Advertisement

ಲೋಕಾ ಚುನಾವಣೆಗೆ ಸಜ್ಜಾಗಲು ಕಾರ್ಯತಂತ್ರ

06:00 AM Nov 30, 2018 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ದುರ್ಬಲವಾಗಿರುವ ಲೋಕಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ಸಮಿತಿಗಳ ಪುನರ್‌ರಚನೆ ಜತೆಗೆ ಪಕ್ಷ ಸಂಘಟನೆಗೆ ಪೂರಕವಾದ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವ ಬಗ್ಗೆ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಪಕ್ಷ ಸಂಘಟನೆ ದುರ್ಬಲವಾಗಿರುವ ಲೋಕಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ಸಮಿತಿಗಳ ಪುನರ್‌ರಚನೆ, ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ನಿಗಾ ಸೇರಿದಂತೆ ಇತರೆ ಚಟುವಟಿಕೆಗಳನ್ನು ಆರಂಭಿಸಬೇಕು. ಪಕ್ಷ ಬಲವರ್ಧನೆಗೆ ಒತ್ತು ನೀಡಿ ಚುನಾವಣೆಗೆ ಸಜ್ಜುಗೊಳಿಸಲುವ ವಿಶೇಷ ಗಮನ ನೀಡುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಗೊತ್ತಾಗಿದೆ.

ಇತ್ತೀಚೆಗೆ ನಡೆದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ನಡೆಸಿದ ಸಿದ್ಧತೆ, ಕಾರ್ಯತಂತ್ರ ಹಾಗೂ ಫ‌ಲಿತಾಂಶದ ಬಗ್ಗೆಯೂ ಆತ್ಮಾವಲೋಕನ ನಡೆಯಿತು. ಪಕ್ಷದ ವತಿಯಿಂದಲೇ ಸೃಷ್ಟಿಯಾದ ಕೆಲ ಸಮಸ್ಯೆಗಳು, ಲೋಪಗಳ ಬಗ್ಗೆ ಚರ್ಚೆ ನಡೆಯಿತು. ಆದರೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದು ಮೂಲಗಳು ತಿಳಿಸಿವೆ.

ನಂಬಿಕೆ ಕೆಟ್ಟೆವು
ರಾಮನಗರ ಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಕೆಲ ದಿನ ಬಾಕಿಯಿದ್ದಾಗಲೇ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ ಬೆಳವಣಿಗೆ ಬಗ್ಗೆಯೂ ಚರ್ಚೆ ನಡೆಯಿತು. ಕಾಂಗ್ರೆಸ್‌ನ ಹಾಲಿ ವಿಧಾನ ಪರಿಷತ್‌ ಸದಸ್ಯರ ಪುತ್ರರನ್ನು ಬಿಜೆಪಿಯಿಂದ ಕಣಕ್ಕಿಳಿಸಿರುವುದರಿಂದ ಪಕ್ಷಕ್ಕೆ ಅನುಕೂಲವಾಗುವ ನಿರೀಕ್ಷೆ ಇತ್ತು. ಆದರೆ ನಾವು ನಂಬಿ ಕೆಟ್ಟೆವು ಎಂಬುದಾಗಿ ಬಿ.ಎಸ್‌.ಯಡಿಯೂರಪ್ಪ ಕೋರ್‌ ಕಮಿಟಿ ಸಭೆಯಲ್ಲಿ ತಿಳಿಸಿದರು. ಹಾಗಾಗಿ ಆ ಬೆಳವಣಿಗೆ ಬಗ್ಗೆ 
ಹೆಚ್ಚಿನ ಚರ್ಚೆ ನಡೆಯಲಿಲ್ಲ ಎಂದು ಮೂಲಗಳು ಹೇಳಿವೆ.

ಉಪಚುನಾವಣೆಯಲ್ಲಿನ ಹಿನ್ನಡೆಯು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇನೂ ಅಲ್ಲ. ಹಾಗೆಂದು ಆ ಫ‌ಲಿತಾಂಶವನ್ನು ಕಡೆಗಣಿಸುವಂತೆಯೂ ಇಲ್ಲ. ಪಕ್ಷ ಹಾಗೂ ಸಂಘಟನೆಯಲ್ಲಿ ಉಂಟಾದ ಲೋಪಗಳನ್ನು  ಗುರುತಿಸಿ ಸರಿಪಡಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಸಮಯಾಭಾವದಿಂದಾಗಿ ವಿಸ್ತೃತವಾಗಿ ಅವಲೋಕನ ನಡೆಸಲು ಸಾಧ್ಯವಾಗಲಿಲ್ಲ. ಮುಂದಿನ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಲಾಗುವುದು ಎಂದು ತಿಳಿಸಿವೆ.

Advertisement

ಹೋರಾಟದ ರೂಪುರೇಷೆಗಾಗಿ ಸಭೆ
ಡಿ.10ರಂದು ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗುವ ಮೊದಲು ದಿನ ಒಂದು ಲಕ್ಷ ರೈತರನ್ನು ಒಟ್ಟುಗೂಡಿಸಿ ನಡೆಸಲಿರುವ ಹೋರಾಟ ಕುರಿತಂತೆ ಮುಂಬೈ ಕರ್ನಾಟಕ ಭಾಗದ ಪ್ರಮುಖರೊಂದಿಗೆ ಬಿಜೆಪಿ ನಾಯಕರು ಗುರುವಾರ ಸಭೆ ನಡೆಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಎನ್‌. ರವಿಕುಮಾರ್‌, ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರು ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರೊಂದಿಗೆ ಸಭೆ ನಡೆಸಿದರು. ಹೋರಾಟದ ರೂಪುರೇಷೆ, ಅದಕ್ಕೆ ಪೂರಕ ಸಿದ್ಧತೆ ಕೈಗೊಳ್ಳುವ ಬಗ್ಗೆ ಸಭೆ ನಡೆಸಿದರು.

ಇತ್ತೀಚೆಗೆ ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೆ ಪ್ರಭಾರಿ ಹಾಗೂ ಸಂಚಾಲಕರನ್ನು ಬಿಜೆಪಿ ನೇಮಕ ಮಾಡಿತ್ತು. ಈ ಪೈಕಿ ಕೆಲವರು ಪ್ರಭಾರಿಗಳನ್ನು ಬದಲಾವಣೆ ಮಾಡುವಂತೆ ಕೋರಿದ್ದರೆ, ಇನ್ನೂ ಕೆಲವರು ತಮಗೆ ಬೇರೆ ಕ್ಷೇತ್ರಗಳ ಪ್ರಭಾರ ವಹಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪ್ರಭಾರಿಯಾಗಿ ನಿಯೋಜನೆಗೊಂಡಿರುವ ಕೆ.ಎಸ್‌.ಈಶ್ವರಪ್ಪ ಅವರು ತಮಗೆ ಉತ್ತರ ಕರ್ನಾಟಕದ ಯಾವುದಾದರೂ ಕ್ಷೇತ್ರದ ಪ್ರಭಾರಿ ವಹಿಸುವಂತೆ ಕೋರಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಭಾರಿಯಾಗಿರುವ ವಿ.ಸೋಮಣ್ಣ ಅವರು ತುಮಕೂರು ಕ್ಷೇತ್ರದ ಪ್ರಭಾರಿ ವಹಿಸುವಂತೆ ಮನವಿ ಮಾಡಿದ್ದಾರೆ. ಇನ್ನೂ ಕೆಲ ಸಂಸದರು ಸಂಘಟನೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸೂಕ್ತರಾದವರನ್ನು ನಿಯೋಜಿಸಿದರೆ ಸಮನ್ವಯ ಸುಲಭ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಹಿರಿಯ ನಾಯಕರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ಕು ಮಂದಿ ಗೈರು
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಶಾಸಕರಾದ ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ, ಆನಂದ್‌ ಮಾಮನಿ ಹಾಗೂ ಶಂಕರ ಪಾಟೀಲ್‌ ಮುನೇನಕೊಪ್ಪ ಗೈರಾಗಿದ್ದರು. ಶ್ರೀರಾಮುಲು ಪ್ರವಾಸದಲ್ಲಿದ್ದರೆ, ಆನಂದ್‌ ಮಾಮನಿ ಹಾಗೂ ಶಂಕರ ಪಾಟೀಲ್‌ ಮುನೇನಕೊಪ್ಪ ಅವರು ಕಾರ್ಯ ನಿಮಿತ್ತ ಅನ್ಯ ಕೆಲಸದಲ್ಲಿ ತೊಡಗಿದ್ದರಿಂದ ಸಭೆಗೆ ಹಾಜರಾಗದಿರುವ ಬಗ್ಗೆ ಪೂರ್ವಾನುಮತಿ ಪಡೆದಿದ್ದರು ಎಂದು ಮೂಲಗಳು ಹೇಳಿವೆ.

ಸಚಿವ ಡಿ.ಕೆ. ಶಿವಕುಮಾರ್‌ ಭೇಟಿಗೆ ರಾಜಕೀಯ ಬಣ್ಣ ಬೇಡ
ಬಿ.ಎಸ್‌. ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದ ಶಾಸಕರು. ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದರು. ಎಚ್‌.ಹಾಲಪ್ಪ ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರದ ಶಾಸಕರು. 

ಹೀಗಾಗಿ, ಅವರು ಮೂವರೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಸಿಗಂದೂರು ಸೇತುವೆ ವಿಚಾರ ಸೇರಿ ಅಲ್ಲಿನ ನೀರಾವರಿ ಯೋಜನೆ ಬಗ್ಗೆ ಚರ್ಚಿಸಿದ್ದೇವೆ. ಇದರಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ. ಬಿಎಸ್‌ವೈ-ಡಿಕೆಶಿ ಭೇಟಿಗೆ ಯಾವುದೇ ರಾಜಕೀಯ ಬಣ್ಣ ಬೇಡ ಎಂದು ಶಾಸಕ ಅರ ವಿಂದ್‌ ಲಿಂಬಾವಳಿ ಸ್ಪಷ್ಟಪಡಿಸಿದರು.

ಸಚಿವರನ್ನು ಮನೆಗೆ ಕರೆಸಿಕೊಳ್ಳುವುದು ಬಿಜೆಪಿಯ ಶಿಷ್ಟಾಚಾರವಲ್ಲ. ಸ್ವತಃ ಶಾಸಕರಾಗಿ, ಹಿರಿಯ ನಾಯಕರೂ ಆಗಿರುವ ಯಡಿಯೂರಪ್ಪ ಅವರ ಮನವಿಗೆ ಸಚಿವ ಡಿ.ಕೆ.ಶಿವಕುಮಾರ್‌ ಸ್ಪಂದಿಸಿದ್ದಾರೆ. ತಮ್ಮ ಪ್ರವಾಸವನ್ನೂ ರದ್ದುಪಡಿಸಿ, ಯಡಿಯೂರಪ್ಪ ಅವರನ್ನು ಸ್ವಾಗತಿಸಿ, ಸುದೀರ್ಘ‌ ಚರ್ಚೆ ನಡೆಸಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಬೆರೆಸುವ ಅಗತ್ಯವಿಲ್ಲ ಎಂದು ಹೇಳಿದರು.

ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಮುತುವರ್ಜಿಯಿಂದ ಸ್ಪಂದಿಸಲಿದೆ. ಲೋಕಸಭಾ ಸದಸ್ಯರು ರಾಜ್ಯಕ್ಕೆ ನ್ಯಾಯ ಕೊಡಿಸಲಿದ್ದಾರೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಯಾವುದೇ ಯೋಜನೆಗೆ ಕೇಂದ್ರ ಸರ್ಕಾರ ಹಿಂದೇಟು ಹಾಕಿಲ್ಲ. ಉದ್ಯೋಗ ಖಾತರಿ ಯೋಜನೆಯಲ್ಲಿ ಜಾಬ್‌ಕಾರ್ಡ್‌ ದುರುಪಯೋಗದ ಬಗ್ಗೆ ಕೇಂದ್ರ ಸರ್ಕಾರ ಗಮನ ಸೆಳೆದಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕು. ಕಂದಾಯ ಸಚಿವರ ಪ್ರಸ್ತಾವಕ್ಕೆ ಕೇಂದ್ರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಹೆಚ್ಚು ಅನುದಾನ ಸಿಗುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next