Advertisement

ಜೇಡ ಇರಲೇಬೇಕು ನೋಡ

05:44 PM Jun 02, 2019 | Suhan S |

ಜೇಡವನ್ನು ಬಳಸಿ ಅನೇಕ ರೋಗಗಳನ್ನು ನಿವಾರಣೆ ಮಾಡಿಕೊಳ್ಳುವ ತಂತ್ರವನ್ನು ನಮ್ಮ ಆದಿವಾಸಿಗಳು ಅನುಸರಿಸುತ್ತಿದ್ದರು. ಈಗ ಇದು ಆಫ್ರಿಕಾದಲ್ಲಿ ಚಾಲ್ತಿಯಲ್ಲಿದೆ. ಇದನ್ನು ಎಲ್ಲ ರೈತರೂ ಜಾರಿ ಮಾಡಿದರೆ ರೋಗ ಬಾಧೆಯ ಪರಿತಾಪ ಕಡಿಮೆಯಾಗುತ್ತದೆ ಅನ್ನೋದಕ್ಕೆ ಹಿರಿಯ ವಿಜ್ಞಾನಿ
ಡಾ. ಪಿ.ವಿ ಹೆಗಡೆ ತಮ್ಮ ತೋಟದಲ್ಲಿ ಪ್ರಯೋಗ ಮಾಡಿ ಗೆದ್ದಿದ್ದೇ ಉದಾಹರಣೆ.

Advertisement

ಪ್ರಾಚೀನ ಭಾರತೀಯರು ಉಪಕಾರಿ-ಅಪಕಾರಿ ಕೀಟ, ಪ್ರಾಣಿಗಳ ಬಗ್ಗೆ ಅನೇಕ ಜಾನಪದ ಕಥೆಗಳನ್ನು ಸೃಷ್ಟಿಸಿದ್ದಾರೆ. ಪ್ರಾಚೀನ ಗ್ರೀಕ್‌ ಸಮುದಾಯದವರೂ ಇದಕ್ಕೆ ಹೊರತಲ್ಲ. ಇದೆಲ್ಲ ಬಿಡಿ, ಜೇಡದಿಂದ ಕೃಷಿಕಾರ್ಯಕ್ಕೆ ಅಪಾರ ಅನುಕೂಲಗಳಿವೆ. ಇದನ್ನು ಅರ್ಥಮಾಡಿಕೊಂಡಿದ್ದ ಪ್ರಾಚೀನ ಏಷಿಯನ್ನರು ಹೊಲ-ಗದ್ದೆ-ತೋಟಗಳಲ್ಲಿರುವ ಜೇಡಗಳನ್ನು ಕೊಲ್ಲುತ್ತಿರಲಿಲ್ಲ. ಇವುಗಳ ಚಟುವಟಿಕೆಗೆ ಯಾವುದೇ ಅಡ್ಡಿಯುಂಟಾಗದಂತೆ ಎಚ್ಚರ ವಹಿಸುತ್ತಿದ್ದರು. ಏಕೆಂದರೆ, ಇವುಗಳು ಬೆಳೆಗಳಿಗೆ ತೀವ್ರ ಹಾನಿಯುಂಟು ಮಾಡುವ ಕೀಟಗಳನ್ನು ಭಕ್ಷಿಸಿ, ಬೆಳೆಗಳನ್ನು ಸಂರಕ್ಷಿಸುತ್ತಿದ್ದವು. ಇದರಿಂದ ಕೃಷಿಕರು ಸಮೃದ್ಧವಾಗಿ ಬೆಳೆದ ಬೆಳೆಯನ್ನು ಕೊಯ್ಲುಮಾಡಿ ನೆಮ್ಮದಿಯಿಂದ ಮನೆಗೆ ಸಾಗಿಸಲು ಅನುಕೂಲವಾಗುತ್ತಿತ್ತು.

ಈ ಹಿನ್ನೆಲೆಯನ್ನೆಲ್ಲ ಅರ್ಥಮಾಡಿಕೊಂಡ ಜಪಾನಿನ ಕೃಷಿಋಷಿ ಮಸನೋಬ ಪುಕವೋಕ ಅವರು, ಜೇಡಗಳ ಮಹತ್ವವನ್ನು ಬಹುಮಹತ್ವದ ಕೃತಿ “ಒನ್‌ ಸ್ಟ್ರಾ ರೆವಲ್ಯೂಷನ್‌’ನಲ್ಲಿ ಪ್ರಸ್ತಾಪಿಸಿದ್ದಾರೆ. ಅವುಗಳ ಉಳಿಯುವಿಕೆ, ಬೆಳೆಯುವಿಕೆಯಿಂದ ಕೃಷಿಕಾರ್ಯಕ್ಕೆ ಅಪಾರ ಅನುಕೂಲವಾಗುತ್ತದೆ ಎಂದು ವಿವರಿಸಿದ್ದಾರೆ. ಭಾರತದಲ್ಲಿಯೂ ಪ್ರಜ್ಞಾವಂತ ಕೃಷಿಕರು, ಆದಿವಾಸಿಗಳು ಬೆಳೆಗಳನ್ನು ಕೀಟಗಳಿಂದ, ರೋಗಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಜೇಡಗಳ ಕಾರ್ಯಗಳಿಗೆ ಅಡ್ಡಿಯುಂಟಾಗದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.

ಆಂಧ್ರಪ್ರದೇಶ, ಒಡಿಸ್ಸಾ ರಾಜ್ಯಗಳ ಉತ್ತರ ಘಟ್ಟ ಪ್ರದೇಶಗಳಲ್ಲಿ ಸಾಕಷ್ಟು ಮಂದಿ ಆದಿವಾಸಿಗಳಿದ್ದಾರೆ. ಇವರು ತಮ್ಮ ಬದುಕಿಗೆ ಅರಣ್ಯ ಉತ್ಪನ್ನಗಳ ಜೊತೆಗೆ ವ್ಯವಸಾಯವನ್ನೂ ಅವಲಂಬಿಸಿದ್ದಾರೆ. ವಿವಿಧ ಹಣ್ಣಿನ ಬೆಳೆಗಳ ತೋಟಗಾರಿಕೆ ಮಾಡುವ ಇವರು ಭತ್ತವನ್ನೂ ಬೆಳೆಯುತ್ತಾರೆ. ಭತ್ತಕ್ಕೆ ಕಾಂಡಕೊರಕ, ಸುಳಿಕೊರಕಗಳ ಹಾವಳಿ ಹೆಚ್ಚು. ಇಂಥ ಕೀಟಗಳನ್ನು ನಿಯಂತ್ರಣ ಮಾಡುವಲ್ಲಿ ಜೇಡಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಜೇಡಗಳನ್ನು ಒರಿಯಾ ಆದಿವಾಸಿಗಳು ಪಟಕಿಡಿ ಎನ್ನುತ್ತಾರೆ. ಆಂಧ್ರದ ಆದಿವಾಸಿಗಳು ಸಲೆಪುರುಗು ಎಂದು ಕರೆಯುತ್ತಾರೆ.

ನಮ್ಮ ನೆಲದ ಹಿರಿಯ ವಿಜ್ಞಾನಿ ಡಾ. ವಿ.ಪಿ. ಹೆಗ್ಡೆ, ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅವರು, ತಮ್ಮ ವೃತ್ತೀಯ ಅನುಭವದಲ್ಲಿ ಜೇಡದ ಮೇಲೆ ಒಂದು ಕಣ್ಣು ಇಟ್ಟಿದ್ದರು. ಜೊತೆಗೆ, ಸಕಲೇಶಪುರದ ಹರಿಹಳ್ಳಿಯಲ್ಲಿರುವ ತಮ್ಮ ಕಾಫಿ ತೋಟದಲ್ಲಿ ಜೇಡವನ್ನು ಬಳಸಿ ಏನೇನು ಉಪಯೋಗ ಎನ್ನುವುದರ ಬಗ್ಗೆ ಪ್ರಯೋಗ ಕೂಡ ನಡೆಸಿ ಯಶಸ್ವಿ ಗಳಿಸಿದ್ದಾರೆ.

Advertisement

ಇತಿಹಾಸ ಕೆದಕಿದರೆ ಬೆಳೆಗಳಿಗೆ ಹಾನಿಯುಂಟು ಮಾಡುವ ಕೀಟಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಜೇಡಗಳನ್ನು ಅವಲಂಬಿಸುವಿಕೆ ತಲೆತಲೆಮಾರುಗಳಿಂದಲೂ ಜಾರಿಯಲ್ಲಿದೆ ಎಂಬ ಸಂಗತಿ ಅರಿವಾಗುತ್ತದೆ. ಜೇಡಗಳ ಚಟುವಟಿಕೆ ಎಷ್ಟು ವಿಪುಲವಾಗಿದೆ ಎಂದರೆ, ಕಾಂಡಕೊರಕ, ಸುಳಿಕೊರಕಗಳ ಬಾಧೆಗೆ ತುತ್ತಾದ ಒಂದೇ ಒಂದು ಭತ್ತದ ಪೈರೂ ಅಲ್ಲಿ ಕಾಣಸಿಗುವುದಿಲ್ಲ. ಆಫ್ರಿಕಾದ ತೋಟಗಾರರು ವಿವಿಧ ಹಣ್ಣಿನ ಬೆಳೆಗಳನ್ನು ಬಾಧಿಸುವ ಹಾನಿಕಾರಕ ಕೀಟಗಳ ನಿಯಂತ್ರಣಕ್ಕೆ ಜೇಡಗಳ ಚಟುವಟಿಕೆಗಳನ್ನೆಲ್ಲ ಅವಲಂಬಿಸಿದ್ದಾರೆ. ಸಹಜವಾಗಿ ಇಲ್ಲೆಲ್ಲ ಬಹು ವಿಸ್ತಾರವಾದ ಜೇಡದ ಬಲೆಗಳು ಕಾಣುತ್ತವೆ. ಜೇಡಗಳು ನಿರಾತಂಕವಾಗಿ ಸಂಚರಿಸುತ್ತಿರುತ್ತವೆ. ಇಲ್ಲಿನ ಮಕ್ಕಳು ಹುಡುಗಾಟಿಕೆಯಿಂದ ಜೇಡಗಳ ಬಲೆಗೆ ಹಾನಿ ಉಂಟು ಮಾಡಿದರೆ ಹಿರಿಯರು ಕರೆದು ತಿಳಿವಳಿಕೆ ಹೇಳುತ್ತಾರೆ.

ನಮ್ಮ ಆದಿವಾಸಿಗಳೆಲ್ಲರೂ ತಾವು ಬೆಳೆಯುವ ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುವುದಿಲ್ಲ. ಹಾಗೆ ಮಾಡಿದರೆ ಭೂತಾಯಿ ಸಿಟ್ಟಾಗುತ್ತಾಳೆ ಎಂಬ ನಂಬಿಕೆ ಅವರಲ್ಲಿದೆ. ಇಂಥ ನಂಬಿಕೆ ಉಳಿದ ಪ್ರದೇಶಗಳಲ್ಲಿ ಕಣ್ಮರೆಯಾಗಿರುವುದು ವಿಷಾದನೀಯವೇ. ಆದರೆ, ಹೆಗಡೆ ಅವರು ಹೇಳುವಂತೆ ಇದನ್ನು ಎಲ್ಲ ರೈತರೂ ಪ್ರಯೋಗ ಮಾಡಿದರೆ ಸಮಸ್ಯೆಯ ತೀವ್ರತೆ ಕಡಿಮೆ ಆಗುತ್ತದಂತೆ.

– ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next