬೇಕು ಎಂದು ಹಿರಿಯರು ಅನೇಕ ಕಟ್ಟುಕಟ್ಟಳೆಗಳನ್ನು ಮಾಡಿದ್ದರು.ಹದಿಹರೆಯದ ಪ್ರೇಮವು ವಾಸ್ತವ ಜಗತ್ತಿನ ಅರಿವಿಲ್ಲದೇ ಕುಡಿಯೊಡೆಯುವ ಚಿಗುರು.

ಸಾಲ್ಮರದ ರೆಂಬೆಯಲ್ಲಿ ಹಕ್ಕಿಗಳ ಗೂಡಿದೆ ತೂಗಾಡೊ ಗೂಡಿನಲ್ಲಿ ಜೋಗುಳದ ಹಾಡಿದೆ ಆ ಹಾಡಿಗೊಂದು ಆಸೆ ಹೊಂಗನಸ ತರಿಸಲು ಈ ರೆಕ್ಕೆಗೊಂದೇ ತವಕ ನಿನ್ನ ನಾ ವರಿಸಲು- ಎಂಬ ಸಾಲುಗಳಂತೆ ಮನವ ಮುದಗೊಳಿಸುತ್ತದೆ.

ಪ್ರೇಮಕ್ಕೆ ಸೋಪಾನವಾಗಿರುವ ಮದುವೆ ಎಂಬ ಪಕ್ವ ಹೆಜ್ಜೆಯನ್ನು ಇರಿಸಬೇಕಾದರೆ ಸ್ವತಂತ್ರ ಜೀವನ ನಡೆಸುವ ತಯಾರಿಯೂ ಅತ್ಯಗತ್ಯ ಅಲ್ಲವೇ. ಪ್ರೇಮಕ್ಕೆ ಹಿರಿಯರ ಅಂಕಿತವಿದ್ದರೆ ಅದು ಹೂವಿನ ಪರಿಮಳದಂತೆ ಎರಡೂ ಕುಟುಂಬಗಳಲ್ಲಿ ಸಂತೋಷದ ಅಲೆಯನ್ನು ಹುಟ್ಟಿಸುವುದು. ಪ್ರೇಮಿಸಿದ ಜೋಡಿಗಳು, ಹಿರಿಯರ ಮನವೊಲಿಸಿ ಮದುವೆಯಾಗುವ ಅನೇಕ ಸಿನಿಮಾಗಳು ಅದೆಷ್ಟು ಬಂದಿವೆ! ಹಿರಿಯರೊಪ್ಪಿದ ಮದುವೆಯಲ್ಲಿ ಸಂಬಂಧಗಳಿಗೆ ಹೊಸ ಜೀವ ಬಂದಿರುತ್ತದೆ. ಅಜ್ಜ ಅಜ್ಜಿ, ಅಕ್ಕ ಭಾವ, ಭಾವ ಅತ್ತಿಗೆ- ಹೀಗೆ ಅವರಿಗೆ ನೀಡಬೇಕಾದ ಗೌರವ, ಸ್ಥಾನಮಾನ ಯಾವುದು ಎಂದು ವಧುವಿನ ಜೊತೆಗೆ ವರನೂ ಕಲಿಯುತ್ತಾನೆ. ಇಬ್ಬರೂ ಸೇರಿ ಸಂಬಂಧಕ್ಕೆ ಹೊಸ ಭಾವ ತುಂಬುತ್ತಾರೆ. ಹುಟ್ಟುವ ಮಗುವಿನ ಜೊತೆಗೆ ಈ ಸಂಬಂಧದ ಬಳ್ಳಿ ವಿಸ್ತರಿಸುತ್ತ ಹೋಗುತ್ತದೆ.

ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌ ಎಂದು ಆಮಂತ್ರಿಸುವವರ ಕಣ್ಣುಗಳಲ್ಲಿ ನೆಮ್ಮದಿಯೊಂದು ಇಣುಕುತ್ತದೆ. ಯಾಕೆಂದರೆ ಬದುಕು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಹಿರಿಯರ ಆಸರೆಯು ಮನಸ್ಸಿನಲ್ಲಿ ಹೆಚ್ಚು ವಿಶ್ವಾಸವನ್ನು ತುಂಬುತ್ತದೆ. ಸಂಬಂಧಗಳೇ ಕಳಚಿಬೀಳುವ ಸನ್ನಿವೇಶಗಳಿರುವಾಗ ಹಿರಿಯರ ಮಾರ್ಗದರ್ಶನ ಸಿಗುತ್ತದೆ. ಅಲ್ಲದೆ ಇನ್ನೊಬ್ಬರು ನಮ್ಮ ಪ್ರೇಮದ ಕಾರಣದಿಂದಾಗಿ ನೆಮ್ಮದಿ ಮತ್ತು ಸಂತೋಷ ಅನುಭವಿಸುತ್ತಾರೆ ಎಂದಾದಲ್ಲಿ ನಾವು ಕೆಲವೊಮ್ಮೆ ತ್ಯಾಗ ಮಾಡುವುದು ಅನಿವಾರ್ಯವಾಗುತ್ತದೆ. ಪ್ರೀತಿ, ವಾತ್ಸಲ್ಯ ಮತ್ತು ಮಮಕಾರ ಸಂತೋಷ ಮತ್ತು ಅನುಭವಗಳ ಬೆಲೆಯನ್ನು ತ್ಯಾಗವು ಹೆಚ್ಚಿಸುವುದು ಮತ್ತು ಜೀವಂತಿ ಕೆಯ ಸ್ಪರ್ಶವನ್ನು ನೀಡುತ್ತದೆ.

Advertisement

ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ವಧುವಿನ ಮನಸ್ಸಿನಲ್ಲಿ ತುಮುಲ ಆತಂಕ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಬಂಧುಗಳು, ಹೆಜ್ಜೆ ಹೆಜ್ಜೆಗೂ ವಿಶ್ವಾಸದ ಮಾತುಗಳನ್ನು ಹೇಳುವ ಅತ್ತೆ, ಮಾವ ಅಥವಾ ಅತ್ತೆ ಮನೆಯಲ್ಲಿರುವ ಬಂಧುಗಳು, ಹೊಸ ಸಂಪ್ರದಾಯ, ರೀತಿ-ರಿವಾಜುಗಳನ್ನು ಕಲಿಯುವ ಹುಮ್ಮಸ್ಸಿಗೆ ಪ್ರೋತ್ಸಾಹದ ಧಾರೆ ಎರೆಯುವ ಪತಿ, ಜೊತೆಗೆ ಆಸರೆಯಾಗಿ ನಿಲ್ಲುವ ಅಮ್ಮನ ಫೋನ್‌ ಕಾಲ್‌. ಹೀಗೆ ಈ ಹಾದಿಯಲ್ಲಿ ಭದ್ರತೆಯ ಬಲ ಸಿಕ್ಕಿಬಿಡುವುದು. ಆಗ ನಮ್ಮೂರು ಚಂದವೋ ನಿಮ್ಮೂರು ಚಂದವೋ ಎಂದೆನ್ನ ಕೇಳಲೇಕೇ… ಎನ್ನುವ ಪತಿಯ ಜೊತೆಗೆ ಹೊಸದಾರಿಯ ಅಂದಚೆಂದವನ್ನೂ ನೋಡಲು, ಕಲಿಯಲು ವಧು ಹವಣಿಸುತ್ತಾಳೆ.

ಸಂತೋಷದಲ್ಲಿ ಮಾತ್ರವಲ್ಲ, ದುಃಖ ದಲ್ಲಿಯೂ ಗಂಡನ ಮನೆಯವರು ಜೊತೆಯಾಗುವ ಅನೇಕ ಸಂದರ್ಭಗಳನ್ನು ನಮ್ಮ ಸುತ್ತಮುತ್ತ ನೋಡುತ್ತೇವೆ. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡ ಸೊಸೆಯನ್ನು ಮನೆಯಿಂದ ಹೊರದಬ್ಬದೇ, ಅತ್ತೆಮಾವನೇ ಮರುಮದುವೆ ಮಾಡಿಸಿ, ಸ್ವತಃ ಧಾರೆ ಎರೆದು ಕೊಟ್ಟು ಜೀವನ ಕಲ್ಪಿಸಿದ ಉದಾಹರಣೆಯನ್ನು ಪತ್ರಿಕೆಗಳಲ್ಲಿ ಓದಿದ್ದೇವೆ.

ಹಿರಿಯರು ನಿಶ್ಚಯಿಸಿದ ಮದುವೆಗಳು ವಿಫ‌ಲವಾಗುತ್ತವೆ ಎನ್ನುವುದಂತೂ ಸುಳ್ಳು. ಯಾಕೆಂದರೆ ಎಷ್ಟೋ ಪ್ರೇಮ ವಿವಾಹಗಳೂ ವಿಫ‌ಲವಾದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದೇನೇ ಇರಲಿ, ಇನ್ನೂ ಮದುವೆ ಸ್ವರ್ಗದಲ್ಲಿ ಆಗಿರುತ್ತದೆ ಎನ್ನುವ ಮಾತು “ಅರೇಂಜ್‌’ ಮದುವೆಯಲ್ಲಿ ಹೆಚ್ಚು ಅನ್ವಯವಾಗುತ್ತದೆ. ಎಲ್ಲಿಯದೋ ಹುಡುಗನಿಗೆ ಇನ್ನಾವುದೋ ದೂರದ ಸಂಬಂಧ ಕೂಡುವುದಾದರೂ ಹೇಗೆ. ಆದರೆ, ಈ ಕಾಲದಲ್ಲಿ ಫೋನ್‌, ಫೇಸ್‌ಬುಕ್‌ ಮುಂತಾದ ನೂರು ದಾರಿಗಳಿವೆ. ಮದುವೆ ನಿಶ್ಚಯವಾದ ಕೂಡಲೇ ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ಇದ್ದೇ ಇದೆ.

-ಸುಮಲತಾ ಸುರೇಶ್‌
ಉಪನ್ಯಾಸಕಿ,
ಭಂಡಾರ್‌ಕಾರ್ಸ್‌ ಕಾಲೇಜು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next