Advertisement

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

12:59 PM Jan 28, 2022 | Team Udayavani |

ಹುಟ್ಟಿನಿಂದಲೇ ನ್ಯೂನತೆಗಳಿರುವುದು ಒಂದೆಡೆಯಾದರೆ ಜೀವನದ ದಾರಿಯಲ್ಲಿ ಅನಿರೀಕ್ಷಿತವಾಗಿ ಬರುವ ನ್ಯೂನತೆಗಳು ಇನ್ನೊಂದೆಡೆ. ಆದರೆ ಸಾಧನೆಗೆ ಇದು ಯಾವುದೂ ಅಡ್ಡಿಯಲ್ಲ ಎನ್ನುವುದನ್ನು ಹಲವರು ಈಗಾಗಲೇ ನಿರೂಪಿಸಿದ್ದಾರೆ. ಅನಿರೀಕ್ಷಿತವಾಗಿ ಬರುವ ನ್ಯೂನತೆಗಳು ಮನುಷ್ಯನನ್ನು ಹೆಚ್ಚು  ಬಲಹೀನರನ್ನಾಗಿ ಮಾಡುತ್ತದೆ.  ನಿನ್ನೆಯವರೆಗೂ ಸರಿಯಾಗಿ ನಡೆದಾಡುತ್ತಿರುವವರಿಗೆ ಇಂದು ಒಂದು ಕಾಲು ಇಲ್ಲ. ಇನ್ನು ಮುಂದೆ ಒಂದೇ ಕಾಲನ್ನು  ಅವಲಂಬಿಸಬೇಕು ಎಂದಾಗ ಆಗುವ ಅಸಹಾಯಕತೆಯೇ ಹೆಚ್ಚು. ಆದರೆ ಅದನ್ನು ಮೀರಿ ಸಾಧನೆ ಮಾಡಿದವರು ಸುಬ್ರೀತ್‌ ಕೌರ್‌ ಘುಮ್ಮನ್‌.

Advertisement

ಒಂದು ಅಪಘಾತ  ಬದುಕನ್ನೇ ಅಂಧಕಾರಕ್ಕೆ ದೂಡಿ ಬಿಡುತ್ತದೆ. ಹಲವು ಕನಸನ್ನು ನುಚ್ಚು ನೂರು ಮಾಡಿ ಬಿಡುತ್ತದೆ. ಆದರೆ ಕೆಲವೊಬ್ಬರು ಅಪಘಾತದಲ್ಲಾದ ನ್ಯೂನ್ಯತೆಯನ್ನೇ ಮರೆತು, ತಮಗೇನೂ ಆಗೇ ಇಲ್ಲವೆಂಬಂತೆ ಕಲ್ಪನೆಗೂ ಮೀರಿ ಸಾಧನೆ ಮಾಡುತ್ತಾರೆ. ಮುಖ್ಯವಾಗಿ ಸಾಧಿಸುವ ಛಲ ಬೇಕು. ಅದಕ್ಕಿಂತಲೂ ಹೆಚ್ಚಾಗಿ ಜೀವನ ಪ್ರೀತಿ ಇರಬೇಕು. ಶುಬ್ರೀತ್‌ ಕೌರ್‌ ಘುಮ್ಮನ್‌ ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ  ಅಪ್ರತಿಮ ಸಾಧಕಿ.

ಪಂಜಾಜ್‌ ಮೂಲದ ಸುಬ್ರೀತ್‌ ತನ್ನ ಒಂದು ಕಾಲಿನಿಂದಲೇ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ  ಸುದ್ದಿಯಾಗುತ್ತಿದ್ದಾರೆ. ಸಾಧನೆಗೆ ವೈಕಲ್ಯಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಈಕೆ ಉದಾಹರಣೆ. 28ರ ಹರೆಯದ ಸುಬ್ರೀತ್‌ ಏಷ್ಯಾದ ಪ್ರಸಿದ್ಧ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ಜನಮನ ಗೆದ್ದಿದ್ದಳು. ಒಂದು ಕಾಲಿನ ನೃತ್ಯಗಾತಿ ಎಂದೇ ಪ್ರಸಿದ್ಧಿ ಪಡೆದಳು. 2014ರಲ್ಲಿ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ಪ್ರಸಿದ್ಧಿ ಪಡೆದಿದ್ದ ಬಳಿಕ ಇದೀಗ ಮತ್ತೆ 7 ವರ್ಷಗಳ ಬಳಿಕ ದೂರದರ್ಶನದಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ತನ್ನ ಆಡಿಷನ್‌ ಪ್ರದರ್ಶನವನ್ನು ಮರುಸೃಷ್ಟಿಸಿದ್ದಳು. ಸದ್ಯ ಇದು ಜಾಲತಾಣದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ನೋಡುಗರನ್ನು ತಲುಪಿದೆ.

ಸುಬ್ರೀತ್‌ ಹುಟ್ಟಿದ್ದು ಪಂಜಾಬ್‌ನಲ್ಲಿ.  2009ರಲ್ಲಿ  ಸ್ಕೂಟರ್‌ ಸವಾರಿ ಮಾಡುತ್ತಿದ್ದಾಗ ಅಪಘಾತವಾಗಿ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಳು. ನೃತ್ಯವೇ ಕನಸು ಎಂದುಕೊಂಡವಳಿಗೆ ಇದು ಬಹುದೊಡ್ಡ ಆಘಾತವಾಗಿತ್ತು. “ನಾನು ನೃತ್ಯವನ್ನು ಬಹಳ ಇಷ್ಟಪಟ್ಟಿದ್ದೆ. ಆದರೆ ಅಪಘಾತದ ಅನಂತರವೇ ನಾನು ಪ್ರೀತಿಸಿದ್ದನ್ನು ಸಾಧಿಸಬೇಕು ಎಂದುಕೊಂಡಿದ್ದು. ನನಗೆ ಜೀವನದಲ್ಲಿ ಸಾಧಿಸಲು ಮತ್ತೊಂದು ಅವಕಾಶ ಸಿಕ್ಕಿದೆ’ ಎಂದು ಈಕೆ ಹೇಳಿಕೊಂಡಿದ್ದಾರೆ. ಕಳೆದುಕೊಂಡಿದ್ದು ದೊಡ್ಡದಾದರು ಅದು ಆಕೆಯ ಕನಸಿಗೆ ಭಂಗ ತರಲಿಲ್ಲ. ಸಾಧಿಸುವ ಹಠ ತೊಟ್ಟ ಆಕೆ ಮತ್ತೆ ನೃತ್ಯ ಮಾಡಲು ಆರಂಭಿಸಿದಳು. ಅಪಘಾತವಾಗಿ ಒಂದು ವರ್ಷ ಕಳೆದ ಅನಂತರ  ಸುಬ್ರೀತ್‌ ಜಿಮ್‌ಗೆ ಸೇರಿಕೊಂಡಳು. 2012ರ ಹೊತ್ತಿಗೆ ಒಂದು ಕಾಲಿನಲ್ಲಿ ನೃತ್ಯ ಮಾಡಲು ಕಲಿತಳು. ಅನಂತರ ಆಕೆ ಛತ್ತೀಸ್‌ಘಡದಲ್ಲಿ ನೃತ್ಯ ಶಾಲೆಯೊಂದಕ್ಕೆ ಸೇರಿಕೊಂಡಳು. 2014ರಲ್ಲಿ ಇಂಡಿಯಾ ಗಾಟ್‌ ಟಾಲೆಂಟ್‌ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಳು. ಆದರೆ ಅವಳ ಹೋರಾಟದ ಹಾದಿ ಇನ್ನೂ ಮುಗಿದಿರಲಿಲ್ಲ.

2014ರ ಅನಂತರದ ಎರಡು ವರ್ಷಗಳಲ್ಲಿ ಸುಬ್ರೀತ್‌ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದಳು. ಸುಬ್ರೀತ್‌ಗೆ ಆಕೆಯ ಗಂಡ ವಿಚ್ಛೇದನ ನೀಡುತ್ತಾನೆ. ಜತೆಗೆ ನೃತ್ಯವನ್ನೇ ಜೀವನವನ್ನಾಗಿಸಿದ ಆಕೆಗೆ ದೇಹದ ತೂಕ ಏರಿಕೆಯಾಗುವ ಸಮಸ್ಯೆಯೂ ಎದುರಾಗುತ್ತದೆ. ಅನಂತರದ ನಿರಂತರ ಪರಿಶ್ರಮ, ಪ್ರಯತ್ನ ಆಕೆಯನ್ನು ಮತ್ತೆ ಮೊದಲಿನಂತೆ ಆಗುತ್ತಾಳೆ.

Advertisement

ದೈಹಿಕ ನ್ಯೂನ್ಯತೆಯು ಸಾಧನೆಗೆ ಅತಿ ದೊಡ್ಡ ಸಮಸ್ಯೆ ಎನ್ನುವವರಿಗೆ ಧನಾತ್ಮಕತೆಯನ್ನು ಹರಡಲು ಸಾಮಾಜಿಕ ಜಾಲತಾಣವು ಸಹಕಾರಿಯಾಗಿದೆ ಎನ್ನುತ್ತಾರೆ ಸುಬ್ರೀತ್‌. ತನ್ನ ನೃತ್ಯದ ಮೂಲಕ ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ನ್ಯೂನತೆಯ ಬಗ್ಗೆ ನಕರಾತ್ಮಕವಾಗಿ ಮಾತನಾಡುವವರಿಗೆ ದಿಟ್ಟ ಉತ್ತರ ಕೊಟ್ಟಿದ್ದಾಳೆ. ನ್ಯೂನತೆಯನ್ನು ಮೆಟ್ಟಿ ನಿಂತ ಈಕೆ ಯುವಜನತೆಗೆ ಸ್ಫೂರ್ತಿಯಾಗಿದ್ದಾಳೆ. ಸಾಧನೆಗೆ ನ್ಯೂನತೆಗಳು ಅಡ್ಡಿಯಾಗುವುದಿಲ್ಲ ಎಂದು ಜಗತ್ತಿಗೇ ಸಾರಲು ಹೊರಟಿರುವ ಕೌರ್ ನ್ಯೂನತೆಗಳ ಬಗ್ಗೆ ಕೀಳರಿಮೆ ಹೊಂದಿರುವವರಿಗೆ ಆದರ್ಶವಾಗಿದ್ದಾಳೆ.

ರಂಜಿನಿ

Advertisement

Udayavani is now on Telegram. Click here to join our channel and stay updated with the latest news.

Next