ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನೊಬ್ಬನ ಲಾಕಪ್ ಡೆತ್ ಆಗಿರುವ ಆರೋಪ ಕೇಳಿ ಬಂದಿದ್ದು ಇದೀಗ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಬೆಟೂರ ಗ್ರಾಮದ ಶಿವಪ್ಪ ಗೂಳಿ(21) ಎಂಬ ಲಾರಿ ಚಾಲಕನನ್ನು ಅಕ್ರಮ ಮರಳು ಸಾಗಾಣಿಕೆ ಆರೋಪದಲ್ಲಿ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದು, ಆ ಬಳಿಕ ಪೊಲೀಸರ ಥಳಿತದಿಂದ ತೀವ್ರವಾಗಿ ಗಾಯಗೊಂಡು ಠಾಣೆಯಲ್ಲೇ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.
ಭಾನುವಾರ ಬೆಳಗ್ಗೆ ಲಕ್ಷ್ಮೇಶ್ವರ ಠಾಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಉದ್ರಿಕ್ತ ಜನರು ಠಾಣೆಯ ಮೇಲೆಯೆ ದಾಳಿ ನಡೆಸಿದ್ದು ಪೊಲೀಸ್ ಠಾಣೆ,ಜೀಪ್ಗೆ ಬೆಂಕಿ ಹಚ್ಚಿದ್ದಾರೆ. ಠಾಣೆಯ ಪೀಠೊಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಠಾಣೆಯ ಬಳಿ ಸಾವಿರಾರು ಜನರು ಜಮಾಯಿಸಿದ್ದು ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ.
ಸೂಕ್ಷ್ಮ ಪಟ್ಟಣದಲ್ಲಿ ಈಗ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಎಸ್ಪಿ ಕೆ.ಸಂತೋಷ್ ಬಾಬು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕಾರಣರಾದ ಪೊಲೀಸ್ ಬರಲಿ
ಹತ್ಯೆಗೆ ಕಾರಣರಾದ ಪೊಲೀಸ್ ಪೇದೆ ಮತ್ತು ಜೀಪ್ ಚಾಲಕ ಸ್ಥಳಕ್ಕೆ ಬರುವವರೆಗೆ ಶವವನ್ನು ತೆಗೆಯುವುದಿಲ್ಲ ಎಂದು ಸಾವಿರಾರು ಉದ್ರಿಕ್ತರು ಪಟ್ಟು ಹಿಡಿದಿದ್ದಾರೆ. ಪೊಲೀಸ್ ಬಂದರೆ ಆತನನ್ನೂ ಕೊಂದು ಹಾಕಬೇಕು ಎಂದು ಮೃತನ ಸಹೋದರಿ ಮಾದ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾಳೆ.