Advertisement

Lokayukta: 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ

11:24 AM Sep 25, 2024 | Team Udayavani |

ಬೆಂಗಳೂರು: ಲೋಕಾಯುಕ್ತ ನ್ಯಾ.ಬಿ.ಎಸ್‌. ಪಾಟೀಲ್‌, ಉಪಲೋಕಾಯುಕ್ತ ಬಿ.ವೀರಪ್ಪ ಬೆಂಗಳೂರು ನಗರ ಅಬಕಾರಿ ಜಿಲ್ಲಾ ವ್ಯಾಪ್ತಿಯ ಯಶವಂತಪುರ ಹಾಗೂ ಬ್ಯಾಟರಾಯನಪುರ ಅಬಕಾರಿ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡಿ ತಪಾಸಣೆ ನಡೆಸಿದಾಗ ಅನಧಿಕೃತ ಗಾಂಜಾ, ಅನೇಕ ಮದ್ಯದ ಬಾಟಲುಗಳು, 2 ಲಕ್ಷ ರೂ. ಮೌಲ್ಯದ ನೋಟುಗಳು ಪತ್ತೆಯಾಗಿವೆ.

Advertisement

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ  ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಅಬಕಾರಿ ಜಿಲ್ಲಾ ವ್ಯಾಪ್ತಿಯ 62 ಅಬಕಾರಿ ಕಚೇರಿಗಳ ಮೇಲೆ ಏಕಕಾಲದಲ್ಲಿ ಮಂಗಳವಾರ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ಹಲವು ಲೋಪ ಪತ್ತೆಹಚ್ಚಿದ್ದಾರೆ. ಇನ್ನು ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಖುದ್ದು ಯಶವಂತಪುರ ಹಾಗೂ ಮೈಸೂರು ರಸ್ತೆಯ ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಜೊತೆ ಪರಿಶೀಲಿಸಿದಾಗ ಯಾವುದೇ ಸೀಲ್‌ ಹಾಕಿರದ ಸುಮಾರು ಅರ್ಧ ಕೆಜಿಯಷ್ಟು ಅನಧಿಕೃತ ಗಾಂಜಾ, ಮದ್ಯದ ಬಾಟಲಿಗಳು ಹಾಗೂ ದಾಖಲೆ ಇಲ್ಲದ 2 ಲಕ್ಷ ರೂ. ಕಂಡು ಒಂದು ಕ್ಷಣ ಲೋಕಾ ಸಿಬ್ಬಂದಿಯೇ ದಂಗಾದರು. ಸೂಕ್ತ ಸ್ಪಷ್ಟನೆ ನೀಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಲೋಕಾಯುಕ್ತ ಮುಂದಾಗಿದೆ. ದಾಳಿ ನಡೆದ 62 ಕಚೇರಿಗಳ ಪೈಕಿ ಬಹುತೇಕ ಕಡೆ ಹಲವಾರು ಲೋಪಗಳು ಪತ್ತೆಯಾಗಿವೆ.

ಅನಧಿಕೃತ ಗಾಂಜಾ: ಎನ್‌ಡಿಪಿಎಸ್‌ ಪ್ರಕರಣದಲ್ಲಿ ಅಬಕಾರಿ ಇಲಾಖೆಯವರಿಗೆ ಗಾಂಜಾ ಜಪ್ತಿ ಮಾಡಲು ಅವಕಾಶವಿದೆ. ಜಪ್ತಿ ಮಾಡಿದ ಗಾಂಜಾಗೆ ಸೀಲ್‌ಗ‌ಳು, ಕ್ರೈಂ ನಂಬರ್‌, ಮಹಜರು ಕವರ್‌ಗಳೆಲ್ಲ ಇರಬೇಕು. ಕೋರ್ಟ್‌ಗೆ ಹಾಜರುಪಡಿಸಿರುವ ದಾಖಲೆಗಳಿರಬೇಕು ಎಂಬಿತ್ಯಾದಿ ನಿಯಮಗಳಿವೆ. ಆದರೆ, ಇಲ್ಲಿ ಜಪ್ತಿ ಮಾಡಿರುವ ಡ್ರಗ್ಸ್‌ಗಳನ್ನು ನಿಯಮ ಉಲ್ಲಂ ಸಿ ಪ್ರತ್ಯೇ ಕವಾಗಿಟ್ಟಿದ್ದರು. ಇನ್ನು ಯಶವಂತಪುರ ಕಚೇರಿಯಲ್ಲಿ ಸುಮಾರು 15 ಅನಧಿಕೃತ ಮದ್ಯದ ಬಾಟಲಿಗಳು ಸಿಕ್ಕಿವೆ.

ಅಬಕಾರಿ ಅಕ್ರಮಗಳ ವಿರುದ್ಧ 132 ದೂರು: ದಾಳಿ ನಡೆಸಿದ ಬಳಿಕ ಲೋಕಾಯುಕ್ತ ನ್ಯಾ.ಬಿ.ಎಸ್‌. ಪಾಟೀಲ್‌ ಮಾಧ್ಯಮದ ಜೊತೆಗೆ ಮಾತನಾಡಿ, ಈ ಅಬಕಾರಿ ಇಲಾಖೆಗಳಲ್ಲಿ ದುಡ್ಡು ಕೊಡದೇ ನಮ್ಮ ಅರ್ಜಿ ಮುಂದೆ ಸಾಗುವುದಿಲ್ಲ. ಸಾಕಷ್ಟು ಭ್ರಷ್ಟಾಚಾರ ಇದೆ. ಬಹಳ ಸತಾಯಿಸುತ್ತಿದ್ದಾರೆ ಎಂಬ ಬಗ್ಗೆ ಒಟ್ಟಾರೆ 132ಕ್ಕೂ ಅಧಿಕ ದೂರುಗಳು ಲೋಕಾಯುಕ್ತಕ್ಕೆ ಬಂದಿದ್ದವು. ದಾಳಿ ವೇಳೆ ಪತ್ತೆಯಾಗಿರುವ ಕೆಲ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಸಾರ್ವ ಜನಿಕರ ಅರ್ಜಿಗಳು ಏಕೆ ವಿಲೇವಾರಿ ಆಗುತ್ತಿಲ್ಲ ಎಂಬುದರ ಬಗ್ಗೆ ಪ್ರಶ್ನಿಸಿದರೆ ಇನ್‌ಸ್ಪೆಕ್ಟರ್‌ಗಳನ್ನು ಕಳುಹಿಸಲಾಗಿದೆ. ಅಲ್ಲಿ ಕೆಲವೊಂದು ಪ್ರಕ್ರಿಯೆಗಳು ನಡೆದು ವರದಿ ಬಂದ ಬಳಿಕ ಪರವಾನಗಿ ನೀಡುವ ಸಂಬಂಧ ಅರ್ಜಿ ವಿಲೇವಾರಿ ಮಾಡಲಾಗುವುದು ಎನ್ನುತ್ತಿದ್ದಾರೆ. ಕೆಲವೊಮ್ಮೆ ಆನ್‌ಲೈನ್‌ ಮಾಡಬಹುದು ಎನ್ನುತ್ತಾರೆ, ಇನ್ನು ಕೆಲವು ಬಾರಿ ಆಫ್ಲೈನ್‌ನಲ್ಲೂ ಕೊಡಬಹುದು ಎನ್ನುತ್ತಿದ್ದಾರೆ. ಇದೀಗ ದಾಳಿ ವೇಳೆ ಜಪ್ತಿ ಮಾಡಿರುವ ಕಡತ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳಿಂದ ಲೋಪಗಳ ಕುರಿತು ಸ್ಪಷ್ಟನೆ ಕೇಳಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಬಕಾರಿ ಇಲಾಖೆಯಲ್ಲಿ ಗಾಂಜಾ ಪತ್ತೆ: ನಾವು ದಾಳಿ ನಡೆಸಿದ ಯಶವಂತಪುರ ಹಾಗೂ ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ದಾಖಲೆಯಿಲ್ಲದ ಗಾಂಜಾ, ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಗಾಂಜಾ ಇಲ್ಲಿಗೆ ಏಕೆ ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಉತ್ತರಿಸುತ್ತಿಲ್ಲ. ಇದರ ಜೊತೆಗೆ ಹತ್ತಾರು ಲಿಕ್ಕರ್‌ ಬಾಟಲಿಗಳು ಸಿಕ್ಕಿರುವುದರ ಬಗ್ಗೆ ಪ್ರಶ್ನಿಸಿದರೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಮಾಧ್ಯಮದ ಜೊತೆಗೆ ಮಾತನಾಡುವ ವೇಳೆ ಮಾಹಿತಿ ನೀಡಿದ್ದಾರೆ.

Advertisement

 

ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿ ದಾಳಿ!:

ಬೆಂಗಳೂರು ನಗರ ಅಬಕಾರಿ ಜಿಲ್ಲಾ ವ್ಯಾಪ್ತಿಯಲ್ಲಿನ 62 ಅಬಕಾರಿ ಕಚೇರಿಗಳಲ್ಲಿ ಸಿಎಲ್‌-2, ಸಿಎಲ್‌-7, ಸಿಎಲ್‌-9 ಪರವಾನಗಿ ವಿಭಾಗ ವಿತರಣೆ, ನವೀಕರಿಸುವಿಕೆ, ಸ್ಥಳಾಂತರಿಸುವಿಕೆ ಹಾಗೂ ಅಬಕಾರಿ ಇಲಾಖೆಗೆ ಸಂಬಂಧಿಸಿದ ಇತರೆ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಅಬಕಾರಿ ಪರವಾನಗಿದಾರರು ಹಾಗೂ ಸಾರ್ವಜನಿಕರು ದೂರು ನೀಡಿದ್ದರು. ಹೀಗಾಗಿ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳ ಮುಖಾಂತರ ಗೌಪ್ಯ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿ ಅಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಖಾತ್ರಿ ಪಡಿಸಿಕೊಂಡಿದ್ದರು. ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಂಗ ಹಾಗೂ ಪೊಲೀಸ್‌ ಅಧಿಕಾರಿಗಳ ತಂಡವನ್ನು ಸನ್ನದ್ಧಗೊಳಿಸಿ ಬೆಂಗಳೂರು ನಗರ ಅಬಕಾರಿ ಜಿಲ್ಲಾ ವ್ಯಾಪ್ತಿಯಲ್ಲಿನ 62 ಅಬಕಾರಿ ಕಚೇರಿಗಳಲ್ಲಿ ಏಕಕಾಲದಲ್ಲಿ ತಪಾಸಣೆ ಮಾಡಿ ಅಕ್ರಮಗಳನ್ನು ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖಾ ಕಚೇರಿಗಳಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ 132 ಪ್ರಕರಣ ಗಳು ವಿವಿಧ ಹಂತದ ತನಿಖೆಯಲ್ಲಿ ಮುಂದುವರಿ ದಿರುವುದು ಅಬಕಾರಿ ಇಲಾಖಾ ಕಚೇರಿಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಪುಷ್ಟಿಕರಿಸುತ್ತವೆ.

ಅಕ್ರಮಕ್ಕಾಗಿ ಖಾಸಗಿ ವ್ಯಕ್ತಿಗಳ ನೇಮಕ!:

ಕೆಲವು ಕಡೆ ಅಬಕಾರಿ ಇನ್‌ಸ್ಪೆಕ್ಟರ್‌ಗಳೇ ಖಾಸಗಿ ವ್ಯಕ್ತಿಗಳನ್ನಿಟ್ಟುಕೊಂಡು ಅವ್ಯವಹಾರ ನಡೆಸುತ್ತಿದ್ದ ಸಂಗತಿ ಬಯಲಾಗಿದೆ. ಅಬಕಾರಿ ಇನ್‌ಸ್ಪೆಕ್ಟರ್‌ಗಳು ಖಾಸಗಿ ವ್ಯಕ್ತಿಗಳಿಗೆ ತಿಂಗಳಿಗೆ 15 ರಿಂದ 20 ಸಾವಿರ ರೂ. ವೇತನ ನೀಡಿ ಕೆಲಸ ಮಾಡಿಕೊಳ್ಳಲು ಇಟ್ಟು ಕೊಂಡಿರುವುದು ಗೊತ್ತಾಗಿದೆ. ಬ್ಯಾಟರಾಯನಪುರ, ಕೋರಮಂಗಲ ಕಚೇರಿಗಳಲ್ಲಿ ಹಲವು ಅಕ್ರಮ ಪತ್ತೆಯಾಗಿದೆ. ಕೋರಮಂಗಲ ಕಚೇರಿಯಲ್ಲಿ ಲೋಕಾಯುಕ್ತ ಸಿಬ್ಬಂದಿ ಎಂಟ್ರಿಯಾಗುತ್ತಿದ್ದಂತೆ ಅಟೆಂಡೆನ್ಸ್‌, ಕ್ಯಾಶ್‌ ರಿಜಿಸ್ಟ್ರರ್‌ ಪುಸ್ತಕವನ್ನೇ ತೆಗೆದು ಕೊಂಡು ಓಡಿ ಹೋಗಿರುವುದು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next