Advertisement

ಅಧ್ಯಕ್ಷ ಸ್ಥಾನಕ್ಕಾಗಿ ಕೈ-ಕಮಲ ಕಸರತ್ತು

02:39 PM Oct 28, 2020 | Suhan S |

ಕೆ.ಆರ್‌.ಪೇಟೆ: ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂ ತೆಯೇ, ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್‌ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿದೆ. ಪುರಸಭೆಯಲ್ಲಿ 23 ಜನ ಚುನಾಯಿತ ಸದಸ್ಯರಿದ್ದು, ಕಾಂಗ್ರೆಸ್‌ 10, ಜೆಡಿ ಎಸ್‌ 11, ಬಿಜೆಪಿ 1 ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. 17ನೇ ವಾರ್ಡ್‌ನ ಚುನಾಯಿತ ಸದಸ್ಯ ಕೆ.ಎಸ್‌. ಸಂತೋಷ್‌ ಹೊರತುಪಡಿಸಿ ಮಿಕ್ಕ 10 ಜನ ಜೆಡಿಎಸ್‌

ಸದಸ್ಯರು ಸಚಿವ ಕೆ.ಸಿ.ನಾರಾಯಣಗೌಡರ ಹಿಂಬಾಲಿಸಿ ಬಿಜೆಪಿಗೆ ಸಾಮೂಹಿಕವಾಗಿ ಪಕ್ಷಾಂತರ ಮಾಡಿದ್ದಾರೆ. 1ನೇ ವಾರ್ಡ್‌ನ ಪಕ್ಷೇತರ ಸದಸ್ಯ ಶಾಮಿಯಾನ ತಿಮ್ಮೇಗೌಡ ಕೂಡ ಬಿಜೆಪಿಗೆ ಬಲ ತುಂಬಿದ್ದಾರೆ. ಪರಿಣಾಮ ಬಿಜೆಪಿಯ ಸಂಖ್ಯಾಬಲ 12ಕ್ಕೇರಿದೆ. ಕ್ಷೇತ್ರದ ಶಾಸಕರಾದ ಸಚಿವ ಕೆ.ಸಿ. ನಾರಾ ಯಣ ಗೌಡಗೂ ಮತ ದಾನದ ಹಕ್ಕಿರುವುದರಿಂದ ಬಿಜೆ ಪಿಯ ಮತಬಲ 13ಕ್ಕೇರಿದೆ. ಸಂಸದೆ ಸುಮಲತಾ ಅವರಿಗೂ ಮತದಾನದ ಹಕ್ಕಿರುವುದರಿಂದ ತಮ್ಮ ಪರವಾಗಿ ಅವರನ್ನು ಕರೆತರಲು ಕಾಂಗ್ರೆಸ್‌ ಪಕ್ಷ ಪ್ರಯತ್ನ ಆರಂಭಿಸಿದೆ. ಆದರೆ, ಪಕ್ಷೇತರ ರಾಗಿ ಚುನಾಯಿತರಾಗಿರುವ ಸುಮಲತಾ ಒಂದು ನಿರ್ದಿಷ್ಟ ಪಕ್ಷದ ಪರ ಮತಚಲಾಯಿಸುವುದಿಲ್ಲ ಎನ್ನುವ ಆಶಯ ಬಿಜೆಪಿಗರದ್ದು.

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಬಿಜೆಪಿಯಿಂದ ಸ್ಪರ್ಧಿಸಿ ವಿಜೇತರಾಗಿರುವ ಏಕೈಕ ಸದಸ್ಯ ನಟರಾಜ್‌ ಹಾಗೂ ಬಿಜೆಪಿ ಸೇರಿರುವ ಜೆಡಿಎಸ್‌ ಸದಸ್ಯೆ ಮಹಾದೇವಿ ನಂಜುಂಡ ಕೂಡ ಪರಿಶಿಷ್ಟ ಪಂಗಡಕ್ಕೆ ಸೇರಿದವ ರಾಗಿದ್ದು, ಇಬ್ಬರ ನಡುವೆ ಪೈಪೋಟಿ ಶುರುವಾಗಿದೆ. ಮಹಾದೇವಿ ನಂಜುಂಡ ಸತತವಾಗಿ ಎರಡು ಅವಧಿಗೆ ಬಿಜೆಪಿಯಿಂದಲೇ ಚುನಾಯಿತರಾಗಿದ್ದರು. ಆದರೆ, ಕಳೆದ ಚುನಾವಣೆಯ ಸಂದರ್ಭದಲ್ಲಿ ಇವರ ನಾಯಕ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷ ಕೆ. ಶ್ರೀನಿವಾಸ್‌ ಜೆಡಿಎಸ್‌ ಪಕ್ಷದಲ್ಲಿದ್ದ ಕಾರಣ ಜೆಡಿಎಸ್‌ ಸೇರಿ ಚುನಾಯಿತರಾಗಿದ್ದಾರೆ. ಈಗ ಶ್ರೀನಿವಾಸ್‌ ಬಿಜೆಪಿ ಪಾಳಯದಲ್ಲಿರುವುದರಿಂದ ಮಹಾದೇವಿ ಜೆಡಿಎಸ್‌ ನಿಂದ ಬಿಜೆಪಿಗೆ ವಲಸೆ ಹೋಗಿದ್ದಾರೆ. ಸಚಿವ ಕೆ.ಸಿ. ನಾರಾಯಣಗೌಡರ ಆಪ್ತ ಬಳಗದಲ್ಲಿರುವ ಕೆ.ಶ್ರೀನಿವಾಸ್‌ ತಮ್ಮ ಬೆಂಬಲಿತ ಮಹಾದೇವಿ ನಂಜುಂಡ ಅವರನ್ನು ಪುರಸಭೆಯ ಅಧ್ಯಕ್ಷರನ್ನಾಗಿಸಲು ಟೊಂಕ ಕಟ್ಟಿದ್ದಾರೆ. ಸಹಜವಾಗಿಯೇ ಇದು ನಿಷ್ಠಾವಂತ ಬಿಜೆಪಿಗ ನಟರಾಜ್‌ ಅವರನ್ನು ಕೆರಳಿಸಿದೆ.

ನಟರಾಜ್‌ಗೆ ಕೈ ಗಾಳ?: ಅತೃಪ್ತ ನಟರಾಜ್‌ ಅವರನ್ನು ಕಾಂಗ್ರೆಸ್‌ ಸಂಪರ್ಕಿಸಿದ್ದು, ಅಧ್ಯಕ್ಷಗಿರಿಯ ಆಫ‌ರ್‌ ನೀಡಿದೆಯಲ್ಲದೆ ಅಧ್ಯಕ್ಷ ಸ್ಥಾನಕ್ಕೆ ನಟರಾಜ್‌ ಪರ ನಿಲ್ಲುವಂತೆ ತನ್ನ ಸದಸ್ಯರಿಗೆ ಸೂಚಿಸಿದೆ. ಇದು ಬಿಜೆಪಿ ಪಾಳಯದಲ್ಲಿ ತಲೆನೋವು ತಂದಿದೆ. ಪುರಸಭೆಯ ಅಧ್ಯಕ್ಷ ಸ್ಥಾನದಲ್ಲಿ ಅಲ್ಪ ಏರುಪೇರಾದರೂ, ಸಚಿವ ಕೆ.ಸಿ. ನಾರಾಯಣಗೌಡರ ಪ್ರತಿಷ್ಠೆ ಮುಕ್ಕಾಗಿಸಲಿದೆ. ಇದಕ್ಕಾಗಿ ಬಿಜೆಪಿ ಸಾಕಷ್ಟು ಎಚ್ಚರಿಕೆ ವಹಿಸಿದ್ದು, ತನ್ನ ಏಕೈಕ ಚುನಾಯಿತ ಸದಸ್ಯ ನಟರಾಜ್‌ ಅವರಿಗೆ ವಿಪ್‌ ಜಾರಿ ಮಾಡಿದೆ. ಜೊತೆಗೆ ತನ್ನ ತೆಕ್ಕೆಗೆ ಕೈಹಾಕಿರುವ ಕಾಂಗ್ರೆಸ್‌ ಪಕ್ಷಕ್ಕೆ ಬುದ್ಧಿ ಕಲಿಸಲು ಕಾಂಗ್ರೆಸ್‌ ಪಕ್ಷದ ಹೊಸಹೊಳಲಿನ 18ನೇ ವಾರ್ಡ್‌ನ ಸದಸ್ಯೆ ಕಲ್ಪನಾ ಅವರ ಬೆಂಬಲ ಪಡೆದಿದೆ. ಕಾಂಗ್ರೆಸ್‌ ಪಕ್ಷ ಕೂಡ ತನ್ನೆಲ್ಲ ಸದಸ್ಯರಿಗೆ ವಿಪ್‌ ಜಾರಿ ಮಾಡಿದೆ. ಪಕ್ಷ ನಿಷ್ಠೆ ತ್ಯಜಿಸಿ ಬಿಜೆಪಿಯತ್ತ ಮುಖ ಮಾಡಿರುವ ಕಲ್ಪನಾ ಅವರ ಮನೆಯ ಮುಂದೆ ಕಾಂಗ್ರೆಸ್‌ ಕೂಡ ವಿಪ್‌ ನೋಟಿಸ್‌ ಅಂಟಿಸಿದೆ.

Advertisement

ಮೂಲ ಬಿಜೆಪಿ ಸದಸ್ಯರಿಲ್ಲ: ಹಿಂದುಳಿದ ವರ್ಗ ಎ ಮಹಿಳಾ ವಿಭಾಗದಿಂದ ಮೂಲ ಬಿಜೆಪಿ ಸದಸ್ಯರಿಲ್ಲ. ಹೊಸಹೊಳಲಿನ ಗಾಯಿತ್ರಿ ಸುಬ್ರಹ್ಮಣ್ಯ, ಕೆ.ಆರ್‌.ಪೇಟೆಯ ಇಂದ್ರಾಣಿ ವಿಶ್ವನಾಥ್‌, ಪದ್ಮಮ್ಮ ರಾಜಣ್ಣ ಜೆಡಿಎಸ್‌ನಿಂದ ಚುನಾಯಿತರಾಗಿ ಬಿಜೆಪಿಗೆ ವಲಸೆ ಹೋಗಿದ್ದಾರೆ. ಜೆಡಿಎಸ್‌ನಿಂದ ವಲಸೆ ಹೋಗಿರುವ ಮೂವರು ಮಹಿಳಾ ಸದಸ್ಯರ ನಡುವೆ ಉಪಾಧ್ಯಕ್ಷ ಸ್ಥಾನಕ್ಕೆ ಸಹಜವಾಗಿಯೇ ಪೈಪೋಟಿ ನಡೆದಿದೆ. ಅಪಾರ ನಿರೀಕ್ಷೆಯನ್ನಿಟ್ಟುಕೊಂಡು ಸಚಿವ ಕೆ.ಸಿ.ನಾರಾಯಣ ಗೌಡರ ಹಿಂದೆ ಹೋದ ಕೆಲ ಜೆಡಿಎಸ್‌ ಸದಸ್ಯರು ಸಚಿವರ ನಡೆಯ ಬಗ್ಗೆ ಅತೃಪ್ತಗೊಂಡಿದ್ದಾರೆನ್ನಲಾಗಿದೆ.

ಇದರ ಲಾಭ ಪಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಹವಣಿಸುತ್ತಿದ್ದು, ಆ ಮೂಲಕ ವ್ಯವಸ್ಥಿತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಮೂವರು ಜೆಡಿಎಸ್‌ ಸದಸ್ಯೆಯರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದು ಅವರನ್ನು ಸಂರಕ್ಷಿಸುವ ಕೆಲಸವನ್ನು ಕಾಂಗ್ರೆಸ್‌ ಆರಂಭಿಸಿದೆ. ಈ ಎರಡು ಪಕ್ಷಗಳ ರಾಜಕೀಯ ತಿಕ್ಕಾಟದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಕುತೂ ಹಲ ಕೆರಳಿಸಿದೆ. ಎರಡು ಪಕ್ಷಗಳ ರಾಜಕೀಯ ಅರಿತಿರುವ ಜೆಡಿಎಸ್‌ ಮೌನವಾಗಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟ :  ಕೆ.ಆರ್‌.ಪೇಟೆ ಪಟ್ಟಣ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅ.31ರಂದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಕುರಿತು ಚುನಾವಣಾಅಧಿಕಾರಿಯಾಗಿರುವ ತಹಶೀಲ್ದಾರ್‌ ಎಂ.ಶಿವಮೂರ್ತಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಅಂದು ಬೆಳಗ್ಗೆ 9ಕ್ಕೆ ಪಟ್ಟಣದ ಶಹರಿ ರೋಜ್‌ಗಾರ್‌ ಕಟ್ಟಡದ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದ್ದು, 10ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶವಿದೆ. 10.05 ನಿಮಿಷದಿಂದ 10.30ರವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. 10.30ರಿಂದ 11ರವರೆಗೆ ನಾಮಪತ್ರ ಹಿಂಪಡೆಯಲು ಕಾಲಾವಕಾಶ ಕಲ್ಪಿಸಲಾಗಿದೆ. ಅವಶ್ಯವಿದ್ದಲ್ಲಿ ಬೆಳಿಗ್ಗೆ 11ಕ್ಕೆ ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next