Advertisement

ಒಂಟಿ ಹೆಂಗಸರ ಕತೆಗಳು 

06:00 AM Jun 08, 2018 | |

ಸಾತಜ್ಜಿ, ನಿನ್ನ ಮದುವೆ ಕಥೆ ಹೇಳೆ’ ಅಂದರೆ ಸಾಕು. ಹಲ್ಲಿಲ್ಲದ ಬೊಜ್ಜು ಬಾಯಗಲಿಸಿ ಸಾತಜ್ಜಿ ತನ್ನ ಮದುವೆಯ ಕಥೆಯನ್ನು ಹೇಳತೊಡಗುತ್ತಿದ್ದಳು. 

Advertisement

ಆಗ ನಾನು ಭಾರೀ ಸಣ್ಣೋಳು ಕಾಣು. ಅದ್ಯಾರೋ ದೂರದ ಊರಿನವರು ಸಂಬಂಧ ಕೇಳಕಂಡು ಬಂದ್ರು. ನನ್ನ ಗಂಡನಿಗೆ ಅದು ಮೂರನೇ ಮದುವಿಯಂತೆ. ಮೊದಲಿನ ಹೆಂಡತಿಯರ ಮಕ್ಕಳೆಲ್ಲ ದೊಡ್ಡೋರಾಗಿ ಮದುವಿಯಾಗಿದ್ರು. ಅಷ್ಟು ದೂರದಿಂದ ಕೇಳಕಂಡು ಬಂದಿದ್ರು, ಊರಿಗೆಲ್ಲ  ಶ್ರೀಮಂತರು, ಊಟ-ತಿಂಡಿಗೆಲ್ಲ ಕಡಿಮೆಯಿಲ್ಲ ಅಂತ ನನ್ನಪ್ಪಅವರಿಗೆ ನನ್ನ ಮದೀ ಮಾಡª. ನಮ್ಮನೀಲೆ ಮದುವಿ. ಮದುವೀ ದಿನಾ ಅದೆಂತ ಮಳೀ ಅಂದರೆ ಒಂದು ವಾರ ಹೊಳೀ ದಾಟೂಕಾಗ್ಲಿಲ್ಲ ಕಾಣು. ಅದ್ಕೆ ಎಲ್ಲರೂ ಇಲ್ಲೇ ಉಳಕಂಡ್ರು. ಬೀಗರು ಉಳದೀರು ಅಂದಮ್ಯಾಲೆ ಕೋಳಿಗೀಳಿ ಮಾಡಬೇಕಲ್ಲ. ವಾರವಿಡೀ ಮಾಡಿ ಹಾಕರು. ತಿಂದು ಮನಿಗೋದ ಮುದುಕ ಜ್ವರ ಬಂದು ಮಲಗಿ ಹೋಗೇಬಿಟ್ರಾ. ನಂಗಾಗ ಎಂಥದ್ದೂ ಗೊತ್ತಾಗಲಿಲ್ಲ. ಹದಿನಾಲ್ಕನೇ ದಿನಕ್ಕೆ ನನ್ನಪ್ಪ ಹೋಗಿ ಹೆಗಲಮೇಲೆ ಕೂರಿಸ್ಕಂಡು ನನ್ನನ್ನು ಕರ ಬಂದದದ್ದಷ್ಟೇ ನೆನಪಿತ್ತು ಕಾಣು.

ಯಾರಧ್ದೋ ಕಥೆಯೆಂಬಂತೆ ತನ್ನ ಕಥೆಯನ್ನು ಹೇಳುವ ಸಾತಜ್ಜಿಗೆ ತನ್ನ ಬದುಕಿನ ದುರಂತದ ಬಗ್ಗೆ ಕಿಂಚಿತ್ತೂ ದುಃಖವಿದ್ದಂತೆ ಕಾಣುತ್ತಿರಲಿಲ್ಲ. ಹಾಗೇನಾದ್ರೂ ವಿಚಾರಿಸಿದರೆ ಅದಕ್ಕವಳು ತನ್ನೂರ ಮಾರಿಯ ವೈಧವ್ಯದ ಕಥೆಯನ್ನು ಮುಂದಿಡುತ್ತಿದ್ದಳು. ಊರ ದೇವಿ ಮಾರಿ ಚೆಂದವಿರುವ ಯುವಕನೊಬ್ಬನಿಗೆ ತನ್ನನ್ನು ತಾನು ಅರ್ಪಿಸಿಕೊಂಡುಬಿಟ್ಟಳಂತೆ. ಅವನೊಡನೆ ಬಾಳುವೆ ಮಾಡುತ್ತಾ, ಜೀವನವೆಲ್ಲ ಸ್ವರ್ಗ ಎಂದುಕೊಳ್ಳುತ್ತಿರುವಾಗಲೇ ಮಗನೊಬ್ಬ ಹುಟ್ಟಿ ಅವಳ ಆನಂದವನ್ನು ಇಮ್ಮಡಿಗೊಳಿಸಿದನಂತೆ. ಮಗನು ದೊಡ್ಡವನಾಗಿ ಅವ್ವನೊಂದಿಗೆ ಮನೆಯೊಳಗೆ ಇರಲು ಬೇಸರವಾಗಿ, ಅಪ್ಪನೊಡನೆ ಅವನ ಅಂಗಡಿಗೆ ಹೋಗತೊಡಗಿದನಂತೆ. ಇಂತಿರುವ ಮಗ ಮನೆಯಲ್ಲಿ ಅಡಿಕೆ ಹಾಳೆಗಳನ್ನು ಕತ್ತರಿಸಿ ಮೆಟ್ಟು ಹೊಲಿಯತೊಡಗಿದಾಗ, ಬೆಚ್ಚಿದ ಮಾರಿ “ಇದೆಲ್ಲಿಂದ ಕಲಿತೆ’ ಎಂದು ವಿಚಾರಿಸಿದಳಾಗಿ, “ಅಪ್ಪನಿಂದ’ ಎಂದುತ್ತರಿಸಿದನಂತೆ. ಮರುದಿನ ಗಂಡನನ್ನು ಹಿಂಬಾಲಿಸಿ ಹೋದ ಮಾರಿಗೆ ಅವನು ತನ್ನ ಜಾತಿಯವನಲ್ಲ, ಚಮ್ಮಾರ ಎಂದು ಗೊತ್ತಾದದ್ದೇ ತನಗೆ ವಿಷಯ ತಿಳಿಸದೇ ಮೋಸದಿಂದ ಮದುವೆಯಾದ ಅವನನ್ನು ಕೊಲ್ಲಲು ಅಟ್ಟಿಸಿಕೊಂಡು ಹೋದಳಂತೆ. ಅವನು ಹೆದರಿ ಕೋಣವೊಂದರ ದೇಹದೊಳಗೆ ನುಸುಳಿದರೂ ಬಿಡದೇ ಅವನನ್ನು ಸಂಹರಿಸಿದಳಂತೆ. “ಊರ ದೇವಿಗೇ ವಿಧವೆಯ ಪಟ್ಟ ತಪ್ಪಲಿಲ್ಲ ಅಂದಮೇಲೆ ನನ್ನದೇನು ಮಹಾ?’ ಎಂದು ನಗುತ್ತಿದ್ದಳು.

ಆದರೆ, ಮದುವೆಯಾದ ವರ್ಷಕ್ಕೆಲ್ಲ ಗಂಡನನ್ನು ಕಳಕೊಂಡು ತವರು ಸೇರಿದ್ದ ಗಂಗೆ, ಗೌರಿ, ಗಣಪಿಯಂಥವರು ಇಷ್ಟು ನಿರುಮ್ಮಳವಾಗಿರಲಿಲ್ಲ. ಒಬ್ಬಳ ಗಂಡ ಹೊಳೆ ದಾಟುವಾಗ ಕಾಲುಜಾರಿ ಸತ್ತಿದ್ದರೆ, ಇನ್ನೊಬ್ಬಳ ಗಂಡ ಮರದಿಂದ ಬಿದ್ದು ಸಾವನ್ನಪ್ಪಿದ್ದ. ಕೊನೆಯವಳ ಗಂಡ ಮಾತ್ರ ಪರವೂರಿಗೆ ಹೋದವನು ಬಾರದೇ ಮಾಯವಾಗಿದ್ದರಿಂದ ಅವಳಿನ್ನೂ ತಾಳಿಯನ್ನೂ ತೆಗೆಯದೇ ಅವನಿಗಾಗಿ ಕಾಯುತ್ತಿದ್ದಳು. ಗಂಗೆ ತಾನು ಹೆಣ್ಣೆಂಬುದನ್ನೇ ಮರೆತು, ಕಾಡುಮೇಡು ಅಲೆಯುತ್ತಾ ಸೌದಿ, ಸೊಪ್ಪು ಎಂದು ಗಂಡಸರಂತೆ ದುಡಿಯುತ್ತಾ ಮನೆಯ ಅಂಗಳದಲ್ಲೇ ಮಲಗಿ ಕಾಲಕಳೆಯುತ್ತಿದ್ದಳು. ಗೌರಿಯೋ ಅಮ್ಮನ ಬಿಂಬವೆಂಬಂತೆ ಅವಳ ಜೊತೆಯಲ್ಲೇ ತಿರುಗುತ್ತ ಬಾಲ್ಯದಾಚೆಗೆ ದಾಟದ ಮಗುವಿನಂತೆ ತನ್ನನ್ನು ಬಂಧಿಸಿಕೊಂಡಿದ್ದಳು. ಗಣಪಿ ಮಾತ್ರ ತನ್ನ ಮೈದುಂಬಿದ ಸಹಜವಾದ ಯೌವ್ವನವ ಸಂಭಾಳಿಸಲಾಗದೇ ಹೊಳೆಯ ದಂಡೆಯ ಮೇಲೆ ಕುಳಿತು ಕಣ್ಣೀರಿಡುತ್ತಿದ್ದಳು.

ಊರಲ್ಲಿ ಮದುವೆಯ ತಯಾರಿ ನಡೆದರೆ ಸಾಕು, ಇವರಿಗೆಲ್ಲ ಕೈತುಂಬಾ ಕೆಲಸ. ಗುಡಿಸಿ, ಸಾರಿಸಿ, ಅಂಗಳವ ಹಸನುಗೊಳಿಸಿ, ಕಾಳುಕಡ್ಡಿಗಳನ್ನೆಲ್ಲ ಆರಿಸಿ, ಅಡುಗೆಗೆ ಬೇಕಾದ ಸೌದೆಯನ್ನೆಲ್ಲ ಅಣಿಗೊಳಿಸಿ ಮದುವೆಯ ಮನೆಯನ್ನು ಸಿಂಗರಿಸಬೇಕು. ಆದರೆ, ಮದುವೆಗೆ ಹೊಸಸೀರೆ ತರುವಾಗ ಮಾತ್ರ ಇವರ ನೆನಪು ಯಾರಿಗೂ ಬಾರದು. ಮದುವೆಯ ದಿನವಂತೂ ಇವರ ಮುಖದರ್ಶನವೂ ಅಶುಭ. ಹಾಗಾಗಿ, ದಿಬ್ಬಣ ಬಂದು ಮದುವೆ ಮುಗಿದು ಎಲ್ಲರೂ ಹೊರಡುವವರೆಗೂ ಇವರ ವಾಸ ಒಳಮನೆಯ ಕತ್ತಲೆಯ ಮೂಲೆಯಲ್ಲಿ. ಎಲ್ಲರೂ ಗಂಡಿನ ಮನೆಗೆ ಹೋದ ಬಳಿಕ, ಉಳಿದದ್ದನ್ನು ಉಂಡು ಮತ್ತೆಲ್ಲವನ್ನೂ ಸರಿಪಡಿಸುವುದು ಮಾತ್ರ ಇವರ ಕಾಯಕ. ಮನೆಯ ಸೊಸೆಯಂದಿರೆಲ್ಲ ಬಸುರಿ, ಬಾಣಂತಿ ಎಂದು ಮಲಗಿದರೆ ಇವರಿಗೆ ಮಾತ್ರ ಅದ್ಯಾವ ಬಿಡುವೂ ಇಲ್ಲ. ಮನೆಯ ಮಕ್ಕಳನ್ನು ಸಂಭಾಳಿಸುತ್ತ, ಅಪ್ಪ, ಅಣ್ಣ, ಅಮ್ಮನ ಸೇವೆ ಮಾಡುತ್ತಾ, ಅತ್ತಿಗೆಯರಿಂದ ಆಗಾಗ ಅನ್ನಿಸಿಕೊಳ್ಳುತ್ತ ಕಾಲ ಕಳೆಯುವ ಅವರಿಗೆ ಸಾತಜ್ಜಿಯ ನಿರಾಳತೆ ಒಗ್ಗದು. ಒಂದು ಒಳ್ಳೆಯ ಸೀರೆಯುಡುವಂತಿಲ್ಲ, ಹೂವು ಮುಡಿಯುವಂತಿಲ್ಲ, ಹಣೆಗೊಂದು ಬೊಟ್ಟನ್ನೂ ಇಡುವಂತಿಲ್ಲ, ನಗುನಗುತ್ತಾ ಬೇರೆಯವರೊಂದಿಗೆ ಮಾತನಾಡುವಂತಿಲ್ಲ. ಸದಾ ಒಂದಿಲ್ಲೊಂದು ಕೆಲಸದಲ್ಲಿ ಮುಳುಗಿರುವ ಇವರು ಹಸುರು ಗದ್ದೆಯಲ್ಲಿ ಓಡಾಡುವಾಗ ಶಾಪಗ್ರಸ್ತ ಅಪ್ಸರೆಯರಂತೆ ಕಾಣುತ್ತಿದ್ದರು.

Advertisement

ಹೀಗಿರುವಾಗೊಮ್ಮೆ ರಾತ್ರಿ ಉಂಡು ಮಲಗಿದ ಗಣಪಿ ಬೆಳಿಗ್ಗೆಯೆದ್ದು ನೋಡಿದರೆ ಮನೆಯಲ್ಲಿರಲಿಲ್ಲ. ಊರಿಡೀ ಹುಡುಕಿದರೂ ಅವಳ ಸುಳಿವಿರಲಿಲ್ಲ. ಊರ ಜನರೆಲ್ಲಾ ಬಾಯಿಗೊಂದು ಕಥೆಕಟ್ಟಿ ಹೇಳಿದರಾಗಲೀ ಅವಳನ್ನು ಹುಡುಕುವ ಸಾಹಸವನ್ನೇನೂ ಮಾಡಲಿಲ್ಲ. ಹೊಳೆಯ ನೀರು ಹರಿದು ಹೋಗುವಂತೆ ಅವಳ ನೆನಪು ಮಾಸಿ ಹೋಗುವ ಹೊತ್ತಿನಲ್ಲಿ ಅವಳು ತನ್ನ ಗಂಡ, ಮಗನೊಂದಿಗೆ ಊರಿನ ಜಾತ್ರೆಯಲ್ಲಿ ಪ್ರತ್ಯಕ್ಷಳಾಗಿದ್ದಳು. ಹೊಳೆಹೊಳೆಯುವ ಪಟ್ಟೆಸೀರೆಯನ್ನುಟ್ಟು, ಕೈತುಂಬಾ ಚಿನ್ನದ ಬಳೆಯನ್ನು ಧರಿಸಿ, ಕೊರಳಲ್ಲಿ ಬಗೆಬಗೆಯ ಸರವನ್ನು ಹಾಕಿದ ಅವಳು ಥೇಟ್‌ ಊರ ದೇವಿಯಂತೆ ಕಂಗೊಳಿಸುತ್ತಿದ್ದಳು. ಪರಿಚಯದ ಎಲ್ಲರಿಗೂ ಕೈತುಂಬಾ ಹಣನೀಡಿ, ಮಕ್ಕಳ ಬಾಯಿಗೆ ಮಿಠಾಯಿಯನ್ನಿಟ್ಟ ಅವಳು ತನ್ನ ಗಂಡನೊಂದಿಗೆ ಕಾರನ್ನೇರಿ ಕಣ್ಮರೆಯಾದಾಗ ಇಡಿಯ ಊರೇ ಅಚ್ಚರಿಯ ಕಡಲಲ್ಲಿ ತೇಲಿತ್ತು. ಕಾಡವೀಕ್ಷಣೆಗೆ ಬಂದ ಫಾರೆಸ್ಟ್‌ ಅಧಿಕಾರಿಯೊಬ್ಬರು ಸೌದೆಗಾಗಿ ಪ್ರತಿದಿನವೂ ಕಾಡಿಗೆ ತೆರಳುತ್ತಿದ್ದ ಗಣಪಿಯನ್ನು ನೋಡಿ, ಮೆಚ್ಚಿ ಕೈಹಿಡಿದಿದ್ದರು. ಕಾಡಿನ ಅಧಿಕಾರಿಯ ಹೆಂಡತಿಯೆಂದ ಮೇಲೆ ಊರವರೆಲ್ಲರಿಗೂ ಬೇಕಾದವರಾಗಿ, ಒಬ್ಬೊಬ್ಬರೇ ಅವರ ಮನೆಯ ಹೊರಗೆ ಹೋಗಿ ನಿಲ್ಲುತ್ತ, ತಮ್ಮ ತಮ್ಮ ಅಹವಾಲುಗಳನ್ನು ಮಂಡಿಸುತ್ತ, ಗಣಪಿಯೂ ಅವರನ್ನೆಲ್ಲ ತನ್ನ ಗಂಡನಿಗೆ ಪರಿಚಯಿಸುವುದರೊಂದಿಗೆ ಅವರ ಕೆಲಸಗಳನ್ನು ಗಂಡನಿಂದ ಮಾಡಿಸಿಕೊಡುತ್ತ¤, ಹೊಸದೊಂದು ಸಂಬಂಧ ಊರಿನವರೊಂದಿಗೆ ಬೆಸೆದುಕೊಂಡಿತು. ಹಾಗೆ ಅವಳಿಂದ ಉಪಕೃತರಾದವರೆಲ್ಲರೂ ಅವಳನ್ನು ಮನೆಗೆ ಕರೆದು ಉಡಿತುಂಬಿ ಅವಳ ವೈಧವ್ಯದ ಶಾಪವನ್ನು ಅಳಿಸಿಹಾಕಿದರು. ಅಲ್ಲಿಂದೀಚೆಗೆ ಊರ ಒಂಟಿ ಹೆಂಗಸರಿಗೆ ಬಣ್ಣ ಬಣ್ಣದ ಕನಸುಗಳು ಬೀಳತೊಡಗಿದವು. 

ಸುಧಾ ಆಡುಕಳ

Advertisement

Udayavani is now on Telegram. Click here to join our channel and stay updated with the latest news.

Next