Advertisement

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

01:19 PM Apr 20, 2024 | Team Udayavani |

ಪುಟ್ಟ ರಾಜ್ಯಗಳಾದ ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಲೋಕಸಭೆ ಕಣ ರಂಗೇರಿದೆ. ಬುಡಕಟ್ಟು ಮತ್ತು ಒಬಿಸಿ ಸಮುದಾಯದವರು ನಿರ್ಣಾಯಕವಾಗಿರುವ ಈ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಛತ್ತೀಸ್‌ಗಢವು 11 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಇನ್ನು 14 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಝಾರ್ಖಂಡ್‌ನ‌ಲ್ಲಿ ಎನ್‌ಡಿಎ ಮತ್ತು ಜೆಎಂಎಂ ಒಳಗೊಂಡ ಇಂಡಿಯಾ ಒಕ್ಕೂಟಗಳ ನಡುವೆ ಪೈಪೋಟಿ ಇದೆ.

Advertisement

ನಕ್ಸಲರ ದಮನವೇ ಬಿಜೆಪಿಗೆ ಅಸ್ತ್ರ

ಛತ್ತೀಸ್‌ಗಢದಲ್ಲಿ ಲೋಕಸಭಾ ಚುನಾವಣಾ ಕಾವು ಏರಿದೆ. ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ರ್ಯಾಲಿಗಳನ್ನು ಬಿರುಸಾಗಿಸಿವೆ. ರಾಜ್ಯದಲ್ಲಿ ಒಟ್ಟು 11 ಲೋಕಸಭಾ ಕ್ಷೇತ್ರಗಳಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇಲ್ಲಿ ನೇರ ಪೈಪೋಟಿ ಇದೆ.

ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ 11 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಉಳಿದ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಜಯ ಗಳಿಸಿದ್ದರು. 2000 ಇಸವಿಯಲ್ಲಿ ಮಧ್ಯಪ್ರದೇಶದಿಂದ ವಿಭಜಿತವಾಗಿ ಹೊಸ ರಾಜ್ಯವಾಗಿ ಛತ್ತೀಸ್‌ಗಢ ಉದಯವಾಯಿತು. 36 ಕೋಟೆಗಳನ್ನು ಹೊಂದಿರುವುದರಿಂದ ಈ ರಾಜ್ಯಕ್ಕೆ ಛತ್ತೀಸ್‌ಗಢ ಎಂದು ಹೆಸರು ಬಂದಿತು.

ಛತ್ತೀಸ್‌ಗಢ ಚುನಾವಣೆಯಲ್ಲಿ ಬುಡಕಟ್ಟು ಜನಾಂಗ ಮತ್ತು ಇತರ ಹಿಂದುಳಿದ ಸಮುದಾಯ ಪ್ರಮುಖ ಪಾತ್ರ ವಹಿಸುತ್ತಾರೆ. ರಾಜ್ಯದಲ್ಲಿ ಶೇ.30ರಷ್ಟು ಬುಡಕಟ್ಟು ಸಮುದಾಯವರಿದ್ದಾರೆ. ರಾಜ್ಯದಲ್ಲಿ ಒಬಿಸಿ ಸಮುದಾಯ ಶೇ.44ರಷ್ಟಿದ್ದು, ಚುನಾವಣ ಫ‌ಲಿತಾಂಶದ ಮೇಲೆ ಪ್ರಮುಖ ಪಾತ್ರ ವಹಿಸುತ್ತವೆ. ಸಾಹು, ಕುರ್ಮಿ ಮತ್ತು ಯಾದವ ಸಮುದಾಯದವರು ಒಬಿಸಿ ಅಡಿ ಬರುವ ಪ್ರಮುಖ ಜಾತಿಗಳಾಗಿವೆ. ಒಬಿಸಿ ಪೈಕಿ ಸಾಹು ಸಮುದಾಯವರೇ ಶೇ.22ರಷ್ಟು ಇದ್ದಾರೆ.

Advertisement

ನಕ್ಸಲ್‌ ಸಮಸ್ಯೆ ಹಾಗೂ ಅಭಿವೃದ್ಧಿ ವಿಚಾರವು ರಾಜ್ಯದಲ್ಲಿ ಪ್ರಮುಖ ವಿಷಯವಾಗಿದೆ. ಕೇಂದ್ರ ಸರಕಾರ ನಕ್ಸಲ್‌ ನಿಗ್ರಹದ ನಿಟ್ಟಿನಲ್ಲಿ ಕಠಿನ ಕ್ರಮಗಳನ್ನು ವಹಿಸಿದೆ. ಇತ್ತೀಚೆಗೆ ಭದ್ರತಾ ಪಡೆಗಳು ನಡೆಸಿದ ಪ್ರಮುಖ ಕಾರ್ಯಾಚರಣೆಗಳಲ್ಲಿ 86 ನಕ್ಸಲರು ಹತರಾಗಿದ್ದು, 126 ನಕ್ಸಲರು ಬಂಧಿತರಾಗಿದೆ. ಅಲ್ಲದೇ 250ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ. ನಕ್ಸಲ್‌ ನಿಗ್ರಹ ವಿಷಯವು ಈ ಚುನಾವಣೆಯಲ್ಲೂ ಕೂಡ ಮುಖ್ಯ ವಿಷಯವಾಗಲಿದೆ. 2023ರಲ್ಲಿ ನಡೆದ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿ, ನಕ್ಸಲರ ದಮನವೇ ಬಿಜೆಪಿಗೆ ಅಸ್ತ್ರ ಅಧಿಕಾರದ ಗದ್ದುಗೆ ಏರಿತು. ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರಕಾರ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ. 2024ರ ಲೋಕಸಭೆ ಚುನಾವಣೆಯು ರಾಜ್ಯದಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಎ.19ರಂದು, ಎರಡನೇ ಹಂತ ಎ.26ರಂದು ಮತ್ತು ಮೂರನೇ ಹಂತ ಮೇ 7ರಂದು ಮತದಾನ ನಡೆಯಲಿದೆ. ಜೂ.4ರಂದು ಫ‌ಲಿತಾಂಶ ಪ್ರಕಟವಾಗಲಿದೆ. ಚುನಾವಣ ಪೂರ್ವ ಹಲವು ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 11 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟಕ್ಕೆ 10ರಿಂದ 11 ಸ್ಥಾನಗಳು ಹಾಗೂ 1ರಿಂದ 2 ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟ ಜಯಗಳಿಸುವುದಾಗಿ ಅಂದಾಜಿಸಲಾಗಿದೆ.

ಭ್ರಷ್ಟಾಚಾರ ಆರೋಪದ ಪ್ರತಿಧ್ವನಿ

ಝಾರ್ಖಂಡ್‌ನ‌ಲ್ಲಿ ಒಟ್ಟು 14 ಲೋಕಸಭೆ ಕ್ಷೇತ್ರಗಳಿದ್ದು, ಈ ಬಾರಿ 4 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಎಲ್ಲ 14 ಕ್ಷೇತ್ರಗಳಿಗೂ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದೆ. ಪ್ರಚಾರ ಬಿರುಸಾಗಿ ಸಾಗಿದ್ದು, ಚುನಾವಣ ಅಖಾಡ ರಂಗೇರಿದೆ.

2019ರ ಲೋಕಸಭೆ ಚುನಾವಣೆಯಲ್ಲಿ 12 ಸ್ಥಾನಗಳು ಬಿಜೆಪಿ ತೆಕ್ಕೆಗೆ ಜಾರಿತ್ತು. ಕಾಂಗ್ರೆಸ್‌ ಮತ್ತು ಆಲ್‌ ಝಾರ್ಖಂಡ್‌ ಸ್ಟೂಡೆಂಟ್ಸ್‌ ಯೂನಿಯನ್‌(ಎಜೆಎಸ್‌ಯು) ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದವು. 2000 ಇಸವಿಯಲ್ಲಿ ಬಿಹಾರದಿಂದ ವಿಭಜಿತವಾಗಿ ಭಾರತದ 28ನೇ ರಾಜ್ಯವಾಗಿ ಝಾರ್ಖಂಡ್‌ ಉದಯವಾಯಿತು. ಪೂರ್ವ ಭಾರತದ ಈ ರಾಜ್ಯವು ಖನಿಜಗಳಿಂದ ಸಮೃದ್ಧವಾಗಿವೆ. 2011ರ ಜನಗಣತಿ ಪ್ರಕಾರ, 3.2 ಕೋಟಿ ಜನಸಂಖ್ಯೆ ಇದೆ.

ಇನ್ನೊಂದೆಡೆ 2019ರಲ್ಲಿ ನಡೆದ ಝಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಝಾರ್ಖಂಡ್‌ ಮುಕ್ತಿ ಮೋರ್ಚಾ(ಜೆಎಂಎಂ) ನೇತೃತ್ವದ ಮಹಾಘಟಬಂಧನ್‌ ಸರಕಾರ ಅಧಿಕಾರಕ್ಕೆ ಬಂತು. ಹೇಮಂತ್‌ ಸೊರೇನ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾದ ಹೇಮಂತ್‌ ಸೊರೇನ್‌, ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಚಂಪಾಯಿ ಸೊರೇನ್‌ ಮುಖ್ಯಮಂತ್ರಿಯಾಗಿದ್ದಾರೆ. ಜೆಎಂಎಂ ಪಕ್ಷವು ಇಂಡಿಯಾ ಒಕ್ಕೂಟದ ಭಾಗವಾಗಿದೆ.

ಬಿಜೆಪಿ ತನ್ನ ಪ್ರಚಾರ ರ್ಯಾಲಿಗಳಲ್ಲಿ ಜೆಎಂಎಂ ಹಾಗೂ ಇಂಡಿಯಾ ಒಕ್ಕೂಟದ ವಿರುದ್ಧ ಸರಣಿ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದೆ. ಝಾರ್ಖಂಡ್‌ನ‌ಲ್ಲಿ ಈ ಹಿಂದೆ ಇದ್ದ ನಕ್ಸಲರ ಹಾವಳಿ ಈಗ ತಗ್ಗಿದೆ. ಇದರ ಹಿರಿಮೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ನಿಶಿಕಾಂತ್‌ ದುಬೆ(ಬಿಜೆಪಿ), ಅರ್ಜುನ್‌ ಮುಂಡಾ(ಬಿಜೆಪಿ), ಸಂಜಯ್‌ ಸೇಠ್‌ (ಬಿಜೆಪಿ), ಜೈ ಪ್ರಕಾಶ್‌ಬಾಯ್‌ ಪಟೇಲ್‌ (ಕಾಂಗ್ರೆಸ್‌), ಸುಖದೇವ್‌ ಭಗತ್‌(ಕಾಂಗ್ರೆಸ್‌), ಗೋಪೇನ್‌ ಸೊರೇನ್‌(ಸಿಪಿಎಂ) ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.

ಚುನಾವಣಪೂರ್ವ ಹಲವು ಸಮೀಕ್ಷೆಗಳ ಪ್ರಕಾರ, 2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟಕ್ಕೆ 11-12 ಸ್ಥಾನಗಳು ಮತ್ತು ಇಂಡಿಯಾ ಒಕ್ಕೂಟಕ್ಕೆ 1-2 ಸ್ಥಾನಗಳು ಗಳಿಸುವುದಾಗಿ ಅಂದಾಜಿಸಿವೆ. 2014ರ ಅನಂತರ ಮೋದಿ ನಾಮಬಲ, ಕೇಂದ್ರದ ಅಭಿವೃದ್ಧಿ ಕೆಲಸಗಳು ಇಲ್ಲಿ ಸದ್ದು ಮಾಡಿದ್ದು, ಕಳೆದ ಎರಡೂ ಲೋಕಸಭಾ ಅವಧಿಗಳಲ್ಲೂ ಎನ್‌ಡಿಎ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ.

■ ಸಂತೋಷ ಪಿ.ಯು.

Advertisement

Udayavani is now on Telegram. Click here to join our channel and stay updated with the latest news.

Next