Advertisement

Lok Sabha Elections ತೆಲಂಗಾಣ ರಣಕಣದ ರೋಚ “ಕತೆ’

11:51 PM Nov 12, 2023 | Team Udayavani |

ಲೋಕಸಭೆ ಚುನಾವಣೆ ಎಂಬ ಫೈನಲ್‌ ಕದನಕ್ಕೂ ಮುನ್ನ ಐದು ರಾಜ್ಯಗಳ ವಿಧಾನಸಭೆ ಸಮರ ಸೆಮಿಫೈನಲ್‌ ರೂಪದಲ್ಲಿ ರಂಗೇರಿದೆ. ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವ ಆಟದಲ್ಲಿ ಮಗ್ನವಾಗಿವೆ. ಬಿಜೆಪಿ ಸಾರ್ವತ್ರಿಕ ಚುನಾವಣೆಗೆ “ಮತ ತಾಲೀಮು’ ನಡೆಸಿದ್ದರೆ, ಕಾಂಗ್ರೆಸ್‌ ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳು ಟಕ್ಕರ್‌ ನೀಡಲು ಹವಣಿಸುತ್ತಿವೆ.

Advertisement

ಐದು ರಾಜ್ಯಗಳ ಪೈಕಿ ಪಕ್ಕದ ತೆಲಂಗಾಣ ತುಸು ಹೆಚ್ಚು ಕುತೂಹಲ ಹುಟ್ಟಿಸಿದೆ. ಮಗ್ಗುಲಲ್ಲೇ ಇದೆ ಎನ್ನುವುದಕ್ಕಿಂತ ಗಡಿ ಭಾಗದ ಜಿಲ್ಲೆಗಳಾದ ಬೀದರ್‌, ಕಲಬುರಗಿ, ಯಾದಗಿರಿ, ಬಳ್ಳಾರಿ ಮೇಲೆ “ಬಾಗುನ್ನಾರಾ’ (ಚೆನ್ನಾಗಿದ್ದೀಯಾ) ಎನ್ನುವ ಕರುಳಬಳ್ಳಿ ಸಂಬಂಧ ಹೊಂದಿದೆ. ಅಲ್ಲದೇ ನಮ್ಮ ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ತೆಲಂಗಾಣ ಅಖಾಡದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಜತೆಗೆ ಕಾರ್ಯಕರ್ತರು, ಕೆಲವು ಮುಖಂಡರು ತಳಮಟ್ಟದಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ತೆಲಂಗಾಣ ಪುಟ್ಟ ರಾಜ್ಯವಾದರೂ ಹೋರಾಟದ ಮೂಲಕ ಜನ್ಮ ತಳೆದಿದೆ ಎಂಬುದು ವಿಶೇಷ. ಕೆಸಿಆರ್‌ ಎಂದೇ ಜನಪ್ರಿಯವಾಗಿರುವ ಕೆ. ಚಂದ್ರಶೇಖರ್‌ ರಾವ್‌ “ಪ್ರತ್ಯೇಕ ರಾಜ್ಯ’ದ ರೂವಾರಿ. “ಮಾಡು ಇಲ್ಲವೇ ಮಡಿ’ ಹೋರಾಟದ ಮೂಲಕ ಕೇಂದ್ರದಲ್ಲಿ ಯುಪಿಎ ಅಧಿಕಾರದ ವೇಳೆ ಅಂದರೆ 2014ರಲ್ಲಿ ಹೊಸ ರಾಜ್ಯದ ರೂಪು ಪಡೆದಿದೆ. ಆಗ ಆಮರಣ ಉಪವಾಸದ ಜತೆಗೆ ಹಿಂಸಾ ರೂಪದ ಪ್ರತಿಭಟನೆಗೆ ಕೇಂದ್ರ ಸರಕಾರ ಅಖಂಡ ಆಂಧ್ರವನ್ನು ಇಬ್ಭಾಗ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು.

ಮೊದಲ ಚುನಾವಣೆ ಹೇಗಿತ್ತು?: ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ 2014ರಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕ ರಾಜ್ಯದ ಕಾವು ಕೆಸಿಆರ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌)ಗೆ ಅಧಿಕಾರದ ಗದ್ದುಗೆ ಮೇಲೆ ಕೂರಿಸಿತ್ತು. ಒಟ್ಟು 119 ಸ್ಥಾನಗಳ ಪೈಕಿ ಟಿಆರ್‌ಎಸ್‌ 63 ಸ್ಥಾನಗಳನ್ನು ಗೆಲ್ಲುವ ಮೂಲಕ ಯಾರ ಹಂಗೂ ಇಲ್ಲದೇ ಸ್ವತಂತ್ರವಾಗಿ ಅಧಿಕಾರ ಕ್ಕೇರಿತ್ತು. ಕೆಲವು ಕ್ರಾಂತಿಕಾರಿ ನಿರ್ಧಾರ, ಜನಪರ ಘೋಷಣೆಗಳ ಮೂಲಕ ಕೆಸಿಆರ್‌ ಮನೆ ಮಾತಾಗಿದ್ದರು. ಇದೇ ಹವಾದಲ್ಲಿ 2018ರಲ್ಲಿ ಚುನಾವಣೆ ಎದುರಿಸಿದ ಟಿಆರ್‌ಎಸ್‌ 88 ಸ್ಥಾನಗಳಲ್ಲಿ ಜಯ ಸಾಧಿಸಿ ಮತ್ತೂಮ್ಮೆ ಅಧಿಕಾರದ ಗದ್ದುಗೆ ಏರಿತ್ತು. ಕೆಸಿಆರ್‌ ಈಗ ಹ್ಯಾಟ್ರಿಕ್‌ ಗೆಲುವಿನ ಉಮೇದಿನಲ್ಲಿದ್ದಾರೆ. ಆದರೆ 2014 ಮತ್ತು 2018ರಲ್ಲಿ ಇದ್ದ ಪರಿಸ್ಥಿತಿ ಈಗ ಭಿನ್ನವಾಗಿದೆ. ಹೀಗಾಗಿ ಕೆಸಿಆರ್‌ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಟಿಆರ್‌ಎಸ್‌ನ್ನು ಭಾರತೀಯ ರಾಷ್ಟ್ರೀಯ ಪಕ್ಷ (ಬಿಆರ್‌ಎಸ್‌) ಎಂದು ಬದಲಿಸಿದ್ದಾರೆ.

ಕೆಸಿಆರ್‌ ತಂತ್ರ ಏನು?: ಕೆಸಿಆರ್‌ ಶತಾಯಗತಾಯ 3ನೇ ಬಾರಿಗೆ ಅಧಿಕಾರಕ್ಕೆ ಏರಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಇದ ಕ್ಕಾಗಿ ಹಲವು ಘೋಷಣೆಗಳನ್ನೂ ಮಾಡಿದ್ದಾರೆ. ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನವನ್ನು 4 ವರ್ಷಗಳಲ್ಲಿ 5 ಸಾವಿರ ರೂ.ಗೇರಿಕೆ, ರೈತ ಬಂಧು ಯೋಜನೆಯಡಿ ರೈತರ ಪ್ರತೀ ಎಕ್ರೆಗೆ ವಾರ್ಷಿಕ 10 ಸಾವಿರ ರೂ. (ಮುಂದಿನ ವರ್ಷಗಳಲ್ಲಿ 16 ಸಾವಿರ ರೂ.ಗೇರಿಕೆ), ಅರ್ಹರಿಗೆ 400 ರೂ.ಗಳಲ್ಲಿ ಗ್ಯಾಸ್‌ ಸಿಲಿಂಡರ್‌, ಆರೋಗ್ಯ ಸಿರಿ ಯೋಜನೆಯಡಿ 15 ಲಕ್ಷವರೆಗೂ ವಿಮೆ, ಸೂರಿಲ್ಲ ದವರಿಗೆ ಮನೆ ಸೇರಿ ಹಲವು ಆಶ್ವಾಸನೆ ನೀಡಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಅವರ ಕೈ ಹಿಡಿಯುತ್ತದೆ ಎನ್ನುವುದು ಫ‌ಲಿತಾಂಶದ ದಿನವೇ ಗೊತ್ತಾಗಲಿದೆ. ಕೆಸಿಆರ್‌ ಪುತ್ರ ಕೆ.ಟಿ.ರಾಮರಾವ್‌, ಸೋದ ರಳಿಯ ಹರೀಶ ರಾವ್‌ ಸಂಪುಟದಲ್ಲಿ ದ್ದರೆ, ಪುತ್ರಿ ಕವಿತಾ ಸಂಸದೆೆ. ಜನರಿಗೆ ಭರಪೂರ ಘೋಷಣೆ, ನೀರಾವರಿ, ಧಾರ್ಮಿಕ ಸ್ಥಳಗಳ ಅಭಿವೃದ್ಧಿ ಸೇರಿ 10 ವರ್ಷಗಳ “ಪ್ರಗತಿ’ ಈ ಬಾರಿ ಗೆಲುವಿನ “ಪಥ’ದ ನಗೆ ಬೀರಲಿದೆ ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ.

Advertisement

ಕಾಂಗ್ರೆಸ್‌ಗೆ ಭಾರೀ ವಿಶ್ವಾಸ: ಕರ್ನಾಟಕದಲ್ಲಿ “ಗ್ಯಾರಂಟಿ’ಗಳ ಮೂಲಕ ಅಧಿಕಾರಕ್ಕೇರಿರುವ ಕಾಂಗ್ರೆಸ್‌ ಪಕ್ಕದ ತೆಲಂಗಾಣದಲ್ಲೂ ಅದೇ ಜಾದೂ ಮಾಡಲು ಸಜ್ಜಾಗಿದೆ. ಉಚಿತ ಘೋಷಣೆಗಳನ್ನು ಈ ರಾಜ್ಯದಲ್ಲೂ ಜಾರಿ ಮಾಡುವುದಾಗಿ ಘೋಷಿಸಿದೆ. ಉತ್ತರದ ರಾಜ್ಯಗಳಲ್ಲಿ ಬಿರುಸಿನ ಪ್ರಚಾರ ನಡೆಸಿರುವ ರಾಷ್ಟ್ರೀಯ ನಾಯಕರು ತೆಲಂಗಾಣದಲ್ಲೂ ಧೂಳೆಬ್ಬಿಸಿದ್ದಾರೆ. ಖರ್ಗೆಗೆ ತಮ್ಮ ತವರಿನ ಪಕ್ಕದಲ್ಲೇ ಇರುವುದರಿಂದ ಸವಾಲಿನ ಜತೆಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್‌ ಮುಖಂಡ ರೇವಂತ ರೆಡ್ಡಿ ವಿರುದ್ಧ ಜಗ್ಗಾರೆಡ್ಡಿ, ಚನ್ನಾರೆಡ್ಡಿ ಸೇರಿದಂತೆ ಹಲವು ನಾಯಕರು ಮುನಿಸಿಕೊಂಡಿದ್ದಾರೆ.

ಟ್ರಬಲ್‌ ಶೂಟರ್‌ ವೇಣುಗೋಪಾಲ ಮೂಲಕ ಖರ್ಗೆ ಕಠಿನ ಸಂದೇಶ ರವಾನಿಸಿ ಸದ್ಯಕ್ಕೆ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದು ಬೂದಿ ಮುಚ್ಚಿದ ಕೆಂಡದಂತಿದ್ದು, ಫ‌ಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕವೂ ಎದುರಾಗಿದೆ. ಉಚಿತ ಯೋಜನೆಗಳ ಜತೆಗೆ “ಪ್ರತ್ಯೇಕ ರಾಜ್ಯ’ ಮಾಡಿದ್ದು ನಾವೇ ಎಂಬ ಟ್ರಂಪ್‌ ಕಾರ್ಡ್‌ನೂ° ಬಳಸುತ್ತಿದ್ದಾರೆ. ಆಂಧ್ರ ಪ್ರದೇಶ ಸಿಎಂ ಜಗನ್‌ಮೋಹನ ರೆಡ್ಡಿ ಸಹೋದರಿ ಶರ್ಮಿಲಾ ಹೊಸ ಪಕ್ಷ ರಚಿಸಿದ್ದರೂ ಅಭ್ಯರ್ಥಿಗಳನ್ನು ಕಣ ಕ್ಕಿಳಿಸದೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

ನೆಲೆ ಕಂಡುಕೊಳ್ಳಲು ಬಿಜೆಪಿ ಯತ್ನ: ದಕ್ಷಿಣ ಭಾರತದಲ್ಲಿ ತನ್ನ ನೆಲೆ ವೃದ್ಧಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ತೆಲಂಗಾಣ ರಾಜಕೀಯದಲ್ಲಿ ಕಮಲ ಪಡೆ ಸಾಧನೆ ಅಷ್ಟಕ್ಕಷ್ಟೆ. ಆದರೆ ಇತ್ತೀಚೆಗೆ ಅದರ ತಳಮಟ್ಟದ ಸಾಧನೆ ಕೊಂಚ ಸುಧಾರಿಸಿದೆ. ಪಾಲಿಕೆ ಚುನಾವಣೆಯಲ್ಲಿ 49 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪರ್ಧಾತ್ಮಕ ಛಾಯೆ ಮೂಡಿಸಿದೆ. ಮ್ಯಾಜಿಕ್‌ ಸಂಖ್ಯೆ 60 ಸ್ಥಾನ ಗೆಲ್ಲ ಲಾಗದಿದ್ದರೂ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಿಂಗ್‌ ಮೇಕರ್‌ ಆಗುವ ಉಮೇದಿನಲ್ಲಿದೆ. ಜನಸೇನಾ ಪಾರ್ಟಿ ಜತೆ ಚುನಾವಣೆ ಎದುರಿಸುತ್ತಿದ್ದರೂ ಮತಗಳಿಕೆ ಪ್ರಮಾಣ ಎಷ್ಟರ ಮಟ್ಟಿಗೆ ವೃದ್ಧಿ ಯಾಗಲಿದೆ ಎಂಬುದರ ಮೇಲೆ ಫ‌ಲಿತಾಂಶ ನಿರ್ಧಾರವಾಗಲಿದೆ. ವಿಶೇಷ ಎಂದರೆ ಬಿಜೆಪಿ ಬಹುತೇಕ ಹೊರಗಿ ನಿಂದ ಬಂದವರಿಗೆ ಟಿಕೆಟ್‌ ನೀಡಿದೆ. ಮೂಲ ಬಿಜೆಪಿಗರು ಐವರು ಮಾತ್ರ ಕಣದಲ್ಲಿದ್ದಾರೆ. ಚುನಾವಣೆ ನೇತೃತ್ವ ವಹಿಸಿಕೊಂಡಿರುವ ಕಿಶನ್‌ ರೆಡ್ಡಿ ಜಾದೂ ಮಾಡುವ ತವಕದಲ್ಲಿದ್ದಾರೆ!

ಪೋಸ್ಟರ್‌ ವಾರ್‌ ಜೋರು: ಹೋರಾಟದ ನೆಲ ತೆಲಂಗಾಣದಲ್ಲಿ ಆರೋಪ-ಪ್ರತ್ಯಾರೋಪವೂ ಜೋರಾಗಿದೆ. ಕಾಂಗ್ರೆಸ್‌ ಪ್ರಚಾರ ವೈಖರಿ ಕೊಂಚ ಬಿರುಸಾಗಿಯೇ ಇದೆ. ಮೋದಿ ಕೈಯಲ್ಲಿ ಕೆಸಿಆರ್‌, ಓವೈಸಿ ನಲಿಯುತ್ತಿರುವ ಪೋಸ್ಟರ್‌ ಸಾಕಷ್ಟು ಸದ್ದು ಮಾಡಿದೆ. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಓವೈಸಿ ಇಂಥ ನಾಟಕ ತೆಲಂಗಾಣದಲ್ಲಿ ನಡೆಯಲ್ಲ. ಬಿಜೆಪಿ-ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖ ಎಂಬ ತಿರುಗೇಟು ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಪಕ್ಷ “ಬುಕ್‌ ಮೈ ಸಿಎಂ’ ಎಂದು ಕುಚೋದ್ಯ ಮಾಡಿದೆ. ಬಿಜೆಪಿ ಕಾಲೆಳೆದಿರುವ ಟಿಆರ್‌ಎಸ್‌ ಮೋದಿಗೆ ರಾವಣ ರೂಪ ನೀಡಿದೆ.

ದಲಿತರ ಮೇಲೆ ಎಲ್ಲರ ಕಣ್ಣು: ತೆಲಂಗಾಣ ರಾಜಕೀಯದಲ್ಲಿ ದಲಿತರ ಮತಗಳ ಮೇಲೆ ಎಲ್ಲ ಪಕ್ಷಗಳ ಕಣ್ಣು ನೆಟ್ಟಿದೆ. ಒಂದು ಅಂದಾಜಿನ ಪ್ರಕಾರ ಶೇ.17ರಷ್ಟು ದಲಿತರು, ಶೇ.11ರಷ್ಟು ಪರಿಶಿಷ್ಟ ಪಂಗಡದ ಮತದಾರರಿದ್ದಾರೆ. ಇವರೇ ನಿರ್ಣಾಯಕ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಇದೆ. ಹೀಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಸ್‌ಸಿ-ಎಸ್‌ಟಿ ಕಲ್ಯಾಣ ಕಾರ್ಯಕ್ರಮಗಳಿಗೆ ನಾಲ್ಕು ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಿದೆ. ಬಿಜೆಪಿ ಸಹ ದಲಿತರ ಶ್ರೇಯೋಭಿವೃದ್ಧಿಗೆ ಹಲವು ಘೋಷಣೆ ಮಾಡಿದೆ. ಟಿಆರ್‌ಎಸ್‌ ತನ್ನ ಮತ ಬ್ಯಾಂಕ್‌ ಚದುರಿ ಹೋಗದಂತೆ ಎಚ್ಚರಿಕೆ ವಹಿಸಿದೆ. ಕಾಂಗ್ರೆಸ್‌ ಹಾಗೂ ಟಿಆರ್‌ಎಸ್‌ ಮುಸ್ಲಿಂ ಮತದಾರರ ಮೇಲೂ ಅಷ್ಟೇ ಪ್ರಮಾಣದ ಪ್ರೀತಿ ತೋರಿಸಿವೆ.
ಸಮಬಲದ ಕಾದಾಟ, ತಂತ್ರ-ಪ್ರತಿತಂತ್ರ, ಆರೋಪ-ಪ್ರತ್ಯಾ ರೋಪ ಇನ್ನಷ್ಟು ತಾರಕಕ್ಕೇರುವುದು ಖಚಿತವಾಗಿದೆ. ಮತದಾರರ ಓಲೈಕೆಗೆ ಇನ್ನಷ್ಟು ಉಚಿತ ಭರವಸೆಗಳು, ಯೋಜನೆಗಳು ಘೋಷಣೆ ಯಾಗಲಿವೆ. ಆದರೆ ನಿರ್ಣಾಯಕ ಎನಿಸಿರುವ ಹಿಂದುಳಿದ ವರ್ಗ, ಎಸ್‌ಸಿ-ಎಸ್‌ಟಿ ಮತದಾರರು ಯಾರ ಕೈ ಹಿಡಿಯುತ್ತಾರೋ ಅವರು ಗದ್ದುಗೆ ಏರಲಿದ್ದಾರೆ. ಕೆಸಿಆರ್‌ 3ನೇ ಬಾರಿ ಗೆದ್ದು ಮಗನಿಗೆ ಪಟ್ಟ ಬಿಟ್ಟು ಕೊಟ್ಟು ಲೋಕಸಭೆ ಚುನಾವಣೆ ವೇಳೆಗೆ ರಾಷ್ಟ್ರ ರಾಜ ಕಾರಣದತ್ತ ಹೋಗುವ ಇರಾದೆಯನ್ನೂ ಹೊಂದಿದ್ದಾರೆ. ಆದರೆ ಇದು ಅಷ್ಟು ಸುಲಭವೂ ಅಲ್ಲ ಎನ್ನುವುದು ಅವರಿಗೂ ಗೊತ್ತಿದೆ. ನ.30ರಂದು ನಡೆಯುವ ಮತದಾನ, ಡಿ.3ರ ಎಣಿಕೆ ವೇಳೆಗೆ ಎಲ್ಲವೂ ಸ್ಪಷ್ಟವಾಗಲಿದೆ. ಹಲವು ಸಮೀಕ್ಷೆಗಳು “ಅತಂತ್ರ ಸರಕಾರ’ದ ಮುನ್ಸೂಚನೆ ನೀಡಿದ್ದರೂ ಯಾರ ತಂತ್ರ ಫ‌ಲಿಸಲಿದೆ ಎನ್ನುವುದು ರೋಚಕವಾಗಿದೆ. ವರ್ಣರಂಜಿತ ರಾಜಕಾರಣಿ, ಅಖಂಡ ಆಂಧ್ರದ ಸಿಎಂ ಆಗಿದ್ದ, ಹೈದ್ರಾಬಾದ್‌ಗೆ ಐಟಿ-ಬಿಟಿ ಪರಿಚಯಿಸಿದ್ದ ಚಂದ್ರಬಾಬು ನಾಯ್ಡು ಈ ಬಾರಿ “ಸ್ಕಿಲ್‌ ಡೆವಲಪ್‌ಮೆಂಟ್‌’ ಹಗರಣದಲ್ಲಿ ಸಿಲುಕಿ ಕಣದಿಂದ ಉಳಿದಿದ್ದಾರೆ ಎಂಬುದು ವಿಶೇಷ.

– ಚನ್ನು ಮೂಲಿಮನಿ

Advertisement

Udayavani is now on Telegram. Click here to join our channel and stay updated with the latest news.

Next