Advertisement

ಲೋಡ್‌ ಶೆಡ್ಡಿಂಗ್‌? ವಿದ್ಯುತ್‌ ಉತ್ತರದಲ್ಲಿ ಹೆಚ್ಚಿನ ಪರಿಣಾಮ

12:09 AM Oct 10, 2021 | Team Udayavani |

ಬೆಂಗಳೂರು: ದೇಶಾದ್ಯಂತ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಹೆಚ್ಚುವರಿ ವಿದ್ಯುತ್‌ ಉತ್ಪಾದಿಸುವ ಕರ್ನಾಟಕದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಲೋಡ್‌ಶೆಡ್ಡಿಂಗ್‌ ಜಾರಿಯಾಗುವುದು ಸಂಭಾವ್ಯ.

Advertisement

ರಾಜ್ಯದ ಎಲ್ಲ ಶಾಖೋತ್ಪನ್ನ ವಿದ್ಯುತ್‌ ಘಟಕಗಳು ಸೇರಿ ನಿತ್ಯ 12-14 ರೇಕ್‌ ಕಲ್ಲಿದ್ದಲಿನ ಆವಶ್ಯಕತೆ ಇದೆ. ಆದರೆ ಸದ್ಯ ಪೂರೈಕೆ ಆಗುತ್ತಿರುವುದು 6-7ರೇಕ್‌. ಈ ಹಿನ್ನೆಲೆಯಲ್ಲಿ ಮೀಸಲು ದಾಸ್ತಾನನ್ನು ಬಳಸ ಲಾಗುತ್ತಿದ್ದು, ಹೆಚ್ಚೆಂದರೆ ಒಂದೆರಡು ದಿನಗಳಿಗೆ ಆಗು ವಷ್ಟು ಉಳಿದಿದೆ. ರಾಷ್ಟ್ರೀಯ ಮಾನದಂಡದ ಪ್ರಕಾರ ಮೂರ್‍ನಾಲ್ಕು ದಿನಗಳಿಗೆ ಆಗು ವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು.

ಇನ್ನು ಮೂರ್‍ನಾಲ್ಕು ದಿನ ಇದೇ ಕೊರತೆ ಮುಂದುವರಿದರೆ, ಲೋಡ್‌ಶೆಡ್ಡಿಂಗ್‌ ಅನಿವಾರ್ಯ ಆಗಲಿದೆ ಎಂದು ಕರ್ನಾಟಕ ರಾಜ್ಯ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌)ದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಕೇಂದ್ರದಿಂದ ಸ್ಪಂದನೆ
ರಾಜ್ಯಕ್ಕೆ ಅಗತ್ಯ ಇರುವಷ್ಟು ಕಲ್ಲಿದ್ದಲು ಸರಬ ರಾಜು ಮಾಡಬೇಕು ಎಂಬ ಮನವಿಗೆ ಕೇಂದ್ರ ಸರಕಾರ ತತ್‌ಕ್ಷಣ ಸ್ಪಂದಿಸಿದೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಶನಿವಾರ ಹೊಸದಿಲ್ಲಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಅಗತ್ಯವಿರುವ 14 ರೇಕ್‌ ಕಲ್ಲಿದ್ದಲ್ಲನ್ನು ಒದಗಿಸುವಂತೆ ಮನವಿ ಮಾಡಲಾಗಿದೆ. ಅವರು ತತ್‌ಕ್ಷಣ ಸ್ಪಂದಿಸಿದ್ದು, ಮಹಾರಾಷ್ಟ್ರದ ಎಂಸಿಎಲ್‌ನಿಂದ 12 ರೇಕ್‌ ಕಲ್ಲಿದ್ದಲು ಸರಬರಾಜು ಮಾಡಲು ಆದೇಶ ಹೊರಡಿಸಿದ್ದಾರೆ ಎಂದು ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಈ ಸಂಕಷ್ಟದ ಸ್ಥಿತಿಯಿಂದ ಹೊರ ಬರಲು ತತ್‌ಕ್ಷಣಕ್ಕೆ ಇರುವ ಆಯ್ಕೆ ಗಳು ಎರಡು. ವಿದ್ಯುತ್‌ ಖರೀದಿ ಮಾಡುವುದು, ಸಮರ್ಪಕ ಕಲ್ಲಿದ್ದಲು ಪೂರೈಕೆ. ಆದರೆ ದೇಶಾದ್ಯಂತ ಕಲ್ಲಿ ದ್ದಲು ಕೊರತೆ ಉಂಟಾಗಿರುವುದರಿಂದ ಎಲ್ಲೆಡೆ ವಿದ್ಯುತ್‌ಗೆ ಬೇಡಿಕೆ ಇದ್ದು, ಸಹಜವಾಗಿ ದುಬಾರಿ ಬೆಲೆಗೆ ಖರೀ ದಿಸಬೇಕಾಗುತ್ತದೆ. ಪ್ರಭಾವ ಬೀರಿ ಕೇಂದ್ರದಿಂದ ಸಾಧ್ಯವಾದಷ್ಟು ಹೆಚ್ಚು ಕಲ್ಲಿದ್ದಲು ತರುವುದರಿಂದಲೂ ಸಮಸ್ಯೆ ನೀಗಿಸಲು ಸಾಧ್ಯ.

ಇದನ್ನೂ ಓದಿ:ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!

ಇಲ್ಲೂ ಒಂದು ತಾಂತ್ರಿಕ ಸಮಸ್ಯೆ ಇದೆ. ಕಲ್ಲಿದ್ದಲು ಪೂರೈಕೆಗೆ ಪ್ರತಿಯಾಗಿ ನೀಡಬೇಕಾದ ಹಣ ಬಾಕಿ ಇದೆ. ರಾಜ್ಯದ ವಿದ್ಯುತ್‌ ಸರಬರಾಜು ಕಂಪೆನಿಗಳು ಸುಮಾರು 400-500 ಕೋಟಿ ರೂ. ಹಣವನ್ನು ಕೆಪಿಸಿಎಲ್‌ಗೆ ಬಾಕಿ ಉಳಿಸಿಕೊಂಡಿವೆ. ಹಾಗಾಗಿ ಈ ದಿಸೆಯಿಂದಲೂ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಘಟಕ, ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಘಟಕ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಘಟಕ ಸೇರಿ ರಾಜ್ಯದಲ್ಲಿ ಶಾಖೋತ್ಪನ್ನ ಮೂಲದ ಉತ್ಪಾದನ ಸಾಮರ್ಥ್ಯ 5,020 ಮೆ.ವ್ಯಾ. ಆದರೆ ಇವುಗ ಳಲ್ಲಿ ಕೆಲವು ಯೂನಿಟ್‌ಗಳು ದುರಸ್ತಿ, ನಿರ್ವಹಣೆ ಮತ್ತಿತರ ತಾಂತ್ರಿಕ ಕಾರಣಗಳಿಂದ ಪೂರ್ಣ ಸಾಮರ್ಥ್ಯ ದಲ್ಲಿ ಕಾರ್ಯಾಚರಣೆ ಮಾಡುತ್ತಿಲ್ಲ. ಈ ಮಧ್ಯೆ ಕಲ್ಲಿದ್ದಲು ಕೊರತೆಯಿಂದ ಉತ್ಪಾದನೆ ಮತ್ತಷ್ಟು ಇಳಿಕೆಯಾಗಿದೆ.

ಎಂಟು ಘಟಕಗಳಿರುವ ಆರ್‌ಟಿಪಿಎಸ್‌ನ ಉತ್ಪಾದನ ಸಾಮರ್ಥ್ಯ 1,720 ಮೆ.ವ್ಯಾ. ಆದರೆ, ಉತ್ಪಾದನೆ ಆಗುತ್ತಿರುವುದು 600-650 ಮೆ.ವ್ಯಾ. ವೈಟಿಪಿಎಸ್‌ನಲ್ಲಿ 1,600 ಮೆ.ವ್ಯಾ. ಬದಲಿಗೆ 635 ಮೆ.ವ್ಯಾ. ಮತ್ತು ಬಿಟಿಪಿಎಸ್‌ನಲ್ಲಿ 1,700 ಮೆ.ವ್ಯಾ. ಬದಲಿಗೆ 432 ಮೆ.ವ್ಯಾ. ಉತ್ಪಾದನೆ ಆಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಮಾಹಿತಿ ನೀಡಿದರು.

ಜಲವಿದ್ಯುತ್‌ ಘಟಕಗಳ ಸಾಮರ್ಥ್ಯ 4,700 ಮೆ.ವ್ಯಾ. ಇದ್ದು, ಉತ್ಪಾದನೆ ಆಗುತ್ತಿರುವುದು 2,200 ಮೆ.ವ್ಯಾ. ಸೌರಮೂಲದಿಂದ ಕೇವಲ 726 ಮೆ.ವ್ಯಾ. ಪೂರೈಕೆ ಆಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಅನಿಯಮಿತ ಲೋಡ್‌ ಶೆಡ್ಡಿಂಗ್‌
ದಿಲ್ಲಿ, ರಾಜಸ್ಥಾನ, ಝಾರ್ಖಂಡ್‌, ಕೇರಳ, ಬಿಹಾರ, ಗುಜ ರಾತ್‌, ಹರಿಯಾಣ, ಉತ್ತರ ಪ್ರದೇಶಗಳಲ್ಲೂ ಕಲ್ಲಿದ್ದಲು ಕೊರತೆಯ ಬಿಸಿ ಕಾಣಿಸಿಕೊಂಡಿದೆ. ದಿಲ್ಲಿಗೆ ವಿದ್ಯುತ್‌ ಸರಬ ರಾಜು ಮಾಡುತ್ತಿರುವ ಟಾಟಾ ಪವರ್‌ ದಿಲ್ಲಿ ಡಿಸ್ಟ್ರಿಬ್ಯೂಶನ್‌ ಕಂಪೆನಿಯು ಮಿತವಾಗಿ ವಿದ್ಯುತ್‌ ಬಳಕೆ ಮಾಡು ವಂತೆ ನಾಗರಿಕರಿಗೆ ಮನವಿ ಮಾಡಿದೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು ಕಲ್ಲಿ ದ್ದಲು ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದ್ದಾರೆ. ಕೇರ ಳದಲ್ಲಿ ರಾತ್ರಿ ಬಳಿಕ ಡ್ರೈಯರ್‌, ಬಳಕೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಲಾಗಿದೆ. ಗುಜರಾತ್‌ ಮತ್ತು ಹರಿಯಾಣದಲ್ಲಿ ಕೈಗಾರಿಕೆಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ರಾಜಸ್ಥಾನ, ಝಾರ್ಖಂಡ್‌, ಬಿಹಾರ, ಉತ್ತರ ಪ್ರದೇಶಗಳಲ್ಲಿ ಅನಿಯಮಿತ ಲೋಡ್‌ ಶೆಡ್ಡಿಂಗ್‌ ಜಾರಿಯಾಗಿದೆ.

ಕರಾವಳಿಗೆ ಸದ್ಯ ಸಮಸ್ಯೆ ಇಲ್ಲ
ಮಂಗಳೂರು/ ಉಡುಪಿ: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಮೆಸ್ಕಾಂಗೆ ಪೂರೈಕೆಯಾಗುವ ವಿದ್ಯುತ್ಛಕ್ತಿಯ ಮೇಲೆ ತತ್‌ಕ್ಷಣಕ್ಕೆ ಯಾವುದೇ ಪರಿಣಾಮ ಉಂಟಾಗಿಲ್ಲ. 3 ದಿನಗಳ ಬಳಿಕ ಅಥವಾ ಒಂದು ವಾರದ ಒಳಗೆ ಇದರ ಪರಿಣಾಮ ತಿಳಿಯಬಹುದು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ “ಉದಯವಾಣಿ’ಗೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗ ಳೂರು ಜಿಲ್ಲೆಗಳ ವ್ಯಾಪ್ತಿಯ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ)ಗೆ ವಾರ್ಷಿಕ 5,500 ದಶಲಕ್ಷ ಯೂನಿಟ್‌ ವಿದ್ಯುತ್‌ ಬೇಡಿಕೆ ಇದೆ. ಅಂದರೆ ತಿಂಗಳಿಗೆ ಸರಾಸರಿ 500 ದಶ ಲಕ್ಷ ಯೂನಿಟ್‌ ವಿದ್ಯುತ್‌ ಬೇಕಾಗುತ್ತದೆ. ಸದ್ಯ ಇಷ್ಟು ವಿದ್ಯುತ್‌ ಸರಬ ರಾಜು ಆಗುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ವಿವಿಧ ಮೂಲಗಳಿಂದ ಉತ್ಪಾದನೆ ಯಾಗುವ ವಿದ್ಯುತ್‌ ರಾಜ್ಯ ಮಟ್ಟದ ಗ್ರಿಡ್‌ಗೆ ಹೋಗುತ್ತಿದ್ದು, ಅಲ್ಲಿಂದ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ನಿಗದಿತ ಪ್ರಮಾಣದಲ್ಲಿ ವಿತರಣೆಗೆ ಮಂಜೂರಾಗುತ್ತದೆ.

ಮೆಸ್ಕಾಂಗೆ ವಾರಾಹಿ, ಶರಾವತಿ, ಕೈಗಾ, ಯುಪಿಸಿಎಲ್‌, ವಿವಿಧ ಮಿನಿ ಜಲ ವಿದ್ಯುತ್‌ ಯೋಜನೆಗಳು, ತುಮಕೂರಿನ ಪಾವಗಡದ ಸೋಲಾರ್‌ ಘಟಕ, ಚಿತ್ರದುರ್ಗದಿಂದ ಪವನ ವಿದ್ಯುತ್‌ ಇತ್ಯಾದಿ ಮೂಲಗಳಿಂದ ವಿದ್ಯುತ್‌ ಪೂರೈಕೆ ಆಗುತ್ತದೆ. ಯಾವ ಮೂಲದಿಂದ ಎಷ್ಟು ಪ್ರಮಾಣದ ವಿದ್ಯುತ್‌ ಎಂಬುದನ್ನು ಸ್ಟೇಟ್‌ ಲೋಡ್‌ ಡಿಸ್ಪ್ಯಾಚ್‌ ಸೆಂಟರ್‌ ನಿಗದಿ ಪಡಿಸುತ್ತದೆ. ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಲಭ್ಯವಾಗುವ ವಿದ್ಯುತ್‌ನ ಪ್ರಮಾಣದಲ್ಲಿ ಕಡಿತ ಉಂಟಾದರೆ ಮುಂದಿನ ದಿನಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗುವುದನ್ನು ಅಲ್ಲಗಳೆಯಲಾಗದು ಎಂದವರು ವಿವರಿಸಿದ್ದಾರೆ.

ಉಡುಪಿಯಲ್ಲೂ ಸಮಸ್ಯೆ ಇಲ್ಲ
ಉಡುಪಿ ಜಿಲ್ಲೆಗೆ ವಾರಾಹಿಯಿಂದ ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಪೂರೈಕೆಯಾಗುತ್ತಿದೆ. ಬೇಸಗೆಯಲ್ಲಿ ತಿಂಗಳಿಗೆ 100 ದಶಲಕ್ಷ ಯೂನಿಟ್‌ ಮತ್ತು ಮಳೆಗಾಲದಲ್ಲಿ 60 ದಶಲಕ್ಷ ಯೂನಿಟ್‌ ವಿದ್ಯುತ್‌ ಖರ್ಚಾಗುತ್ತಿದೆ. ಅನಿವಾರ್ಯ ಸಂದರ್ಭಗಳಲ್ಲಿ ಪಡುಬಿದ್ರಿ ಸಮೀಪದ ಯುಪಿಸಿಎಲ್‌ ವಿದ್ಯುತ್‌ ಬಳಸಲಾಗುತ್ತದೆ. ದೇಶಕ್ಕೆ ಬೇಕಿರುವ ವಿದ್ಯುತ್‌ ಒಂದೇ ಗ್ರಿಡ್‌ಗೆ ಜೋಡಣೆಯಾಗಿದ್ದು, ಬೆಂಗಳೂರಿನ ಕೇಂದ್ರದ ಮೂಲಕ ರವಾನೆಯಾಗುತ್ತದೆ. ಕಡಿಮೆ ಬಿದ್ದರೆ ಬೇರೆ ರಾಜ್ಯಗಳಿಂದ ಖರೀದಿಸಲಾಗುತ್ತದೆ.

ಸೋಲಾರ್‌ ಮತ್ತು ಗಾಳಿಯಿಂದ ರಾಜ್ಯದಲ್ಲಿ ಶೇ. 40ರಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ವಾರಾಹಿ, ಜೋಗ, ಕೈಗಾ ಅಣುವಿದ್ಯುತ್‌ ಸ್ಥಾವರದಿಂದ ವಿದ್ಯುತ್‌ ಸರಬರಾಜು ಆಗುತ್ತಿದೆ. ಜಿಲ್ಲೆಗೆ ಸದ್ಯದ ಮಟ್ಟಿಗೆ ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಉಡುಪಿ ವಿಭಾಗದ ಮೆಸ್ಕಾಂ ಅಧೀಕ್ಷಕ ನರಸಿಂಹ ಪಂಡಿತ್‌ ತಿಳಿಸಿದ್ದಾರೆ.

ಕಲ್ಲಿದ್ದಲು ಕೊರತೆ ಇರುವುದು ನಿಜ. ಈ ಸಮಸ್ಯೆ ದೇಶಾದ್ಯಂತ ಇದೆ. ಶೀಘ್ರದಲ್ಲೇ ಬಗೆಹರಿಯಲಿದೆ. ಕೊರತೆ ಮಧ್ಯೆಯೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ..
– ಕುಮಾರ ನಾಯಕ್‌, ಕೆಪಿಟಿಸಿಎಲ್‌
ವ್ಯವಸ್ಥಾಪಕ ನಿರ್ದೇಶಕರು

ಕಲ್ಲಿದ್ದಲ್ಲಿನ ಕೊರತೆ ಇಡೀ ದೇಶ ವನ್ನು ಬಾಧಿಸುತ್ತಿದೆ. ಕರ್ನಾಟಕದಲ್ಲಿ ಕಲ್ಲಿದ್ದಲಿನ ಸಂಗ್ರಹ ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಸಚಿವ ಪ್ರಹ್ಲಾದ್‌ ಜೋಶಿಯವರಿಗೆ ಮನವಿ ಮಾಡಲಾಗಿದೆ. ರಾಜ್ಯಕ್ಕೆ ಪ್ರಸ್ತುತ ಸರಬರಾಜಾಗುತ್ತಿರುವ 10 ರೇಕ್‌ ಕಲ್ಲಿದ್ದಲ್ಲನ್ನು ಹೆಚ್ಚಿಸಿ 14 ರೇಕ್‌ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next