Advertisement

ಫೆ. 26: ಮುಂಬ್ರಾ ಭಗವಾನ್‌ ಬಾಹುಬಲಿ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ

05:30 PM Feb 25, 2017 | Team Udayavani |

ಮುಂಬಯಿ: ಧರ್ಮಸ್ಥಳದ ಧರ್ಮಾಧಿಕಾರಿಗಳಾದ  ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ  ಧಾರ್ಮಿಕ ಕ್ಷೇತ್ರಗಳ ಸ್ವತ್ಛತಾ ಅಭಿಯಾನ ಪರಿಕಲ್ಪನೆಯಿಂದ ಪ್ರೇರಣೆ ಪಡೆದು  ಮುಂಬ್ರಾದ ಬಾಹುಬಲಿ ಕ್ಷೇತ್ರದಲ್ಲಿ  ಫೆ. 26ರಂದು ಬೆಳಗ್ಗೆ 9ರಿಂದ ಸ್ವತ್ಛತಾ ಕಾರ್ಯಕ್ರಮವನ್ನು ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ವತಿಯಿಂದ ಆಯೋಜಿಸಲಾಗಿದೆ.

Advertisement

ಜಗತ್ತಿಗೆ ತ್ಯಾಗ  ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ತನ್ನ ತ್ಯಾಗ ಶಕ್ತಿಯ ಮೂಲಕ ಸಾರಿದವರು ಭಗವಾನ್‌  ಬಾಹುಬಲಿ. ಇಂತಹ ಅತ್ಯುನ್ನತ ತ್ಯಾಗಿಯ ಉನ್ನತ ಪ್ರತಿಮೆಗಳು ಹೆಚ್ಚು ಇರುವುದು ಕರ್ನಾಟಕದಲ್ಲಿ. ಹಾಗೆಯೇ ಜೈನರ ಸಂಖ್ಯೆ ಅಧಿಕವಾಗಿರುವ ಮಹಾರಾಷ್ಟ್ರದಲ್ಲಿಯೂ ಕೂಡ ಬಾಹುಬಲಿ ಜಿನ ದೇವನ ಪ್ರತಿಮೆಗಳನ್ನು ನಾವು ಕಾಣಬಹುದು. ಇಂತಹ ಕ್ಷೇತ್ರಗಳಲ್ಲಿ ಮುಂಬಯಿ ನಗರದ ಪ್ರವೇಶ ದ್ವಾರದಲ್ಲಿರುವ ಮುಂಬ್ರಾದ ಭಗವಾನ್‌  ಬಾಹುಬಲಿ ಕ್ಷೇತ್ರವೂ  ಒಂದು. ಸುಮಾರು 50 ವರ್ಷಗಳ ಹಿಂದೆ ಆಚಾರ್ಯ 108 ಶಾಂತಿಸಾಗರ ಮಹಾ ರಾಜರ ಶಿಷ್ಯರಾದ ಆಚಾರ್ಯ 108 ನೇಮಿಸಾಗರ ಮುನಿ ಮಹಾರಾಜರಿಂದ ಪ್ರತಿಷ್ಟಾಪಿಸಲ್ಪಟ್ಟ 28 ಅಡಿ ಎತ್ತರದ ಭಗವಾನ್‌  ಬಾಹುಬಲಿ ಪ್ರತಿಮೆಯು ನೋಡಲು ನಯನ ಮನೋಹರವಾಗಿದೆ.

ಸುಮಾರು 13 ಎಕರೆಯಷ್ಟು ವಿಸ್ತೃತ ಪ್ರದೇಶದಲ್ಲಿರುವ ಈ ಕ್ಷೇತ್ರದಲ್ಲಿ ಅನೇಕ ಬಾರಿ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ಕೂಡ ಬಹಳ ವಿಜೃಂಭಣೆಯಿಂದ ಜರಗಿವೆ. ಆಚಾರ್ಯರತ್ನ 108 ದೇಶಭೂಷಣ ಮುನಿ ಮಹಾರಾಜರ ಸಂಘ, ಆಚಾರ್ಯ 108  ಕುಂಥುಸಾಗರ ಮುನಿಮಹಾರಾಜರ ಸಂಘ , ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯರು ಈ ಕ್ಷೇತ್ರಕ್ಕೆ ಆಗಮಿಸಿ ಭಗವಾನ್‌ ಬಾಹುಬಲಿಯ ದರ್ಶನಗೈದಿದ್ದಾರೆ.  ಮುನಿಶ್ರೀ 108 ಕಲ್ಪವೃಕ್ಷನಂದಿ ಮಹಾರಾಜರ 2  ಚಾತು ರ್ಮಾಸವು ಈ ಕ್ಷೇತ್ರದಲ್ಲಿ ನಡೆದಿದೆ. ಆದರೆ ಈಗ ಕ್ಷೇತ್ರಕ್ಕೆ ಆಗಮಿಸುವ ಶ್ರಾವಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಕ್ಷೇತ್ರವು ಜೀರ್ಣಾವಸ್ಥೆಯಲ್ಲಿರುವುದು  ವಿಷಾದನೀಯ.

ಈ ಸಮಾಜಮುಖೀ ಕಾರ್ಯದಲ್ಲಿ ಶ್ರಾವಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದು ಅಖೀಕ ಕರ್ನಾಟಕ ಜೈನ ಸಂಘ ಮುಂಬಯಿ ತಿಳಿಸಿದೆ. ಅಭಿಯಾನದ ಸಂದರ್ಭದಲ್ಲಿ ಊಟೋಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂಬ್ರಾ ಪೂರ್ವ, ಪೊಲೀಸ್‌ ಠಾಣೆಯ ಎದುರುಗಡೆಯಲ್ಲಿ ಈ ಕ್ಷೇತ್ರವಿದ್ದು, ಸಮಾಜ ಬಾಂಧವರು ಪಾಲ್ಗೊಂಡು ಸಹಕರಿಸುವಂತೆ ಸಂಘದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next