Advertisement

ತೆಂಗಿನ ಕಾಯಿಯ ಗೋಣಿಯ ಜೊತೆಗೆ ಒಂದು ಕಟ್ಟು ಬಸಳೆ

11:52 PM Mar 28, 2019 | mahesh |

ಊರಿನಲ್ಲಿ ಕತ್ತಲಾಯಿತೆಂದರೆ ಕೇಳಿ ಬರುವುದು, ಮರದ ಗೆಲ್ಲುಗಳೆಡೆಯಲಿ ಕೂತು ಹೂ ಗುಟ್ಟುವ ಗೂಬೆ ಅಥವಾ ನಾನಾ ತರದ ಕೀಟಗಳು ಗಿಜಿಗುಡುವ ಸದ್ದು. ಮುಂಬೈಯಲ್ಲಿ ನೀರವ ಮೌನ ಸ್ವಲ್ಪವಾದರೂ ನಮ್ಮ ಅನುಭವಕ್ಕೆ ಬರುವುದು ರಾತ್ರಿ ಹನ್ನೆರಡರ ನಂತರ. ಆ ಸಮಯದಲ್ಲಿ ಲೋಕಲ್‌ ರೈಲು, ನಿಲ್ದಾಣದಲ್ಲಿ ನಿಂತು ಹೊರಡುವಾಗ ಮಾಡುವ ಸಿಳ್ಳೆಯ ಸದ್ದು ನಾನಿರುವ ಕಟ್ಟಡದವರೆಗೆ ಸರಿಯಾಗಿ ಕೇಳಿಬರುತ್ತದೆ. ಮುಂಬೈಗೆ ಬಂದ ಮೊದಲ ದಿನಗಳಲ್ಲಿ ರಾತ್ರಿ ಒಂದು ಗಂಟೆಯ ನಂತರ ಬರುವ ಎಲ್ಲ ಲೋಕಲ್‌ ರೈಲುಗಳೂ ಪರಿಚಿತವೇ. ಮನೆಯ ಸದಸ್ಯರು ದುಡಿಯಲೆಂದು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಹೋದವರು ಮನೆಗೆ ಮರಳುವ ಸಮಯವದು. ರೈಲಿನ ಸದ್ದು ಕೇಳಿದ ಹತ್ತು ನಿಮಿಷದಲ್ಲಿ ಯಾರಾದರೊಬ್ಬರು ಬಾರದೇ ಇದ್ದರೆ, ನಂತರ ಬರುವ ರೈಲಿನ ನಿರೀಕ್ಷೆ. ಹೀಗೆ ಕೆಲವೊಮ್ಮೆ ಈ ಕಾಯುವಿಕೆ, 2.30ರವರೆಗೆ ಅಂದರೆ ಆ ದಿನದ ಕೊನೆಯ ರೈಲು ಬಂದು ನಿಲ್ಲುವವರೆಗೆ ಮುಂದುವರಿಯುತ್ತಿತ್ತು. ಊರಿನಲ್ಲಿ ರಾತ್ರಿ ಎಂಟು ಗಂಟೆಗೆ ಊಟ ಮಾಡಿ ಒಂಬತ್ತು ಗಂಟೆಗೆ ಮಲಗುವುದು ಅಭ್ಯಾಸವಾಗಿತ್ತು. ಇಲ್ಲಿ ಬಂದ ನಂತರ ಸುಮಾರು ಹನ್ನೆರಡು ವರ್ಷಗಳವರೆಗೆ, ರಾತ್ರಿ ಒಂದರ ನಂತರ ಊಟ, ಎರಡರ ನಂತರ ನಿದ್ರೆಗೆ ನನ್ನ ದಿನಚರಿಯನ್ನು ಪರಿವರ್ತನೆ ಮಾಡಿಕೊಳ್ಳಬೇಕಾಯಿತು. ಹೊಟೇಲಿನಲ್ಲಿ ಕೆಲಸ ಮಾಡುವವರ, ಉದ್ಯಮಿಗಳ ಮನೆ ಮನೆಯ ಕಥೆ ಇದೇ ಆಗಿದೆ.

Advertisement

ಮೀನಿನ ಬದಲಿಗೆ ಇಡ್ಲಿ-ವಡಾ
ಹೊಸ ಪರಿಸರಕ್ಕೆ ಹೊಂದಿಕೊಳ್ಳುವವರೆಗೆ, ನಮ್ಮವರಿಗೆಯೇ ನಾವು ಒಂದಲ್ಲ ಒಂದು ರೀತಿಯಲ್ಲಿ ತಮಾಷೆಯ ವಸ್ತುವಾಗಿಬಿಡುತ್ತೇವೆ. ಅವರ ನಗುವಿಗೆ ಜೊತೆಯಾಗುತ್ತಲೇ ನಗರದಲ್ಲಿನ ವಾಸ್ತವತೆಯನ್ನು ಅರಿಯುತ್ತೇವೆ. ಊರಿನಲ್ಲೆಲ್ಲ “ಪೀಂ ಪೀಂ’ ಸದ್ದು ಆಯಿತೆಂದರೆ, ಸೈಕಲಿನಲ್ಲಿ ಮೀನು ಮಾರಿಕೊಂಡು ಬಂದರೆಂದರ್ಥ. ಐವತ್ತೋ ನೂರೋ ರೂಪಾಯಿಯ ನೋಟುಗಳನ್ನು ಮುಷ್ಟಿಯಲ್ಲಿ ಹಿಡಿದುಕೊಂಡು, “ಇವತ್ತು ಯಾವ ಮೀನು ತಂದಿರುವನೋ!’ ಎಂದು ತಕ್ಷಣ ಬೀದಿಗೆ ಬಂದು ಬಿಡುತ್ತೇವೆ. ಬಂಗುಡೆ-ಭೂತಾಯಿ ಮಾತ್ರ ಇದ್ದರೆ, “ದಿನಾ ಇದೇ ತರುತ್ತೀಯಲ್ಲ…!’ ಎಂದು ರಾಗ ಎಳೆಯುತ್ತೇವೆ. “ಇನಿ ಮೀನ್‌ ಬಾರಿ ಪಿರಿಯ. ನನೊರ ಕನಪೆ ಅಕ್ಕ’ (ಮೀನಿನ ದರ ಇಂದು ಅಧಿಕ. ಇನ್ನೊಮ್ಮೆ ತರುತ್ತೇನೆ ಅಕ್ಕ) ಎಂದು ಮೀನು ಮಾರುವವನು ಒಕ್ಕಣೆಯಿಡುತ್ತಾನೆ. ಹಳ್ಳಿಯ ಕಡೆಗೆ ಅಗ್ಗದ ಮೀನನ್ನು ತಂದರೆ ಮಾತ್ರ ಮಾರಾಟವಾಗುತ್ತದೆಯೆಂದು ಅವನಿಗೆ ಚೆನ್ನಾಗಿ ಗೊತ್ತಿರುತ್ತದೆ. ಇಲ್ಲೂ ನಿತ್ಯ ಅಂಥಾದ್ದೇ ಪೀಂ ಪೀಂ ಸದ್ದು ಕೇಳಿದಾಗ, “ಪರ್ವಾಗಿಲ್ಲ ಮೀನಿನವರೂ ಇಲ್ಲೇ ಬರ್ತಾರಲ್ಲ!’ ಅಂತ ಮೈದುನನಲ್ಲಿ ಹೇಳಿದೆ. “ಹೌದು ಅತ್ತಿಗೆ, ನೀವೇ ಹೋಗಿ ಬೇಕಾದ ಮೀನು ತಗೊಂಡು ಬನ್ನಿ’ ಎಂದು ಅವನೂ ಪುಸಲಾಯಿಸಿದ. ಚೌಕಾಶಿ ಮಾಡಲು ಯಾರಾದರೂ ಜೊತೆಗಿರಲಿ ಎಂದು ಯೋಚಿಸುತ್ತ ಶ್ಯಾಮಲಕ್ಕನನ್ನು ಕರೆಯಲು ಎರಡನೆಯ ಮಹಡಿಯ ಮನೆಯ ಕರೆಗಂಟೆ ಒತ್ತಿದೆ. ಬಾಗಿಲು ತೆರೆದ ಶ್ಯಾಮಲಕ್ಕ ನನ್ನ ಮಾತು ಕೇಳಿ, ಜೋಕ್‌ ಕೇಳಿದ ಹಾಗೆ ಪಕಪಕನೆ ನಕ್ಕರು. ಮನೆಯೊಳಗೆ ಕರೆಸಿಕೊಂಡು ವಿಷಯ ತಿಳಿಸಿದಾಗಲೇ ಅವರ ನಗುನ ಹಿಂದಿನ ರಹಸ್ಯ ಅರಿವಾಯಿತು. ಇಲ್ಲಿ ಮದರಾಸಿನವರು ದೊಡ್ಡ ಅಲ್ಯುಮಿನಿಯಂ ಡಬ್ಬಿಯಲ್ಲಿ ಇಡ್ಲಿ-ವಡಾ ಚಟ್ನಿಯನ್ನು ಇರಿಸಿ, ತಲೆ ಮೇಲೆ ಹೊತ್ತುಕೊಂಡು “ಪೀಂ ಪೀಂ’ ಎಂದು ಸದ್ದು ಮಾಡುತ್ತ ಗಲ್ಲಿ ಗಲ್ಲಿ ಸುತ್ತುತ್ತಾರೆ. ಇವರು ಬಾಂಡ್ಲಿವಾಲಿ (ಪಾತ್ರೆ ಮಾರುವವಳು), ಲಸುನ್‌ವಾಲಿ (ಪ್ಲಾಸ್ಟಿಕ್‌ ವಸ್ತುಗೆ ಬದಲಾಗಿ ಬೆಳ್ಳುಳ್ಳಿ ನೀಡುವವಳು), ಬಂಗಾರ್‌ವಾಲ (ಪೇಪರ್‌ ಮತ್ತು ಹಳೆಯ ವಸ್ತುವನ್ನು ಕೊಳ್ಳುವವಳು)ಇವರೆಲ್ಲರ ಹಾಗೆ ಬೀದಿಯಲ್ಲಿ ಕೂಗಿಕೊಂಡು ಹೋಗುವುದಿಲ್ಲ.

ಬಗೆಬಣ್ಣದ ಕಟ್ಟಡಗಳ ಮೆರವಣಿಗೆ
ನಮ್ಮ ಹಳ್ಳಿಯಲ್ಲಿ ಹಿಂದೆ ಹೆಚ್ಚಾಗಿ ಇದ್ದುದು ಹೆಂಚಿನ ಮನೆ. ಜೋರಾಗಿ ಕೂಗಿ ಕರೆದರೆ ಮಾತ್ರ ಕೇಳಿಸುವಷ್ಟು ಅಂತರ ಪ್ರತಿ ಮನೆಗಳಿಗೂ ಇರುತ್ತಿತ್ತು. ಯಾವಾಗಲೊಮ್ಮೆ ಸಿದ್ಧªಕಟ್ಟೆ ಅಥವಾ ಮೂಡಬಿದರೆಗೆ ಹೋದ ಸಂದರ್ಭದಲ್ಲಿ, ಒಂದೆರಡು ಮಹಡಿಯ ಕಟ್ಟಡಗಳು ಕಂಡುಬಂದಾಗ, ಮರೆಯಾಗುವವರೆಗೆ ಬೆರಗುಗಣ್ಣಿನಿಂದ ನೋಡುತ್ತಿದ್ದುದುಂಟು. ಆದರೆ, ಇಲ್ಲಿ ತದ್ವಿರುದ್ಧ. ಡೊಂಬಿವಲಿ ಶಹರದಿಂದ ವೀಟಿಯ ಕಡೆಗೆ ಹೋದರೆ ವಿಸ್ಮಯವೇ ಕಾದಿರುತ್ತದೆ. ಅಲ್ಲೆಲ್ಲ ಹಾದಿಯ ಇಕ್ಕೆಲಗಳಲ್ಲಿ ಆಕಾಶವನ್ನೇ ಮೀರಿದಂತೆ ತೋರುವ ಬಗೆಬಣ್ಣದ ಬಹು ಮಹಡಿಯ ಕಟ್ಟಡಗಳನ್ನು ನೋಡುವುದೆಂದರೆ ಕಣ್ಣಿಗೆ ಹಬ್ಬ. ಹಾದಿಯುದ್ದಕ್ಕೂ ಮೆರವಣಿಗೆ ಹೊರಟಿರುವಂತೆ ಭಾಸವಾಗುತ್ತವೆ. ಮೊದಮೊದಲಿಗೆ ಇದನ್ನೆಲ್ಲ ನಾನು ಎವೆಯಿಕ್ಕದೆ ನೋಡುತ್ತಿದ್ದಾಗ, “ಅದೆಲ್ಲ ನಿಜವಾದುದಲ್ಲ. ಇಲ್ಲೆಲ್ಲ ಸಿನೆಮಾ ಶೂಟಿಂಗ್‌ ನಡೆಯುತ್ತಿರುತ್ತವೆ. ಅದಕ್ಕಾಗಿಯೇ ಕೃತಕವಾಗಿ ನಿರ್ಮಿಸಿದವುಗಳು’ ಅಂತ ಬಂಧುಗಳು ಸುಳ್ಳು ಹೇಳಿ ಸತಾಯಿಸುತ್ತಿದ್ದರು. ಹಳ್ಳಿಗುಗ್ಗು ಅನ್ನುವ ಎಲ್ಲ ಲಕ್ಷಣಗಳು ಆವಾಗ ನನ್ನಲ್ಲಿದ್ದುದರಿಂದ ಆ ಕ್ಷಣಕ್ಕೆ ನಂಬಿದರೂ ತೋರಗೊಡದೆ, ಅವರ ಬಾಯಿಯಿಂದಲೇ ಸತ್ಯಾಂಶ ತಿಳಿಯುವ ಸಲುವಾಗಿ ವಾದಿಸಿ ಗೆಲ್ಲುತ್ತಿದ್ದೆ.

ಯಾವ ನೀರು? ಎಲ್ಲಿಯ ಮಣ್ಣು ಗೊಬ್ಬರ!
ಲೋಕಲ್‌ ಟ್ರೈನಿನಲ್ಲಿ ಕೂತು ಹೊರಗಡೆ ಕಣ್ಣು ಹಾಯಿಸಿದರೆ ಹಳಿಗಳ ಸಮೀಪದಲ್ಲಿ ಉದ್ದಕ್ಕೂ ಕೆಲವೊಂದು ತರಕಾರಿ ಗಿಡಗಳು ದಷ್ಟಪುಷ್ಟವಾಗಿ ಬೆಳೆದು ನಿಂತಿರುವುದು ಕಂಡುಬರುತ್ತವೆ. ಕೆಲವೊಂದು ಕಡೆ ಅದಕ್ಕೆ ಆಸರೆ ಚರಂಡಿಗಳ ಕೊಳಚೆ ನೀರು. ಅದೇ ತರಕಾರಿಗಳು ಮಾರುಕಟ್ಟೆಗೆ ಬರುವುದೆಂದು ತಿಳಿದಾಗ ಮೊದಲಿಗೆ ಅಸಹ್ಯವಾಗಿತ್ತು. “ಇದನ್ನೇ ತಿನ್ನಬೇಕಲ್ಲ…!’ ಎಂದು ಮನಸ್ಸು ಹಿಂಜರಿಯುತ್ತಿತ್ತು. ಅದೇ ಸಂಶಯದಲ್ಲಿ ತರಕಾರಿಯನ್ನು ಮೂಸಿ ನೋಡಿ, ನಾಲ್ಕೈದು ಬಾರಿ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದುದುಂಟು. ಈಗ ಅದ್ಯಾವ ಯೋಚನೆಯೂ ಸುಳಿಯುವುದಿಲ್ಲ. ಯಾವ ನೀರು? ಎಲ್ಲಿಯ ಮಣ್ಣು, ಗೊಬ್ಬರ! ಅದ್ಯಾವುದರ ಪರಿವೆಯಿಲ್ಲದೆ ಅಡುಗೆಮನೆಯಲ್ಲಿ ರುಚಿ ರುಚಿಯಾದ ಪಲ್ಯ ಸಾಂಬಾರು ತಯಾರಾಗುತ್ತ ಇರುತ್ತವೆ. ಇಲ್ಲಿ ತರಕಾರಿಗಳು ಅಗ್ಗದ ಬೆಲೆಯಲ್ಲಿ ಸಿಗುತ್ತವೆ. ಊರಿನ ತರಕಾರಿಗೆ ಹೋಲಿಸಿದರೆ, ರುಚಿಯಲ್ಲಿಯೂ ಅಷ್ಟೇನು ವ್ಯತ್ಯಾಸವಿಲ್ಲ. ಅದರೆ, ನನ್ನ ಅನುಭವಕ್ಕೆ ಬಂದಿರುವಂತೆ, ಇಲ್ಲಿ ಬೆಳೆಯುವ ಬಸಳೆ ಮಾತ್ರ ಹೆಚ್ಚಿನವರಿಗೆ ಸಹ್ಯವಾಗುವುದಿಲ್ಲ. ಹಾಗಾಗಿಯೇ ಊರಿನಿಂದ ಮುಂಬೈಗೆ ಬರುವವರು ಬಸಳೆಯನ್ನು ಹೆಚ್ಚು ತರುತ್ತಾರೆ. ಎಲ್ಲರ ಕೈಯಲ್ಲಿ ತೆಂಗಿನಕಾಯಿಯ ಗೋಣಿಯ ಜೊತೆಗೆ ಒಂದುಕಟ್ಟು ಬಸಳೆ ಇದ್ದೇ ಇರುತ್ತದೆ.

ನೆನಪಿನ ಮೆರವಣಿಗೆ
ಇಲ್ಲಿ ಮನೆ-ಮನೆಗಳಲ್ಲಿ ಅಲ್ಯುಮಿನಿಯಂ ಅಥವಾ ಹಿಂಡೋಲಿಯಂ ಪಾತ್ರೆಯಲ್ಲಿಯೇ ಪಲ-ಸಾರು ಎಲ್ಲವನ್ನೂ ಮಾಡಿಕೊಳ್ಳುತ್ತಾರೆ. ಜೊತೆಗೆ ಗ್ಯಾಸ್‌ ಉಳಿತಾಯದ ಸಲುವಾಗಿ ಕುಕ್ಕರನ್ನು ಹೆಚ್ಚಾಗಿ ಬಳಸುತ್ತಾರೆ. ಊರಿನ ಅಡುಗೆಯ ರುಚಿಯನ್ನೆ ಹಚ್ಚಿಕೊಂಡ ನಾಲಿಗೆಗೆ, ಇಲ್ಲಿ ಯಾವ ರೀತಿಯ ಮಸಾಲಾ ಪ್ರಯೋಗ ಮಾಡಿದರೂ ಸಮವೆನಿಸುತ್ತಿರಲಿಲ್ಲ. ಊರಿನಲ್ಲಿ ಮೀನು, ಕೋಳಿಸುಕ್ಕವನ್ನೆಲ್ಲ ಮಣ್ಣಿನ ಬಿಸಲೆ (ಪಾತ್ರೆ) ಯಲ್ಲಿಯೇ ಮಾಡುವುದು. ಅದೇ ರುಚಿ ಕೂಡ. ಇಲ್ಲಿರುವ, ಊರಿನವರಲ್ಲಿ ಅಡುಗೆಯ ಮನೆಯ ಪುರಾಣ ಹಂಚಿಕೊಂಡಾಗ, ಅವರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವ ಸಂಗತಿ ತಿಳಿಯಿತು. ಈಗ ಮಣ್ಣಿನ ಬಿಸಲೆ, ಕಪ್ಪರುಟ್ಟಿ ಮಾಡುವ ಹೆಂಚು, ಬಿಸಿ ಬಿಸಿ ದೋಸೆ ಹಾಕಲು ಉಪಯೋಗಿಸುವ ಕುಡುಪು. ಸೇಮೆದಡೆ ಮಾಡುವ ಮಣೆ ಎಲ್ಲವೂ ಊರಿನಿಂದ ಬಂದು ಸೇರಿವೆ. ಇಂಥ ಅಭಿರುಚಿಗಳು ಬರೀ ಅಡುಗೆ ಮನೆಗೆ ಸೀಮಿತವಾಗಿಲ್ಲ. ಆಚಾರ-ವಿಚಾರ-ಸಂಸ್ಕಾರಗಳಲ್ಲಿಯೂ ಊರಿನ ನೆನಪಿನ ಮೆರವಣಿಗೆ ಮನಸ್ಸಿನಲ್ಲಿ ಸಾಗುತ್ತಲೇ ಇರುತ್ತದೆ.

Advertisement

ಅನಿತಾ ಪಿ. ತಾಕೊಡೆ

Advertisement

Udayavani is now on Telegram. Click here to join our channel and stay updated with the latest news.

Next