ಕುಂದಾಪುರ: ಎರಡು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳಾದ ಕುಂದಾಪುರ ಹಾಗೂ ಭಟ್ಕಳ ಎಎಸ್ಪಿಗಳ ತಂಡ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಮಂಗಳವಾರ ಬಂಧಿಸಿ 61.47 ಲಕ್ಷ ರೂ. ಮೌಲ್ಯದ 1.633 ಕೆಜಿ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಎರ್ನಾಕುಲಂ ಕಡೆಯಿಂದ ಅಕ್ರಮವಾಗಿ ರೈಲಿನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಅವರು ಆರೋಪಿಗಳ ಬೇಟೆಗಾಗಿ ತಂಡ ರಚಿಸಿ ಕುಂದಾಪುರ, ಬೈಂದೂರು, ಭಟ್ಕಳ ರೈಲು ನಿಲ್ದಾಣ ಗಳಲ್ಲಿ ಕಾದು ಕುಳಿತರು.
ಬೈಂದೂರು ರೈಲು ನಿಲ್ದಾಣದಲ್ಲಿ ಮಹಮದ್ ಇಸ್ಮಾಯಿಲ್ ಭಟ್ಕಳ ಎಂಬಾತನಿಂದ 253 ಗ್ರಾಂ ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ವಶ ಪಡಿಸಿಕೊಳ್ಳಲಾಯಿತು. ಭಟ್ಕಳದಲ್ಲಿ ರಾಹೀಫ್ ಭಟ್ಕಳ ಎಂಬಾತನಿಂದ 1.166 ಕೆಜಿ ಚಿನ್ನಾಭರಣ, ಸಯ್ಯದ್ ಉಮ್ಮೆ ಭಟ್ಕಳ ಎಂಬಾತನಿಂದ 213 ಗ್ರಾಂ ತೂಕದ ಚಿನ್ನ ವಶಪಡಿಸಿ ಕೊಳ್ಳಲಾಯಿತು.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಗಳ ಮಾರ್ಗದರ್ಶನದಲ್ಲಿ ಭಟ್ಕಳ ಎಎಸ್ಪಿ ನಿಖೀಲ…, ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್, ಬೈಂದೂರು ಸಿಪಿಐ ಸುರೇಶ್ ನಾಯಕ್, ಉಡುಪಿ ಸಿಪಿಐ ಮಂಜುನಾಥ, ಕುಂದಾಪುರ ಎಸ್ಐ ಹರೀಶ್ ಆರ್. ನಾಯ್ಕ…, ಭಟ್ಕಳ, ಕುಮಟಾ ಎಸ್ಐಗಳು, ಕುಂದಾಪುರ ಎಎಸ್ಪಿ ತಂಡದ ಮೋಹನ್, ಸಂತೋಷ್ ಕೊರವಡಿ, ಸಂತೋಷ್ ಹೊನ್ನಾಳ, ಮಂಜುನಾಥ, ಕೃಷ್ಣ, ಪ್ರಿನ್ಸ್, ಚಂದ್ರಶೇಖರ, ವಿಜಯ ಕುಮಾರ್, ಸಲೀಂವುಲ್ಲಾ ಕಾರ್ಯಾಚರಣೆ ನಡೆಸಿದ್ದರು. ಪ್ರಕರಣವನ್ನು ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟಲಿಜೆನ್ಸ್ಗೆ ಹಸ್ತಾಂತರಿಸಲಾಗಿದೆ.