Advertisement
ಇಲ್ಲಿ ಎಲ್ಲರೂ ಸಮಾನರೇ. ಸ್ವಾತಂತ್ರ್ಯವಿದೆ, ಬೇಕಾದಷ್ಟು ಅವಕಾಶಗಳೂ ಇವೆ. ಆದರೆ, ನಮಗೆ ಬೇಕಾದ ಸ್ವಾತಂತ್ರ್ಯವನ್ನು ನಾವೇ ಪಡೆದುಕೊಳ್ಳಬೇಕು. ಯಾರೂ ತಂದುಕೊಡುವುದಿಲ್ಲ. ಮಹಿಳೆ ಸಮಾಜಮುಖೀಯಾಗಿ ತನ್ನನ್ನು ತೊಡಗಿಸಿಕೊಳ್ಳುವಾಗ ಕೆಲವೊಂದು ತೊಡಕುಗಳು ಎದುರಾಗುವುದು ಸಹಜ. ಅದನ್ನು ಹೇಗೆ ಎದುರಿಸಬೇಕು ಅನ್ನುವುದು ಗೊತ್ತಿದ್ದರಾಯಿತು.
ಓರ್ವ ಮಹಿಳೆ ಸಮಾಜಮುಖೀಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆಂದರೆ ಅವಳ ಕುರಿತು ತಿಳಿದುಕೊಳ್ಳುವ ಕುತೂಹಲ ಕೆಲವರಿಗಾದರೂ ಇರುತ್ತದೆ. ಪರೋಕ್ಷವಾಗಿ ಯಾವುದಾದರೊಂದು ವಿಷಯದ ಮೂಲಕ ಮಾತಿನ ನಡುವೆ ಅದು ಕಾಣಿಸಿಕೊಳ್ಳುವುದುಂಟು. “”ಓಹ್! ಇವತ್ತು ಕಾರ್ಯಕ್ರಮಕ್ಕೆ ತುಂಬ ಬೇಗನೆ ಬಂದಿದ್ದೀರಿ. ಭಾನುವಾರ ಬೇರೆ, ಪಾಪ, ಗಂಡನಿಗೆ ಹೊಟೇಲ್ ಊಟವೇ ಗತಿ. ಏನು ಮಾಡುವುದು ಇಂದಿನ ಕಾರ್ಯಕ್ರಮ ಕೂಡ ಮಿಸ್ ಮಾಡುವಂಥದ್ದಲ್ಲ” ಎನ್ನುತ್ತಾರೆ. ಅವರ ಸವಾಲಿಗೆ ಪ್ರತಿಯಾಗಿ, “”ಇಲ್ಲ ಸ್ವಾಮಿ ಬೆಳಗಾತ ಬೇಗನೆ ಎದ್ದು ಮೀನು ಸಾರು, ಕಡುಬು ಮಾಡಿಟ್ಟು ಬಂದಿದ್ದೇನೆ” ಅಂದಾಗ, “”ಹೌದಾ? ಹಾಗಾದ್ರೆ ಇವತ್ತು ಮಧ್ಯಾಹ್ನ ನಿಮ್ಮ ಮನೆಗೆಯೇ ಊಟಕ್ಕೆ ಬರಬಹುದಿತ್ತು” ಎಂದು ಮಾತಿನ ಧಾಟಿಯನ್ನು ತಟ್ಟನೆ ಬದಲಾಯಿಸಿ ಬಿಡುತ್ತಾರೆ. ನಗರಿಯಲ್ಲಿ ಸಮಾನಮನಸ್ಕರೇ ಹೆಚ್ಚು. ಕೂಡುಕುಟುಂಬದಲ್ಲಿ ಮನೆಮಂದಿಯೆಲ್ಲ ಸೇರುವಂತೆ, ಇಲ್ಲಿ ನಡೆಯುವ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅದೇ ರೀತಿಯ ವಾತಾವರಣ. ಆದರೆ, ಸಮಯ ಪರಿಪಾಲನೆಯಲ್ಲಿಯೂ ಮಹಿಳೆಯರಿಗೆ ಮಾತ್ರ ರಿಯಾಯಿತಿ ಸಿಗುವುದಿಲ್ಲ. ಕೆಲವೊಮ್ಮೆ ಕಾರ್ಯಕ್ರಮಕ್ಕೆ ತಡವಾಗಿ ಹೋದಾಗ, ಅವರಾಡುವ ಮಾತು ಹೀಗಿದೆ, “”ಹತ್ತು ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಿದೆ. ಮಧ್ಯಾಹ್ನ ಹನ್ನೆರಡು ಗಂಟೆಗೆ ಬರ್ತಾ ಇದ್ದೀರಲ್ವಾ! ಇಂದಿನ ಉಪನ್ಯಾಸದಲ್ಲಿ ನೀವೆಲ್ಲ ತಿಳಿದುಕೊಳ್ಳಲೇಬೇಕಾದ ಎಷ್ಟೊಂದು ಮಾಹಿತಿಯಿತ್ತು. ಮಿಸ್ ಮಾಡಿಕೊಂಡಿರಿ” ಅನ್ನುತ್ತಾರೆ. ಅವರಲ್ಲಿ ನಮ್ಮ ಅಡುಗೆ ಮನೆ ಪುರಾಣ ಹೇಳುವುದಕ್ಕಾಗುವುದಿಲ್ಲ. “ಸರ್, ನಾನು ಸಮಯಕ್ಕೆ ಸರಿಯಾಗಿಯೇ ಹೊರಟಿದ್ದೆ. ಆದ್ರೆ ಟಿಕೆಟ್ ಕೌಂಟರ್ನಲ್ಲಿ ಇಷ್ಟುದ್ದದ ಸಾಲು. ಇವತ್ತು ಭಾನುವಾರ, ಮೆಗಾಬ್ಲಾಕ್ ಕೂಡ ಇತ್ತಲ್ವೆ ! ಲೋಕಲ್ ಟ್ರೆ„ನ್ ಹತ್ತುವ ಹಾಗೆಯೇ ಇಲ್ಲ. ಹಾಗಾಗಿ, ಇಷ್ಟು ಲೇಟಾಯ್ತು, ಸರ್” ಎಂದು ಕೆಲವೊಮ್ಮೆ ಸ್ವಲ್ಪ ಸುಳ್ಳು ಬೆರೆಸಿ ಹೇಳಬೇಕಾಗುತ್ತದೆ. ಆವಾಗ ಆ ಕಡೆಯಿಂದ, “”ನಿಮ್ಮ ಪ್ರಾಬ್ಲೆಮ್ ಯಾವಾಗ್ಲೂ ಇದ್ದಿದ್ದೇ. ನಿಮಗಿಂತ ಅರ್ಧಗಂಟೆ ಮುಂಚಿತವಾಗಿ ಬಂದವರಿಗೆ ಯಾವ ಸಮಸ್ಯೆಯೂ ಇರಲಿಲ್ಲ ! ಎಲ್ಲ ಕಡೆಯ ತಾಪತ್ರಯಗಳೂ ನಿಮ್ಕಡೆಗೆ ಬಂದು ಸೇರಿದ ಹಾಗಿದೆ”- ಹೀಗೆ ಮಾತಿನಲ್ಲಿ ಸ್ವಲ್ಪ$ ಮುನಿಸು ತೋರಿಸಿದರೂ, ಇಲ್ಲಿ ಬರುವವರೆಲ್ಲ ನಮ್ಮವರು, ಇನ್ನಷ್ಟು ತಿಳಿದುಕೊಂಡು ಮುನ್ನೆಲೆಗೆ ಬರಬೇಕು ಅನ್ನುವ ಆಶಯ ಅವರದ್ದಾಗಿರುತ್ತದೆ.
ಮಹಿಳೆಯರು ಬರೆಯುವುದೆಲ್ಲ ಅಡುಗೆಮನೆ ಸಾಹಿತ್ಯವೇ!
ಮಾಟುಂಗದಲ್ಲಿರುವ ಮೈಸೂರು ಅಸೋಸಿಯೇಶನ್ನಲ್ಲಿ ಪರಿಚಿತರೋರ್ವರ ಕೃತಿ ಬಿಡುಗಡೆ ಸಮಾರಂಭವಿತ್ತು. ಎಪ್ಪತ್ತು ದಾಟಿದ ಹಿರಿಯರೊಬ್ಬರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಲಾರಂಭಿಸಿದರು. ಮೊದಲಿಗೆ ತನ್ನ ಬರವಣಿಗೆಯ ಬಗ್ಗೆ ಹೇಳಿಕೊಂಡರು. ತನ್ನ ಯಾವ ಬರಹವನ್ನೂ ಪತ್ನಿಗೆ ಓದಲು ಕೊಡುವುದಿಲ್ಲ, ಅವಳ ಸಲಹೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಒಂದು ಕಥೆಯನ್ನೇ ಹೇಳಿದರು. ಅಂದು ಲೋಕಾರ್ಪಣೆಗೊಂಡ ಕೃತಿ ಪ್ರವಾಸಕಥನವಾಗಿತ್ತು. ಕೃತಿಕಾರರನ್ನು ಹೊಗಳುವ ಉದ್ದೇಶ ಅವರದಾಗಿತ್ತೋ ಏನೋ! “”ಮಹಿಳಾ ಲೇಖಕಿಯರೆಲ್ಲ ತಮ್ಮ ಪ್ರವಾಸ ಕಥನದಲ್ಲಿ, ಎಲ್ಲಿ ಹೋದೆ, ಏನೆಲ್ಲ ತಿಂದೆ, ಎಷ್ಟು ಶಾಪಿಂಗ್ ಮಾಡಿದೆ ಇದನ್ನೆ ಬರೆಯುತ್ತಾರೆ. ಆದರೆ, ಪುರುಷರು ಹಾಗಲ್ಲ ಎಂಬುದಕ್ಕೆ ಈ ಕೃತಿಯೇ ಸಾಕ್ಷಿ” ಅಂದರು. ಅವರ ಮಾತಿನ ದಾಟಿಯಲ್ಲಿಯೇ ಹೆಣ್ಣಿನ ಬಗೆಗೆ ಇರುವ ಕೀಳರಿಮೆ ಎದ್ದು ಕಾಣುತ್ತಿತ್ತು. ಮನಸ್ಸು ಪ್ರತಿಭಟಿಸಲು ಮುಂದಾಗುತ್ತಿತ್ತು. ಆದರೆ, ನನಗಿಂತ ಹಿರಿಯ ಲೇಖಕಿಯರು ಕೂಡ ಸುಮ್ಮನೆ ಕುಳಿತು ಕೇಳಿಸಿಕೊಳ್ಳುತ್ತಿದ್ದರು. ಬಹುಶಃ ಕಾರ್ಯಕ್ರಮ ಸುಗಮವಾಗಿ ನೆರವೇರಲೆಂದೋ ಅಥವಾ ಅವರ ವಯಸ್ಸನ್ನು ಗಮನಿಸಿಯೋ ಯಾರೊಬ್ಬರೂ ಚಕಾರವೆತ್ತಲಿಲ್ಲ.
Related Articles
Advertisement
ಹೇಳಿದ್ದನ್ನೆಲ್ಲ ಕೇಳಿ ಮೌನವಾಗಿ ಸಹಿಸಿಕೊಳ್ಳುವ ನಮ್ಮಂಥವರು ಇನ್ನೂ ಇರುವುದರಿಂದಲೇ, ಮಹಿಳೆಯರು ಬರೆದಿದ್ದೆಲ್ಲ ಅಡುಗೆ ಮನೆ ಸಾಹಿತ್ಯವೆನ್ನುವ ಭ್ರಮೆ ಇನ್ನೂ ಕೆಲವರಲ್ಲಿ ಇದೆ. ಕವಿತೆ ಬರೆಯುವಾಗಲೂ ಕೆಲವೊಂದು ನಿರ್ಬಂಧಗಳು! ಪ್ರೇಮ ಕವಿತೆಯಾದರೆ ಮೆಚ್ಚುಗೆಯ ನುಡಿಗಳೊಂದಿಗೆ ಮೂಲವನ್ನು ತಿಳಿದುಕೊಳ್ಳುವ ಕುತೂಹಲ! ಅಂತೆಕಂತೆಗಳ ಸುದ್ದಿಗಳೂ ಬಂದು ಸೇರಿಕೊಳ್ಳುತ್ತವೆ. ಪ್ರೀತಿ ಅನ್ನುವುದು ಬೆಲೆಕಟ್ಟಲಾಗದ, ನಾವು ಹಂಚಿದಷ್ಟೂ ಖಾಲಿಯಾಗದೆ ಮತ್ತಷ್ಟು ತುಂಬಿಕೊಳ್ಳುವ ಭಾವ. ಪ್ರೀತಿ ನಮ್ಮ ಮನಸ್ಸಿನಾಳದಲ್ಲಿರುವ ಸ್ಥಾಯಿಭಾವ. ಅದು ಕವಿತೆಯ ಮೂಲಕವೂ ಪ್ರಕಟವಾಗಬಹುದು. ನಮ್ಮ ಆತ್ಮತೃಪ್ತಿಗಾಗಿ ಕಾವ್ಯ ಬರೆಯುವಾಗ ಭಾವನೆಗಳಿಗೆ ಬೇಲಿ ಯಾಕೆ? ಅದು ಸ್ವತ್ಛಂದವಾಗಿ ಪ್ರವಹಿಸಲಿ. ಪ್ರತಿಕ್ರಿಯೆಗೆ ವಿಚಲಿತರಾಗದೆ ಸಹಜವಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮಲ್ಲಿರಬೇಕಷ್ಟೆ.
ಇಲ್ಲಿ ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯ ಬಯಸುವವರಿಗೆ ಅವಕಾಶದ ಜೊತೆಗೆ ಪ್ರೋತ್ಸಾಹವೂ ಧಾರಾಳವಾಗಿ ಸಿಗುತ್ತದೆ. ಕೆಲವೊಂದು ಸಣ್ಣಪುಟ್ಟ ಅಡೆತಡೆಗಳು ಮುಖ್ಯವಾಗುವುದಿಲ್ಲ. ಲೋಕಲ್ ಟ್ರೆ„ನ್ಗೆ ಚಲಿಸುವಾಗ ಹಾದಿಯುದ್ದಕ್ಕೂ ಹಳಿಗಳನ್ನು ಬದಲಿಸುತ್ತಲೇ ಮುಂದೆ ಸಾಗುತ್ತದೆ. ಕೆಲವೆಡೆ ಚಲನೆಯ ಗತಿ ನಿಧಾನವಾದರೂ ಮುಗ್ಗರಿಸುವುದಿಲ್ಲ. ನಮ್ಮ ಬದುಕು ಕೂಡ ಅಂತೆಯೇ. ಗುರಿ ಮುಟ್ಟಲು ನೇರವಾದ ಹಾದಿಯಿರುವುದಿಲ್ಲ. ಅನೇಕ ತಿರುವು-ಮುರುವುಗಳನ್ನು ದಾಟಿ ನಮ್ಮ ಕಾರ್ಯವನ್ನು ಮಾಡುತ್ತ ಮುಂದುವರಿಯುತ್ತಿರಬೇಕು, ಲೋಕಲ್ ಟ್ರೆ„ನಿನಂತೆ.
– ಅನಿತಾ ಪಿ. ತಾಕೊಡೆ